Advertisement

ಸಿಆರ್‌ಝಡ್‌ ನೂತನ ಕರಡು ನಕ್ಷೆ ಪರಿಷ್ಕರಣೆ

07:59 AM Mar 29, 2018 | Harsha Rao |

ಮಂಗಳೂರು: ಕರಾವಳಿಯ ಮೂರು ಜಿಲ್ಲೆಗಳ ಸುದೀರ್ಘ‌ ಕಾಲದ ಬೇಡಿಕೆ ಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ-2011′ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆಯನ್ನು ಸಾರ್ವಜನಿಕರ ಅಭಿಪ್ರಾಯದಂತೆ ಪ್ರಸ್ತುತ ಚೆನ್ನೈಯಲ್ಲಿ ಕೊಂಚ ಪರಿಷ್ಕರಣೆ ನಡೆಸಲಾಗುತ್ತಿದ್ದು, ಕೆಲವೇ ದಿನದಲ್ಲಿ ವರದಿಯನ್ನು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಅಲ್ಲಿ ಒಪ್ಪಿಗೆ ಪಡೆದ ಅನಂತರ ನೂತನ ಕರಡು ನಕ್ಷೆ ಪ್ರಕಟವಾಗಲಿದೆ.

Advertisement

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ಸಂಬಂಧಿತ ಉನ್ನತ ಅಧಿಕಾರಿಗಳು ಚೆನ್ನೈಯ ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ಸಿಎಸ್‌ಸಿಎಂ) ಸಂಸ್ಥೆಗೆ ತೆರಳಿದ್ದು, ಕಳೆದ ಎರಡು ದಿನದಿಂದ ಪರಿಷ್ಕರಣೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಿದ್ಧಗೊಂಡಿರುವ ಹೊಸ ನಕ್ಷೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಹೊಸ ವರದಿಯನ್ನು ಒಂದೆರಡು ದಿನದಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಹೊಸ ನಕ್ಷೆಯಂತೆ, ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹಾಗೂ ಆವಶ್ಯಕತೆಗೆ ಅನುಗುಣವಾಗಿ ನಿಯಮದ ಪ್ರಕಾರ ಬದಲಾವಣೆ ನಡೆಸಲು ಅವಕಾಶವಿದ್ದು, ಇದರಿಂದ ಈ ವಲಯದ ವ್ಯಾಪ್ತಿಗೆ ಬರುವ ನಿವಾಸಿಗಳ ಜನಜೀವನಕ್ಕೆ ವಿಧಿಸಲಾಗಿರುವ ನಿರ್ಬಂಧದಲ್ಲಿ ಸಡಿಲಿಕೆಯಾಗುವ ಸಾಧ್ಯತೆಯಿದೆ.

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವು 2014ರ ಮಾ. 14ರಂದು ಚೆನ್ನೈಯ ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ಸಿಎಸ್‌ಸಿಎಂ) ಎಂಬ ಸಂಸ್ಥೆಯನ್ನು ಭರತ ರೇಖೆ (ಹೈಟೈಡ್‌ ಲೈನ್‌) ಹಾಗೂ ಇಳಿತ ರೇಖೆ (ಲೋ ಟೈಡ್‌ ಲೈನ್‌)ಗಳನ್ನು ಗುರುತಿಸುವುದಕ್ಕೆ ಅಧಿಕೃತ ಸಂಸ್ಥೆಯನ್ನಾಗಿ ಆಯ್ಕೆ ಮಾಡಿತ್ತು. ಈ ಸಂಬಂಧ ರಾಜ್ಯದ ಕಡಲ ತೀರ ವಲಯ ನಿರ್ವಹಣಾ ಯೋಜನೆಗಳನ್ನು ತಯಾರಿಸುವ ಕಾರ್ಯವನ್ನು ರಾಜ್ಯ ಸರಕಾರವು ಎನ್‌ಸಿಎಸ್‌ಸಿಎಂಗೆ ವಹಿಸಿತ್ತು. ಅದರಂತೆ ಈ ಸಂಸ್ಥೆಯು, ರಾಜ್ಯದ ಕರಾವಳಿ ತೀರ ವ್ಯಾಪ್ತಿಯಲ್ಲಿ ಅಧ್ಯಯನ, ಸ್ಥಳ ಪರಿಶೀಲನೆ ನಡೆಸಿ, ಕೆಲವು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಯೋಜನೆಯ ಕರಡು ಅನ್ನು ಸಿದ್ಧಪಡಿಸಿದೆೆ. ಈ ಕರಡು ನಕ್ಷೆಗೆ ಕಳೆದ ವರ್ಷದ ಆ. 31ರಂದು ನಡೆದ ರಾಜ್ಯ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಒಪ್ಪಿಗೆ ನೀಡಿ, ಬಳಿಕ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಪಡೆಯಲಾಗಿತ್ತು.

