Advertisement

ಮುಗಿದ ದಸರಾ: ಸಹಜ ಸ್ಥಿತಿಗೆ ಮರಳಿದ ಮೈಸೂರು 

01:25 PM Oct 02, 2017 | Team Udayavani |

ಮೈಸೂರು: ಕಣ್ಣು ಹಾಯಿಸಿದಷ್ಟು ದೂರ ಜನರಿಂದ ತುಂಬಿದ್ದ ಮೈಸೂರು ನಗರ ಈಗ ಮೌನವಾಗಿದೆ. ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ಪ್ರವಾಸಿಗರಿಂದ ತುಂಬಿ ಗೌಜು-ಗದ್ದಲಗಳಿಂದ ಕೂಡಿದ್ದ ಮೈಸೂರು ನಗರ ಇದೀಗ ಸಹಜ ಸ್ಥಿತಿಗೆ ಮರಳಿದೆ.

Advertisement

ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯ 2 ತಂಡಗಳಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳ ವಿವಿಧ ಆನೆ ಶಿಬಿರಗಳಿಂದ ಕರೆತರಲಾಗಿದ್ದ 15 ಆನೆಗಳು ಭಾನುವಾರ ಸಂಪೂರ್ಣ ವಿಶ್ರಾಂತಿಯಲ್ಲಿದ್ದವು.

407ನೇ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಸಂತೃಪ್ತಿ ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗಳಲ್ಲಿ ಮನೆ ಮಾಡಿತ್ತು. ಬೆಳಗ್ಗೆಯೇ ಆನೆಗಳನ್ನು ತೊಳೆದು ಪೌಷ್ಟಿಕ ಆಹಾರ ನೀಡಿ ವಿಶ್ರಾಂತಿ ನೀಡಿದರು. ನಂತರ ಒಂದು ಸುತ್ತು ನಗರದ ಮಾರುಕಟ್ಟೆ ಸುತ್ತಿದ ಮಾವುತರು-ಕಾವಾಡಿಗರ ಕುಟುಂಬದವರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಜತೆಗೆ ಎಲ್ಲರೂ ಸ್ನಾನ ಮಾಡಿಕೊಂಡು, ಬಟ್ಟೆ ಒಗೆದುಕೊಂಡು ಮತ್ತೆ ತಮ್ಮ ಸ್ವಸ್ಥಾನಗಳಿಗೆ ಹೊರಡಲು ಸಿದ್ಧತೆ ನಡೆಸಿದರು.

ಸ್ವತ್ಛತಾ ಕಾರ್ಯ: ಜಂಬೂಸವಾರಿ ವೀಕ್ಷಣೆಗೆ ಬಂದಿದ್ದ ಲಕ್ಷಾಂತರ ಜನರು ಎಸೆದಿದ್ದ ನೀರಿನ ಬಾಟಲಿಗಳು, ಪ್ಲಾಸ್ಟಿಕ್‌ ಮತ್ತಿತರೆ ತ್ಯಾಜ್ಯಗಳಿಂದ ತುಂಬಿದ್ದ ಅರಮನೆ ಆವರಣ ಹಾಗೂ ನಗರದ ಪ್ರಮುಖ ರಸ್ತೆಗಳನ್ನು ಪಾಲಿಕೆ ಪೌರಕಾರ್ಮಿಕರು ಸ್ವತ್ಛಗೊಳಿಸಿದರೆ, ಅವರೊಂದಿಗೆ ಶ್ವಾಸಗುರು ವಚನಾನಂದ ಗುರೂಜಿ, ಸಮರ್ಪಣ ಫೌಂಡೇಶನ್‌ ಕಾರ್ಯಕರ್ತರು, ಎನ್‌ಎಸ್‌ಎಸ್‌, ಬದ್ರಿಪ್ರಸಾದ್‌ ಪಿಯು ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಿದರು.

ಅರಮನೆಯೊಳಗೆ 30 ಸಾವಿರ ಜನ: ಶನಿವಾರ ನಡೆದ ಜಂಬೂಸವಾರಿ ಮೆರವಣಿಗೆಯನ್ನು ಗೋಲ್ಡ್‌ಕಾರ್ಡ್‌ ಖರೀದಿಸಿದ್ದ 190 ಮಂದಿ, ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ ಮಾಡಿದ್ದ 68 ಮಂದಿ ಸೇರಿದಂತೆ ಅರಮನೆ ಆವರಣದಲ್ಲಿ 30 ಸಾವಿರ ಮಂದಿ ಜಂಬೂಸವಾರಿ ವೀಕ್ಷಿಸಿದ್ದಾರೆ. ಸೆ.21ರಿಂದ 29ರವರೆಗೆ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ 10662 ಮಂದಿ, ಗಾಲಿಗಳ ಮೇಲೆ ಅರಮನೆ ಪ್ರವಾಸಕ್ಕೆ ಸೆ.21 ರಿಂದ 29ರವರೆಗೆ 149 ಮಂದಿ ಭಾಗವಹಿಸಿದ್ದಾರೆ. ಒಟ್ಟಾರೆ ದಸರಾ ಕಾರ್ಯಕ್ರಮಗಳಲ್ಲಿ ಟಿಕೆಟ್‌ ಬುಕ್‌ ಮಾಡಿದ 105238 ಜನ ಭಾಗವಹಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಮಡಿಕೇರಿಯತ್ತ ಪ್ರಯಾಣ: ಮೈಸೂರು ದಸರಾ ಮುಗಿದ ಬೆನ್ನಲ್ಲೇ ಸಾಕಷ್ಟು ಯುವಜನರು ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ವೀಕ್ಷಣೆಗೆ ತೆರಳುತ್ತಿದ್ದರಿಂದ ಶನಿವಾರ ತಡರಾತ್ರಿವರೆಗೂ ಮೈಸೂರಿನಿಂದ ಹೊರಡುವ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಇನ್ನು ದೂರದ ಊರುಗಳಿಂದ ಬಂದು ಲಾಡ್ಜ್ಗಳಲ್ಲಿ ತಂಗಿದ್ದ ಸಾಕಷ್ಟು ಪ್ರವಾಸಿಗರು ಶನಿವಾರ ಸಂಜೆಯೇ ತಮ್ಮ ಊರುಗಳತ್ತ ತೆರಳಿದರು. ಉಳಿದವರು ಭಾನುವಾರ ತಮ್ಮ ಊರುಗಳತ್ತ ತೆರಳಿದರು. ಹೀಗಾಗಿ ಕಳೆದ 15 ದಿನಗಳಿಂದ ತುಂಬಿ ತುಳುಕುತ್ತಿದ್ದ ಮೈಸೂರಿನ ಲಾಡ್ಜ್ಗಳು ಈಗ ಖಾಲಿ ಹೊಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next