Advertisement

ದಸರಾ ಸಾಂಸ್ಕೃತಿಕ ಮೆರವಣಿಗೆ ವೈಭವ

11:36 AM Oct 15, 2018 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ)ಗೆ ಪೂರ್ವಭಾವಿಯಾಗಿ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆ ಯಶಸ್ವಿಯಾಗಿ ನಡೆಯಿತಾದರೂ ನಿರೀಕ್ಷಿಸಿದಷ್ಟು ಜನರ ಗಮನ ಸೆಳೆಯುವಲ್ಲಿ ವಿಫ‌ಲವಾಯಿತು.

Advertisement

ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ಥಳೀಯ ಕಲಾವಿದರರಿಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ ಹಾಗೂ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಅಂದು ಪ್ರವಾಸಿಗರ ದಂಡೇ ನೆರೆಯುವುದರಿಂದ ಸ್ಥಳೀಯ ಜನರು ಮೆರವಣಿಗೆ ನೋಡಲಾಗುತ್ತಿಲ್ಲ ಎಂಬ ಹಲವು ವರ್ಷಗಳ ಕೊರಗನ್ನು ಹೋಗಲಾಡಿಸಲು ಸಾಂಸ್ಕೃತಿಕ ಮೆರವಣಿಗೆ ಆಯೋಜಿಸಲಾಗಿತ್ತು. 

ಆದರೆ, ಮೊದಲ ಪ್ರಯತ್ನ ಆಗಿದ್ದರಿಂದ ಜಿಲ್ಲಾಡಳಿತ ನಿರೀಕ್ಷಿಸಿದಷ್ಟು ಜನರಿಂದ ಪ್ರತಿಕ್ರಿಯೆ ಸಿಗಲಿಲ್ಲ. ಸಾಂಸ್ಕೃತಿಕ ಮೆರವಣಿಗೆಯಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ ಸೇರಿದಂತೆ ಹತ್ತು ಆನೆಗಳನ್ನು ಬಳಸಿಕೊಳ್ಳಲಾಗಿತ್ತು. 73 ಕಲಾ ತಂಡಗಳನ್ನು ಪಟ್ಟಿ ಮಾಡಲಾಗಿತ್ತಾದರೂ ಕಲಾತಂಡಗಳ ಸಂಖ್ಯೆ 35 ನ್ನೂ ದಾಟಲಿಲ್ಲ. ಯುವ ಸಂಭ್ರಮದಲ್ಲಿ ಭಾಗವಹಿಸಿದ್ದ ತಂಡಗಳು ಹಾಗೂ ಕಾಲೇಜು ವಿದ್ಯಾರ್ಥಿಗಳ 38 ತಂಡಗಳು ಭಾಗವಹಿಸಲಿವೆ ಎಂದು ಪಟ್ಟಿಮಾಡಲಾಗಿತ್ತಾದರೂ ಮೆರವಣಿಗೆಯಲ್ಲಿ ಸಾಗಿದ್ದು ಎರಡೇ ತಂಡಗಳು.

ಸಂಘಟಕರ ನಡುವಿನ ಸಮನ್ವಯದ ಕೊರತೆಯಿಂದಾಗಿ ಮೆರವಣಿಗೆಯುದ್ದಕ್ಕೂ ಗಾಂಭೀರ್ಯತೆ ಇಲ್ಲದೆ ಒಂದು ಕಲಾ ತಂಡದಿಂದ ಮತ್ತೂಂದು ತಂಡದ ನಡುವೆ ಸಾಕಷ್ಟು ಅಂತರ ಇರುತ್ತಿದ್ದರಿಂದ ಜನರ ಗಮನ ಸೆಳೆಯುವಲ್ಲಿ ವಿಫ‌ಲವಾಯಿತು.

