Advertisement

ಕನ್ನಮಂಗಲದಲ್ಲೊಂದು ಡೇಂಜರ್‌ “ಯೂ-ಟರ್ನ್’

01:06 AM Jun 15, 2019 | Team Udayavani |

ಬೆಂಗಳೂರು: ಇದು ನಗರದ ಹೊರವಲಯದಲ್ಲಿರುವ ಕನ್ನಮಂಗಲದ “ಯೂ-ಟರ್ನ್’ ಅವ್ಯವಸ್ಥೆಯ ಕತೆ! ಎರಡೂ ಬದಿಯ ಏಳೆಂಟು ಹಳ್ಳಿಗಳ ನಡುವೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ “ಯೂ-ಟರ್ನ್’ ಮುಚ್ಚಿದರೆ ಸಂಪರ್ಕ ಕೊಂಡಿ ಕಳಚಿದಂತಾಗುತ್ತದೆ. ಇದಕ್ಕಾಗಿ ಗ್ರಾಮಸ್ಥರಿಂದಲೇ ವಿರೋಧವಿದೆ.

Advertisement

ಅಕಸ್ಮಾತ್‌ ತೆರೆದರೆ ಸಾವು-ನೋವುಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ “ಮುಚ್ಚಿಬಿಡಿ’ ಎಂಬ ಒತ್ತಾಯಗಳು ಇನ್ನು ಕೆಲವರಿಂದ ಕೇಳಿಬರುತ್ತವೆ. ಪರಿಣಾಮ ಇದು ಸ್ವತಃ ಸಂಚಾರ ಪೊಲೀಸರಿಗೂ ಕಗ್ಗಂಟಾಗಿದೆ. ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಜಂಕ್ಷನ್‌ “ಡೇಂಜರ್‌ ಝೋನ್‌’ (ಅಪಘಾತ ವಲಯ) ಆಗಿದೆ.

ಸುತ್ತಲಿನ ನಾಲ್ಕಾರು ಹಳ್ಳಿಗಳು ಮತ್ತು ನಗರದ ನಡುವೆ ಇರುವ ಈ ರಸ್ತೆಯೇ ಸಂಪರ್ಕ ಕೊಂಡಿ. ಆದರೆ, ಈಗ ಅದೇ ರಸ್ತೆ ಪ್ರಾಣಕ್ಕೆ ಎರವಾಗುತ್ತಿದೆ. ತಿಂಗಳಿಗೆ ಒಂದಿಲ್ಲೊಂದು ಬಲಿ ಇಲ್ಲಿ ಮಾಮೂಲು. ಜನ ಇಲ್ಲಿಗೆ ಬರುತ್ತಿದ್ದಂತೆ ಜೀವ ಕೈಯಲ್ಲಿ ಹಿಡಿದು ದಾಟುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಸರಾಸರಿ 50 ಅಪಘಾತಗಳು ಸಂಭವಿಸುತ್ತವೆ. ಕಳೆದ ಮೂರು ವರ್ಷಗಳಲ್ಲಿ 185 ಅಪಘಾತ ಪ್ರಕರಣಗಳು ದಾಖಲಾಗಿದ್ದು, 34 ಜನ ಮೃತಪಟ್ಟಿದ್ದಾರೆ.

2019ರಲ್ಲೇ ಕನ್ನಮಂಗಲ ಗೇಟ್‌ನಿಂದ ಕನ್ನಮಂಗಲಪಾಳ್ಯ ಜಂಕ್ಷನ್‌ ನಡುವೆ 9 ಅಪಘಾತಗಳು ಸಂಭವಿಸಿವೆ. ಕೇವಲ ಒಂದೂವರೆ ಕಿ.ಮೀ. ಅಂತರದಲ್ಲಿರುವ ಈ ಮಾರ್ಗದಲ್ಲಿ ಸುಮಾರು 15 ಸಂಚಾರ ಪೊಲೀಸರನ್ನು ಪಾಳಿಯಲ್ಲಿ ನಿಯೋಜಿಸಲಾಗಿದೆ. ಆದಾಗ್ಯೂ ತಿಂಗಳಿಗೊಂದದರೂ ಅಪಘಾತ ಕಟ್ಟಿಟ್ಟ ಬುತ್ತಿ. ಹೀಗಾಗಿ, ಇದು ತಲೆನೋವಾಗಿದೆ.

