Advertisement

ಸೈಬರ್ ಭದ್ರತಾ ನೀತಿ: ಸರಕಾರಕ್ಕೆ ನೆರವು ನೀಡಲು ಐಬಿಎಂ ಆಸಕ್ತಿ

03:20 PM Apr 12, 2022 | Team Udayavani |

ಬೆಂಗಳೂರು: ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ತಾನು ಗಳಿಸಿರುವ ಪರಿಣತಿಯನ್ನು ಕರ್ನಾಟಕ ಸರಕಾರದೊಂದಿಗೆ ಹಂಚಿಕೊಳ್ಳಲು ಸಿದ್ಧವಿದ್ದು, ಸೈಬರ್ ಭದ್ರತಾ ನೀತಿಯನ್ನು ರೂಪಿಸಲು ಅಗತ್ಯ ನೆರವು ನೀಡಲು ಮುಕ್ತ ಮನಸ್ಸು ಹೊಂದಿರುವುದಾಗಿ ಪ್ರತಿಷ್ಠಿತ ಐಬಿಎಂ ಕಂಪನಿ ಹೇಳಿದೆ.

Advertisement

ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಮಂಗಳವಾರ ವಿಕಾಸ ಸೌಧದಲ್ಲಿ ಭೇಟಿ ಮಾಡಿ ಹಲವು ವಿಚಾರಗಳನ್ನು ಚರ್ಚಿಸಿದ ಮೂವರು ಸದಸ್ಯರ ಐಬಿಎಂ ನಿಯೋಗವು ಈ ಭರವಸೆ ನೀಡಿದೆ.

ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರಕಾರವು ಅಗತ್ಯ ವಿಷಯಗಳಲ್ಲಿ ಐಬಿಎಂನ ನೆರವು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ನಿಯೋಗದಲ್ಲಿ ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ಐಬಿಎಂ ಕ್ಲೌಡ್ ಮತ್ತು ಕಾಗ್ನಿಟೀವ್ ಸಾಫ್ಟ್ ವೇರ್ ಲ್ಯಾಬ್ಸ್ ವಿಭಾಗದ ಉಪಾಧ್ಯಕ್ಷ ಗೌರವ್ ಶರ್ಮ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಬಾಲಾಜಿ ಇದ್ದರು.

ನಿಯೋಗದ ಪರವಾಗಿ ಮಾತನಾಡಿದ ಸಂದೀಪ್ ಪಟೇಲ್, ‘ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಐಬಿಎಂ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಸೆಕ್ಯುರಿಟಿ ಕಮಾಂಡ್ ಸೆಂಟರ್ ಅನ್ನು ತೆರೆದಿದೆ. ಸರಕಾರವು ತನ್ನ ದತ್ತಾಂಶಗಳ ಸುರಕ್ಷಿತ ಸಂಗ್ರಹಣೆಗೆ ಇದನ್ನು ಬಳಸಿಕೊಳ್ಳಬಹುದು. ಸರಕಾರವು ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿದರೆ, ಸರಕಾರದ ಸಿಬ್ಬಂದಿಗೆ ಕಂಪನಿಯ ವತಿಯಿಂದ ಸೂಕ್ತ ಮತ್ತು ದಕ್ಷ ತರಬೇತಿ ನೀಡಲಾಗುವುದು’ ಎಂದರು.

