Advertisement

Dakshina Kannada: 2 ಮೌಲನಾ ಆಝಾದ್‌ ಶಾಲೆಗಳಿಗೆ ಪಿಯುಸಿ ಮಂಜೂರು

12:22 AM Aug 09, 2024 | Team Udayavani |

ಬಂಟ್ವಾಳ: ದ.ಕ.ಜಿಲ್ಲೆಯ ಮಂಜನಾಡಿ ಹಾಗೂ ಪುದು (ಫರಂಗಿಪೇಟೆ) ಸಹಿತ ರಾಜ್ಯದ 25 ಮೌಲನಾ ಆಝಾದ್‌ ಮಾದರಿ ಶಾಲೆಗಳಿಗೆ ರಾಜ್ಯ ಅಲ್ಪಸಂಖ್ಯಾಕರ ಕಲ್ಯಾಣ ಹಜ್‌ ಮತ್ತು ವಕ್ಫ್ ಇಲಾಖೆಯು ಪಿಯುಸಿ ಮಂಜೂರುಗೊಳಿಸಿದೆ. 2024-25ನೇ ಸಾಲಿನಲ್ಲಿ ವಿಜ್ಞಾನ ವಿಭಾಗಕ್ಕೆ ಅನುಮತಿ ನೀಡಿದ್ದು, 2025-26ನೇ ಸಾಲಿನಲ್ಲಿ ವಾಣಿಜ್ಯ ವಿಭಾಗವನ್ನು ಆರಂಭಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Advertisement

ಪ್ರತಿ ತರಗತಿಯಲ್ಲಿ ಗರಿಷ್ಠ 60 ವಿದ್ಯಾರ್ಥಿಗಳ ಸಂಖ್ಯಾಬಲದೊಂದಿಗೆ ತರಗತಿ ನಡೆಯಲಿದ್ದು, ಹುದ್ದೆಗಳು ಭರ್ತಿಯಾಗುವವರೆಗೆ ಪ.ಪೂ.ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಅತಿಥಿ ಉಪನ್ಯಾಸಕರು ಹಾಗೂ ಉಳಿದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅನುಮತಿ ನೀಡಿದೆ. ದ.ಕ.ಜಿಲ್ಲೆಯ ಎರಡು ಕಡೆಯೂ ಪ್ರಸ್ತುತ ದಾಖಲಾತಿ ನಡೆದಿದ್ದು, ಮಂಜನಾಡಿಯಲ್ಲಿ ನಾಲ್ವರು ಹಾಗೂ ಪುದುವಿನಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ದಾಖಲಾಗಿದ್ದಾರೆ.

ಎಲ್ಲೆಲ್ಲಿಗೆ ಮಂಜೂರು?
ದ.ಕ.ಜಿಲ್ಲೆಯಲ್ಲಿ ಕಾರ್ಯಾ ಚರಿಸುತ್ತಿರುವ 8 ಮೌಲನಾ ಆಝಾದ್‌ ಮಾದರಿ ಶಾಲೆಗಳ ಪೈಕಿ ಉಳ್ಳಾಲ ತಾಲೂಕಿನ ಮಂಜನಾಡಿ ಹಾಗೂ ಬಂಟ್ವಾಳ ತಾಲೂಕಿನ ಪುದು ಶಾಲೆಗಳಿಗೆ ಪಿಯುಸಿ ಮಂಜೂರಾಗಿದ್ದು, ಈ ಎರಡು ಶಾಲೆಗಳು ಕೂಡ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಉಡುಪಿಯಲ್ಲಿ ಕಾಪು ಹಾಗೂ ಕಾರ್ಕಳದಲ್ಲಿ 2 ಮೌಲನಾ ಶಾಲೆಗಳಿದ್ದು, ಸದ್ಯಕ್ಕೆ ಅಲ್ಲಿಗೆ ಪಿಯುಸಿ ಮಂಜೂರಾಗಿಲ್ಲ.

ಉಳಿದಂತೆ ರಾಜ್ಯದ ಬಳ್ಳಾರಿ, ಬಾಗಲಕೋಟೆಯ ನವನಗರ, ಬೀದರ್‌ನ ಮನಿಯಾರ್‌ ತಾಲೀಂ, ಬೆಂಗಳೂರು ಉತ್ತರದ ಶಿವಾಜಿನಗರ, ಬೆಳಗಾವಿಯ ರಾಮತೀರ್ಥನಗರ, ದಾವಣಗೆರೆಯ ಬಿ.ಡಿ.ಲೇಔಟ್‌, ಹುಬ್ಬಳ್ಳಿಯ ಸದಾಶಿವನಗರ, ಹಾವೇರಿ ನಗರ, ಸವಣೂರು, ಹಾಸನದ ಅರಳೇಪೇಟೆ, ಕಲಬುರಗಿಯ ಎಂಎಸ್‌ಕೆ ಮಿಲ್‌, ಜೇವರ್ಗಿ, ಕೋಲಾರ, ಕೊಪ್ಪಳದ ದಿಡ್ಡಿಕೇರಿ, ಗಂಗಾವತಿ, ಮೈಸೂರಿನ ಲಷ್ಕರ್‌ ಮೊಹಲ್ಲಾ, ರಾಯಚೂರಿನ ಹಾಷ್ಮಿàಯಾ ಕಾಂಪೌಂಡ್‌, ಸಿಂಧನೂರು, ಶಿವಮೊಗ್ಗದ ಸೋಮಿನಕೊಪ್ಪ, ತುಮಕೂರಿನ ಗುಂಚಿಚೌಕ, ವಿಜಯನಗರದ ಹೊಸಪೇಟೆ, ವಿಜಯಪುರದ ನೌಬಾಗ, ಯಾದಗಿರಿ ಮೌಲನಾ ಅಝಾದ್‌ ಶಾಲೆಗಳಿಗೆ ಪಿಯುಸಿ ಮಂಜೂರಾಗಿದೆ.

