Advertisement

ನೆಲಕಚ್ಚಿದ ಭತ್ತದ ಬೆಳೆ: ಅಪಾರ ಹಾನಿ; ಅಕಾಲಿಕ ಮಳೆ; ರೈತರು ಕಂಗಾಲು

08:29 PM Oct 17, 2021 | Team Udayavani |

ಕಾಪು: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ವಿವಿಧೆಡೆ ಬೆಳೆದು ನಿಂತ ಭತ್ತದ ಪೈರುಗಳು ನೆಲಕಚ್ಚಿವೆ. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಸಂಭವಿಸಿದೆ. ಕೃಷಿಕರು ತಾವು ಕಷ್ಟಪಟ್ಟು ಬೆಳೆಸಿದ ಬೆಳೆಯನ್ನು ಸುರಕ್ಷಿತವಾಗಿ ಮನೆಯೊಳಗೆ ತರಲಾಗದೆ ಕಂಗಾಲಾಗಿದ್ದಾರೆ.

Advertisement

ತಾಲೂಕಿನ ಕಾಪು, ಮಜೂರು, ಕಳತ್ತೂರು, ಮಲ್ಲಾರು, ಬೆಳಪು, ಎಲ್ಲೂರು ಕುಂಜೂರು, ಎರ್ಮಾಳು, ಪಡುಬಿದ್ರಿ ಶಿರ್ವ, ಕಟಪಾಡಿ, ಪಾಂಗಾಳ, ಇನ್ನಂಜೆ, ಪಲಿಮಾರು, ಹೇರೂರು, ಪಾದೂರು ಸಹಿತವಾಗಿ ಹೊಳೆ ಬದಿಯಲ್ಲಿರುವ ಭತ್ತದ ಗದ್ದೆಗಳಲ್ಲಿ ನೀರು ನಿಂತು ಪೈರುಗಳು ನೀರಿನಲ್ಲಿ ತೇಲುತ್ತಿವೆ. ಇದರಿಂದ ಭತ್ತ ಮೊಳಕೆಯೊಡೆಯಲಾರಂಭಿಸಿವೆ.

ಕೆಲವು ಕಡೆಗಳಲ್ಲಿ ರೈತರು ಭತ್ತದ ಕೊಯ್ಲು ನಡೆಸಲು ಕೂಡ ಹಿಂಜರಿ ಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಬಹುತೇಕ ಕಡೆಗಳಿಗೆ ಗ್ರಾಮಕ್ಕೆ ಒಂದು, ಎರಡರಂತೆ ಈಗಾಗಲೇ ಬಾಡಿಗೆ ಕೊಯ್ಲು ಯಂತ್ರಗಳು ಬಂದಿವೆಯಾದರೂ ಅದು ಗದ್ದೆಯಲ್ಲಿ ಓಡಾಡಿದರೆ ಮತ್ತಷ್ಟು ಬೆಳೆ ಹಾನಿಯ ಭೀತಿ ಎದುರಾಗಿದೆ.

3 ದಿನಗಳ ಹಿಂದೆ ಕರಾವಳಿಯಲ್ಲಿ ಸುರಿದ ಮಳೆಯಿಂದ ಹಾಳಾಗಿರುವ ಭತ್ತದ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಹಾನಿಯ ಬಗ್ಗೆ ಅಂದಾಜು ಪಟ್ಟಿ ಮಾಡಿ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಕಳತ್ತೂರು, ಹೆಜಮಾಡಿ, ಮಜೂರು, ಕುಂಜೂರು, ಎಲ್ಲೂರು, ಬೆಳಪು ಸುತ್ತ ಮುತ್ತಲಿನ ಕೃಷಿಕರು ಆಗ್ರಹಿಸಿದ್ದಾರೆ.

ಬೆಂಬಲ ಬೆಲೆ ಘೋಷಿಸಿ,
ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ
ಮಜೂರು, ಹೇರೂರು, ಪಾದೂರು ಸುತ್ತಮುತ್ತ ಕಟಾವು ಹಂತದಲ್ಲಿನ ಭತ್ತದ ಬೆಳೆ ಗಾಳಿ ಮತ್ತು ಧಾರಾಕಾರ ಮಳೆಗೆ ನೆಲ ಕಚ್ಚಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ, ವರದಿ ಸಿದ್ಧಪಡಿಸಿ, ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಸಬೇಕಿದೆ. ಸರಕಾರ ಕೂಡ ಈ ಬಗ್ಗೆ ವಿಶೇಷ ಗಮನಹರಿಸಿ ವಿಶೇಷ ಆರ್ಥಿಕ ಪರಿಹಾರ ನೀಡಲು ಮುಂದಾಗಬೇಕಿದೆ. ಕಟಾವಿಗೆ ಮೊದಲೇ ಭತ್ತಕ್ಕೆ ಬೆಂಬಲ ಬೆಲೆಯನ್ನು ಘೋಷಿಸುವ ಅಗತ್ಯವಿದೆ ಎಂದು ಕೃಷಿಕರಾದ ಪ್ರಭಾವತಿ, ಭಾಸ್ಕರ ಪೂಜಾರಿ ಕರಂದಾಡಿ, ಪುನೀತ್‌ ಕುಮಾರ್‌ ಆಗ್ರಹಿಸಿದ್ದಾರೆ.

