Advertisement

ಒದ್ದೆಯಾಗದ ಮರಳು

07:23 PM Jan 15, 2020 | Sriram |

ಜಾದೂಗಾರರ ಬತ್ತಳಿಕೆಯಲ್ಲಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಬೇಕಾದಷ್ಟು ಪ್ರಯೋಗಗಳು ಇವೆ. ಇದರಲ್ಲಿ ಈಗ ಹೇಳುತ್ತಿರುವ ಮರಳು ಪ್ರಯೋಗವೂ ಒಂದು. ಮೊದಲು ಮರಳು ಪ್ರಯೋಗ ಪ್ರೇಕ್ಷಕರ ದೃಷ್ಟಿಯಲ್ಲಿ ಹೇಗೆ ಕಾಣುತ್ತದೆ ಅಂತ ನೋಡೋಣ.ಮೇಜಿನ ಮೇಲೆ ನೀರು ತುಂಬಿದ ಗಾಜಿನ ಜಾಡಿ ಮತ್ತು ಒಂದು ಪ್ಲೇಟಿನಲ್ಲಿ ಮರಳನ್ನು ಇಟ್ಟಿದೆ. ಜಾದೂಗಾರ ಮರಳನ್ನು ಮುಷ್ಟಿಯಲ್ಲಿ ಹಿಡಿದು ಮೇಲಿಂದ ನಿಧಾನವಾಗಿ ಪ್ಲೇಟಿನಲ್ಲಿ ಸುರಿದು ಒಣ ಮರಳೆಂದು ತೋರಿಸುತ್ತಾನೆ. ನಂತರ, ಅದನ್ನು ಪ್ರೇಕ್ಷಕರು ನೋಡುತ್ತಿದ್ದಂತೆ ಮರಳನ್ನು ಪ್ಲೇಟಿನಿಂದ ನೀರು ತುಂಬಿದ ಜಾಡಿಗೆ ನಿಧಾನವಾಗಿ ಸುರಿಯುತ್ತಾನೆ. ಅರೆ, ಮರಳು ನೀರಿನೊಂದಿಗೆ ಬೆರೆತು ಒದ್ದೆಯಾಯಿತಲ್ಲಾ ಎಂದು ಅನಿಸುತ್ತಿದ್ದಂತೆ ಜಾದೂಗಾರ ತನ್ನ ಕೈಯನ್ನು ಜಾಡಿಯಲ್ಲಿ ಮುಳುಗಿಸಿ ಮುಷ್ಟಿಯಲ್ಲಿ ಮರಳನ್ನು ಹೊರತೆಗೆದು ಎತ್ತರದಿಂದ ಪ್ಲೇಟಿನ ಮೇಲೆ ನಿಧಾನವಾಗಿ ಸುರಿಯುತ್ತಾನೆ. ಅರೆ, ಮರಳು ಸ್ವಲ್ಪವೂ ಒದ್ದೆಯಾಗದೆ ಉದುರುದುರಾಗಿರುತ್ತದೆ!

Advertisement

ಇದು ಕೇಳ್ಳೋಕೆ ಬಹಳ ಸುಲಭ ಅನಿಸಿಬಿಡುತ್ತದೆ. ಆದರೆ, ಈ ಮ್ಯಾಜಿಕನ್ನು ಮಾಡಬೇಕಾದರೆ ಸ್ವಲ್ಪ ಪೂರ್ವ ತಯಾರಿ ಅಗತ್ಯ. ಅಂದರೆ, ಒಂದಷ್ಟು ಸರ್ಕಸ್‌ ಮಾಡಲೇಬೇಕಾಗುತ್ತದೆ. ಅದು ಹೇಗೆಂದರೆ, ಒಂದು ಬಾಣಲೆಯಲ್ಲಿ ಸುಮಾರು ಅರ್ಧ ಕಿಲೋ ಶುದ್ಧವಾದ ಮರಳನ್ನು ಹಾಕಿ. ಮರಳು ತೀರಾ ನಯವಾಗಿರದೆ ಸ್ವಲ್ಪ ಹರಳು ಹರಳಾಗಿರಲಿ. ಬಾಣಲೆಯನ್ನು ಸ್ಟೌ ಮೇಲೆ ಇಟ್ಟು ಉಪ್ಪಿಟ್ಟಿಗೆ ರವೆಯನ್ನು ಫ್ರೈ ಮಾಡಿದಂತೆ ಮಾಡಿ. ಮರಳು ಕಾದ ನಂತರ ಇದಕ್ಕೆ ಒಂದು ಮೇಣದ ಬತ್ತಿಯನ್ನು ಚಿಕ್ಕ, ಚಿಕ್ಕ ಚೂರುಗಳನ್ನಾಗಿ ಮಾಡಿ ಹಾಕಿ. ಇನ್ನೂ ಚೆನ್ನಾಗಿ ಫ್ರೈ ಮಾಡಿ (ಮೇಣದ ಬತ್ತಿಯ ಬದಲಿಗೆ ಒಳ್ಳೆಯ ಜೇನು ಮೇಣವನ್ನೂ ಬೇಕಾದರೆ ಉಪಯೋಗಿಸಬಹುದು). ಈಗ ಮರಳಿನ ಹರಳುಗಳ ಮೇಲೆ ಮೇಣದ ತೆಳುವಾದ ಲೇಪನವಾಗುತ್ತದೆ. ನಂತರ ಮರಳನ್ನು ಆರಲು ಬಿಡಿ. ಈ ರೀತಿ ಮೇಣದ ಲೇಪನ ಆಗಿರುವ ಕಾರಣ ಮರಳು ನೀರಲ್ಲಿ ಮುಳುಗಿದರೂ ಒದ್ದೆಯಾಗುವುದಿಲ್ಲ.

ಇದೇ ಜಾದೂಗಾರ ಪ್ರೇಕ್ಷಕರ ಮುಂದೆ ಇಡುವ ವಿಸ್ಮಯ.

-ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next