ನಂದಿಧ್ವಜಕ್ಕೆ ಪೂಜೆ: ಮಧ್ಯಾಹ್ನ 2 ರಿಂದ 2.30ಗಂಟೆಯೊಳಗೆ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಬೇಕಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಆಗಮಿಸಿದ್ದೇ 2.45ಕ್ಕೆ ಅವರ ಜೊತೆಗೂಡಿದ ಸಚಿವ ಜಿ.ಟಿ.ದೇವೇಗೌಡ ಅವರು ನಂದೀಧ್ವಜಕ್ಕೆ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ತೆರಳಿದರು.

Advertisement

ಮೊದಲಿಗೆ ನಾದಸ್ವರ, ಕೊಂಬು ಕಹಳೆ, ವೀರಗಾಸೆ ತಂಡಗಳು ತೆರಳಿದ ನಂತರ ನಿಶಾನೆ ಆನೆಗಳಾದ ಬಲರಾಮ ಮತ್ತು ಅಭಿಮನ್ಯು ಒಂದರ ಹಿಂದೆ ಒಂದು ಸಾಗಿದರೆ, ನೌಪತ್‌ ಆನೆಗಳಾದ ಪ್ರಶಾಂತ, ಚೈತ್ರ, ಧನಂಜಯ, ದ್ರೋಣ, ವಿಜಯ ಆನೆಗಳು ಒಟ್ಟಾಗಿ ಸಾಗಿದವು.

ಅವುಗಳ ಹಿಂದೆ ಪೂಜಾ ಕುಣಿತ, ನಾಸಿಕ್‌ ಡೋಲು, ಕತ್ತಿ ವರಸೆ, ದೊಣ್ಣೆ ವರಸೆ, ದಕ್ಷಿಣ ವಲಯ ಸಾಂಸ್ಕೃತಿಕ ಕಲಾ ತಂಡ, ಗಾರುಡಿ ಗೊಂಬೆ, ಫ‌ಲಕ ಕುಣಿತ, ಸೋಮನ ಕುಣಿತ, ಮಾರಿ ಕುಣಿತ, ಗೊರವರ ಕುಣಿತ, ಡೊಳ್ಳು ಕುಣಿತ, ಗೊರಕಾನ ನೃತ್ಯ, ತಮಟೆ-ನಗಾರಿ, ಝಾಂಜ್‌ ಪಥಕ್‌, ಪಟ ಕುಣಿತ, ಕಂಸಾಳೆ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡಗಳು, ನಾದಸ್ವರ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.

ಮಧ್ಯಾಹ್ನ 3.10ಕ್ಕೆ ಅರಮನೆಯ ಬಲರಾಮ ದ್ವಾರದಿಂದ ವೀರಗಾಸೆ ತಂಡ ಹೊರ ಬಂದರೆ, 3.55ಕ್ಕೆ ಕೊನೆಯದಾಗಿ ನಾದಸ್ವರ ತಂಡ ಹೊರಬಂತು. ಸಂಜೆ 5.20ಕ್ಕೆ ಬನ್ನಿಮಂಟಪ ಮೈದಾನ ತಲುಪಿತು.

ಪುಷ್ಪಾರ್ಚನೆ: ಬಣ್ಣ ಬಣ್ಣದ ಚಿತ್ತಾರಗಳು, ಝರಿ ಪೋಷಾಕುಗಳಿಂದ ಅಲಂಕೃತನಾಗಿ ಎಡ-ಬಲಕ್ಕೆ ಕಾವೇರಿ, ವರಲಕ್ಷ್ಮೀಯರನ್ನಿಟ್ಟುಕೊಂಡು ಬಂದ ಕ್ಯಾಪ್ಟನ್‌ ಅರ್ಜುನನಿಗೆ ಮಧ್ಯಾಹ್ನ 3.44ಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತು ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಮಂಗಳವಾದ್ಯದೊಂದಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಈ ವೇಳೆಗೆ ಕುಶಾಲತೋಪು ಹಾರಿಸಲಾಯಿತು. ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಶಾಸಕ ಬಿ.ಹರ್ಷವರ್ಧನ್‌, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next