Advertisement

ದ.ಕ, ಉ.ಕ: ಸೋಂಕಿನ ಮೂಲ ಇನ್ನೂ ಕಗ್ಗಂಟು

12:08 PM May 11, 2020 | sudhir |

ಮಂಗಳೂರು: ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಬಂದು ಹೋದ ರೋಗಿಯ ಮುಖಾಂತರ ಭಟ್ಕಳದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ರವಿವಾರ ಮತ್ತೆ 7 ಪ್ರಕರಣ ಸಹಿತ ಒಟ್ಟು ಪ್ರಕರಣ 28ಕ್ಕೆ ಏರಿಕೆಯಾಗಿದೆ. ಆದರೆ ದ.ಕ. ಮತ್ತು ಭಟ್ಕಳದಲ್ಲಿ ಹರಡುತ್ತಿರುವ ಸೋಂಕಿನ ಮೂಲ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದ ಬಂಟ್ವಾಳದ 50 ವರ್ಷದ ಮಹಿಳೆಗೆ ತದನಂತರದಲ್ಲಿ ಕೋವಿಡ್ ಸೋಂಕು ಹರಡಿ ಬಳಿಕ ಮೃತಪಟ್ಟಿದ್ದರು. ಆನಂತರ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ವೃದ್ಧೆಯರು, ಆಸ್ಪತ್ರೆಯ ಸಿಬಂದಿಗೆ ಮತ್ತು ಅವರ ಸಂಪರ್ಕದಿಂದ ಸೇರಿದಂತೆ ಒಟ್ಟು 17 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.

ಮಹಿಳೆ ಮೃತಪಟ್ಟ ದಿನದಂದೇ ಎ. 20ರಂದು ಭಟ್ಕಳದ ಐದು ತಿಂಗಳ ಮಗುವನ್ನೂ ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ಕರೆ ತರಲಾಗಿದ್ದು, ಇದೀಗ ಆ ಮಗು, ಆತನ ತಂದೆ, ಕುಟುಂಬದವರು, ಮನೆ ಸನಿಹದವರು, ಸ್ನೇಹಿತರು ಹೀಗೆ ಒಟ್ಟು 28 ಮಂದಿಯಲ್ಲಿ ಕಳೆದೊಂದು ವಾರದ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಡುವೆ ದ.ಕ. ಜಿಲ್ಲೆಯಲ್ಲಿ ಸೋಂಕು ಕಾಣಿಸಿ ಕೊಂಡಿರುವ ಮೂಲವೇ ಉ.ಕ. ಜಿಲ್ಲೆಯ ಮೂಲವೂ ಆಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದರು. ಫಸ್ಟ್‌ ನ್ಯೂರೋದ್ದವರಿಗೆ ಸೋಂಕು ಹೇಗೆ ತಗಲಿತು ಎಂಬ ಬಗ್ಗೆ ತನಿಖೆಗೆ ಕಳೆದ ವಾರವೇ ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದರು.

ದ.ಕ.: ರವಿವಾರ ಪಾಸಿಟಿವ್‌ ಪ್ರಕರಣವಿಲ್ಲ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಯಾವುದೇ ಪಾಸಿಟಿವ್‌ ಪ್ರಕರಣ ದಾಖಲಾಗಿಲ್ಲ.
ರವಿವಾರ ಒಟ್ಟು 190 ಮಂದಿಯ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು, ಯಾವುದೇ ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ. ರವಿವಾರ 88 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 184 ವರದಿಗಳು ಬರಲು ಬಾಕಿ ಇವೆ. ಎನ್‌ಐಟಿಕೆಯಲ್ಲಿ ಒಟ್ಟು 32 ಮಂದಿ, ಇಎಸ್‌ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ವೃದ್ಧೆಯ ಸ್ಥಿತಿ ಗಂಭೀರ
ಕೋವಿಡ್ ದೃಢಪಟ್ಟು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋಳೂರಿನ 58 ವರ್ಷದ ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಟ್ಟು 15 ಕೋವಿಡ್ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಲಶೇಖರದ 80 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಉಳಿದ 13 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ಮೂಲ ಪತ್ತೆ ತನಿಖಾ ವರದಿ ರವಿವಾರ ಸಿಗಬೇಕಿತ್ತು. ಆದರೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ದ್ವಿತೀಯ ಹಂತದ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಬರಲು ಇನ್ನೂ ಎರಡು ದಿನ ಬೇಕಾಗಬಹುದು. ಆ ಬಳಿಕ ತನಿಖಾ ಸಮಿತಿ ಮತ್ತು ಅಧಿಕಾರಿಗಳು ಇನ್ನೊಂದು ಸುತ್ತಿನ ಸಭೆ ಸೇರಿ ಚರ್ಚಿಸಿ ಬಳಿಕ ಪರೀಕ್ಷಾ ವರದಿಯನ್ನೂ ಗಣನೆಗೆ ತೆಗೆದುಕೊಂಡು ಕೋವಿಡ್ ಹರಡುವಿಕೆ ಮೂಲದ ಬಗ್ಗೆ ವರದಿ ಸಲ್ಲಿಸಲಿದ್ದಾರೆ.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next