Advertisement

ಮುದ್ದು ಮಕ್ಕಳ ಲೋಕ

09:27 AM May 10, 2019 | Hari Prasad |

ಕಾಡು ಕೋಳಿಯನ್ನುನೋಡಿ ನಾಗರಹಾವು ಬಾಯಿ ಚಪ್ಪರಿಸಿತು. ಅದು “ಬನ್ನಿ ಬನ್ನಿ ಮಕ್ಕಳೇ… ನಿಮಗೆ ಈ ದಿನ ಹಬ್ಬದೂಟ” ಎಂದು ತನ್ನ ಮರಿಗಳನ್ನು ಕೂಗಿ ಕರೆಯಿತು. ಹಾವಿನ ಮರಿಗಳು ಬುಸುಗುಡುತ್ತಾ, ನಾಲಗೆ ಹೊರಚಾಚುತ್ತಾ ಕಾಡುಕೋಳಿಯತ್ತ ಮುನ್ನುಗ್ಗಿದವು…

Advertisement

ಒಂದು ಕಾಡಿನಲ್ಲಿ ತನ್ನ ಪಾಡಿಗೆ ತಾನು ಆಹಾರ ಹುಡುಕಿಕೊಂಡು ಅಲೆದಾಡುತ್ತಿದ್ದ ಕಾಡು ಕೋಳಿಯೊಂದು ಬೇಟೆಗಾರನ ಕಣ್ಣಿಗೆ ಕಾಣಿಸಿಕೊಂಡು ಬಿಟ್ಟಿತು. “ನಾನು ಕೆಟ್ಟೆ. ಬೇಟೆಗಾರ ನನ್ನನ್ನು ಕೊಲ್ಲದೆ ಬಿಡುವುದಿಲ್ಲ’ ಎಂದು ಭಯದಿಂದ ಕಾಡು ಕೋಳಿ ಓಡಿತು. ಕಾಡಿನ ಗಿಡ-ಮರಗಳ, ಬೇಲಿ-ಬಳ್ಳಿಗಳ, ಸಂದಿಗೊಂದಿಗಳ ನಡುವೆ ಪ್ರಾಣ ಭೀತಿಯಿಂದ ನುಗ್ಗಿತು.

ಕಡೆಗೆ, ದಿಕ್ಕು ತೋಚದಂತಾಗಿ ಒಂದು ದೊಡ್ಡ ಹುತ್ತದ ಹತ್ತಿರಕ್ಕೆ ಬಂದು ಭಯದಿಂದ ನಡುಗುತ್ತಾ ನಿಂತುಕೊಂಡಿತು. ಹುತ್ತದೊಳಗಿದ್ದ ಹಾವೊಂದು ತನ್ನ ತಲೆಯನ್ನು ಹೊರಚಾಚಿ ಕಾಡು ಕೋಳಿಯ ಪರಿಸ್ಥಿತಿಯನ್ನು ನೋಡಿತು. ಅದು “ಕಾಡು ಕೋಳಿಯೇ, ನೀನೇನೂ ಹೆದರಬೇಡ. ಬಾ ನನ್ನ ಹುತ್ತದೊಳಕ್ಕೆ. ಆತಂಕ ಬೇಡ. ಬೇಟೆಗಾರನಿಂದ ನಿನ್ನನ್ನು ನಾನು ಕಾಪಾಡುತ್ತೇನೆ’ ಎಂದು ಆಹ್ವಾನಿಸಿತು. ಸದ್ಯ, ಬದುಕಿದರೆ ಸಾಕೆಂಬ ಸ್ಥಿತಿಯಲ್ಲಿದ್ದ ಕಾಡು ಕೋಳಿ ಹಿಂದೆ ಮುಂದೆ ಯೋಚನೆ ಮಾಡದೆ ಹಾವಿನ ಹುತ್ತವನ್ನು ಹೊಕ್ಕಿತು.

ಹೊರಗಡೆ ಕಾಡು ಕೋಳಿ ಕಾಣದೆ ಬೇಟೆಗಾರ ಚಡಪಡಿಸಿದ. ಹುತ್ತದ ಸುತ್ತಮುತ್ತಲೆಲ್ಲಾ ಹುಡುಕಿದ. “ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಯಿತಲ್ಲ’ ಎಂದು ತನ್ನನ್ನು ತಾನು ಶಪಿಸುತ್ತಾ ಅಲ್ಲಿಂದ ಹೊರಡಲನುವಾದ. ಆದರೆ ಕಾಡು ಕೋಳಿ ಹತ್ತಿರದಲ್ಲೇ ಎಲ್ಲಾದರೂ ಅವಿತಿದ್ದರೆ ಎಂಬ ಆಸೆಯಿಂದ ಸ್ವಲ್ಪ ಹೊತ್ತು ಕಾದು ನಂತರ ಹೊರಡುವುದಾಗಿ ನಿಶ್ಚಯಿಸಿದ.

