ಬಾಗಲಕೋಟೆ: ಇಲ್ಲಿನ ಬೀಳಗಿಯ ಕೃಷ್ಣಾ ನದಿಯ ತೀರದಲ್ಲಿ ಭೀಕರ ಬರ ಆವರಿಸಿದ್ದು ಜಲಚರಗಳಾದ ಮೊಸಳೆಗಳು ಕಂಗಾಲಾಗಿ ಹೋಗಿದ್ದು, ಆಹಾರ ನೀರು ಅರಸಿ ಗ್ರಾಮಗಳತ್ತ ನುಗ್ಗುತ್ತಿದ್ದು , ಜನರು ಭಯಭೀತರಾಗಿದ್ದಾರೆ.
ಬುಧವಾರ ಬೀಳಗಿಯಲ್ಲಿರುವ ಹನುಮಂತ ದೇವಾಲಯಕ್ಕೆ ಪೂಜೆಗೆಂದು ತೆರಳಿದ್ದ ಯುವಕನೊಬ್ಬ ದೈತ್ಯಾಕಾರದ ಮೊಸಳೆ ಕಂಡು ದಿಗಿಲಾಗಿದ್ದಾನೆ. ಕೂಡಲೇ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಬರೋಬ್ಬರಿ 12 ಅಡಿ ಉದ್ದ 150 ಕೆ.ಜಿ ತೂಕದ ಮೊಸಳೆಯನ್ನು ಅಲಮಟ್ಟಿ ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ.
ಇನ್ನೊಂದೆಡೆ ಶೆಂಗಾ ಹೊಲದಲ್ಲಿ 8 ಅಡಿ ಉದ್ದದ ಮೊಸಳೆ ಆಹಾರವನ್ನು ಅರಸುತ್ತಿರುವುದು ಪತ್ತೆಯಾಗಿದ್ದು, ಹತ್ತಿರಕ್ಕೆ ಹೋದ ಗ್ರಾಮಸ್ಥರ ಮೇಲೆ ಎರಗಲು ಮುಂದಾಗಿದೆ. ಅದನ್ನು ರಕ್ಷಿಸಲಾಗಿದೆ.
ಈಗಾಗಲೇ ನೀರು ಆಹಾರ ದೊರಕದೆ ಮೂರು ಮೊಸಳೆಗಳು ಸಾವನ್ನಪ್ಪಿದ್ದು, 8 ಕ್ಕೂ ಹೆಚ್ಚು ಮೊಸಳೆಗಳನ್ನು ರಕ್ಷಿಸಲಾಗಿದೆ.
ಕೃಷ್ಣಾ ತೀರದ ಜನರು ಎಚ್ಚರಿಕೆಯಿಂದರಬೇಕು ಎಂದು ಅರಣ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.