ಈಗ ಇರುವುದು ಹಳೆಯ ನಕ್ಷೆ

ಪ್ರಸ್ತುತ ಕರಾವಳಿ ಕರ್ನಾಟಕದಲ್ಲಿ 1996ರ ಸಿಆರ್‌ಝಡ್‌ ಅಧಿಸೂಚನೆಯ ನಕ್ಷೆ ಜಾರಿಯಲ್ಲಿರುವುದು 2011ರಲ್ಲಿ ಹೊಸ ನಕ್ಷೆ  ತಯಾರಿಗೆ ಕೇಂದ್ರ ಸರಕಾರ ಸೂಚನೆ ನೀಡಿದ್ದು ಇದಕ್ಕೆ ಎರಡು ವರ್ಷಗಳ ಗಡುವು ನೀಡ ಲಾಗಿತ್ತು. ಜನರ ಸಹಭಾಗಿತ್ವ ದೊಂದಿಗೆ ಕರಾವಳಿ ಪ್ರದೇಶ ಹಾಗೂ ಅದರ ವಿಶಿಷ್ಟ ಪರಿಸರವನ್ನು ರಕ್ಷಿಸುವುದು, ಸಾಗರತೀರದಲ್ಲಿ ವಾಸಿಸುವ ಮೀನುಗಾರರ ಹಾಗೂ ಇತರ ಸಮುದಾಯದ ಜೀವನ ಭದ್ರತೆಯ ಸಂರಕ್ಷಣೆ, ಕರಾವಳಿ ತೀರದಲ್ಲಿ  ಪರಿಸರ ಹಾನಿಯಿಂದಾಗುವ ಅಪಾಯ, ಜಾಗತಿಕ ತಾಪಮಾನ ಹೆಚ್ಚಳದಿಂದ ಸಮುದ್ರ ಮಟ್ಟ ಏರಿಕೆ ಮುಂತಾದುವುಗಳನ್ನು ಪರಿಗಣನೆಗೆ ತೆಗೆದುಕೊಂಡು ವೈಜ್ಞಾನಿಕ ಅಂಶಗಳ ಆಧಾರದಲ್ಲಿ  ಸುಸ್ಥಿರತೆ ಮಾದರಿಯಲ್ಲಿ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವುದು ಸಿಆರ್‌ಝಡ್‌ ಮುಖ್ಯ ಉದ್ದೇಶ ಎಂದು ಅಧಿಸೂಚನೆ ಹೇಳುತ್ತದೆ.

Advertisement

1991ರ ಸಿಆರ್‌ಝಡ್‌ ಅಧಿಸೂಚನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣ ವಲಯ (ಸಿಎಂಝಡ್‌) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದರಲ್ಲಿ  ಸಿಆರ್‌ಝಡ್‌ನ‌ “ನಿಯಂತ್ರಣ’ ಎಂಬ ಪದವನ್ನು ತೆಗೆದು “ನಿರ್ವಹಣೆ’ ಎಂದು  ಸೇರಿಸಲಾಗಿತ್ತು. ಈ ಅಧಿಸೂಚನೆಯ ಮೇಲೆ ಬಹಳಷ್ಟು ಚರ್ಚೆಗಳು ನಡೆದು, ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ  ಕೇಂದ್ರ ಸರಕಾರದ ಪರಿಸರ ಹಾಗೂ ಅರಣ್ಯ ಸಚಿವಾಲಯವು ಸಿಎಂಝಡ್‌ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು 1991ರ ಸಿಆರ್‌ಝಡ್‌ ಅಧಿಸೂಚನೆಯಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ 2011ರಲ್ಲಿ ಮತ್ತೆ ಅನುಷ್ಠಾನಕ್ಕೆ  ತಂದಿದೆ. ಇದರ ಆಧಾರದ ಮೇಲೆ ಹೊಸ ಕರಡು ನಕ್ಷೆ ಸಿದ್ಧಗೊಳಿಸಲಾಗಿದೆ.

