Advertisement

ಸಿದ್ದು ಮಾತಿಗೆ ಸಿ.ಟಿ.ರವಿ ಆಕ್ರೋಶ

08:18 PM Dec 01, 2022 | Team Udayavani |

ಬೆಂಗಳೂರು: ಮೈಸೂರಿನಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಕುರಿತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತುಗಳಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ದೇಶ ಭಕ್ತರನ್ನು ಹುಟ್ಟುಹಾಕುತ್ತಿರುವ ಸಂಸ್ಥೆ ಆರ್‌ಎಸ್‌ಎಸ್‌ ಅಲ್ಲ ಎಂದು ಹೇಳುವ ಮೂಲಕ ಅವರು ತಮ್ಮ ಅಜ್ಞಾನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಮಾತ್ರ ಅಕ್ಷಮ್ಯ. ನಮ್ಮ ಸಾಂಸ್ಕೃತಿಕ ಹಿರಿಮೆ ಮತ್ತು ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಇವತ್ತು ದೇಶದ ಜನ ಅರಿತಿದ್ದಾರೆ ಎಂದರೆ ಅದಕ್ಕೆ ಆರ್‌ಎಸ್‌ಎಸ್‌ ಕಾರಣ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿ  ಪರಂಪರೆ ಮತ್ತು ಹಿಂದುತ್ವದ ವಿಚಾರದ ಬಗ್ಗೆ ಸದಾ ಭಯಪಡುವ ಸಿದ್ದರಾಮಯ್ಯನವರಿಗೆ ಈಗ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತಾ ಇದೆ ಎಂಬುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿದ್ದಾಗಲೇ ಚುನಾವಣೆ ಗೆಲ್ಲಲಾಗದ ಅವರು ಈಗ ಇಡೀ ರಾಜ್ಯದಲ್ಲೇ ಒಂದು ಕ್ಷೇತ್ರಕ್ಕಾಗಿ ದುರ್ಬೀನು ಹಿಡಿದು ಹುಡುಕುವ ಸ್ಥಿತಿಗೆ ತಲುಪಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಈಗಾಗಲೇ ಸಿದ್ದರಾಮಯ್ಯನವರಿಗೆ ಮೂಗುದಾರ ಹಾಕಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ತುಳಿದ ಖರ್ಗೆಯವರೂ ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಅವರಿಗೆ ಕಾಲಿಟ್ಟಲ್ಲೆಲ್ಲಾ ಮುಳ್ಳೇ ಎಂದು ಹೇಳಿದ್ದಾರೆ.

ಸಮಾಜವಾದದ ಹೆಸರೇಳಿಕೊಂಡು ಮಜಾವಾದಿಯಾಗಿ ಅಧಿಕಾರಕ್ಕಾಗಿ ಗಾಳಿ ಬಂದ ಕಡೆಗೆ ಛತ್ರಿ ಹಿಡಿಯುವ ನಿಮ್ಮಂತ ಜನರಿಗೆ ಆರ್‌ಎಸ್‌ಎಸ್‌ ಅರ್ಥವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next