Advertisement

ರಾಜಕೀಯ ಮೈದಾನದಲ್ಲಿ ಕ್ರಿಕೆಟಿಗರ ಆಟ

02:50 PM Mar 31, 2019 | Team Udayavani |

ಸಿನಿಮಾ ತಾರೆಯರು, ಕ್ರಿಕೆಟಿಗರು ರಾಜಕೀಯ ಪ್ರವೇಶಿಸುವುದು ಭಾರತದಲ್ಲಿ ಹೊಸತಲ್ಲ. ಈ ಇಬ್ಬರಿಗೆ ಸುಲಭವಾಗಿ ಒಲಿದು ಬರುವ ಜನಪ್ರಿಯತೆಯೇ ಇದಕ್ಕೆ ಕಾರಣ. ಹಣ, ಜಾತಿ ಇನ್ನಿತರ ಅಡೆತಡೆಗಳನ್ನು ಮೀರಿ ಇವರು ಜನರ ಪ್ರೀತಿಗೆ ಕಾರಣವಾಗಿರುತ್ತಾರೆ. ಜನರಿಗೆ ಇವರ ಹಿನ್ನೆಲೆಗಿಂತ ಪ್ರತಿಭೆಯೇ ಮುಖ್ಯವಾಗಿರುತ್ತದೆ. ಹೀಗೆ ನೋಡಿದರೆ ಸಿನಿಮಾ ತಾರೆಯರು ರಾಜಕೀಯಕ್ಕಿಳಿದು ಅದ್ಭುತ ಫ‌ಲಿತಾಂಶ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಎಂಜಿಆರ್‌, ಆಂಧ್ರಪ್ರದೇಶದಲ್ಲಿ ಎನ್‌ಟಿಆರ್‌ ಬಹಳ ಕಾಲ ಮುಖ್ಯಮಂತ್ರಿಯಾಗಿ ಮೆರೆದು ಪ್ರಧಾನಿ ಸ್ಥಾನದ ಮೇಲೂ ಒಮ್ಮೆ ಕಣ್ಣು ಹಾಯಿಸಿದ್ದರು. ಅದೇ ಯಶಸ್ಸು ಭಾರತದಲ್ಲಿ ಕ್ರಿಕೆಟಿಗರಿಗೆ ಸಿಗಲಿಲ್ಲ.

Advertisement

ಇದಕ್ಕೆ ಇನ್ನೊಂದು ಕಾರಣವೂ ಇದೆ, ಕ್ರಿಕೆಟ್‌ನಲ್ಲಿ ಧೃವತಾರೆಗಳೆನಿಸಿಕೊಂಡವರ್ಯಾರೂ ರಾಜಕೀಯಕ್ಕಿಳಿಯಲಿಲ್ಲ. ಭಾರತ ಕ್ರಿಕೆಟ್‌ನಲ್ಲಿ ಬಹಳ ಎತ್ತರಕ್ಕೇರಿದ್ದರೂ, ಮ್ಯಾಚ್‌ಫಿಕ್ಸಿಂಗ್‌ ಕಾರಣಕ್ಕೆ ಎಲ್ಲ ವರ್ಚಸ್ಸನ್ನೂ ಮೊಹಮ್ಮದ್‌ ಅಜರುದ್ದೀನ್‌ ಕಳೆದುಕೊಂಡಿದ್ದರು. ಆದ್ದರಿಂದ ಅವರಿಗೂ ರಾಜಕೀಯ ಪ್ರವೇಶ ಬಹಳ ಮೌಲ್ಯವನ್ನೇನು ತಂದುಕೊಡಲಿಲ್ಲ. ಸುನೀಲ್‌ ಗಾವಸ್ಕರ್‌, ಕಪಿಲ್‌ ದೇವ್‌ ಭಾರತೀಯ ಕ್ರಿಕೆಟ್‌ನ ಶೃಂಗಗಳಾದರೂ ರಾಜಕೀಯದತ್ತ ಸುಳಿಯಲಿಲ್ಲ. ಕ್ರಿಕೆಟ್‌ನಲ್ಲಿನ ಅಸಾಮಾನ್ಯ ಸಾಧನೆಗಾಗಿ ಸಚಿನ್‌ ತೆಂಡುಲ್ಕರ್‌ ಭಾರತ ರತ್ನ ಗಳಿಸಿದರು. ನಿವೃತ್ತಿಯಾದ ನಂತರ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಆದರೂ ಅವರು ಚುನಾವಣಾ ರಾಜಕೀಯದ ಬಗ್ಗೆ ಆಸಕ್ತಿ ತೋರಲಿಲ್ಲ. ಅಷ್ಟು ಮಾತ್ರವಲ್ಲ, ರಾಜ್ಯಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಅವರ ಸಾಧನೆಯಾಗಲೀ, ಪಾಲ್ಗೊಳ್ಳುವಿಕೆಯಾಗಲೀ ಪ್ರಶಂಸೆ ಗಳಿಸಲಿಲ್ಲ, ಬದಲಿಗೆ ಟೀಕೆಗೆ ಕಾರಣವಾಯಿತು.

