Advertisement

ಬೆಳೆಗಳಲ್ಲಿನ ರೋಗ ಪತ್ತೆಗೆ ಬಂದಿದೆ “ಗ್ಯಾಜೆಟ್‌’

11:08 PM Apr 29, 2019 | Lakshmi GovindaRaju |

ಬೆಂಗಳೂರು: ವಿವಿಧ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ಜೈವಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚುವ “ಗ್ಯಾಜೆಟ್‌’ವೊಂದನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗವು ಅಭಿವೃದ್ಧಿಪಡಿಸಿದೆ. ತೋಟಗಾರಿಕೆ ಸೇರಿ ಕೃಷಿ ಬೆಳೆಗಳ ರೋಗ ಪತ್ತೆಗೆ ಈ ತಂತ್ರಜ್ಞಾನ ಮುನ್ನುಡಿ ಆಗಲಿದೆ.

Advertisement

ಮಧುಮೇಹ ತಪಾಸಣೆಗೆ ಬಳಸುವ ಗ್ಲುಕೊಮೀಟರ್‌ ಮಾದರಿಯಲ್ಲಿರುವ “ಬಯೋ ಸೆನ್ಸರ್‌’ ಉಪಕರಣದ ಸಹಾಯದಿಂದ ಪ್ರಾಥಮಿಕ ಹಂತದಲ್ಲೇ ಬೆಳೆಗಳಲ್ಲಿನ ರೋಗಪತ್ತೆ ಮಾಡುವ ತಂತ್ರಜ್ಞಾನ ಇದಾಗಿದೆ. ಸಮರ್ಪಕವಾಗಿ ಬಳಸಿಕೊಂಡರೆ, ರೋಗಬಾಧೆಯಿಂದ ಪ್ರತಿ ವರ್ಷ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರೈತರಿಗೆ ಇದು ಭವಿಷ್ಯದಲ್ಲಿ ವರದಾನ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.

“ಸದ್ಯಕ್ಕೆ ಪಪ್ಪಾಯಿ ಬೆಳೆಯಲ್ಲಿನ ಉಂಗುರ ಮಚ್ಚೆ ವೈರಾಣು (ರಿಂಗ್‌ಸ್ಪಾಟ್‌ ವೈರಸ್‌) ಪತ್ತೆಯಲ್ಲಿ ಈ ಪ್ರಯೋಗ ನಡೆದಿದ್ದು, ಇದರಲ್ಲಿ ವಿಜ್ಞಾನಿಗಳು ಯಶಸ್ವಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇತರ ಬೆಳೆಗಳ ರೋಗ ಪತ್ತೆಗೂ ಇದೇ ಮಾದರಿಯನ್ನು ಬಳಸಿಕೊಳ್ಳಲು ಸಾಧ್ಯವಿದೆ.

ರೋಗಕ್ಕೆ ಕಾರಣವಾಗುವ ಜೀವಾಣುವಿನ ಅನುವಂಶಿಕ ಧಾತುಗಳನ್ನು ಗುರುತಿಸಿ, ಅದರಲ್ಲಿನ ಕೋಟ್‌ ಪ್ರೊಟೀನ್‌ನಿಂದ ಜೈವಿಕ ತಂತ್ರಜ್ಞಾನ ಬಳಸಿ ಪ್ರತಿಕಾಯ (ಆ್ಯಂಟಿಬಾಡಿ)ಗಳನ್ನು ಅಭಿವೃದ್ಧಿಪಡಿಸಲಾಗುವುದು. ನಂತರ, ಅದನ್ನು ಬಯೋ ಸೆನ್ಸಾರ್‌ನಲ್ಲಿರುವ ಚಿಪ್‌ನಲ್ಲಿ ಹಾಕಲಾಗುವುದು.

ಆಗ ಆ ಡಿವೈಸ್‌ ಮೇಲೆ ನಿರ್ದಿಷ್ಟ ಗಿಡದ ಒಂದು ಹನಿ ರಸವನ್ನು ಹಾಕಿದರೆ ಸಾಕು, ರೋಗ ಇದ್ದರೆ ತಕ್ಷಣ ದೀಪ ಹೊತ್ತಿಕೊಳ್ಳುತ್ತದೆ’ ಎಂದು ಜಿಕೆವಿಕೆ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಅನಿತಾ ಪೀಟರ್‌ “ಉದಯವಾಣಿ’ಗೆ ತಿಳಿಸಿದರು.