ಇತ್ತ ಹಾವು, ಹುತ್ತದೊಳಕ್ಕೆ ಬಂದ
ಕಾಡು ಕೋಳಿಯನ್ನು ತಿನ್ನುವ ಸಂಚು ಹೂಡಿತ್ತು. ಹಸಿದಿದ್ದ ತನ್ನ ಮರಿಗಳಿಗೆ ಆಹಾರ ನೀಡುವ ಸಲುವಾಗಿ ಅದು ಕಾಡು ಕೋಳಿಯನ್ನು ಹುತ್ತದೊಳಕ್ಕೆ ಆಹ್ವಾನಿಸಿತ್ತು. “ಬನ್ನಿ ಬನ್ನಿ ಮಕ್ಕಳೇ, ಈ ದಿನ ನಮಗೆ ಹಬ್ಬದೂಟ’ ಎಂದು ತನ್ನ ಮರಿಗಳನ್ನು ಕೂಗಿ ಕರೆಯಿತು. ಹಾವಿನ ಮರಿಗಳೆಲ್ಲಾ ಬುಸುಗುಡುತ್ತಾ, ನಾಲಗೆ ಹೊರ ಚಾಚುತ್ತಾ ಕಾಡು ಕೋಳಿಯತ್ತ ಧಾವಿಸಿದವು.

Advertisement

ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು ಕಾಡು ಕೋಳಿಯ ಪರಿಸ್ಥಿತಿ. ಬೇಟೆಗಾರನಿಂದ ತಪ್ಪಿಸಿಕೊಳ್ಳಲು ಹೋಗಿ ಈ ವಿಷಜಂತುವಿಗೆ ಆಹಾರವಾಗುವಂತಾಯಿತಲ್ಲ ಎಂದು ಕಾಡು ಕೋಳಿ ಪ್ರಾಣಭಯದಿಂದ ಥರಥರನೆ ನಡುಗಿತು. ಇಲ್ಲಿಂದ ಹೇಗಾದರೂ ತಪ್ಪಿಸಿಕೊಳ್ಳಲೇಬೇಕೆಂದು ನಿರ್ಧರಿಸಿತು.

“ಆಪತ್ತಿನಲ್ಲಿ ಧೈರ್ಯವೇ ಆಪ್ತರಕ್ಷಕ’ ಎಂಬ ಮಾತು ಕಾಡು ಕೋಳಿಗೆ ನೆನಪಾಯಿತು. ಅಪಾಯದ ಸ್ಥಿತಿಯಲ್ಲಿದ್ದಾಗಲೇ ಉಪಾಯವೊಂದು ಹೊಳೆಯಿತು. ದೀರ್ಘ‌ ಉಸಿರು ತೆಗೆದುಕೊಂಡು ನಿಟ್ಟುಸಿರು ಬಿಟ್ಟಿತು. ನಂತರ ಮತ್ತೆ ದೀರ್ಘ‌ ಉಸಿರು ಒಳಗೆಳೆದುಕೊಂಡು ಇಡೀ ಕಾಡು ಕಂಪಿಸುವಂತೆ ಜೋರಾಗಿ ಕೂಗಿತು. ಆ ಕೂಗು ಕೇಳಿ ಪ್ರಾಣಿ-ಪಕ್ಷಿಗಳ ಕಿವಿಗಳು ಒಂದು ಕ್ಷಣ ಅದುರಿದವು. ಅಷ್ಟೊಂದು ಜೋರು ಧ್ವನಿಯನ್ನು ಕಾಡು ಕೋಳಿ ಹೊರಡಿಸಿತ್ತು.

ಬೇಟೆಗಾರನ ಕಿವಿಗೂ ಆ ಕೂಗು ಕೇಳಿಸಿತು. ಬೇಟೆ ತಪ್ಪಿಸಿಕೊಂಡುಬಿಟ್ಟಿತೆಂದು ಬೇಸರದಿಂದ ಮನೆಗೆ ಹೊರಟಿದ್ದ ಬೇಟೆಗಾರ ಸದ್ದು ಬಂದ ಕಡೆ ಓಡೋಡಿ ಬಂದನು. ಸದ್ದು ಬಂದಿದ್ದು ಹುತ್ತದೊಳಗಿಂದ ಎಂಬುದು ಅವನಿಗೆ ಖಚಿತವಾಯಿತು. ಒಂದು ಕ್ಷಣವೂ ತಡಮಾಡದೆ ಹುತ್ತವನ್ನು ಒಡೆದು ಬಗೆದು ಹಾಕಿದನು.

ಕಾಡು ಕೋಳಿಯ ಮೇಲೆ ಮುಗಿಬೀಳುತ್ತಿದ್ದ ಹಾವಿನ ಮರಿಗಳ ಮೇಲೆ ಬೇಟೆಗಾರದ ಗುದ್ದಲಿ ಏಟುಗಳು ಬಿದ್ದು ಅವು ಗಾಯಗೊಂಡವು. ಮರಿಗಳು ಗಾಯಗೊಂಡಿದ್ದನ್ನು ಕಂಡು ರೊಚ್ಚಿಗೆದ್ದ ತಾಯಿ ಹಾವು ಬೇಟೆಗಾರನನ್ನು ಕಚ್ಚಲು ಮುಂದಾಯಿತು. ವಿಷಪೂರಿತ ಹಾವನ್ನು ನೋಡುತ್ತಲೇ ಬೇಟೆಗಾರ ಗುದ್ದಲಿ, ಬಂದೂಕು ಎರಡನ್ನೂ ಅಲ್ಲಿಯೇ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಪಲಾಯನಗೈದನು. ಇತ್ತ, ಬೇಟೆಗಾರ ಮತ್ತು ನಾಗರಹಾವು ಎರಡರಿಂದಲೂ ಬಚಾವಾದ ಕಾಡು ಕೋಳಿ ಕಾಡಿನೊಳಗೆ ಮರೆಯಾಯಿತು.

— ಬನ್ನೂರು ಕೆ. ರಾಜು

Advertisement

Udayavani is now on Telegram. Click here to join our channel and stay updated with the latest news.

Next