Advertisement

ಡಾಲಿಯ ಭೈರವ ಅವತಾರ

11:02 AM Jun 19, 2018 | |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರ ಕೇವಲ ನಿರ್ಮಾಪಕರಿಗೆ, ಅಭಿಮಾನಿಗಳಿಗೆ ಖುಷಿಯನ್ನಷ್ಟೇ ನೀಡಿಲ್ಲ. ಬದಲಾಗಿ ಆ ಸಿನಿಮಾದಲ್ಲಿ ನಟಿಸಿದ ಕಲಾವಿದರಿಗೆ ಒಳ್ಳೆಯ ಅವಕಾಶವನ್ನೂ ಕಲ್ಪಿಸಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ಪರಭಾಷೆಯ ನಿರ್ಮಾಪಕ, ನಿರ್ದೇಶಕರು ಕೂಡಾ “ಟಗರು’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೀವು ಕೇಳಿರಬಹುದು. ಅದರಲ್ಲಿ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕೂಡಾ ಒಬ್ಬರು.

Advertisement

“ಟಗರು’ ಚಿತ್ರ ನೋಡಿದ ರಾಮ್‌ಗೋಪಾಲ್‌ ವರ್ಮಾ, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಾನ್ವಿತಾ ಹಾಗೂ ಧನಂಜಯ್‌ ಅವರಿಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಈಗ ವರ್ಮಾ ಮಾತು ಉಳಿಸಿಕೊಂಡಿದ್ದಾರೆ. ಅದು ಧನಂಜಯ್‌ಗೆ ತೆಲುಗು ಹಾಗೂ ಕನ್ನಡ ಸಿನಿಮಾವೊಂದನ್ನು ನಿರ್ಮಿಸುವ ಮೂಲಕ.

ಹೌದು, ರಾಮ್‌ಗೋಪಾಲ್‌ ವರ್ಮಾ, “ಟಗರು’ ಚಿತ್ರದಲ್ಲಿ ಧನಂಜಯ್‌ ಮಾಡಿದ ಡಾಲಿ ಪಾತ್ರವನ್ನು ತುಂಬಾನೇ ಮೆಚ್ಚಿದ್ದರು. ಈಗ ಮೊದಲ ಹಂತವಾಗಿ ಧನಂಜಯ್‌ಗಾಗಿ ರಾಮ್‌ಗೋಪಾಲ್‌ ವರ್ಮಾ ಸಿನಿಮಾ ನಿರ್ಮಿಸುತ್ತಿದ್ದಾರೆ. ಆ ಚಿತ್ರಕ್ಕೆ “ಭೈರವ ಗೀತ’ ಎಂದು ಹೆಸರಿಡಲಾಗಿದ್ದು, ವರ್ಮಾ ಶಿಷ್ಯ ಸಿದ್ಧಾರ್ಥ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿದೆ.

ಧನಂಜಯ್‌ ಅವರ “ಅಲ್ಲಮ’ ಚಿತ್ರದ ನಟನೆಗಾಗಿ ಫಿಲಂಫೇರ್‌ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ “ಭೈರವ ಗೀತ’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿದೆ. ಧನಂಜಯ್‌ ಬಗ್ಗೆ ಟ್ವೀಟ್‌ ಮಾಡಿರುವ ವರ್ಮಾ, “ಡಾಲಿಯಂತಹ ಸಿಟ್ಟಿರುವ ಒಬ್ಬ ಕೋಪಿಷ್ಠನನ್ನು ನಾನು ಇದುವರೆಗೆ ನೋಡಿಲ್ಲ. ಡಾಲಿಯ ಬಾಯಿಗಿಂತ ಆತನ ಕಣ್ಣುಗಳು ಹೆಚ್ಚು ಮಾತನಾಡುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, “ಭೈರವ ಗೀತ’ ಒಂದು ಕ್ರೈಮ್‌ ಹಿನ್ನೆಲೆಯ ಲವ್‌ಸ್ಟೋರಿಯಾಗಿದ್ದು, ಫ‌ಸ್ಟ್‌ಲುಕ್‌ನಲ್ಲಿ ಧನಂಜಯ್‌ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಚಿತ್ರೀಕರಣ ಇದೇ 21 ರಿಂದ ನಡೆಯಲಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ಇನ್ನು, “ಟಗರು’ ಚಿತ್ರದಲ್ಲಿ ಪುನರ್ವಸು ಪಾತ್ರ ಮಾಡಿದ ಮಾನ್ವಿತಾ ಅವರ ನಟನೆ ಮೆಚ್ಚಿಕೊಂಡಿದ್ದ ರಾಮ್‌ಗೋಪಾಲ್‌ ವರ್ಮಾ, ಎರಡು ಸಾವಿರ ರೂಪಾಯಿ ನೋಟಿನ ಮೇಲೆ ತಮ್ಮ ಸಹಿ ಹಾಕಿ ಕೊಟ್ಟು, ಮುಂದೆ ಸಿನಿಮಾ ಮಾಡುವ ಭರವಸೆ ನೀಡಿದ್ದರು. ಸದ್ಯ ಧನಂಜಯ್‌ಗೆ ಅವಕಾಶ ಸಿಕ್ಕಿರುವುದರಿಂದ ಮಾನ್ವಿತಾ ಅವರಲ್ಲೂ ತೆಲುಗು ಸಿನಿಮಾ ಆಸೆ ಗರಿಗೆದರಿದೆ. ಅವರು ಕೂಡಾ ವರ್ಮಾ ಕರೆಗಾಗಿ ಎದುರು ನೋಡುತ್ತಿರುವುದು ಸುಳ್ಳಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next