Advertisement

ಕೃಷಿಹೊಂಡ ಅವ್ಯವಹಾರ; ತನಿಖೆ ಚುರುಕು

05:39 PM Dec 13, 2019 | Suhan S |

ಕೊಪ್ಪಳ: ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ರೈತರ ಅನುಕೂಲಕ್ಕಾಗಿ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣ ಮಾಡಿಕೊಡಲಾಗಿತ್ತು. ಆದರೆ ಅವ್ಯವಹಾರ ನಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಎಲ್ಲ ಹೊಂಡಗಳ ತನಿಖೆಗೆ ಆದೇಶ ಮಾಡಿದ್ದು, ಜಿಲ್ಲೆಯಲ್ಲಿನ 9,200 ಹೊಂಡಗಳ ಕುರಿತು ತನಿಖೆ ನಡೆದಿದೆ.

Advertisement

ಹೌದು.. ಕೃಷಿ ಹೊಂಡಗಳ ನಿರ್ಮಾಣಕ್ಕಾಗಿ ಸರ್ಕಾರ ಶೇ. 90ರಷ್ಟು ಸಹಾಯಧನ ನೀಡಿದ್ದರೆ, ಶೇ. 10ರಷ್ಟು ಮಾತ್ರ ರೈತರು ಹಣ ಭರಿಸಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಯೋಜನೆಯು ಹಲವು ಕಡೆ ದುರುಪಯೋಗ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಕೃಷಿ ಹೊಂಡ ನಿರ್ಮಿಸಿದರೆ ರೈತರ ಬೆಳೆಗೆ ತಾತ್ಕಾಲಿಕ ನೀರಿನ ನೆರವಾಗಲಿದೆ. ಮಳೆಗಾಲದ ವೇಳೆ ಮಳೆ ಸುರಿದಾಗ ಹೊಂಡದಲ್ಲಿ ನೀರು ನಿಂತು ಬೆಳೆ ಒಣಗುವ ಹಂತದಲ್ಲಿ ಮಳೆಯು ಕೈ ಕೊಟ್ಟರೆ ಈ ಹೊಂಡಗಳ ನೀರನ್ನು ಬಳಕೆ ಮಾಡಿ ರೈತರ ಬೆಳೆ ಉಳಿಸಿಕೊಳ್ಳಲು ಸರ್ಕಾರವು ಒತ್ತು ನೀಡಿ ಹೊಂಡಗಳನ್ನು ನಿರ್ಮಿಸಿಕೊಟ್ಟಿತ್ತು. ಆದರೆ ರಾಜ್ಯಾದ್ಯಂತ ಯೋಜನೆಯ ಹೆಸರಿನಲ್ಲಿ ಸರ್ಕಾರದ ಶೇ. 90ರಷ್ಟು ಸಹಾಯಧನಕ್ಕಾಗಿ ಹೊಂಡಗಳನ್ನು ನಿರ್ಮಿಸಿಕೊಂಡು ಬಳಿಕ ಅದನ್ನು ಮುಚ್ಚಿರುವ ಆರೋಪಗಳಿವೆ. ಇದಲ್ಲದೇ ಕೆಲವೆಡೆ ಒಂದೇ ರೈತನ ಜಮೀನಿನಲ್ಲಿ ಹೊಂಡವನ್ನು ನಿರ್ಮಾಣ ಮಾಡಿಕೊಂಡು ಬೇರೆ ಬೇರೆ ರೈತರ ಹೆಸರಿನಲ್ಲಿ ಬಿಲ್‌ ಎತ್ತುವಳಿ ಮಾಡಿದ ಪ್ರಕರಣಗಳು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾದ ಕೃಷಿ ಹೊಂಡಗಳ ನೈಜತೆಯ ಸ್ಥಿತಿಗತಿ ಅವಲೋಕಿಸಿ, ವಾಸ್ತವದ ವರದಿ ನೀಡಲು ಬಿಜೆಪಿ ಸರ್ಕಾರ ಆದೇಶ ಮಾಡಿದೆ.