Advertisement

ಸೈಬರ್ ಭದ್ರತೆಯು ಮುಂದಿನ ದಿನಗಳಲ್ಲಿ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಅದನ್ನು ಎದುರಿಸಲು ಈಗಿನಿಂದಲೇ ಸಜ್ಜಾಗುವುದು ಮುಖ್ಯವಾಗಿದೆ. ತಂತ್ರಜ್ಞಾನವನ್ನು ಆಧರಿಸಿರುವ ಜಗತ್ತಿನಲ್ಲಿ ಇಂತಹ ಕ್ರಮಗಳು ಅನಿವಾರ್ಯವಾಗಿವೆ. ಸೈಬರ್ ಭದ್ರತಾ ನೀತಿಯನ್ನು ಪಾಲಿಸಲು ಮುಂದಾಗಿರುವ ರಾಜ್ಯ ಸರಕಾರಕ್ಕೆ ಎಲ್ಲ ಬಗೆಯ ನೆರವು ನೀಡಲು ಸಿದ್ಧ. ಇದರ ಜತೆಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮುಂತಾದ ಸಹಕಾರಿ ಸಂಸ್ಥೆಗಳಲ್ಲೂ ಐಬಿಎಂ ನೆರವಿನ ಕೈ ಜೋಡಿಸಲು ಉತ್ಸುಕವಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಇದ್ದರು.

ರಾಜ್ಯದಲ್ಲಿ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಿದ್ದು, ಇವುಗಳ ಸಬಲೀಕರಣಕ್ಕೆ ರಾಜ್ಯ ಸರಕಾರ ಮುಂದಾಗಿರುವುದು ರಚನಾತ್ಮಕ ಕ್ರಮವಾಗಿದೆ. ಈ ವಲಯದಲ್ಲಿ ಅತ್ಯುತ್ತಮ ಪಠ್ಯಕ್ರಮ ಮತ್ತು ಸಂಶೋಧನಾ ವಿನ್ಯಾಸಗಳನ್ನು ರೂಪಿಸಲು ಕಂಪನಿಯ ನೆರವು ಬಯಸಿದರೆ ಸಹಾಯಹಸ್ತ ಚಾಚಲು ಐಬಿಎಂ ಸಿದ್ಧವಿದೆ. ಈ ಪರಿಣತಿಯನ್ನು ಬಳಸಿಕೊಂಡರೆ, ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ ಎಂದು ಪಟೇಲ್ ವಿವರಿಸಿದರು.

ಸರಕಾರವು ರಾಜ್ಯಾದ್ಯಂತ ಹೊಂದಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಉನ್ನತೀಕರಿಸುವುದಕ್ಕೆ ಕಂಪನಿಯು ಆಸಕ್ತಿ ಹೊಂದಿದೆ. ಇದಕ್ಕೆ ಸರಕಾರದಿಂದ ಸಹಕಾರವನ್ನು ಅಪೇಕ್ಷಿಸುತ್ತಿರುವುದಾಗಿ ಅವರು ಸಚಿವರ ಗಮನಕ್ಕೆ ತಂದರು.

ಇದಲ್ಲದೆ ಐಬಿಐಂ ತನ್ನ ಸಿಎಸ್ಆರ್ ಹೊಣೆಗಾರಿಕೆಯ ಭಾಗವಾಗಿ ರಾಜ್ಯದಲ್ಲಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಶೈಕ್ಷಣಿಕ ಪರಿಸರಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಕುರಿತೂ ನಿಯೋಗವು ವಿಚಾರ ವಿನಿಮಯ ನಡೆಸಿತು.

ಬೆಂಗಳೂರಿನ ಕೃಷ್ಣರಾಜೇಂದ್ರ ಎಂಜಿನಿಯರಿಂಗ್ ಕಾಲೇಜನ್ನು ಅಭಿವೃದ್ಧಿಪಡಿಸುವ ಸಂಬಂಧ ಶೈಕ್ಷಣಿಕ ಪಾಲುದಾರಿಕೆ ವಹಿಸಿಕೊಳ್ಳುವಂತೆ ಸಚಿವರು ಕೋರಿದ್ದಕ್ಕೆ ಐಬಿಎಂ ನಿಯೋಗ‌ ಸಕಾರಾತ್ಮಕವಾಗಿ ಸ್ಪಂದಿಸಿತು. ಕಾಲೇಜನ್ನು ಯಾವ ರೀತಿ‌ ಅಭಿವೃದ್ಧಿ ಪಡಿಸುವ ಸಂಬಂಧ ಚರ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next