Advertisement

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

11:47 AM Jan 21, 2022 | Team Udayavani |

ನಮಗೆಲ್ಲರಿಗೂ ದಾಸೋಹ ದಿನವೆಂದರೆ ಅದೊಂದು ಮಹಾ ಪುಣ್ಯದಿನ, ಶ್ರೀಗಳ ಸ್ಮರಣೆ ದಿನ, ಏಕೆಂದರೆ ಇಡೀ ಪ್ರಪಂಚಕ್ಕೆ ದಾಸೋಹ ತತ್ವವನ್ನು ಸಾರಿ ತ್ರಿವಿಧ ದಾಸೋಹದಲ್ಲಿ ಯಾರೂ ಏರಲಾರದ ಎತ್ತರಕ್ಕೆ ಸಾಗಿ ಪ್ರಕಾಶಿಸಿ, ಆ ಬೆಳಕನ್ನು ಇಡೀ ನಾಡಿಗೆ ಹಂಚಿದ ದಿವ್ಯ ಬೆಳಕು ಪರಮಪೂಜ್ಯ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ನಮ್ಮನ್ನು ಅಗಲಿ ಲಿಂಗೈಕ್ಯರಾದ ದಿನ.

Advertisement

ಶ್ರೀಗಳು ಪರಂಜ್ಯೋತಿಯಾಗಿ ಇಹ ತೊರೆದು ನಮ್ಮ ಅಂತರಂಗದಲ್ಲಿ ಸ್ಥಾಪಿತವಾದ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ನಿರ್ಧರಿಸಿದ್ದರು ಕೂಡ, ಪೂಜ್ಯ ಶ್ರೀಗಳ ಕರಕಮಲ ಸಂಜಾತರು, ಪೂಜ್ಯ ಶ್ರೀಗಳ ಶಿಷ್ಯರೂ, ಸಿದ್ಧಗಂಗಾ ಮಠವನ್ನು ಪೊರೆಯುತ್ತಿರುವ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಕೋವಿಡ್‌ ಕಾರಣಕ್ಕಾಗಿ ಈ ಬಾರಿ ಸರಳವಾಗಿ ಆಚರಿಸುವುದಾಗಿ ಕರೆ ನೀಡಿದ್ದಾರೆ. ಪೂಜ್ಯರ ಈ ನಿರ್ಧಾರ ಇಡೀ ನಾಡಿಗೆ ಮಾದರಿಯಾಗಿದೆ.

ಕೋವಿಡ್‌ ಸಮಯದಲ್ಲಿ ಈ ದಿನವನ್ನು ಸಾರ್ವಜನಿಕವಾಗಿ ಆಚರಿಸಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದು ಶ್ರೀಗಳ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕವಾಗಿ ಆಚರಿಸಲಿಕ್ಕೆ ಸಾಧ್ಯವಾಗದೇ ಇದ್ದರೂ ನಾವು ನಮ್ಮ ಪ್ರತಿ ಮನೆಯಲ್ಲಿ ಶ್ರೀಗಳ ಆದರ್ಶವನ್ನು ಮೆರೆಯಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲೂ ಇರುವ ಒಬ್ಬರಿಗಾದರೂ ಅನ್ನಸಂತರ್ಪಣೆ ಮಾಡುವ ಮೂಲಕ ಪೂಜ್ಯರ ಸ್ಮರಣೆಯನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಬೇಕು.

