Advertisement

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ 3 ಹೊಸ ಶಾಖೆಗಳು

03:49 PM Mar 16, 2018 | Team Udayavani |

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) ಹೊಸದಾಗಿ 3 ಶಾಖೆಗಳನ್ನು ಆರಂಭಿಸಲಿದೆ. ಮಾ. 20ರಂದು ಪುತ್ತೂರು ತಾಲೂಕಿನ ದರ್ಬೆ, ಮಾ. 22ರಂದು ಉಡುಪಿ ತಾಲೂಕಿನ ಮುದ್ದೂರು ಹಾಗೂ ಮಾ. 26ರಂದು ಮಂಗಳೂರು ತಾಲೂಕಿನ ಐಕಳ ಗ್ರಾಮದ ದಾಮಸ್‌ಕಟ್ಟೆಯಲ್ಲಿ ಹೊಸ ಶಾಖೆಗಳು ಉದ್ಘಾಟನೆಯಾಗಲಿವೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ 104 ವರ್ಷಗಳನ್ನು ಪೂರೈಸಿ 105ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭ ದಲ್ಲಿ ಈಗ ಇರುವ 102 ಶಾಖೆಗಳಿಗೆ ಇನ್ನೂ 3 ಹೊಸ ಶಾಖೆಗಳು ಸೇರ್ಪಡೆಗೊಂಡು 105 ಶಾಖೆಗಳನ್ನು ಬ್ಯಾಂಕ್‌ ಪ್ರಸಕ್ತ ವರ್ಷದಲ್ಲಿ ಹೊಂದಲಿದೆ ಎಂದವರು ಹೇಳಿದರು.

ದರ್ಬೆ ಶಾಖೆ: ಪುತ್ತೂರು ತಾಲೂಕಿನ ದರ್ಬೆ ಶಾಖೆಯು ಶ್ರೀರಾಮ ಸೌಧದಲ್ಲಿ ಮಾ. 20ರಂದು ಕಾರ್ಯಾರಂಭಗೊಳ್ಳಲಿದೆ. ಇದು ಈ ಬ್ಯಾಂಕಿನ 103ನೇ ಶಾಖೆ. ಶಾಸಕಿ ಶಕುಂತಳಾ ಟಿ. ಶೆಟ್ಟಿ ಶಾಖೆಯನ್ನು ಉದ್ಘಾಟಿಸುವರು.

ಸಂಸದ ನಳಿನ್‌ ಕುಮಾರ್‌ ಕಟೀಲು ಗಣಕೀಕರಣ ವಿಭಾಗ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ವಹಿಸುವರು. ಭದ್ರತಾ ಕೋಶದ ಉದ್ಘಾಟನೆಯನ್ನು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೆರವೇರಿಸುವರು.

ಮುದ್ದೂರು ಶಾಖೆ: ಉಡುಪಿ ತಾಲೂಕಿನ ಮುದ್ದೂರು ಶಾಖೆಯು ಹೆಗ್ಡೆ ಕಾಂಪ್ಲೆಕ್ಸ್‌ನಲ್ಲಿ ಮಾ. 22ರಂದು ಉದ್ಘಾಟನೆ ಗೊಳ್ಳಲಿದೆ. ಇದು ಈ ಬ್ಯಾಂಕಿನ 104ನೇ ಶಾಖೆಯಾಗಿದ್ದು, ಸಚಿವ ಪ್ರಮೋದ್‌ ಮಧ್ವರಾಜ್‌ ಉದ್ಘಾಟಿಸು ವರು. ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ವಹಿಸುವರು.

Advertisement

ಗಣಕೀ ಕರಣ ವಿಭಾಗದ ಉದ್ಘಾಟನೆಯನ್ನು ಉಡುಪಿ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಮೈರ್ಮಾಡಿ ಹಾಗೂ ಭದ್ರತಾ ಕೋಶದ ಉದ್ಘಾಟನೆಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್‌. ಧನಂಜಯ ಶೆಟ್ಟಿ ನೆರವೇರಿಸುವರು.

ದಾಮಸ್‌ಕಟ್ಟೆ ಶಾಖೆ: ಮಂಗಳೂರು ತಾಲೂಕಿನ ಐಕಳ ಗ್ರಾಮದ ಅನ್ನಪೂರ್ಣೇಶ್ವರಿ ಕಟ್ಟಡದಲ್ಲಿ ದಾಮಸ್‌ಕಟ್ಟೆ ಶಾಖೆಯು ಮಾ. 26ರಂದು ಕಾರ್ಯಾರಂಭಗೊಳ್ಳಲಿದೆ. ಇದು ಈ ಬ್ಯಾಂಕಿನ 105ನೇ ಶಾಖೆಯಾಗಿದ್ದು, ಶಾಸಕ ಕೆ. ಅಭಯಚಂದ್ರ ಜೈನ್‌ ಉದ್ಘಾಟಿಸುವರು. ಗಣಕೀಕರಣ ವಿಭಾಗದ ಉದ್ಘಾಟನೆಯನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ನೆರವೇರಿಸುವರು. ಅಧ್ಯಕ್ಷತೆಯನ್ನು ಡಾ|ಎಂ.ಎನ್‌. ರಾಜೇಂದ್ರ ಕುಮಾರ್‌ ವಹಿಸುವರು. ಭದ್ರತಾ ಕೋಶದ ಉದ್ಘಾಟನೆಯನ್ನು ಕಿರೆಂ, ದಾಮಸ್‌ಕಟ್ಟೆ ರೆಮಿದಿ ಅಮ್ಮನವರ ಇಗರ್ಜಿಯ ಧರ್ಮಗುರುಗಳಾದ ರೆ| ಫಾ| ವಿಕ್ಟರ್‌ ಡಿಮೆಲ್ಲೊ ನೆರವೇರಿಸುವರು.