ಮೊದಲ ವರ್ಷ 175 ಉಪನ್ಯಾಸಕರು
ಮೊದಲ ವರ್ಷ ವಿಜ್ಞಾನ ವಿಭಾಗ(ಪಿಸಿಎಂಬಿ) ಮಾತ್ರ ಇರುವುದರಿಂದ ವಿಷಯವಾರು ಒಬ್ಬ ಉಪನ್ಯಾಸಕರಂತೆ ಒಂದು ಕಾಲೇಜಿಗೆ 7ರಂತೆ 25 ಕಡೆಗೆ ಒಟ್ಟು 175 ಉಪನ್ಯಾಸಕರು ನೇಮಕಗೊಳ್ಳಲಿದ್ದಾರೆ. ಪ್ರಸ್ತುತ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕನ್ನಡ, ಆಂಗ್ಲ, ಉರ್ದು ವಿಷಯಕ್ಕೆ ತಲಾ ಒಬ್ಬರು ಉಪನ್ಯಾಸಕರಿರುತ್ತಾರೆ.

Advertisement

3 ತಿಂಗಳಲ್ಲಿ ಹೊಸ
ಕಟ್ಟಡ ಪೂರ್ಣ
ದ.ಕ. ಜಿಲ್ಲೆಯಲ್ಲಿ 8 ಕಡೆ ಮೌಲಾನಾ ಅಝಾದ್‌ ಮಾದರಿ ಶಾಲೆಗಳು ಕಾರ್ಯಾಚರಿಸುತ್ತಿದ್ದು, 6ರಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈಗಾಗಲೇ 2 ಶಾಲೆಗಳು ಸ್ವಂತ ಕಟ್ಟಡದಲ್ಲಿದ್ದು, ಉಳಿದ ಕಟ್ಟಡಗಳು ನಿರ್ಮಾಣ ಹಂತದಲ್ಲಿದೆ. ಮಂಜನಾಡಿ ಹಾಗೂ ಪುದುವಿನಲ್ಲಿ ಮುಂದಿನ 3 ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಪಿಯುಸಿ ಸಹಿತ ಎಲ್ಲ ತರಗತಿಗಳು ಹೊಸ ಕಟ್ಟಡಕ್ಕೆ ವರ್ಗಾವಣೆಗೊಳ್ಳಲಿವೆ. ಸದ್ಯಕ್ಕೆ ಇಲ್ಲಿನ ತರಗತಿಗಳು ಸರಕಾರಿ ಶಾಲಾ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

ಪಿಯುಸಿ ಆರಂಭ
ದ.ಕ.ಜಿಲ್ಲೆಯಲ್ಲಿ ಈಗಾಗಲೇ ಎರಡೂ ಮೌಲನಾ ಆಝಾದ್‌ ಶಾಲೆಗಳಲ್ಲೂ ಪಿಯುಸಿ ಆರಂಭಿಸಿ ದಾಖಲಾತಿ ಮಾಡಲಾಗಿದೆ. ಮೊದಲ ವರ್ಷವಾದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ಜತೆಗೆ ವ್ಯವಸ್ಥೆಗಳು ಆಗಿಲ್ಲ. ಮುಂದಿನ ವರ್ಷ ಎರಡು ಕಡೆಯೂ ಹೊಸ ಕಟ್ಟಡದಲ್ಲಿ ಇತರ ತರಗತಿಗಳ ಜತೆಗೆ ಸುಸಜ್ಜಿತವಾದ ಪಿಯುಸಿ ತರಗತಿಗಳು ಆರಂಭಗೊಳ್ಳುತ್ತದೆ.
– ಜಿನೇಂದ್ರ ಎಂ. ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾಕರ
ಕಲ್ಯಾಣ ಇಲಾಖೆ, ದ.ಕ.ಜಿಲ್ಲೆ

ಗ್ರಾಮದ ಬಹುಕಾಲದ ಬೇಡಿಕೆ
ಪುದು ಗ್ರಾಮಕ್ಕೆ ಪ.ಪೂ.ಕಾಲೇಜು ಬೇಕು ಎನ್ನುವುದು ನಮ್ಮ ಬಹುಕಾಲದ ಬೇಡಿಕೆಯಾಗಿದ್ದು, ಪ್ರಸ್ತುತ ವಿಧಾನಸಭಾಧ್ಯಕ್ಷರು ಮೌಲನಾ ಅಝಾದ್‌ ಶಾಲೆಯಲ್ಲಿ ಕಾಲೇಜು ಮಂಜೂರು ಮಾಡಿದ್ದಾರೆ. ಪುದು ಗ್ರಾಮದ ಸುಜೀರಿನಲ್ಲಿ ಶಾಲೆಗೆ ಈಗಾಗಲೇ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
ಉಮ್ಮರ್‌ ಫಾರೂಕ್‌ ಮಾಜಿ ಸದಸ್ಯರು, ದ.ಕ.ಜಿ.ಪಂ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next