ಶ್ರೀಗಳು ದಾಸೋಹಕ್ಕಾಗಿ ತಮ್ಮನ್ನು ತಾವು ದೀಪದ ಬತ್ತಿಯಂತೆ ಹೊಸೆದುಕೊಂಡವರು. ಶ್ರೀಗಳು ತಮ್ಮನ್ನು ನೋಡಲು ಯಾರೇ ಬರಲಿ ಅವರಿಗೆ ಮೊದಲು ಕೇಳುತ್ತಿದ್ದದ್ದು “ಪ್ರಸಾದ ಆಯ್ತಾ’ ಎಂದು ಹಸಿದ ಹೊಟ್ಟೆಯ ಪೂಜೆ ಪರಮಾತ್ಮ ಮೆಚ್ಚುವು  ದಿಲ್ಲ ಎಂದು ಶ್ರೀಗಳು ಚೆನ್ನಾಗಿ ಬಲ್ಲವರಾಗಿದ್ದರು.ಮಠಕ್ಕೆ ಆಗಮಿಸಿದ್ದ ಯಾರೇ ಭಕ್ತಾದಿಗಳು ಸಿಕ್ಕರೂ ಶ್ರೀಗಳು ಮೊದಲು ಕೇಳುತ್ತಿದ್ದದ್ದು ಪ್ರಸಾದವಾಯ್ತ, ಪ್ರಸಾದ ಮಾಡಿ ಎಂದು ಕೇಳಿ ಆನಂತರ ಅವರ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಅವರಿಗೆ ಮಠದಲ್ಲಿ ದಾಸೋಹಕ್ಕೆ ಬೇಕಿರುವ ಆಹಾರ ಸಾಮಗ್ರಿಗಳಿಗಿಂತ ಅವರು ತಾವು ಓಡಾಡುವ ಪ್ರತಿ ಜಾಗದಲ್ಲಿನ ರೈತರ ಬಗ್ಗೆ ಬಹಳ ಕಾಳಜಿ ಇತ್ತು. ರೈತರ ಹೊಲಗಳಿಗೆ, ಗದ್ದೆಯ ಬಳಿ ಹೋಗಿ ಈ ಬಾರಿ ಫಸಲು ಹೇಗಿದೆ ಎಂದು ವಿಚಾರಿಸುತ್ತಿದ್ದರು.

Advertisement

ಭೂಮಿತಾಯಿಯನ್ನೇ ನಂಬಿದ್ದ ರೈತ ತೃಪ್ತಿಯಿಂದ ದಾನ ನೀಡಿದರೆ ಮಾತ್ರ ಮಠದಲ್ಲಿ ದಾಸೋಹದ ಬಟ್ಟಲು ತುಂಬುತ್ತಿತ್ತು ಎಂಬುದು ಶ್ರೀಗಳಿಗೆ ಚೆನ್ನಾಗಿ ಅರಿವಿತ್ತು. ಅವರಿಗೆ ದಾನ ನೀಡಲು ಎಷ್ಟೇ ಹಣ ಕೊಟ್ಟರೂ ಅದು ಅವರಿಗೆ ಮುಖ್ಯವಾಗುತ್ತಿರಲಿಲ್ಲ. ಯಾರಾದರೂ ರೈತ ತಂದು ತಾನು ಬೆಳೆದ ಅಕ್ಕಿ , ರಾಗಿ ಇನ್ನಿತರೆ ಯಾವುದೇ ಆಹಾರ ಸಮಗ್ರಿಗಳನ್ನು ಮಠದ ಪ್ರಸಾದಾಲಯಕ್ಕೆ ತುಂಬಿದರೆ, “ಆ ರೈತ ಯಾರು,ಯಾವ ಊರಿನವರು’ ಎಂದು ಕೇಳಿ ಆತನನ್ನು ಕರೆದು ವಿಚಾರಿಸುತ್ತಿದ್ದರು. ಆತನನ್ನು ನೆನಪಿಟ್ಟು ಕೊಳ್ಳುತ್ತಿದ್ದರು. ಜೊತೆಗೆ ಆ ಭಾಗಕ್ಕೆ ಪೂಜೆಗೆ ತೆರಳಿದರೆ ಆತನನ್ನು ಕರೆದು ಮಾತನಾಡಿಸುತ್ತಿದ್ದರು. ಪ್ರತಿವರ್ಷ ಇಂತಿಷ್ಟೇ ರೈತರು ತಮ್ಮ ಮಠಕ್ಕೆ ದವಸ ಧಾನ್ಯಗಳನ್ನು ತಲುಪಿಸುತ್ತಾರೆ ಎಂಬುದು ಶ್ರೀಗಳಿಗೆ ಚೆನ್ನಾಗಿ ನೆನಪಿದ್ದ ಸಂಗತಿಯಾಗಿತ್ತು.

