Advertisement

Crime News;ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

09:41 PM Feb 26, 2024 | Team Udayavani |

ಪಿಕಪ್‌ ಢಿಕ್ಕಿ: ಹೊಸಂಗಡಿ ರೈಲ್ವೇ ಗೇಟ್‌ಗೆ ಹಾನಿ
ಮಂಜೇಶ್ವರ: ಮರ ಮತ್ತಿತರ ವಸ್ತುಗಳನ್ನು ಸಾಗಿಸುತ್ತಿದ್ದ ಪಿಕಪ್‌ ವಾಹನ ಢಿಕ್ಕಿ ಹೊಡೆದ ಪರಿಣಾಮವಾಗಿ ಹೊಸಂಗಡಿ ರೈಲ್ವೇ ಗೇಟ್‌ ಮುರಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

Advertisement

ಸೋಮವಾರ ಬೆಳಗ್ಗೆ ರೈಲು ಹಾದು ಹೋಗಲು ಗೇಟ್‌ ಮುಚ್ಚುತ್ತಿದ್ದಂತೆ ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಪಿಕಪ್‌ ವಾಹನ ಗೇಟ್‌ಗೆ ಬಡಿಯಿತು. ಇದರಿಂದ ಗೇಟ್‌ ಮುರಿದು ಬಿತ್ತು. ಪರಿಣಾಮವಾಗಿ ಈ ದಾರಿಯಲ್ಲಿ ಸಾಗಬೇಕಾದ ವಾಹನಗಳು ಬೇರೆ ರಸ್ತೆಯಲ್ಲಿ ಸಂಚರಿಸಿದವು. ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರೈಲು ಬೋಗಿಗಳಿಂದ ಹೊದಿಕೆ ಕಳವು: ಬಂಧನ
ಕಾಸರಗೋಡು: ರೈಲುಗಳ ಹವಾನಿಯಂತ್ರಿತ ಬೋಗಿಗಳಿಂದ ಹೊದಿಕೆ ಹಾಗು ದಿಂಬುಗಳನ್ನು ಕದಿಯುತ್ತಿದ್ದ ಆರೋಪದಲ್ಲಿ ಓರ್ವನನ್ನು ರೈಲ್ವೇ ಸಿಬಂದಿ ಬಂಧಿಸಿದ್ದು, ಈತನ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.
ತಿರುವನಂತಪುರ-ಮಂಗಳೂರು ಮಲಬಾರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈತನನ್ನು ಬಂಧಿಸಲಾಗಿದೆ. ಈತ ಬ್ಯಾಗ್‌ಗಳಲ್ಲಿ ತುಂಬಿಸಿದ್ದ ನಾಲ್ಕು ಹೊದಿಕೆ ಹಾಗೂ ಎರಡು ದಿಂಬುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಯಿತು. ಒಂದು ತಿಂಗಳ ಅವಧಿಯಲ್ಲಿ ಐದು ರೈಲುಗಳಿಂದ ಒಟ್ಟು 60 ಹೊದಿಕೆಗಳನ್ನು ಹಾಗು 30ಕ್ಕೂ ಅಧಿಕ ದಿಂಬುಗಳನ್ನು ಕಳವು ಮಾಡಲಾಗಿತ್ತು.

ಪಾನ್‌ ಮಸಾಲ ವಶಕ್ಕೆ
ಉಪ್ಪಳ: ನಿಷೇಧಿತ 116 ಪ್ಯಾಕೆಟ್‌ ಪಾನ್‌ ಮಸಾಲ ಸಹಿತ ವರ್ಕಾಡಿ ಧರ್ಮನಗರ ನಿವಾಸಿ ಉಮ್ಮರ್‌ ಫಾರೂಕ್‌ (39)ನನ್ನು ಮಂಜೇಶ್ವರ ಪೊಲೀಸರು ಮಜಿರ್ಪಳ್ಳದಿಂದ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next