Advertisement

ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಬರ್ಬರ ಹತ್ಯೆ

08:52 PM Oct 30, 2020 | Suhan S |

ಮಂಡ್ಯ: ಹುಡುಗಿಯ ವಿಚಾರಕ್ಕೆ ಜೈಲಿನಿಂದ ಬಿಡುಗಡೆಯಾಗಿ ಬಂದ ದಿನವೇ ಯುವಕನೊಬ್ಬನನ್ನು ದುಷ್ಕರ್ಮಿಗಳು ಲಾಂಗ್ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಗುತ್ತಲು ರಸ್ತೆಯ ಬಸವನಗುಡಿ 4ನೇ ಕ್ರಾಸ್‌ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

Advertisement

ಸ್ವರ್ಣಸಂದ್ರದ ನಿವಾಸಿ ದುಂಡುಮಾದ ಪುತ್ರ ಸುಮಂತ್ ಆಲಿಯಾಸ್ ಕುಳ್ಳಿ (21) ಕೊಲೆಯಾದ ವ್ಯಕ್ತಿ. ಶುಕ್ರವಾರ ಸಂಜೆ ಬಸವನಗುಡಿಯಲ್ಲಿ ಹಾಲು ಹಾಕಲು ಹೋದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಮೃತ ಸುಮಂತ್ ಸ್ವರ್ಣಸಂದ್ರದ ಅನ್ಯ ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದ ಹಲವು ತಿಂಗಳ ಹಿಂದೆ ಹುಡುಗಿಯನ್ನು ಕರೆದುಕೊಂಡು ಬೆಂಗಳೂರಿಗೆ ಪರಾರಿಯಾಗಿದ್ದ. ಆದರೆ ಹುಡುಗಿ ಇನ್ನೂ ಅಪ್ರಾಪ್ತಳಾಗಿದ್ದರಿಂದ ಹುಡುಗಿಯ ಪೋಷಕರು ದೂರು ನೀಡಿದ್ದರು. ಅದರಂತೆ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ಹುಡುಗಿಯನ್ನು ಪೋಷಕರಿಗೆ ಒಪ್ಪಿಸಿದ್ದರು. ಮೃತ ಸುಮಂತ್ ಮೇಲೆ ಈಗಾಗಲೇ ಅಪರಾಧ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಹೆಸರು ರೌಡಿ ಶೀಟರ್ ಪಟ್ಟಿಯಲ್ಲೂ ಇತ್ತು. ಹುಡುಗಿಯ ವಿಚಾರದ ಪ್ರಕರಣದಲ್ಲಿ ಜೈಲಿನಿಂದ ಶುಕ್ರವಾರ ಬಿಡುಗಡೆಯಾಗಿ ಮನೆಗೆ ಬಂದಿದ್ದನು. ಅದೇ ದಿನ ಬರ್ಬರ ಹತ್ಯೆ ಮಾಡಲಾಗಿದೆ. ಹುಡುಗಿಯ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಎಸ್ಪಿ ಕೆ.ಪರಶುರಾಮ, ಡಿವೈಎಸ್ಪಿ ನವೀನ್‌ಕುಮಾರ್, ಸಿಪಿಐ ಸಂತೋಷ್, ಎಸ್‌ಐ ಶರತ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಬಿಟ್ಟು ಹೋದ ಆರೋಪಿಗಳು: ಕೊಲೆ ನಡೆದ ಸ್ಥಳದಲ್ಲಿಯೇ ಆರೋಪಿಗಳು ತಾವು ತಂದಿದ್ದ ಬೈಕ್ ಅನ್ನು ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಪಕ್ಕದ ರಸ್ತೆಯಲ್ಲಿ ಹುಡುಗಿಯೊಬ್ಬಳನ್ನು ಹೆದರಿಸಿ ಆಕೆಯ ಬೈಕ್‌ನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಬೈಕ್ ನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next