25 ಸಲ ತಿದ್ದುಪಡಿಯಾದ ಅಧಿಸೂಚನೆ!

ಸಿಆರ್‌ಝಡ್‌ ಒಟ್ಟು  4 ವರ್ಗೀಕರಣವನ್ನು ಹೊಂದಿದೆ. ಇವುಗಳನ್ನು ಸರಳವಾಗಿ ಹೇಳುವು ದಾದರೆ ವರ್ಗ 1ರಲ್ಲಿ  ಭರತ ಮತ್ತು ಇಳಿತ ನಡುವಣ ಪ್ರದೇಶ ಹಾಗೂ ಸಾಗರತೀರದಲ್ಲಿ  ಪರಿಸರಾತ್ಮಕವಾಗಿ ಅತಿ ಸೂಕ್ಷ್ಮ ಪ್ರದೇಶಗಳು ಇದರಲ್ಲಿ  ಒಳಗೊಳ್ಳುತ್ತವೆ. ವರ್ಗೀಕರಣ-2ರಲ್ಲಿ  ಸಾಗರ ತೀರಕ್ಕೆ ಹತ್ತಿರವಿರುವ ಅಥವಾ ತೀರದವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶ. ವರ್ಗೀಕರಣ- 3ರಲ್ಲಿ  ಹೊಂದಿಕೊಂಡತೆ ಅಬಾಧಿತ ಅಥವಾ 1 ಮತ್ತು 2ಕ್ಕೆ ಸೇರದ, ಗ್ರಾಮಾಂತರ ಪ್ರದೇಶದಲ್ಲಿ ಕರಾವಳಿ ಪ್ರದೇಶಗಳು ಹಾಗೂ ವರ್ಗೀಕರಣ- 4ರಲ್ಲಿ  ಇಳಿತ ರೇಖೆಯಿಂದ 12 ನಾಟಿಕಲ್‌ ಮೈಲ್‌ ಸಮುದ್ರಮುಖ ಪ್ರದೇಶಗಳು, ಭರತ ಸಮಯದಲ್ಲಿ ನೀರು ನುಗ್ಗುವ ಪ್ರದೇಶಗಳು ಒಳಗೊಳ್ಳುತ್ತವೆ. ಸಾಗರತೀರ ಸಂರಕ್ಷಣೆಯ ಮಹತ್ವವನ್ನು ಮನಗಂಡಿದ್ದ ಪ್ರಧಾನಿ ಇಂದಿರಾ ಗಾಂಧಿ ಅವರು 1981ರಲ್ಲಿ ಸಮರ್ಥ ಕಾಯ್ದೆಯೊಂದರ ರಚನೆ ಆವಶ್ಯಕತೆಯನ್ನು ಪ್ರತಿಪಾದಿಸಿದ್ದರು. ಇದಾದ ಬಳಿಕ 10 ವರ್ಷಗಳ ಅನಂತರ 1991ರಲ್ಲಿ ಸಿಆರ್‌ಝಡ್‌ ಅಧಿಸೂಚನೆ ರೂಪಿತವಾಯಿತು. ಪ್ರಕಟಗೊಂಡ ಬಳಿಕ ಇದು ಈವರೆಗೆ 25 ಬಾರಿ ತಿದ್ದುಪಡಿ ಕಂಡಿದೆ. ಇದನ್ನು ಪೂರ್ಣವಾಗಿ ಕೈಬಿಟ್ಟು  ಸಿಎಂಝಡ್‌ (ಕರಾವಳಿ ನಿರ್ವಹಣ ವಲಯ) ಜಾರಿಗೆ ತರುವ ಪ್ರಕ್ರಿಯೆಯೂ ಒಂದೊಮ್ಮೆ ನಡೆಯಿತು. ಅದಕ್ಕೆ  ವ್ಯಾಪಕ ಪ್ರತಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಸಿಆರ್‌ಝಡ್‌ ಅನ್ನು ಅಪ್ಪಿಕೊಳ್ಳಲಾಯಿತು.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next