ಬಂಗಾಳದಲ್ಲಿ ಸೌರವ್‌ ಗಂಗೂಲಿಯನ್ನು ಬಿಜೆಪಿ ಮುಖವನ್ನಾಗಿ ಬಿಂಬಿಸುವ ಯತ್ನ ತೆರೆಮರೆಯಲ್ಲಿ ನಡೆಯಿತು. ಅದಕ್ಕೆ ಗಂಗೂಲಿಯೇ ಮನಸ್ಸು ಮಾಡಲಿಲ್ಲ. ಕ್ರಿಕೆಟಿಗನಾದ ತನಗೆ ರಾಜಕೀಯವಾಗಿ ಅದೇ ಯಶಸ್ಸು ಸಾಧ್ಯವಾಗುತ್ತದೆ, ಎಂಬ ಭರವಸೆ ಅವರಿಗೆ ಬರದಿದ್ದುದೇ ಈ ಹಿಂದೇಟಿನ ಹಿನ್ನೆಲೆ. ಇದು ಬಹಳ ಜಾಣ್ಮೆಯ ನಡೆಯೆಂದು ಹೇಳುವುದೇ ಸರಿ. ಬಂಗಾಳದಲ್ಲಿ ಗಂಗೂಲಿ ಕ್ರಿಕೆಟಿಗನಾಗಿ ಎಷ್ಟೇ ಜನಪ್ರಿಯನಾಗಿದ್ದರೂ, ರಾಜಕೀಯವಾಗಿ ಅದು ಫ‌ಲಿತಾಂಶ ತಂದುಕೊಡುವುದು ಕಷ್ಟ. ಮತ್ತೂಂದು ಕಡೆ ರಾಜಕೀಯದ ಉಸಾಬರಿಯಿಂದ ಮೆತ್ತಿಕೊಳ್ಳುವ ಮಸಿಯನ್ನು ನಿವಾರಿಸಿಕೊಳ್ಳುವುದು ಇನ್ನಷ್ಟು ಕಷ್ಟ.

ಈಗ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ, ಉಳಿದೆಲ್ಲರಂತೆ ಕ್ರಿಕೆಟಿಗರೂ ಪಕ್ಷಗಳನ್ನು ಸೇರುವುದು, ತ್ಯಜಿಸುವುದು ನಡೆದಿದೆ. ಬಿಜೆಪಿಯಲ್ಲಿದ್ದ ಕೀರ್ತಿ ಆಜಾದ್‌, ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಗೌತಮ್‌ ಗಂಭೀರ್‌ ಬಿಜೆಪಿ ಸೇರಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್‌ ಕೂಡ ಬಿಜೆಪಿ ಬೆಂಬಲಿಗರು ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಕ್ರಿಕೆಟಿಗರ ಸಾಧನೆ ಸಣ್ಣ ನೋಟ ಇದು.