ಎರಡೂ ಕಡೆ ಇಳಿಜಾರು ಸಮಸ್ಯೆ: ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಹೋಗುವಾಗ ಹಾಗೂ ದೇವನಹಳ್ಳಿಯಿಂದ ನಗರಕ್ಕೆ ಬರುವ ಮಾರ್ಗಗಳು ಸಂಧಿಸುವ ಫ್ಲೈಓವರ್‌ ಜಾಗ ಇಳಿಜಾರಿನಲ್ಲಿದೆ. ಎರಡೂ ಕಡೆಯಿಂದ ಬರುವ ವಾಹನಗಳು ವೇಗವಾಗಿ ನುಗ್ಗುತ್ತವೆ. ಅಲ್ಲಿಯೇ ಎರಡೂ ಬದಿಯಲ್ಲಿರುವ ಗ್ರಾಮಸ್ಥರಿಗೆ ರಸ್ತೆ ದಾಟಲು ಅವಕಾಶ ಕಲ್ಪಿಸಲಾಗಿದೆ.

Advertisement

ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಯೂ-ಟರ್ನ್ ಮುಚ್ಚಲಾಗಿತ್ತು. ಆದರೆ, ಇದರಿಂದ ಹಳ್ಳಿಯ ಜನ ಒಂದೂವರೆ ಕಿ.ಮೀ. ದೂರ ಹೋಗಿ ತಿರುವು ಪಡೆದುಕೊಂಡು ಹಿಂತಿರುಗಬೇಕಾಯಿತು. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಒತ್ತಡ ಹೇರಿ ತೆರವುಗೊಳಿಸಲಾಯಿತು. ಈಗ ಮತ್ತದೆ ಸಾವು-ನೋವುಗಳು ಪುನರಾವರ್ತನೆ ಆಗುತ್ತಿವೆ ಎಂದು ಭುವನಹಳ್ಳಿಯ ಮಹಿಳೆಯೊಬ್ಬರು ಅಲವತ್ತುಕೊಂಡರು.

ಮನವಿ ಸಲ್ಲಿಸಿದರೂ ಪರಿಹಾರವಿಲ್ಲ – ಆರೋಪ: ವಾರಕ್ಕೊಂದು ಅಪಘಾತಕ್ಕೆ ಈ ರಸ್ತೆ ಸಾಕ್ಷಿ ಆಗುತ್ತದೆ. ಟಿಪ್ಪರ್‌ ಲಾರಿಗಳು ಸೇರಿದಂತೆ ಭಾರಿ ವಾಹನಗಳು ವೇಗವಾಗಿ ಇಲ್ಲಿ ಬರುತ್ತವೆ. ಅವುಗಳ ಮುಂದಿರುವ ಸಣ್ಣ-ಪುಟ್ಟ ವಾಹನಗಳು ಯೂ-ಟರ್ನ್ನಲ್ಲಿ ತಿರುವು ಪಡೆಯುವಾಗ ಅನಾಯಾಸವಾಗಿ ದೊಡ್ಡ ವಾಹನಗಳಿಗೆ ತುತ್ತಾಗುತ್ತವೆ. ಅಪಘಾತಗಳಲ್ಲಿ ಹೆಚ್ಚಾಗಿ ಸ್ಥಳೀಯರೇ ಬಲಿ ಆಗುತ್ತಾರೆ. ದೇವನಹಳ್ಳಿ ತಹಶೀಲ್ದಾರ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಉಪಯೋಗ ಆಗಿಲ್ಲ ಎಂದು ದೊಡ್ಡಸೊಣ್ಣೆಯ ಚಂದ್ರಶೇಖರ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಮಕ್ಕಳನ್ನಂತೂ ಸ್ವತಂತ್ರವಾಗಿ ಇಲ್ಲಿ ಕಳುಹಿಸುವುದೇ ಇಲ್ಲ. ಪೋಷಕರು ಯಾರಾದರೂ ಕಡ್ಡಾಯವಾಗಿ ಜತೆಗಿರುತ್ತಾರೆ. ವೃದ್ಧರು, ಮಹಿಳೆಯರು ಈ ತುದಿಯಿಂದ ಆ ತುದಿಗೆ ಹೋದರೆ, ಸಾವಿನ ದವಡೆಯಿಂದ ಪಾರಾದಂತೆ. ಅಷ್ಟರಮಟ್ಟಿಗೆ ಅಪಘಾತಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ನಾಲ್ಕು ದಿನಗಳ ಹಿಂದಷ್ಟೇ ಫ್ಲೈಓವರ್‌ ಮೇಲೆಯೇ ಅಪಘಾತ ಸಂಭವಿಸಿತ್ತು ಎಂದು ಸ್ಥಳೀಯ ನಿವಾಸಿ ಪಿಳ್ಳಪ್ಪ ಮಾಹಿತಿ ನೀಡಿದರು.

