Advertisement

ಮೋಹಕ ಕೈ ತೋಟ ಶಾಲೆ

01:10 PM Jul 10, 2017 | |

ಬಿಸಿಯೂಟಕ್ಕೆ ರುಚಿಕರವಾದ ಅಡುಗೆಗೆ ಬೇಕಾದಷ್ಟು ತರಕಾರಿ. ಊಟವಾದ ಮೇಲೆ ವಿದ್ಯಾರ್ಥಿಗಳಿಗೆ ತಿನ್ನಲು ಹಣ್ಣು. ಅದಾದ ಬಳಿಕ ಉಳಿದ ತರಕಾರಿಗಳ ಮಾರಾಟದಿಂದ ಬಂದ ವರಮಾನದಲ್ಲಿ ಅಡುಗೆಗೆ ಬೇಕಾಗುವ ಮಿಕ್ಸಿ, ಗ್ರೆ„ಂಡರ್‌ ಖರೀದಿ, ಗೌರವ ಶಿಕ್ಷಕರಿಗೆ ವೇತನ ಪೂರೈಸುವುದಕ್ಕೂ ಇದೇ ಸಂಪನ್ಮೂಲ ಇದರಿಂದಲೇ ಸಾಧ್ಯವಾಗುತ್ತಿದೆ !

Advertisement

ಇದೆಲ್ಲವೂ ಎಲ್ಲಿ ಸಾಧ್ಯ ಎಂದು ಕೇಳುವವರು ಕಾರ್ಕಳದ ಪುಲ್ಕೇರಿಯಲ್ಲಿರುವ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೆಡೆಗೆ ಹೋಗಬೇಕು. ನೂರು ವಿದ್ಯಾರ್ಥಿಗಳಿರುವ ಈ ಶಾಲೆಯನ್ನು ನೋಡಲು ಹೋದರೆ ದೂರದಿಂದಲೇ ಗಮನ ಸೆಳೆಯುತ್ತದೆ ಶಾಲೆಯ ಆವರಣ ಗೋಡೆ. ಅದರ ರಕ್ಷೆಯಲ್ಲಿ ಬುಡದಿಂದ ತಲೆಯ ತನಕ ಕಾಯಿಗಳನ್ನು ಹೊತ್ತ ಎಪ್ಪತ್ತೆ„ದು ಪಪ್ಪಾಯದ ಮರಗಳು, ಸೊಂಟದೆತ್ತರದ ಗೊನೆ ಹಾಕಿ ಬಲಿಯುತ್ತಿರುವ ಸಾಲು ಸಾಲು ಬಾಳೆಗಳು, ಬಸಳೆಯ ಚಪ್ಪರ, ಹೀರೆ, ಸೋರೆಯ ಬಳ್ಳಿಗಳು. ಎಲ್ಲವೂ ಕಾಯಿ ಕೊಡುತ್ತವೆ. ಮಕ್ಕಳ ಹಸಿವು ತಣಿಸುತ್ತವೆ. ಶಾಲೆಯ ಹಳೆಯ ಕಟ್ಟಡದ ಸುತ್ತಲೂ ಹಸಿರಿನ ನವ ಕಳೆಯಿಂದ ನಳನಳಿಸಿವೆ.

