Advertisement

ವಾಹನ ಸವಾರರಿಗೆ ಅಪಾಯಕಾರಿ ಅಚ್ಚಡ ಜಂಕ್ಷನ್‌

12:30 AM Mar 18, 2019 | |

ಕಟಪಾಡಿ: ಕಟಪಾಡಿ- ಶಿರ್ವ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯ ಅಚ್ಚಡ ಕ್ರಾಸ್‌ ಎಂಬಲ್ಲಿನ ಜಂಕ್ಷನ್‌ ವಾಹನ ಸವಾರರಿಗೆ ಅಪಾಯಕಾರಿ ಪರಿಣಮಿಸುತ್ತಿದೆ. ಇಲ್ಲಿ ಯಾವುದೇ ಸೂಚನೆ  ಅಚ್ಚಡಕ್ಕೆ ವಾಹನ ತಿರುಗಿಸಲಾಗುತ್ತದೆ. ಹಾಗೆಯೇ ಅಚ್ಚಡದಿಂದ ಬರುವ ವಾಹನಗಳು ಏಕಾಏಕಿ ರಾಜ್ಯ ಹೆದ್ದಾರಿ ಪ್ರವೇಶಿಸುತ್ತವೆ.  

Advertisement

ವೇಗಕ್ಕೆ ತಡೆ ಇಲ್ಲ
ಈ ಜಂಕ್ಷನ್‌ನಲ್ಲಿ ಮೂಡಬೆಟ್ಟು – ಅಚ್ಚಡ-ಸರಕಾರಿ ಗುಡ್ಡೆ ರಸ್ತೆಯು ಸುಮಾರು 2.76 ಕೋ.ರೂ.ಗಳಲ್ಲಿ ಅಭಿವೃದ್ಧಿಗೊಂಡಿದ್ದು ಲೋಕಾರ್ಪಣೆ ಯಾಗಿದೆ.  ಈ ರಸ್ತೆಯನ್ನು ನೇರವಾಗಿ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಗೆ ಸಂಧಿಸುವಂತೆ ಕಾಮಗಾರಿ ಪೂರೈಸ ಲಾಗಿದೆ. ಆದರೆ ಜಂಕ್ಷನ್‌ ಪ್ರದೇಶದಲ್ಲಿ ಯಾವುದೇ ವೇಗ ತಡೆ ನಿರ್ಮಿಸದೆ ಇರುವುದರಿಂದ ಸಮಸ್ಯೆಯಾಗಿದೆ ಎನ್ನುವುದು ಸ್ಥಳೀಯರ ಆರೋಪ.

ಸಂಚಾರ ನಿಯಮ ಪಾಲನೆ ಇಲ್ಲ
ಹೆದ್ದಾರಿ ಉತ್ತಮವಾಗಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತಿರು ತ್ತವೆ. ಅಚ್ಚಡ ಜಂಕ್ಷನ್‌ ಬಳಿ ಬಂದಾಗ ಯಾವುದೇ ಸೂಚನೆ ನೀಡದೆ ನೇರ ಟರ್ನ್ ಮಾಡುವುದರಿಂದ ಅಪಘಾತ ಹೆಚ್ಚುತ್ತಿವೆ.  ಈ ರಸ್ತೆಗೆ ಪ್ರವೇಶಿಸುವವರಿಗೆ ತಿರುವಿನ ಅರಿವು ಇರುವುದಿಲ್ಲ. ಸಿಗ್ನಲ್‌ ಗಮನಿಸದೆ ವೇಗದ ಚಾಲನೆಯಿಂದ ಇಲ್ಲಿ ಅತಿ ಹೆಚ್ಚು ಅಪಘಾತವಾಗುತ್ತಿದೆ. ಬ್ಯಾರಿಕೇಡ್‌ ಅಳವಡಿಸಿ ಸಂಚಾರ ಸುಗಮಗೊಳಿಸಿದರೆ  ಸಮಸ್ಯೆ ಬಗೆಹರಿಸಬಹುದು  ಎಂಬುದು ಸ್ಥಳೀಯ ರಾಜೇಶ್‌ ಪೂಜಾರಿ ತಿಳಿಸಿದ್ದಾರೆ. ಇತ್ತೀಚೆಗೆ ಕಾರುಗಳೆರಡರ ಮಧ್ಯೆ ಅಪಘಾತ ಸಂಭವಿಸಿದ್ದು, ಕಾರು ಪಕ್ಕದ ಅಂಗಡಿ ಶಟರ್‌ನತ್ತ ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಸಮಸ್ಯೆಗೆ ಅಂತ್ಯ ಹಾಡಲು ಸ್ಥಳೀಯರು ಆಗ್ರಹಿಸಿದ್ದಾರೆ.  

ಪ್ರಯಾಣಿಕರಿಗೂ ಅಪಾಯ 
ಪ್ರಯಾಣಿಕರನ್ನು ಹತ್ತಿಸಿ ಇಳಿಸಲು ಬಸ್ಸುಗಳು ಈ ಜಂಕ್ಷನ್‌ ಬಳಿ ನಿಂತಾಗಲೂ ಹೆಚ್ಚು  ಅಪಾಯಕಾರಿ ಸನ್ನಿವೇಶ ಕಂಡು ಬರುತ್ತದೆ. ಪಾದಚಾರಿಗಳೂ ಈ ಜಂಕ್ಷನ್‌ನಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. 

ವೇಗ ನಿಯಂತ್ರಣಕ್ಕೆ ಕ್ರಮ ಅಗತ್ಯ 
ಅಚ್ಚಡ ರಸ್ತೆಯಲ್ಲಿಯೂ ಸೂಕ್ತವಾದ ಹಂಪ್ಸ್‌ ನಿರ್ಮಿಸಬೇಕಿದೆ. ಮುಖ್ಯ ರಸ್ತೆಯಲ್ಲಿಯೂ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳ ಬೇಕು. 
-ನಾಗರಾಜ ಆಚಾರ್ಯ, ಅಚ್ಚಡ ಕ್ರಾಸ್‌ 

Advertisement

ಪರಿಶೀಲಿಸಿ ಕ್ರಮ
ಅಚ್ಚಡ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. 
-ನವೀನ್‌ ಎಸ್‌. ನಾಯಕ್‌, ಕಾಪು ಪಿಎಸ್‌ಐ

ವಿಜಯ ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next