Advertisement

ನೀನು ನಡೆದಿದ್ದೇ ದಾರಿ …ಕಾಯ್ತಾ ಇದ್ದೀನಿ…

10:20 AM Feb 14, 2019 | Sharanya Alva |

ದರ್ಶನ್‌ ಅಭಿನಯದ “ಯಜಮಾನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರೋದು ನಿಮಗೆ ಗೊತ್ತಿರಬಹುದು. ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ “ಯಜಮಾನ’ನ ಸಾಧನೆ ನೋಡಿ ಯುಟ್ಯೂಬ್‌ ಕೂಡಾ ಟ್ವೀಟರ್‌ ಮೂಲಕ ಶುಭಕೋರಿದೆ. 

Advertisement

ಸಖತ್‌ ಮಾಸ್‌ ಅಂಶಗಳಿರುವ ಈ ಟ್ರೇಲರ್‌ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇನ್ನು, “ಯಜಮಾನ’ ಚಿತ್ರದ ಟ್ರೇಲರ್‌ ಅನ್ನು ಸುಮಲತಾ ಅಂಬರೀಶ್‌ ಅವರು ವೀಕ್ಷಿಸಿ, ಶುಭ ಕೋರಿದ್ದಾರೆ. ಅದು ಸಿನಿಮಾದಲ್ಲಿರುವ ಡೈಲಾಗ್‌ ಶೈಲಿಯಲ್ಲೇ. ಟ್ರೇಲರ್‌ನಲ್ಲಿ “ಹೇ ಕ್ಯಾಡ್‌ಬರೀಸ್‌, ಆನೆ ನಡೆದಿದ್ದೇ ದಾರಿ…ಬರ್ತಾ ಇದ್ದೀನಿ.. ತಾಕತ್‌ ಇದ್ರೆ ಕಟ್ಟಾಕೋ….’ ಎಂಬ ಡೈಲಾಗ್‌ ಇದೆ. ಟ್ರೇಲರ್‌ ವೀಕ್ಷಿಸಿದ ಸುಮಲತಾ ಅವರು, “ನೀನು ನಡೆದಿದ್ದೇ ದಾರಿ … ಕಾಯ್ತಾ ಇದ್ದೀನಿ’ ಎಂದು ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ಅಭಿಷೇಕ್‌ನ ದೊಡ್ಡ ಅಣ್ಣ ಹಾಗೂ ದೊಡ್ಡ ಸ್ಫೂರ್ತಿ ನೀವು ಎನ್ನುತ್ತಲೇ ಶುಭ ಹಾರೈಸಿದ್ದಾರೆ. 

ಇದು ಸುಮಲತಾ ಅಂಬರೀಶ್‌ ಅವರು, ದರ್ಶನ್‌ ಬಗ್ಗೆ ಮಾಡಿರುವ ಟ್ವೀಟ್‌ ಆದರೆ, ಇತ್ತ ಕಡೆ ದರ್ಶನ್‌, ಅಭಿಷೇಕ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಅದು “ಅಮರ್‌’ ಚಿತ್ರದ ಸಲುವಾಗಿ. ಅಭಿಷೇಕ್‌ ನಾಯಕರಾಗಿರುವ “ಅಮರ್‌’ ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಟ್ವೀಟ್‌ ಮಾಡಿರುವ ದರ್ಶನ್‌, “ಪ್ರೀತಿಯ ತಮ್ಮ ಅಭಿಷೇಕ್‌ ಅಂಬರೀಷ್‌ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್‌ ಲೀ ವೆಲ್‌ ಕಮ್‌. ನಾಳೆ ಆತನ ಹೊಸ ಸಿನಿಮಾ “ಅಮರ್‌’ ಟೀಸರ್‌ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಸಿ ಬೆಳೆಸಿ’ ಎಂದಿದ್ದಾರೆ.

ಇನ್ನು, ಫೆ.16 ರಂದು ದರ್ಶನ್‌ ಹುಟ್ಟುಹಬ್ಬ. ಈ ಬಾರಿ ದರ್ಶನ್‌ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಅಭಿಮಾನಿಗಳು ಕೇಕ್‌, ಪಟಾಕಿ ಬದಲು ಅಕ್ಕಿ, ಬೇಳೆ ನೀಡಲಿದ್ದಾರೆ. ಈ ಬಗ್ಗೆಯೂ ದರ್ಶನ್‌ ಟ್ವೀಟ್‌ ಮಾಡಿದ್ದು, “ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟುಹಬ್ಬ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ, ಅದನ್ನು ಸಿದ್ಧಗಂಗಾ ಮಠ ಹಾಗೂ ಕೆಲವು ಅನಾಥಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ಸಂತೋಷದ ವಿಷಯ. ನನ್ನ ಹುಟ್ಟುಹಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯಲ್ಲಿರುವ ಒಂದು ಅನಾಥಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದುಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್‌ಗಳನ್ನೇ ಬಳಸಿ’ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next