ಶ್ರೀಗಳನ್ನು ಚೆನ್ನಾಗಿ ಬಲ್ಲ ಕೋಟ್ಯಂತರ ಶಿಷ್ಯರಲ್ಲಿ ಯಾರನ್ನೇ ಕೇಳಿ ಅವರು ಯಾವತ್ತೂ ತಮ್ಮ ಪುಣ್ಯ ಕ್ಷೇತ್ರಕ್ಕೆ ಕಾಲಿಟ್ಟವರನ್ನು ಹಸಿದುಕೊಂಡು ಕಳುಹಿಸಿದವರಲ್ಲ ಎಂದು ಹೇಳುತ್ತಾರೆ. ಹಸಿದ ಹೊಟ್ಟೆಗಳ ಸಂಕಟ ಸದಾ ಶ್ರೀಗಳನ್ನು ಚಡಪಡಿಸುವಂತೆ ಮಾಡುತ್ತಿತ್ತು. ಭಿಕ್ಷಾಟನೆಗೋ ಅಥವಾ ಶಿವಪೂಜೆಗೋ ಎಲ್ಲಾದರೂ ಅವರು ತೆರಳಿದರೆ ತಾವು ಆಹಾರ ಸ್ವೀಕರಿಸುವ ಮುನ್ನ ಮಠದಲ್ಲಿ ಮಕ್ಕಳ ಪ್ರಸಾದ ಆಯಿತೇ ಎಂದು ಕೇಳುತ್ತಿದ್ದರು. ಒಂದು ತುತ್ತು ಅನ್ನ ಚೆಲ್ಲಿದರೆ ಅದನ್ನು ಬೆಳೆದ ಸಾವಿರಾರು ರೈತನ ಬೆವರಿಗೆ ಅವಮಾನ ಮಾಡಿದಂತೆ ಎಂಬುದನ್ನು ಮಕ್ಕಳಿಗೆ ಅವರು ಸದಾ ಹೇಳುತ್ತಿದ್ದರು. ಸಂಜೆ ಪ್ರಾರ್ಥನೆಯಲ್ಲಿ ಪ್ರತಿನಿತ್ಯ ಅವರು ದಾಸೋಹದ ಬಗ್ಗೆ ಮಕ್ಕಳಿಗೆ ಹೇಳುತ್ತಿದ್ದರು.

ಶ್ರೀಗಳಯ ಕೂಡ ಆಹಾರ ಸೇವೆನೆಯಲ್ಲಿ ಮಿತಹಾರಿಗಳಾಗಿದ್ದರು. ಅವರು ಸ್ವೀಕರಿಸುವ ಆಹಾರ ಎಷ್ಟು ವರ್ಷಗಳಾದರೂ ಒಂದು ಗ್ರಾಂ ಕೂಡ ವ್ಯತ್ಯಾಸವಾಗುತ್ತಿರಲಿಲ್ಲ. ದೇಹದ ಚಲನೆಗೆ ಆಹಾರ ಮುಖ್ಯವೇ ಹೊರತು ಆಹಾರಕ್ಕಾಗಿಯೇ ದೇಹದ ಚಲನೆ ಇರಬಾರದು. ತನ್ನ ದೇಹದ ಅಗತ್ಯಕ್ಕಿಂತ ಒಂದಗಳು ಜಾಸ್ತಿ ತಿಂದರೂ ಮತ್ತೂಬ್ಬನ ಆಹಾರವನ್ನು ಕಿತ್ತುಕೊಂಡ ಹಾಗೆ ಎನ್ನುವುದು ಶ್ರೀಗಳ ನಂಬಿಕೆಯಾಗಿತ್ತು.

