Advertisement

Mangaluru: ಮಹಿಳೆಯ ದೇಹ 29 ತುಂಡು ಮಾಡಿದ ಪ್ರಕರಣ; ನಾಳೆ ಶಿಕ್ಷೆ ಪ್ರಕಟ

07:34 PM Sep 21, 2024 | Team Udayavani |

ಮಂಗಳೂರು: ಬೆಂಗಳೂರಿನಲ್ಲಿ ಯುವತಿಯನ್ನು ಕೊಲೆಗೈದು 30 ತುಂಡುಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿಟ್ಟ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ರಾಜ್ಯ ಬೆಚ್ಚಿ ಬಿದ್ದಿದೆ. ಇದೇ ರೀತಿ ಮಹಿಳೆಯೋರ್ವರನ್ನು ಕೊಲೆಗೈದು 29 ತುಂಡುಗಳನ್ನಾಗಿ ಮಾಡಿ ಹಗಲಿಡೀ ಮನೆಯೊಳಗಿಟ್ಟು ರಾತ್ರಿಯಾಗುತ್ತಿದ್ದಂತೆಯೇ ರಸ್ತೆ ಬದಿಯಲ್ಲಿ ಎಸೆದ ಕೃತ್ಯ ಮಂಗಳೂರು ನಗರದಲ್ಲಿ ಸರಿಸುಮಾರು 5 ವರ್ಷಗಳ ಹಿಂದೆ ನಡೆದಿತ್ತು.

Advertisement

ಫ‌ಂಡ್‌ ಹಣದ ವಿಚಾರವಾಗಿ ಶ್ರೀಮತಿ ಶೆಟ್ಟಿ (42) ಅವರನ್ನು ಜೋನಸ್‌ ಸ್ಯಾಮ್ಸನ್‌(40) ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್‌(47) 2019ರ ಮೇ 11ರಂದು ತಮ್ಮ ಮನೆಯಲ್ಲಿಯೇ ಕೊಲೆ ಮಾಡಿದ್ದರು. ಬೆಳಗ್ಗೆ ಮರದ ದೊಣ್ಣೆಯಿಂದ ಹೊಡೆದು ಸ್ಮತಿ ತಪ್ಪಿದ್ದ ಶ್ರೀಮತಿ ಶೆಟ್ಟಿಯವರನ್ನು ಬಚ್ಚಲು ಮನೆಗೆ ಎಳೆದೊಯ್ದು ಕತ್ತಿಯಿಂದ 29 ತುಂಡುಗಳನ್ನಾಗಿ ಮಾಡಿದ್ದರು. ಆ ತುಂಡುಗಳನ್ನು ಮನೆಯಲ್ಲಿಯೇ ರಾತ್ರಿಯವರೆಗೆ ಇಟ್ಟುಕೊಂಡಿದ್ದರು. ರಾತ್ರಿಯಾಗುತ್ತಿದ್ದಂತೆಯೇ  ಜೋನಸ್‌ ಅದನ್ನು ಸ್ಕೂಟರ್‌ನಲ್ಲಿಟ್ಟು ನಗರದ ನಾಲ್ಕಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಟ್ಟು ಹೋಗಿದ್ದ. ಮರುದಿನ ಕದ್ರಿ ಬಳಿ ಪ್ಲಾಸ್ಟಿಕ್‌ ಕವರ್‌ನಲ್ಲಿ ರುಂಡ ಪತ್ತೆಯಾದಾಗ ಪ್ರಕರಣ ಬಯಲಾಗಿತ್ತು. ಈ ಆರೋಪಿಗಳಿಗೆ ಜೋನಸ್‌ನ ಸ್ನೇಹಿತ ರಾಜು ಎಂಬಾತ ಸಹಕರಿಸಿದ್ದ.

ನಾಳೆ ಶಿಕ್ಷೆ ಪ್ರಕಟ:

ವಿಚಾರಣೆ ನಡೆಸಿದ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್‌. ಎಸ್‌. ಅವರು ಆರೋಪಿಗಳ ಮೇಲಿನ ಅಪರಾಧ ಸಾಬೀತಾಗಿದೆ ಎಂದು  ಸೆ.13ರಂದು ತೀರ್ಪು ನೀಡಿದ್ದರು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಸೆ.23ರಂದು ನ್ಯಾಯಾಧೀಶರು ಪ್ರಕಟಿಸಲಿದ್ದಾರೆ. ಈ ಪ್ರಕರಣ ಕೂಡ ರಾಜ್ಯದಾದ್ಯಂತ ತಲ್ಲಣ ಮೂಡಿಸಿತ್ತು. ಹಾಗಾಗಿ ಶಿಕ್ಷೆಯ ಪ್ರಮಾಣದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಕುತೂಹಲವಿದೆ.

Advertisement

Udayavani is now on Telegram. Click here to join our channel and stay updated with the latest news.

Next