ಶಾಲೆಗಳಿಗೆ ಕೈತೋಟ ನಿರ್ಮಾಣ ಮಾಡುವ ವಿಶಿಷ್ಟ ಯೋಜನೆಯ ತಾಯಿಬೇರು ಕಾರ್ಕಳದ ರೊಟೇರಿಯನ್‌ ಸಂಸ್ಥೆಯ ಎಲ್ಲ ಸದಸ್ಯರು. ಎತ್ತರದ ನೆಲವನ್ನು ಜೆಸಿಬಿ ಮೂಲಕ ಅನುಕೂಲಕರವಾಗಿ ಸಮತಟ್ಟು ಮಾಡಿಸಿ ತೋಟಗಾರಿಕೆ ಇಲಾಖೆಯಿಂದ ಬೀಜಗಳನ್ನು, ಹೊಸಮಾರಿನ ನರ್ಸರಿಯಿಂದ ಉಚಿತವಾಗಿ ಪಪ್ಪಾಯ ಗಿಡಗಳನ್ನು ಒದಗಿಸುವಲ್ಲಿ ರೊಟೇರಿಯನ್‌ ಗಣೇಶ ಸಾಲಿಯಾನ್‌ ಸಾಕಷ್ಟು ಶ್ರಮಪಟ್ಟಿದ್ದಾರೆ. ಇದೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಯೊಬ್ಬರು ತಮ್ಮ ಮರದ ಮಿಲ್ಲಿನಿಂದ ಬಸಳೆ ಮತ್ತಿತರ ಬಳ್ಳಿಗಳ ಚಪ್ಪರಕ್ಕೆ ಬೇಕಾಗುವ ಸಲಕರಣೆಗಳನ್ನು ಒದಗಿಸಿದ್ದಾರೆ. ಇನ್ನೊಬ್ಬ ಹಳೆಯ ವಿದ್ಯಾರ್ಥಿ ಸಾವಯವ ಗೊಬ್ಬರ ನೀಡಿದ್ದಾರೆ. ಈ ಮಾದರಿಯ ತೋಟಕ್ಕೆಂದು ನಗರಸಭೆಯಿಂದ ಎರೆಗೊಬ್ಬರವನ್ನು ಪೂರೈಸಿದ್ದಾರೆ.

    ಇವಿಷ್ಟಿದ್ದರೆ ಸಾಕೆ? ಈ ಅನುಕರಣೀಯ ಕೈ ತೋಟ ನಿರ್ಮಾಣದ ಹಿಂದೆ ಅಪಾರ ಪರಿಶ್ರಮ ಕಾಣುವುದು ಈಗ ನಿವೃತ್ತರಾಗಿರುವ ಅಧ್ಯಾಪಕ ಶ್ರೀಧರ ಸುವರ್ಣ ಅವರದು. 40 ವರ್ಷ ಈ ಶಾಲೆಗಾಗಿ ದುಡಿದು ಉತ್ತಮ ಶಿಕ್ಷಕರೆಂದು ಜಿಲ್ಲಾ ಪ್ರಶಸ್ತಿ ಪಡೆದವರು. ಸಾಂಸ್ಕೃತಿಕವಾಗಿ ಕೂಡ ಶಾಲೆಯ ಹೆಸರನ್ನು ಎತ್ತರಕ್ಕೇರಿಸಿದವರು. ಕೈತೋಟದ ಗಿಡಗಳಿಗೆ ಮುನ್ಸಿಪಾಲ್ಟಿಯ ನೀರು ಹಿಡಿಯಲು ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಬರುತ್ತಿದ್ದರೆಂಬುದನ್ನು ಸಹ ಶಿಕ್ಷಕ ಸುಧಾಕರ ಅತ್ತೂರ್‌ ನೆನಪು ಮಾಡುತ್ತಾರೆ. ಕಡು ಬೇಸಿಗೆಯಲ್ಲಿ ನೀರಿನ ಕೊರತೆ ಕಾಡಿದರೆ ಸ್ವಂತ ಹಣದಿಂದ ಟ್ಯಾಂಕರ್‌ ನೀರು ತರಿಸಿ ಅವರು ಗಿಡಗಳಿಗೆ ಉಣಿಸುತ್ತಿದ್ದರಂತೆ.