ಶ್ರೀಗಳು ಮಠದಲ್ಲಿ ಪ್ರತಿದಿನವೂ ಅಡುಗೆ ಕೋಣೆಗೆ ಭೇಟಿ ನೀಡಿ, ಅಲ್ಲಿ ನಿತ್ಯ ಮಠಕ್ಕೆ ಆಗಮಿಸುವ ಸಾವಿರಾರೂ ಭಕ್ತರಿಗೆ ಸಿದ್ಧವಾಗುತ್ತಿದ್ದ ಆಹಾರವನ್ನು ಖುದ್ದು ಪರಿಶೀಲನೆ ಮಾಡುತ್ತಿದ್ದರು. ಅಲ್ಲಿ ಯಾವೆಲ್ಲಾ ಆಹಾರ ತಯಾರಿ ಮಾಡುತ್ತಿದ್ದರೂ ಅದೇ ಆಹಾರವನ್ನೇ ಅವರು ಸಹ ಸ್ವೀಕರಿಸುವ ಪ್ರಸಾದಲ್ಲಿ ಇರಬೇಕಿತ್ತು. ಇಲ್ಲವಾದರೆ ಮಕ್ಕಳಿಗೆ ಇಲ್ಲದ ವಿಶೇಷ ಆಹಾರ ತನಗೆ ಏತಕ್ಕೆ ಎಂದು ತಿರಸ್ಕರಿಸುತ್ತಿದ್ದರು.

ಎಲ್ಲಾ ಕಾಲದಲ್ಲಿಯೂ ಬಿಡುತ್ತಿದ್ದ ವಿಶೇಷ ಹಣ್ಣುಗಳನ್ನು ಮಠಕ್ಕೆ ಭಕ್ತರು ತಂದರೂ ಕೂಡ ಅದನ್ನು ಶ್ರೀಗಳು ಎಂದೂ ಕೂಡ ಒಬ್ಬರೇ ಸೇವಿಸಿದವರಲ್ಲ. ಎಲ್ಲಾ ಮಕ್ಕಳಿಗೆ ಮಾರುಕಟ್ಟೆಯಿಂದ ಆ ಹಣ್ಣನ್ನು ತಂದಾದರೂ ನೀಡಬೇಕಿತ್ತು. ಮಕ್ಕಳಿಗೆ ಊಟದ ಜೊತೆಗೆ ಆ ಹಣ್ಣು ಕೊಟ್ಟಿದ್ದಾರೆ ಎಂದು ಖಾತ್ರಿಯಾದ ಬಳಿಕವೇ ಶ್ರೀಗಳು ಸ್ವೀಕರಿಸುತ್ತಿದ್ದರು.

ಪ್ರಸಾದ ಎನ್ನುವುದು ಪರಮಾತ್ಮ ಸಕಲ ಜೀವಿಗಳಿಗೂ ನೀಡಿರುವ ಅಮೃತ ಅದನ್ನು ಅತಿಯಾಗಿ ತಿನ್ನುವುದು ಕೂಡ ಆರೋಗ್ಯ ಹಾನಿಕರ ಎನ್ನುವ ನಂಬಿಕೆ ಶ್ರೀಗಳದ್ದಾಗಿತ್ತು. ಶ್ರೀಗಳು ಲಿಂಗೈಕ್ಯರಾಗುವುದಕ್ಕೂ ಮುನ್ನ ಅವರು ಎಚ್ಚರ  ದಲ್ಲಿದ್ದ ದಿನಗಳಲ್ಲೇ ತಾವು ಲಿಂಗೈಕ್ಯರಾದ ವಿಷಯವನ್ನು ಅಂದು ಮಕ್ಕಳ ದಾಸೋಹವಾದಾಗಲೇ ಹೇಳಬೇಕು ಎಂದು ಮೊದಲೇ ಕಿರಿಯ ಶ್ರೀಗಳಿಗೆ ತಿಳಿಸಿದ್ದರು.