Advertisement

“ಜೈವಿಕ ತಂತ್ರಜ್ಞಾನದ ಮೂಲಕ ರೋಗಪತ್ತೆ ಮಾಡುವ ಇಂತಹದ್ದೊಂದು ಪ್ರಯೋಗ ನಡೆದಿರುವುದು ಇದೇ ಮೊದಲು. ಪ್ರಸ್ತುತ ಸಂಶೋಧನಾ ಹಂತದಲ್ಲಿದ್ದು, ಮೂಡಿಗೆರೆಯಲ್ಲಿನ ಪಪ್ಪಾಯಿ ಬೆಳೆಯ ಮಾದರಿಯನ್ನು ತೆಗೆದುಕೊಂಡು ಯಶಸ್ವಿಯಾಗಿ ರೋಗಪತ್ತೆ ಮಾಡಲಾಗಿದೆ. ಇದರ ಮೂಲಮಾದರಿ (ಪ್ರೋಟೊಟೈಪ್‌) ಒಂದೆರಡು ತಿಂಗಳಲ್ಲಿ ಹೊರಬರಲಿದೆ. ನಂತರದ ಕೆಲವು ತಿಂಗಳಲ್ಲಿ ರೈತರ ಜಮೀನುಗಳಿಗೆ ಪ್ರವೇಶಿಸಲಿದೆ’ ಎಂದು ಅವರು ಹೇಳಿದರು.

ರೈತರಿಗೆ ಸಿಗಲಿವೆ ರೋಗಮುಕ್ತ ಸಸಿಗಳು: “ಸಾಮಾನ್ಯವಾಗಿ ಅಂಗಾಂಶ ಕೃಷಿ ಅಥವಾ ನರ್ಸರಿ ಹಂತದಲ್ಲೇ ಸಸಿಗಳನ್ನು ರೈತರು ಪಡೆಯುತ್ತಾರೆ. ಹೀಗೆ ಪಡೆಯುವಾಗಲೇ ರೋಗಪೀಡಿತ ಸಸಿಗಳು ಬಂದು ಬಿಡುತ್ತವೆ. ಗಿಡಗಳು ಬೆಳೆದಂತೆ ವೈರಾಣು ಇಡೀ ತೋಟಕ್ಕೆ ಹರಡುತ್ತದೆ. ಆಗ, ಎಲ್ಲ ಗಿಡಗಳನ್ನು ಅನಿವಾರ್ಯವಾಗಿ ನಾಶ ಮಾಡಬೇಕಾಗುತ್ತದೆ.

ಇದಲ್ಲದೆ, ಕೆಲವೊಮ್ಮೆ ನಂತರದಲ್ಲಿ ವೈರಾಣು ಕಾಣಿಸಿಕೊಂಡು ಗಿಡಗಳನ್ನು ಹಾಳು ಮಾಡುತ್ತದೆ. ಈ ಬಯೋ ಸೆನ್ಸರ್‌ನಿಂದ ಪ್ರಾಥಮಿಕ ಹಂತದಲ್ಲೇ ರೋಗಮುಕ್ತ ಗಿಡಗಳನ್ನು ರೈತರಿಗೆ ನೀಡಬಹುದು. ಅಲ್ಲದೆ, ನಂತರದ ದಿನಗಳಲ್ಲೂ ನಿರ್ದಿಷ್ಟ ಗಿಡಗಳನ್ನು ಪರೀಕ್ಷೆಗೊಳಪಡಿಸಿ, ರೋಗ ಪತ್ತೆ ಹಚ್ಚಬಹುದು’ ಎಂದು ಡಾ.ಅನಿತಾ ಹೇಳಿದರು.

ಪಪ್ಪಾಯಿ ಬೆಳೆಯೇ ಯಾಕೆ?: “ಪಪ್ಪಾಯಿ ಬೆಳೆಯಲ್ಲಿ ಅದರಲ್ಲೂ ಉಂಗುರ ಮಚ್ಚೆ ವೈರಾಣು ಬಾಧೆಯಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಈ ರೋಗ ಒಮ್ಮೆ ಕಾಣಿಸಿಕೊಂಡರೆ ಶೇ.75ರಷ್ಟು ಉತ್ಪಾದನೆ ಖೋತಾ ಆಗುತ್ತದೆ. ರೋಗ ತೀವ್ರವಾಗಿದ್ದರೆ, ನೂರಕ್ಕೆ ನೂರರಷ್ಟು ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಪ್ಪಾಯಿ ಮೇಲೆ ಈ ಪ್ರಯೋಗ ಮಾಡಲಾಯಿತು. ರಾಜ್ಯದಲ್ಲಿ ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಹೆಚ್ಚಾಗಿ ಪಪ್ಪಾಯಿ ಕಂಡು ಬರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಬೆಳೆಗಳು ಮಾತ್ರವಲ್ಲ; ಇದು ಬಯುಪಯೋಗಿ ತಂತ್ರಜ್ಞಾನವಾಗಿದ್ದು, ಕೃಷಿಗೆ ಪೂರಕವಾದ ಪಶುಸಂಗೋಪನೆಯಲ್ಲೂ ಇದನ್ನು ಬಳಸಬಹುದು. ದನಕರುಗಳು ರೋಗಕ್ಕೆ ತುತ್ತಾದಾಗ, ಅದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಲು ಇದರಿಂದ ಸಾಧ್ಯವಿದೆ. ಹಾಗಾಗಿ, ಇದೊಂದು “ಪ್ಲಾಟ್‌ಫಾರಂ ಟೆಕ್ನಾಲಜಿ’ ಎಂಬುದು ವಿಜ್ಞಾನಿಗಳ ವಿಶ್ಲೇಷಣೆ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next