ಬಿಜೆಪಿ ಸೇರಿಕೊಂಡ ಗೌತಮ್‌ ಗಂಭೀರ್‌
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, 2011ರ ವಿಶ್ವಕಪ್‌ನಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಗೌತಮ್‌ ಗಂಭೀರ್‌ ಬಿಜೆಪಿ ಸೇರಿಕೊಂಡಿದ್ದಾರೆ. ಪ್ರತಿಭಾವಂತನಾದರೂ ಕ್ರಿಕೆಟ್‌ ಅಂಕಣದಲ್ಲಿ ನಿರೀಕ್ಷಿತ ಸಾಧನೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಕ್ರಿಕೆಟ್‌ ವಲಯದೊಳಗಿದ್ದ ಗುಂಪುಗಾರಿಕೆಯೂ ಇದಕ್ಕೆ ಕಾರಣ ಎಂಬ ವಿಶ್ಲೇಷಣೆಗಳಿವೆ. ಐಪಿಎಲ್‌ ನಾಯಕರಾಗಿ ಬಹಳ ಯಶಸ್ಸು ಸಾಧಿಸಿದ್ದಾರೆ. ದುರ್ಬಲವಾಗಿದ್ದ ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು 2 ಬಾರಿ ಕಿರೀಟ ಗೆಲ್ಲಿಸುವುದರ ಜೊತೆಗೆ, ಹಲವು ಬಾರಿ ಪ್ಲೇಆಫ್ ಹಂತಕ್ಕೂ ಏರಿಸಿದ್ದಾರೆ. ಅವರೀಗ ಬಿಜೆಪಿ ಸೇರಿಕೊಂಡಿದ್ದಾರೆ. ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಇದಕ್ಕಿಂತ ಮುನ್ನವೇ ಅವರ ಹೇಳಿಕೆಗಳು ಅವರನ್ನು ಬಿಜೆಪಿ ಪಕ್ಷದ ಸಾಲಿಗೆ ಸೇರಿಸಿದ್ದವು. ಪುಲ್ವಾಮ ದಾಳಿಯಾದ ನಂತರ ಪಾಕಿಸ್ತಾನದ ಮೇಲೆ ಹರಿಹಾಯ್ದಿದ್ದು, ಅದನ್ನು ಕ್ರಿಕೆಟ್‌ನಿಂದ ಸಂಪೂರ್ಣ ಹೊರಹಾಕಬೇಕೆಂದು ಆಗ್ರಹಿಸಿದ್ದು, ಒಂದೆರಡು ವರ್ಷದ ಹಿಂದೆ ಚತ್ತೀಸ್‌ಗಢದಲ್ಲಿ ಸಿಆರ್‌ಪಿಎಫ್ ಯೋಧರನ್ನು ನಕ್ಸಲರು ಹತ್ಯೆಗೈದಾಗ, ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದಾಗಿ ಘೋಷಿಸಿದ್ದು ಇದಕ್ಕೆ ನಿದರ್ಶನಗಳು. ಅಷ್ಟು ಮಾತ್ರವಲ್ಲ ದೆಹಲಿಯಲ್ಲಿ ಯಾರೂ ಹಸಿದುಕೊಂಡಿರಬಾರದು ಎಂಬ ಕಾರಣಕ್ಕೆ ಉಚಿತವಾಗಿ ಕಡುಬಡವರಿಗೆ ಊಟ ಕೊಡುವ ನಿರ್ಧಾರ ಮಾಡಿದ್ದರಿಂದ ಅವರು ಜನಪ್ರಿಯರಾಗಿದ್ದಾರೆ. ಅವರ ಈ ನಡೆಗಳನ್ನು ನೋಡಿದವರಿಗೆ, ಮುಂದೆ ಅವರು ರಾಜಕೀಯ ಪ್ರವೇಶ ಮಾಡುವ ಸಾಧ್ಯತೆಯಿದೆ ಎಂದು ಅನ್ನಿಸಿದ್ದು ಸಹಜ. ಅದಕ್ಕೆ ಸರಿಯಾಗಿ ಎಲ್ಲವೂ ನಡೆದಿದೆ.