ಫ‌ುಲ್‌ ಸಾವಯವ
ಇಲ್ಲಿ ರಸ ಗೊಬ್ಬರದ ಸೋಂಕಿಲ್ಲ. ಕೀಟಗಳು ಬಾಧಿಸಿದರೆ ಬೇವಿನೆಣ್ಣೆ ಸಿಂಪಡಿಸುತ್ತಾರೆ ಅಷ್ಟೆ. ಪಕ್ಕದ ಶಾಲೆಗಳಿಗೆ ತರಕಾರಿ ಅಭಾವ ಉಂಟಾದರೆ ಇಲ್ಲಿಂದಲೇ ಉಚಿತವಾಗಿ ಕೊಡುತ್ತಾರೆ. ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳು ಇಲ್ಲಿ ಆಗುವುದಿದ್ದರೆ ಭೋಜನಕ್ಕೆ ತರಕಾರಿಯ ಕೊಡುಗೆ ಇಲ್ಲಿಂದಲೇ. ಕಸ, ಕಡ್ಡಿಗಳನ್ನು ಗುಡಿಸಿ ತಯಾರಿಸಿದ ಸುಡುಮಣ್ಣು, ಬೂದಿ, ಸಗಣಿ ಮುಂತಾಗಿ ಸಾವಯವ ಸತ್ವದಲ್ಲಿ ಬೆಳೆಯುವ ಕಾರಣ ಮಿಗುವ ಪಪ್ಪಾಯ, ಬಸಳೆ, ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿ ಶಾಲೆಗೇ ಬಂದು ಕೊಂಡುಹೋಗುತ್ತಾರೆ. ಶಾಲೆಗೆ ಇದೊಂದು ಗಮನಾರ್ಹ ಆದಾಯ ಮೂಲವಾಗಿದೆ. ಶಾಲೆಗೆ ಭೇಟಿ ನೀಡಿದ ಗಣ್ಯರು, ಅಧಿಕಾರಿಗಳು ತೋಟವನ್ನು ಮುಕ್ತ ಕಂಠದಿಂದ ಹೊಗಳಿ ಹೋಗುತ್ತಾರೆ. 

Advertisement

    ಐದು ವರ್ಷಗಳಿಂದಲೂ ಈ ಶಾಲೆಯ ಕೈತೋಟ ಮಾದರಿಯಾಗಿ ಗಮನ ಸೆಳೆಯುತ್ತಿದೆ. ವಿವಿಧ ತಳಿಗಳ ಪಪ್ಪಾಯ ಗಿಡಗಳು ಸದಾ ಫ‌ಲಭರಿತವಾಗಿರುತ್ತವೆ. ಸಿಹಿ ಗೆಣಸು, ಬೂದುಗುಂಬಳ, ಸಿಹಿಗುಂಬಳ, ಅಲಸಂದೆ, ತೊಂಡೆ, ಸೌತೆ, ಬದನೆ ಮುಂತಾಗಿ ಮಳೆಗಾಲ ಮತ್ತು ಬೇಸಗೆಗೆ ಪ್ರತ್ಯೇಕವಾಗಿ ವೈವಿಧ್ಯಮಯ ತರಕಾರಿಗಳನ್ನು ಬೆಳೆಯುವ ಕೆಲಸದಲ್ಲಿ ಮಕ್ಕಳು ತೊಡಗುತ್ತಾರೆ. ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಏಳು ಮಕ್ಕಳ ಒಂದೊಂದು ಪಂಗಡಗಳನ್ನು ಮಾಡಿದ್ದಾರೆ. ಒಂದೊಂದು ದಿನ ಒಂದೊಂದು ಪಂಗಡ ತರಕಾರಿ ಗಿಡಗಳಿಗೆ ಕಳೆ ಕೀಳುವುದು, ಗೊಬ್ಬರ ಹಾಕುವುದು, ಬುಡಕ್ಕೆ ಮಣ್ಣು ಸೇರಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತದೆ. ತರಕಾರಿಗಳಲ್ಲದೆ ಅನಾನಸ್‌, ನಕ್ಷತ್ರ ನೇರಳೆಯಂತಹ ಹಣ್ಣಿನ ಗಿಡಗಳು ಫ‌ಲ ಕೊಡುತ್ತಿವೆ.  ಕಸಿ ಸಾಗುವಾನಿಯ ಗಿಡಗಳು ಬೆಳೆಯುತ್ತಿವೆ. ಹೀಗೊಂದು ಕೈತೋಟ ಮಾಡಬೇಕು ಎನ್ನುವವರಿಗೆ ಇಂತಹ ಮಾದರಿ ಅಪೂರ್ವ ಎನ್ನಬೇಕು. 

ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next