Advertisement

ಕೋವಿಡ್ ಗೆದ್ದ ಹಿರಿಯ ಜೀವಗಳು

06:37 PM Oct 05, 2020 | Suhan S |

ದಾವಣಗೆರೆ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಮಹಾಮಾರಿ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇಂತಹ ವಿಷಮ ಸ್ಥಿತಿಯಲ್ಲೂ ಜಿಲ್ಲೆಯ 47 ಹಿರಿಯ ಜೀವಗಳು (86 ವರ್ಷ ಮೇಲ್ಪಟ್ಟವರು) ಕೋವಿಡ್ ಸೋಂಕನ್ನು ಮೆಟ್ಟಿ ನಿಂತು ಗುಣಮುಖರಾಗಿದ್ದಾರೆ.

Advertisement

ಆರೋಗ್ಯ ಇಲಾಖೆಯಲ್ಲಿ ಸೆಪ್ಟೆಂಬರ್‌ 25 ರವರೆಗೆ ದಾಖಲಾದ ಮಾಹಿತಿ ಪ್ರಕಾರ (ಸೆ.25ರ ನಂತರದ ಅಂಕಿ-ಸಂಖ್ಯೆ ಆರೋಗ್ಯ ಇಲಾಖೆ ಡಾಟಾ ಎಂಟ್ರಿ ನೌಕರರ ಪ್ರತಿಭಟನೆಯಿಂದ ದಾಖಲಾಗಿಲ್ಲ) ಜಿಲ್ಲೆಯಲ್ಲಿ 86 ವರ್ಷ ಮೇಲ್ಪಟ್ಟ 55 ಜನರಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, ಇವರಲ್ಲಿ ಮೂವರು ಮೃತಪಟ್ಟಿದ್ದಾರೆ. 47 ಮಂದಿ ಕೊರೊನಾ ಗೆದ್ದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 86 ವರ್ಷ ಮೇಲ್ಪಟ್ಟವರಲ್ಲಿ ಇನ್ನೂ ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೋವಿಡ್ ಸೋಂಕಿಗೊಳಗಾದ ಐದು ವರ್ಷದೊಳಗಿನ 248 ಮಕ್ಕಳಲ್ಲಿ 183 ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 65 ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸೋಂಕಿಗೊಳಗಾದ ಐದು ವರ್ಷದೊಳಗಿನ ಹಾಗೂ ಆರರಿಂದ 15ವರ್ಷದೊಳಗಿನ ಮಕ್ಕಳ ಸಾವು ಜಿಲ್ಲೆಯಲ್ಲಿ ಈವರೆಗೆ ಸಂಭವಿಸದೆ ಇರುವುದು ಸಮಾಧಾನಕರ ಸಂಗತಿ.

ಮಧ್ಯ ವಯಸ್ಕರಲ್ಲೇ ಹೆಚ್ಚು: ಜಿಲ್ಲೆಯಲ್ಲಿ 26-35ವಯೋಮಾನದವರಲ್ಲಿ ಅತಿ ಹೆಚ್ಚು ಅಂದರೆ 2954 ಜನರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಎರಡನೇ ಅತಿ ಹೆಚ್ಚಿನ ಸ್ಥಾನದಲ್ಲಿ 36-45 ವರ್ಷ ವಯೋಮಾನದವರಿದ್ದು, ಅವರ ಸಂಖ್ಯೆ 2885 ಇದೆ. ಜಿಲ್ಲೆಯಲ್ಲಿ ಕೋವಿಡ್ ಮಧ್ಯವಯಸ್ಕರನ್ನೇ ಹೆಚ್ಚು ಕಾಡುತ್ತಿರುವುದು ಆರೋಗ್ಯ ಇಲಾಖೆ ಅಂಕಿ-ಸಂಖ್ಯೆಯಿಂದ ಸಾಬೀತಾಗಿದೆ. ಜಿಲ್ಲೆಯಲ್ಲಿ 66-75 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದು, ಅವರ ಸಂಖ್ಯೆ 81. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ 26-35 ವರ್ಷದೊಳಗಿನವರ ಸಂಖ್ಯೆಯೇ ಹೆಚ್ಚಾಗಿದ್ದು, ಅವರ ಸಂಖ್ಯೆ 2310. ಅತಿ ಹೆಚ್ಚು ಗುಣಮುಖರಾದವರಲ್ಲಿ 36-45 ವರ್ಷದೊಳಗಿನವರು (2204)ಎರಡನೇ ಸ್ಥಾನ, 46-55 ವರ್ಷದೊಳಗಿನವರು (1976) ಮೂರನೇ ಸ್ಥಾನದಲ್ಲಿದ್ದಾರೆ.