ಅಷ್ಟರ ಮಟ್ಟಿಗೆ ಮಕ್ಕಳ ಮೇಲೆ ಶ್ರೀಗಳಿಗೆ ಮಮತೆಯಿತ್ತು. ಶ್ರೀಗಳು ಲಿಂಗೈಕ್ಯರಾದ ದಿನ ಬಂದ ಕೋಟ್ಯಂತರ ಭಕ್ತರು ಯಾರೊಬ್ಬರೂ ಕೂಡ ಹಸಿದುಕೊಂಡು ಹೋಗಲಿಲ್ಲ. ಸಿದ್ಧಗಂಗಾ ಮಠದಲ್ಲಿ ಹಚ್ಚಿದ ದಾಸೋಹದ ಜ್ಯೋತಿ ಇಂದಿಗೂ ಆರಿಲ್ಲ. ನಾಳೆಯೂ ಆರುವುದಿಲ್ಲ. ಏಕೆಂದರೆ ತುಂಬಿದ ಹೊಟ್ಟೆಗಳಲ್ಲಿ, ಬೇಡುವ ಹೃದಯಗಳಲ್ಲಿ, ಓದುವ ಪ್ರತಿ ಪುಟ್ಟ ದೇವರುಗಳ ಅಂತರಂಗದಲ್ಲಿ ಶ್ರೀಗಳು ಹಚ್ಚಿದ ದಾಸೋಹ ಪ್ರಜ್ಞೆಯ ಜ್ಯೋತಿ ಸದಾ ಉರಿಯುತ್ತಿರುತ್ತದೆ. ಅವರು ನೀಡಿದ
ಅನ್ನಪ್ರಜ್ಞೆ ನಾವು ಬದುಕಿರುವವರೆಗೂ ನಾಲ್ಕು ಜನರಿಗೆ ಆಹಾರ ಕೊಡಬೇಕು ಎಂಬುದು ನಮಗೆ ಚೆನ್ನಾಗಿ ನೆನ ಪಿರುತ್ತದೆ. ನಾವು ತಿನ್ನುವ ಪ್ರತಿಯೊಂದು ತುತ್ತಿನಲ್ಲೂ ಶ್ರೀಗಳು ನಮ್ಮೊಳಗೆ ಜ್ಯೋತಿಯಾಗಿ ಅನ್ನಸಂತರ್ಪಣೆಯ ಮಹಾ ದಾಸೋಹದ ಬಗ್ಗೆ ಸದಾ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿರುತ್ತದೆ.

ಕೋವಿಡ್‌ ಕಾರಣದಿಂದಾಗಿ ಈ ಬಾರಿಯ ದಾಸೋಹದಿನದ ಆಚರಣೆ ಮಂಕಾಗಿದೆ. ಆದರೆ ಇಡೀ ರಾಜ್ಯದ ಭಕ್ತರು ತಮ್ಮೂರಿನ ಜನರಿಗೆ ತಮ್ಮ ಸುತ್ತಲಿನ ಜನಕ್ಕೆ ಅನ್ನಸಂರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಬೆಳೆದ ಕೈಗಳಿಗೂ ಹಸಿದ ಹೊಟ್ಟೆಗಳಿಗೂ ಸೇತುವೆಯಾಗುವುದೇ ದಾಸೋಹ ಎಂದ ಪೂಜ್ಯ ಶ್ರೀಗಳ ಪುಣ್ಯಸ್ಮರಣೆಯ ದಾಸೋಹ ದಿನ ಹಸಿವು ಮುಕ್ತ ದಿನವಾಗಬೇಕು ಎನ್ನುವುದೇ ನಮ್ಮ ಕಳಕಳಿ. ನಾವು ತಿನ್ನುವ ಒಂದು ಆಹಾರದಲ್ಲಿ ಒಂದು ತುತ್ತನ್ನು ಹಸಿವರಿಗೆ ನೀಡುವ ಮೂಲಕ ಶ್ರೀಗಳ ಆದರ್ಶವನ್ನು ಜಗತ್ತಿಗೆ ಸಾರೋಣ. ಎಲ್ಲರಿಗೂ ನಮಸ್ಕಾರ…
ಡಾ.ಎಸ್‌.ಪರಮೇಶ್‌,
ನಿರ್ದೇಶಕರು, ಸಿದ್ಧಗಂಗಾ
ಮೆಡಿಕಲ್‌ ಕಾಲೇಜು, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next