ಸಂಪೂರ್ಣ ಗಣಕೀಕೃತ ಈ ನೂತನ ಶಾಖೆಗಳು ಸಂಪೂರ್ಣ ಗಣಕೀಕೃತ ಗೊಂಡು ಏಕಗವಾಕ್ಷಿ, ಕೋರ್‌ ಬ್ಯಾಂಕಿಂಗ್‌ ಮತ್ತು ಆರ್‌ಟಿಜಿಎಸ್‌, ನೆಫ್ಟ್ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡಲಿವೆ ಎಂದು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ವಿವರಿಸಿದರು. ಉಪಾಧ್ಯಕ್ಷ ವಿನಯಕುಮಾರ್‌ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್‌, ಟಿ.ಜಿ. ರಾಜರಾಮ್‌ ಭಟ್‌, ರಘುರಾಮ್‌ ಶೆಟ್ಟಿ, ವಾದಿರಾಜ್‌ ಶೆಟ್ಟಿ ಎಂ., ದೇವರಾಜ್‌ ಕೆ.ಎಸ್‌., ಸದಾಶಿವ ಉಳ್ಳಾಲ, ರಾಜೇಶ್‌ ರಾವ್‌, ಶಶಿಕುಮಾರ್‌ ರೈ, ಜಯರಾಮ್‌ ರೈ, ದೇವಿಪ್ರಸಾದ್‌ ಶೆಟ್ಟಿ ಬೆಳಪು, ರಮೇಶ್‌ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಸಿಇಒ ಸತೀಶ್‌ ಎಸ್‌., ಬ್ಯಾಂಕಿನ ಸಲಹೆಗಾರ ಎ.ಎಸ್‌. ಹಿಮವಂತ್‌ ಗೋಪಾಲ ಉಪಸ್ಥಿತರಿದ್ದರು. 

ವಿಶೇಷ ಬಹುಮಾನ
ಈ ಮೂರು ಹೊಸ ಶಾಖೆಗಳು ಉದ್ಘಾಟನೆ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಬಹುಮಾನ ಯೋಜನೆ ಗಳನ್ನು ಬ್ಯಾಂಕ್‌ ರೂಪಿಸಿದೆ. ಹೊಸ ಸಂಚಯ ಖಾತೆ ಯಲ್ಲಿ ಕನಿಷ್ಠ 2,000 ರೂ.ಗಿಂತ ಮೇಲ್ಪಟ್ಟು ಮೊತ್ತವಿರುವ ಠೇವಣಿದಾರರಿಗೆ ಹಾಗೂ 1 ವರ್ಷಕ್ಕಿಂತ ಮೇಲ್ಪಟ್ಟ ಅವಧಿಯ ಠೇವಣಿಗಳಲ್ಲಿ 25,000 ರೂ.ಗಿಂತ ಮೇಲ್ಪಟ್ಟು ಮೊತ್ತ ವಿರುವ ಠೇವಣಿದಾರರಿಗೆ ಅದೃಷ್ಟ ಬಹುಮಾನ ಯೋಜನೆಯಡಿ ಪ್ರಥಮ ಬಹುಮಾನ 4 ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಬಹುಮಾನ 2 ಗ್ರಾಂ ಚಿನ್ನದ ನಾಣ್ಯನೀಡಲಾಗುವುದು. ಸಮಾರಂಭದಲ್ಲಿ ಭಾಗವಹಿಸುವ ನಮ್ಮ ಗ್ರಾಹಕರಿಗೆ ವಿಶೇಷ ಬಹುಮಾನ ಯೋಜನೆಯನ್ನು ಬ್ಯಾಂಕ್‌ ಹಮ್ಮಿಕೊಂಡಿದೆ. ಅದೃಷ್ಟ ಚೀಟಿ ಎತ್ತುವುದರ ಮೂಲಕ ಅದೃಷ್ಟ ಗ್ರಾಹಕರಿಬ್ಬರಿಗೆ ಅನುಕ್ರಮ ವಾಗಿ 4 ಗ್ರಾಂ ಹಾಗೂ 2 ಗ್ರಾಂ ಚಿನ್ನದ ನಾಣ್ಯವನ್ನು ನೀಡಲಾಗುವುದು. ಈ ಯೋಜನೆ ಹೊಸದಾಗಿ ಉದ್ಘಾಟನೆಗೊಳ್ಳುವ ಈ ಮೂರು ಹೊಸ ಶಾಖೆಗಳಿಗೆ ಮಾತ್ರ ಸೀಮಿತವಾಗಿದೆ ಡಾ| ಎಂ.ಎನ್‌.
ರಾಜೇಂದ್ರ ಕುಮಾರ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next