Advertisement

ಮಗನ‌ ಅವಾಂತರಕ್ಕೆ ಅಪ್ಪ ಬಡವಾದ

09:25 PM Jul 01, 2019 | mahesh |

ವಾಟ್ಸಾಪ್‌ ಗ್ರೂಪ್‌- ಧಾರವಾಡ ಜಿಲ್ಲಾ ಕನ್ನಡ ಬಳಗ
ಅಡ್ಮಿನ್‌- ರಂಗನಾಥ ಎನ್‌. ವಾಲ್ಮೀಕಿ

Advertisement

ಧಾರವಾಡ ಜಿಲ್ಲಾ ಕನ್ನಡ ಬಳಗವು ಜಿಲ್ಲೆ – ಹೈಸ್ಕೂಲ್‌ನ ಕನ್ನಡ ಶಿಕ್ಷಕರನ್ನು ಒಂದೆಡೆ ಸೇರಿಸಲು ವಾಟ್ಸಾಪ್‌ ಗುಂಪು ಮಾಡಿದೆ. ಇದರಲ್ಲಿ ಕನ್ನಡ ಭಾಷೆ, ಅದರ ಬೆಳವಣಿಗೆ ಬಗ್ಗೆ ಹಾಗೂ ಇಲಾಖಾ ಆದೇಶಗಳು ಹಂಚಿಕೆಯಾಗುತ್ತವೆ. ಅಪರೂಪಕ್ಕೆ ಶುಭಾಶಯ ಸಂದೇಶಗಳು ಓಡಾಡುವುದೂ ಉಂಟು. ಈ ಬಳಗ ಪ್ರಾರಂಭವಾಗಿ ಆರೇಳು ವರ್ಷವೇ ಕಳೆದಿದೆ. ಮೊನ್ನೆ ಒಂದು ದಿನ ಹೀಗಾಯ್ತು. ರಾತ್ರಿ ಊಟ ಮಾಡಿ ಈ ಗುಂಪನ್ನು ತೆಗೆದು ನೋಡಿದೆ ಮನಸ್ಸಿಗೆ ಬೇಸರ ಎನಿಸುವಂಥ ಸಂಭಾಷಣೆಗಳು ಹರಿದಾಡುತ್ತಿದ್ದವು. ಅಲ್ಲದೇ, ಕನ್ನಡ ಭಾಷೆಯನ್ನು ಅರೆದು ಕುಡಿದಿದ್ದ, ಅದರಿಂದಲೇ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಅನುಭವಿ ಶಿಕ್ಷಕರೊಬ್ಬರ ಮೊಬೈಲ್‌ನಿಂದ ಸಹ್ಯವಲ್ಲದ ಚಿತ್ರವೊಂದು ಪೋಸ್ಟ್‌ ಆಗಿತ್ತು. ಇವರ ಜ್ಞಾನಕ್ಕೆ ಬೆರಗಾಗಿದ್ದವರು ಕುಪಿತಕೊಂಡು ಅವರಿಗೆ ಬೇಸರವಾಗುವ ರೀತಿ ಸಂದೇಶಗಳನ್ನು ಹಾಕಿದರು. ಇಡೀ ಗುಂಪಿಗೆ ನಾನೇ ಅಡ್ಮಿನ್‌. ಹೀಗಾಗಿ, ಏನಿದು ವಿಚಾರ ಅಂತ ಅವರಿಗೇ ಕರೆ ಮಾಡಿ ಕೇಳಿದೆ. ಅವರಿಗೆ ಇದರ ಬಗ್ಗೆ ಏನೇನೂ ತಿಳಿದಿಲ್ಲ. ಅವರ ಖಾತೆಯಿಂದ ಆದ ಪೋಸ್ಟ್‌ ಉಂಟು ಮಾಡಿದ ಅವಾಂತರವನ್ನು ಕೇಳಿ ಕಂಗಾಲಾದಂತೆ ಕಂಡರು. ಆದರೆ, ನಿಜಾಂಶ ಬೇರೆಯೇ ಆಗಿತ್ತು.

ಆ ಶಿಕ್ಷಕರು ಆಗತಾನೇ ಹೊಸ ಮೊಬೈಲ್‌ ಕೊಂಡಿದ್ದರು. ಇವರಿಗೆ ಭಾಷೆಯಲ್ಲಿ ಪಾಂಡಿತ್ಯವಿತ್ತು. ಆದರೆ, ತಿಳಿದಷ್ಟು ತಂತ್ರಜ್ಞಾನದ ಅರಿವಿರಲಿಲ್ಲ. ಮಗನ ಅಳುವನ್ನು ನಿಲ್ಲಿಸುವ ಸಲುವಾಗಿ ಅವನ ಕೈಗೆ ಹೊಸ ಮೊಬೈಲ್‌ ಕೊಟ್ಟಾಗಲೇ ಶುರುವಾದದ್ದು ಈ ಸಮಸ್ಯೆ. ಆ ಮಗು ಮೆಲ್ಲಗೆ ಆ ಫೋಟೋಒಂದನ್ನು ಗುಂಪಿಗೆ ಹಾಕಿದೆ. ಅದೂ ಅಚಾನಕ್ಕಾಗಿ. ಅಳು ನಿಲ್ಲಿಸಿದ ಮೇಲೆ ಫೋನ್‌ ಪಡೆದ ತಂದೆಗೆ ಇದ್ಯಾವುದರ‌ ಅರಿವಿರಲಿಲ್ಲ. ಕೊನೆಗೆ, ಎಲ್ಲ ವಿಚಾರ ತಿಳಿದು, ಗುಂಪಿನಲ್ಲಿ ಕ್ಷಮೆ ಕೋರಿದರು. ಆಡ್ಮಿನ್‌ ಆದ್ದರಿಂದ ಅವರ ಪರವಾಗಿ ನಾನೂ ಕ್ಷಮೆ ಕೇಳಿದೆ. ಅಬ್ಟಾ, ಮತ್ತೆ ಇಂಥ ಘಟನೆ ಮರುಕಳಿಸಿಲ್ಲ. ಮಕ್ಕಳ ಕೈಗೆ ಮೊಬೈಲ್‌ ಕೊಟ್ಟರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕೆ?

Advertisement

Udayavani is now on Telegram. Click here to join our channel and stay updated with the latest news.

Next