Advertisement

ತಿಂಗಳೊಳಗೆ ಸಿಆರ್‌ಝಡ್‌ ಹೊಸ ನಕ್ಷೆ ಬಿಡುಗಡೆ

05:52 PM Jan 04, 2023 | Team Udayavani |

ಮಹಾನಗರ: ಕರಾವಳಿ ಜಿಲ್ಲೆಯ ಬಹುನಿರೀಕ್ಷಿತ “ಕರಾವಳಿ ನಿಯಂತ್ರಣ ವಲಯ (ಸಿಆರ್‌ ಝಡ್‌) ಅಧಿಸೂಚನೆ-2019’ರ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆ ಇದೀಗ ಅಂತಿಮ ಹಂತಕ್ಕೆ ಬಂದಿದ್ದು, 1 ತಿಂಗಳೊಳಗೆ ಹೊಸ ನಕ್ಷೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Advertisement

ಹೊಸ ನಕ್ಷೆ ರಚನೆ ಬಗ್ಗೆ ಹಲವು ಕಾಲದಿಂದ ಪ್ರಕ್ರಿಯೆಗಳು ಮಂಗಳೂರಿನಲ್ಲಿ ನಡೆಯುತ್ತಿದೆ ಯಾದರೂ ವರ್ಷ ಕಳೆದರೂ ನಕ್ಷೆ ಮಾತ್ರ ಬರುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನಕ್ಷೆ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂಬ ದೂರು ಕೂಡ ಕೇಳಿಬರುತ್ತಿತ್ತು. ಆದರೆ “ಕೊರೊನಾ ಕಾರಣ, ನಕ್ಷೆ ರಚನೆ ಕಾನೂನು ಪ್ರಕಾರ ಮತ್ತು ಬಹುಸೂಕ್ಷ್ಮ ವಿಚಾರವಾದ್ದರಿಂದ ಕೊಂಚ ತಡವಾಗಿದೆ. ಇದೀಗ ಎಲ್ಲ ಹಂತದ ಸಿದ್ಧತೆ ಪೂರ್ಣವಾಗಿ ನಕ್ಷೆ ಬಿಡುಗಡೆಗೆ ತಯಾರಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು (ಕೆಎಸ್‌ಸಿಝಡ್‌ ಎಂಎ), ಕರಾವಳಿ ನಿಯಂತ್ರಣ ವಲಯ (ಸಿಆರ್‌ ಝಡ್‌) ಅಧಿಸೂಚನೆ 2019ರಂತೆ ತಯಾರಿಸಿರುವ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಯೋಜನೆಯ ಕರಡು (ಸಿಝಡ್‌ ಎಂಪಿ) ನಕ್ಷೆಯನ್ನು ಚೆನ್ನೈನ ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟೆನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ ಸಿಎಸ್‌ಸಿಎಂ) ತಯಾರಿಸಿದ್ದಾರೆ.

ಈ ಕರಡು ನಕ್ಷೆಯನ್ನು ಸಾರ್ವಜನಿಕರು, ಭಾಗಿದಾರರ ಅವಗಾಹನೆಗೆ ಪ್ರಕಟಿಸಿ ಅವರಿಂದ ಯಾವುದೇ ಆಕ್ಷೇಪಣೆ, ಸಲಹೆ, ಅನಿಸಿಕೆ ಆಹ್ವಾನಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರವು 2020ರ ಎ. 27ರಂದು ಅಧಿಸೂಚನೆ ಹೊರಡಿಸಿತ್ತು. ಇದರಂತೆ ಕರಡು ನಕ್ಷೆ ಬಗ್ಗೆ ಜುಲೈ 31ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆದಿತ್ತು. ಪೂರಕ ವರದಿಗೆ ಸೂಚನೆ ಆಕ್ಷೇಪಣೆಗಳ ವಿವರ ಸಹಿತ ವರದಿಯನ್ನು ಸೆ. 30ರಂದು ದ.ಕ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಸಭೆಯಲ್ಲಿ ಮತ್ತೊಮ್ಮೆ ಅನುಮೋದಿಸಿ ನ. 23ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯದ ಉನ್ನತ ಮಟ್ಟದ ಸಭೆಗೆ ಕಳುಹಿಸಲಾಗಿತ್ತು. ಆದರೆ ಸಾರ್ವಜನಿಕ ಆಕ್ಷೇಪಣೆ ಸರಿಪಡಿಸಲು ಇರಬಹುದಾದ ಸಾಧ್ಯತೆಗಳ ವಿವರ ನೀಡುವಂತೆ ಬೆಂಗಳೂರಿನಿಂದ ಮಂಗಳೂರು ಅಧಿಕಾರಿಗಳಿಗೆ ಮತ್ತೆ ನಿರ್ದೇಶನ ಬಂದಿತ್ತು. ಅದರಂತೆ ಸೂಕ್ತ ದಾಖಲೆ, ವರದಿಯನ್ನು ಸಿದ್ಧಪಡಿಸಿ 2022 ಜ. 4ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ಪಡೆದು ಜ. 5ರಂದು ಬೆಂಗಳೂರಿಗೆ ಕಳುಹಿಸಲಾಗಿತ್ತು.