ವಯಸ್ಸುವಾರು ಸೋಂಕಿತರು: ಐದು ವರ್ಷದೊಳಗಿನ 248, ಮಕ್ಕಳಲ್ಲಿ, 6-15 ವರ್ಷದೊಳಗಿನ 697 ಮಕ್ಕಳಲ್ಲಿ, 16-17 ವರ್ಷದೊಳಗಿನ 1884 ಮಕ್ಕಳಲ್ಲಿ, 26-35 ವರ್ಷದೊಳಗಿನ 2954 ಯುವ ಜನತೆಯಲ್ಲಿ, 36-45 ವರ್ಷದೊಳಗಿನ 2885 ಜನರಲ್ಲಿ, 46-55 ವರ್ಷದೊಳಗಿನ 2556 ಜನರಲ್ಲಿ, 56-65 ವರ್ಷದೊಳಗಿನ 2357 ಜನರಲ್ಲಿ, 66-75 ವರ್ಷದೊಳಗಿನ 1038 ಜನರಲ್ಲಿ, 76-85 ವರ್ಷದೊಳಗಿನ 272 ಹಿರಿಯರಲ್ಲಿ, 86 ವರ್ಷಮೇಲ್ಪಟ್ಟ 55 ವಯೋವೃದ್ಧರಲ್ಲಿ ಕೋವಿಡ್‌-19 ಸೋಂಕು ಜಿಲ್ಲೆಯಲ್ಲಿ ದೃಢಪಟ್ಟಿದೆ.

Advertisement

ಸಾವಿನ ವಿವರ: 16-25 ವರ್ಷದೊಳಗಿನ ಇಬ್ಬರು, 26-35 ವರ್ಷದೊಳಗಿನ ಐವರು, 36-45 ವರ್ಷದೊಳಗಿನ 21 ಮಂದಿ, 46-55ವರ್ಷದೊಳಗಿನ 48 ಜನ, 56-65ವರ್ಷದೊಳಗಿನ 81 ಜನ, 66-75ವರ್ಷದೊಳಗಿನ 55ಜನ, 76-85ವರ್ಷದೊಳಗಿನ 19ಜನ ಹಾಗೂ 86 ಮೇಲ್ಪಟ್ಟ ಮೂವರು ಕೋವಿಡ್‌-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಐದು ವರ್ಷದೊಳಗಿನ ಹಾಗೂ 6-15 ವರ್ಷದೊಳಗಿನ ಮಕ್ಕಳ ಸಾವು ಸಂಭವಿಸದೇ ಇರುವುದು ಸಮಾಧಾನಕರ ಸಂಗತಿಯಾಗಿದೆ.

ಗುಣಮುಖರಾದವರ ಮಾಹಿತಿ: ಐದು ವರ್ಷದೊಳಗಿನ 183 ಮಕ್ಕಳು, 6-15 ವರ್ಷದೊಳಗಿನ 519 ಮಕ್ಕಳು, 16-25 ವರ್ಷದೊಳಗಿನ 1512 ಮಕ್ಕಳು, 26-35ವರ್ಷದೊಳಗಿನ 2310 ಯುವಜನರು, 36-45 ವರ್ಷದೊಳಗಿನ 2204 ಮಂದಿ, 46-55 ವರ್ಷದೊಳಗಿನ 1976 ಜನ, 56-65 ವರ್ಷದೊಳಗಿನ 1673 ಜನ, 66-75 ವರ್ಷದೊಳಗಿನ 749 ಹಿರಿಯರು, 76-85 ವರ್ಷದೊಳಗಿನ 210 ಹಿರಿಯರು ಹಾಗೂ 86 ವರ್ಷ ಮೇಲ್ಪಟ್ಟ 47 ಅತಿ ಹಿರಿಯರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಆರಂಭದ ದಿನಗಳಲ್ಲಿ ಮರಣ ಪ್ರಮಾಣ ಜಾಸ್ತಿಯಾಗುವ ಮೂಲಕ ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಕೆಲವು ದಿನಗಳಿಂದ ಮರಣ ಪ್ರಮಾಣ ಇಳಿಕೆಯಾಗಿರುವುದು, ಗುಣಮುಖರಾಗುತ್ತಿರುವ ಪ್ರಮಾಣ ಏರಿಕೆಯಾಗುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ.

ಜಿಲ್ಲೆಯಲ್ಲಿ ಆರಂಭದ ದಿನಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿತ್ತು. ಈಗ ಮರಣ ಪ್ರಮಾಣ ಇಳಿಕೆಯಾಗುತ್ತಿದ್ದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಜನರು ಕೋವಿಡ್ ಸೋಂಕು ಲಕ್ಷಣ ಕಂಡ ಕೂಡಲೇ ತಪಾಸಣೆ ಮಾಡಿಸಿಕೊಂಡರೆ ಶೀಘ್ರ ಗುಣಮುಖರಾಗಬಹುದಾಗಿದೆ. -ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

ರೋಗ ಲಕ್ಷಣ ಕಂಡ ಆರಂಭದಲ್ಲಿಯೇ ನಮ್ಮ ಮಕ್ಕಳು ಆಸ್ಪತ್ರೆಗೆ ದಾಖಲಿಸಿದರು. ಕೋವಿಡ್ ಸುರಕ್ಷತಾ ಕ್ರಮ, ಔಷಧ ಕ್ರಮ ಹಾಗೂ ಮನೆಮದ್ದು ಎಲ್ಲವನ್ನೂ ಸರಿಯಾಗಿ ಪಾಲಿಸಿದ್ದರಿಂದ ಈಗ ಆರೋಗ್ಯವಾಗಿ ಮನೆಯಲ್ಲಿದ್ದೇನೆ. -ಅಮಿನಾಬಿ, ಗುಣಮುಖರಾದ ಹಿರಿಯಜ್ಜಿ

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next