Advertisement

ಇದನ್ನೂ ಓದಿ:ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ಕೃಷಿಕರಿಗೆ ಸಂಕಷ್ಟ
ಭತ್ತ ಪೈರು ಬೆಳೆದಿದ್ದು, ಕಟಾವಿನ ಸಮಯದಲ್ಲೇ ಮಳೆ ಬಂದು ಕಟಾವು ನಡೆಸದ ಸ್ಥಿತಿಗೆ ತಲುಪಿದ್ದೇವೆ. ಕೊಯ್ಲು ನಡೆಸದಿದ್ದರೆ ಭತ್ತ ಗದ್ದೆಯಲ್ಲೇ ಬಿದ್ದು ಮೊಳಕೆಯೊಡುವ ಭೀತಿ ಎದುರಾಗಿದೆ. ಮಳೆ ಬಂದು ಗದ್ದೆಯಲ್ಲಿ ನೀರು ನಿಂತ ಪರಿಣಾಮ ಕಟಾವು ಯಂತ್ರಗಳನ್ನು ಗದ್ದೆಗೆ ಇಳಿಸಲಾಗದ ಸ್ಥಿತಿ ಎದುರಾಗಿದೆ. ಆಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ಬೈಹುಲ್ಲು ಕೂಡ ಹಾಳಾಗುವ ಭೀತಿ ಇದೆ. ಇದುವರೆಗೂ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಣೆಯಾಗದ ಪರಿಣಾಮ ಕಟಾವಿನ ಬಳಿಕ ಭತ್ತವನ್ನು ಮಾರುವುದು ಹೇಗೆ ಎಂಬ ಗೊಂದಲವೂ ಇದೆ. ಭತ್ತ ಖರೀದಿದಾರರು ಕೂಡ ಒಣ ಭತ್ತವನ್ನು ಮಾತ್ರ ಸ್ವೀಕರಿಸುತ್ತಿದ್ದು ಭತ್ತದ ಕೃಷಿಕರ ಪಾಡು ಅಯೋಮಯವಾಗಿದೆ.
-ಪ್ರವೀಣ್‌ ಕುಮಾರ್‌ ಗುರ್ಮೆ, ಕೃಷಿಕರು

ಸ್ಥಳ ಸಮೀಕ್ಷೆ
ಅಕಾಲಿಕ ಮಳೆಯಿಂದಾಗಿ ವಿವಿಧೆಡೆ ಭತ್ತದ ಬೆಳೆಗೆ ಹಾನಿಯುಂಟಾಗಿದ್ದು ಹೆಜಮಾಡಿ ಗ್ರಾಮದಲ್ಲಿ ಕೃಷಿಕರ ದೂರಿನ ಹಿನ್ನೆಲೆಯಲ್ಲಿ ಬೆಳೆ ಹಾನಿ ಬಗ್ಗೆ ಸ್ಥಳ ಸಮೀಕ್ಷೆ ನಡೆಸಲಾಗಿದೆ. ಕೃಷಿ, ಕಂದಾಯ ಇಲಾಖೆಯು ಜಂಟಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಅರ್ಜಿ ಸ್ವೀಕಾರ, ವರದಿ ಸಲ್ಲಿಕೆಯ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಭತ್ತದ ಬೆಳೆ ಹಾನಿಗೆ ಎರಡೂವರೆ ಎಕರೆಗೆ 6,800 ರೂ. ಪರಿಹಾರ ವಿತರಿಸಲು ಅವಕಾಶವಿದ್ದು, ಬೆಳೆ ಹಾನಿಯ ಬಗ್ಗೆ ರೈತರು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
-ಪುಷ್ಪಲತಾ, ಕೃಷಿ ಅಧಿಕಾರಿ ಕಾಪು ತಾಲೂಕು

ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಉಡುಪಿ: ಜಿಲ್ಲಾದ್ಯಂತ ರವಿವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ನಗರ ಹಾಗೂ ಗ್ರಾಮೀಣ ಭಾಗದ ವಿವಿಧೆಡೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು.

ಅ.17ರ ಮುಂಜಾನೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ ತಾಲೂಕಿನಲ್ಲಿ 20.4 ಮಿ.ಮೀ., ಬ್ರಹ್ಮಾವರ 14 ಮಿ.ಮೀ., ಕಾಪು 41 ಮಿ.ಮೀ., ಬೈಂದೂರು 2 ಮಿ.ಮೀ., ಕಾರ್ಕಳ 10.9 ಮಿ.ಮೀ., ಹೆಬ್ರಿ 32.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 17.35 ಮಿ.ಮೀ ಮಳೆಯಾಗಿದೆ. ರವಿವಾರ ಬೆಳಗ್ಗೆ 9 ಗಂಟೆಯ ಬಳಿಕ ಭಾರೀ ಮಳೆ ಸುರಿದ ಕಾರಣ ಜನರು ಭಾರೀ ಸಂಕಷ್ಟ ಅನುಭವಿಸಿದರು. ಕೆಲವೆಡೆ ಸಿಡಿಲು, ಮಿಂಚಿನಿಂದ ವಿದ್ಯುತ್‌ ವ್ಯತ್ಯಯವಾಯಿತು. ನಗರ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಕ್ಕೆಲಗಳ ಚರಂಡಿಗಳು ತುಂಬಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next