ಇದೀಗ ಕೇಂದ್ರ ಸರಕಾರದ ಸಹಿ ಪಡೆದು ನಕ್ಷೆ ಬಿಡುಗಡೆಯಾಗಲಿದೆ. ಬೀಚ್‌ ಅಭಿವೃದ್ಧಿಯ ಆಶಾಭಾವ ಪ್ರಸಕ್ತ ಕಡಲ ತೀರದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಹೊಸ ಅಧಿಸೂಚನೆ ಪ್ರಕಾರ ಆಯ್ದ ಕಡಲ ತೀರದಲ್ಲಿ ಪ್ರವಾಸೋದ್ಯಮ ಪೂರಕವಾಗಿ ಕೆಲವೊಂದು ತಾತ್ಕಾಲಿಕ ರಚನೆ, ಫುಡ್‌ ಸ್ಟಾಲ್‌ ಮಾಡಲು ಅವಕಾಶ ವಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಲಹೆ ಮಾಡಿರುವ ಸೋಮೇಶ್ವರ, ಪಣಂಬೂರು, ಇಡ್ಯಾ, ತಣ್ಣೀರುಬಾವಿ, ಸುರತ್ಕಲ್‌, ಸಸಿಹಿತ್ಲು, ಬೆಂಗ್ರೆ ಸಹಿತ ಜಿಲ್ಲೆ 10 ಬೀಚ್‌ಗಳನ್ನು ಅಧಿಸೂಚಿಸಲಾಗಿದೆ.

Advertisement

ಮೀನುಗಾರರ ಮನೆ ನಿರ್ಮಾಣಕ್ಕಾಗಿ ಸದ್ಯ 100 ಮೀ.ದೂರದವರೆಗೆ ಸಿಆರ್‌ ಝಡ್‌ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ 50 ಮೀ.ವರೆಗೆ ಮಾತ್ರ ಇರಲಿದೆ. ಇಂತಹ ಹಲವು ಅವಕಾಶ ಹೊಸ ನಕ್ಷೆಯ ಮೂಲಕ ದೊರೆಯಲಿದೆ.

ಶೀಘ್ರ ಹೊಸ ನಕ್ಷೆ
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌)ನ ಹೊಸ ಅಧಿಸೂಚಿತ ನಕ್ಷೆ ರಚನೆ ಈಗಾಗಲೇ ಕೊನೆಯ ಹಂತದಲ್ಲಿದೆ. ಈಗಾಗಲೇ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ನಕ್ಷೆಯ ಕೆಲವು ತಿದ್ದುಪಡಿಗಳಿಗೆ ಅನುಮತಿ ದೊರೆತು ಕೇಂದ್ರಕ್ಕೆ ಕಳುಹಿಸಲಾಗಿದೆ. ಕೆಲವೇ ದಿನದಲ್ಲಿ ಹೊಸ ನಕ್ಷೆ ಸಿದ್ಧಗೊಳ್ಳುವ ಸಾಧ್ಯತೆಯಿದೆ.
-ಡಾ| ದಿನೇಶ್‌ ಕುಮಾರ್‌ ವೈ.ಕೆ.,
ಪ್ರಾದೇಶಿಕ ನಿರ್ದೇಶಕರು, ಪರಿಸರ-ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next