ಯಾವ್ಯಾವ ಹಳ್ಳಿಗಳು ಬರುತ್ತವೆ?: ಒಂದೆಡೆ ಕನ್ನಮಂಗಲ, ಕನ್ನಮಂಗಲ ಪಾಳ್ಯ, ದೊಡ್ಡಸೊಣ್ಣೆ, ಹೊಸಹಳ್ಳಿ ಬರುತ್ತವೆ. ಮತ್ತೂಂದು ಬದಿಯಲ್ಲಿ ಭುವನಹಳ್ಳಿ, ಕೆಮ್ಮದಿಮ್ಮನಹಳ್ಳಿ, ಹೆರಪನಹಳ್ಳಿ, ಅಣ್ಣೆಶಪುರ, ದಡಪನಹಳ್ಳಿ ಮತ್ತಿತರ ಗ್ರಾಮಗಳು ಬರುತ್ತವೆ. ಎರಡೂ ಹಳ್ಳಿಯವರು ದೇವನಹಳ್ಳಿ, ಚಿಕ್ಕಬಳ್ಳಾಪುರ, ಬೆಂಗಳೂರಿಗೆ ಹೋಗಲು ಈ ಮುಖ್ಯರಸ್ತೆಗೆ ಬರಲೇಬೇಕು.

ಸಮಸ್ಯೆ ಏನು?: ಇಲ್ಲಿ ಫ್ಲೈಓವರ್‌ ಇದೆ. ಅದಕ್ಕೊಂದು ಸರ್ವಿಸ್‌ ರಸ್ತೆ ಇದೆ. ಎರಡೂ ಬದಿಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ ಕೂಡ ಇದೆ. ಆದರೆ, ಒಂದಕ್ಕೊಂದು ಸಂಬಂಧ ಇಲ್ಲದಂತಿವೆ!
ಹೌದು, ಸರ್ವಿಸ್‌ ಈ ರಸ್ತೆ ಹಿಡಿದು ಸಾಗಿದರೆ, ನಗರದಿಂದ ಬಂದ ರೈಲ್ವೆ ಹಳಿ ಎದುರಾಗುತ್ತದೆ. ಆ ಹಳಿಯ ಆಚೆಗೆ ಮತ್ತೂಂದು ಬದಿಯ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಇದೆ.

ಇನ್ನು ಅದೇ ರೈಲು ಹಳಿ ಮುಂದೆ ಕನ್ನಮಂಗಲ ಪಾಳ್ಯ ಜಂಕ್ಷನ್‌ ಪಕ್ಕದಲ್ಲೇ ಹಾದುಹೋಗುವುದರಿಂದ ಕ್ರಾಸಿಂಗ್‌ಗೆ ಕಾರಣವಾಗುತ್ತದೆ. ಹಾಗಾಗಿ, ಈ ಜಂಕ್ಷನ್‌ನಲ್ಲಿ ಸ್ಕೈವಾಕ್‌ ಮಾಡಿದರೂ, ಅದು ಈ ಕ್ರಾಸಿಂಗ್‌ ದಾಟುವಂತಿರಬೇಕು. ಆದ್ದರಿಂದ ಸಿಗ್ನಲ್‌ಗ‌ಳನ್ನು ಹಾಕುವುದು ಉತ್ತಮ ಎಂದೂ ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ವಿಮಾನ ನಿಲ್ದಾಣ ರಸ್ತೆಯಲ್ಲಾದ ಅಪಘಾತಗಳು
ವರ್ಷ ಅಪಘಾತಗಳು ಸಾವು
2016 64 14
2017 56 11
2018 44 6
2019 (ಏಪ್ರಿಲ್‌ವರೆಗೆ) 21 3

ಕಳೆದ ಐದು ತಿಂಗಳಲ್ಲಿ ಜಂಕ್ಷನ್‌ನಲ್ಲಾದ ಅಪಘಾತಗಳು
4- ಗಂಭೀರ ಅಪಘಾತಗಳು
5- ಗಂಭೀರವಲ್ಲದ ಅಪಘಾತಗಳು

ಕನ್ನಮಂಗಲ ಮಾರ್ಗದಲ್ಲೇ 16 ಜನ ಸಂಚರ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುತ್ತಿರುವ ಅಪಘಾತಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು.
-ಪಿ. ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತರು (ಸಂಚಾರ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next