13 ಸಾವಿರಕ್ಕೂ ಹೆಚ್ಚು ಹೊಂಡ: ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. 13 ಸಾವಿರಕ್ಕೂ ಹೆಚ್ಚು ಹೊಂಡಗಳಿವೆ ಎಂದು ಕೃಷಿ ಇಲಾಖೆಯೇ ಹೇಳುತ್ತಿದೆ. ಕೆಲವೆಡೆ ಹೊಂಡವು ರೈತರಿಗೆ ತುಂಬ ಆಸರೆಯಾಗಿವೆ. ಇನ್ನು ಹಲವೆಡೆ ರೈತರಿಗೆ ಹೊಂಡದಿಂದ ಹನಿ ನೀರು ಸಿಕ್ಕಿಲ್ಲ. ಕೆಲವು ರೈತರ ಜಮೀನಿನಲ್ಲಿ ಹೊಂಡಗಳೇ ಇಲ್ಲ. ಮಧ್ಯವರ್ತಿಗಳು ರೈತರ ಹೆಸರಲ್ಲಿ ಹೊಂಡದ ಬಿಲ್‌ ಎತ್ತುವಳಿ ಮಾಡಿದ್ದಾರೆ ಎನ್ನುವ ಆಪಾದನೆಯೂ ಜೋರಾಗಿದ್ದರಿಂದ ಜಿಲ್ಲೆಯ ಕೃಷಿ ಹೊಂಡಗಳನ್ನು ತನಿಖೆ ನಡೆಸಲಾಗಿದೆ.

9200 ಹೊಂಡಗಳ ತನಿಖೆ ಶುರು: ಜಿಲ್ಲೆಯಲ್ಲಿ 13 ಸಾವಿರ ಹೊಂಡಗಳ ಪೈಕಿ 9200 ಹೊಂಡಗಳ ಕುರಿತು ತನಿಖೆ ನಡೆಸಿ ಅಲ್ಲಿನ ವಾಸ್ತವದ ಸ್ಥಿತಿಯ ಕುರಿತು ಸರ್ಕಾರಕ್ಕೆ ವರದಿ ನೀಡಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾ ಕೃಷಿ ಇಲಾಖೆಗೆ ಸೂಚನೆ ನೀಡಿದೆ. ಕೃಷಿ ಇಲಾಖೆ ಅ ಧಿಕಾರಿಗಳು ಸಹಿತ ಸರ್ಕಾರದ ನಿಯಮಾವಳಿ ಅನುಸಾರ ತನಿಖೆ ನಡೆಸಿದ್ದಾರೆ. ಅಲ್ಲದೇ, ಸರ್ಕಾರವೇ ಕೆಲವೊಂದು ನಮೂನೆಗಳನ್ನು ನೀಡಿದ್ದು, ಇದೇ ಮಾದರಿಯಲ್ಲಿ ವಾಸ್ತುವ ಅಂಶಗಳನ್ನು ಸರ್ಕಾರಕ್ಕೆ ವರದಿ ಮಾಡಬೇಕು. ರಾಜ್ಯಮಟ್ಟದ ಸಮಿತಿಯು ವಾಸ್ತುವ ಅಂಶಗಳ ಆಧಾರದಲ್ಲಿ ವಿಶ್ಲೇಷಣೆ ನಡೆಸಿ ಹೊಂಡಗಳಲ್ಲಿ ನಡೆದಿರುವ ಅಕ್ರಮದ ಪತ್ತೆ ಮಾಡಲಿದೆ. ಕೇವಲ ಮಾಹಿತಿ ರವಾನಿಸುವಂತೆ ಸೂಚನೆ ನೀಡಿದ್ದರಿಂದ ಜಿಲ್ಲಾ ಕೃಷಿ ಅಧಿಕಾರಿಗಳು ಹೊಂಡಗಳ ಸ್ಥಿತಿಗತಿಯ ಅಂಶಗಳನ್ನು ಮಾತ್ರ ಕ್ರೋಢೀಕರಿಸಿದ್ದಾರೆ. ಇವುಗಳಲ್ಲೇ ಹಲವು ಹೊಂಡಗಳಲ್ಲಿ ಅಕ್ರಮ ನಡೆದಿವೆ ಎನ್ನುವ ಮಾಹಿತಿಯೂ ಇಲಾಖೆ ಮೂಲಗಳಿಂದತಿಳಿದು ಬಂದಿದೆ. ಆದರೆ ಬಹಿರಂಗ ಬಡಿಸಿಲ್ಲ.

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next