Advertisement

ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ಕೀರ್ತಿ ಆಜಾದ್‌
ಕೀರ್ತಿ ಆಜಾದ್‌, ಭಾರತದ ಪರ 25 ಏಕದಿನ, 7 ಟೆಸ್ಟ್‌ ಆಡಿದ್ದಾರೆ. ಕ್ರಿಕೆಟಿಗನಾಗಿ ಹೆಸರಾಂತ ಸಾಧಕನಲ್ಲ, 1983ರಲ್ಲಿ ಭಾರತ ಗೆದ್ದ ಏಕದಿನ ವಿಶ್ವಕಪ್‌ನಲ್ಲಿ ಇವರ ಅತ್ಯುತ್ತಮ ಆಟ ಹೊರಹೊಮ್ಮಿತು. ನಿವೃತ್ತಿಯ ನಂತರ ತಂದೆಯ ದಾರಿಯನ್ನನುಸರಿಸಿ ರಾಜಕೀಯ ಸೇರಿಕೊಂಡರು. ಬಿಜೆಪಿ ಮೂಲಕ 3 ಬಾರಿ ಸಂಸದರಾಗಿ ಆಯ್ಕೆಯಾದರು. ಪ್ರಸ್ತುತ ಬಿಹಾರದ ದರ್ಬಾಂಗದ ಸಂಸದರು. 2015ರಲ್ಲಿ ಬಿಜೆಪಿ ನಾಯಕ ಅರುಣ್‌ ಜೇಟಿÉಯನ್ನು ಬಹಿರಂಗವಾಗಿಯೇ ವಿರೋಧಿಸಿದರು. ಜೇಟಿÉ ಭ್ರಷ್ಟಾಚಾರಿ ಎನ್ನುವುದು ಅವರ ಮುಖ್ಯ ಆರೋಪ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ ಎಂದು ನೇರವಾಗಿ ನುಡಿದರು. ಪರಿಣಾಮ 2015ರಲ್ಲೇ ಅವರು ಬಿಜೆಪಿಯಿಂದ ಅಮಾನತುಗೊಂಡರು. 2019ರಲ್ಲಿ ಕಾಂಗ್ರೆಸ್‌ ಸೇರಿಕೊಂಡು ಮತ್ತೆ ರಾಜಕೀಯದಾಟ ಮುಂದುವರಿಸುವ ನಿರೀಕ್ಷೆ ಮಾಡಿದ್ದಾರೆ. ರಾಜಕೀಯವಾಗಿಯೂ ಇವರದ್ದು ಹೇಳಿಕೊಳ್ಳುವಂತಹ ಸಾಧನೆಯಲ್ಲ.

ನವಜೋತ್‌ ರಾಜಕೀಯವೂ ಹಾಸ್ಯವಾಯ್ತು
ಖ್ಯಾತ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಪಂಜಾಬ್‌ನವರು. ಇವರು ಆಕ್ರಮಣಕಾರಿ ಬ್ಯಾಟ್ಸ್‌ಮನ್‌, ಹಾಗೆಯೇ ಬಹಳ ತಮಾಷೆಯ ಮಾತುಗಾರ. ವಸ್ತುಸ್ಥಿತಿಯಲ್ಲಿ ಒಬ್ಬ ಕ್ರಿಕೆಟಿಗನಾಗಿರುವುದಕ್ಕಿಂತ ಹಾಸ್ಯಗಾರನಾಗಿಯೇ ಖ್ಯಾತಿವೆತ್ತರು. ಇದೇ ಖ್ಯಾತಿ ಬಳಸಿ ರಾಜಕೀಯ ಸೇರಿಕೊಂಡರು. ಬಿಜೆಪಿಯಿಂದ 2004ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 2014ರಲ್ಲಿ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್‌ ಸಿಗಲಿಲ್ಲ. ಅಲ್ಲಿಂದ ಅವರಿಗೆ ಅಸಮಾಧಾನ ಆರಂಭವಾಯಿತು. 2017ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಸದ್ಯ ಪಂಜಾಬ್‌ನಲ್ಲಿ ಸಚಿವರಾಗಿದ್ದಾರೆ. ಮೈದಾನದಲ್ಲಿ ಉತ್ತಮ ಸಾಧನೆ ಮಾಡಿದ್ದರೂ, ಅದ್ಭುತ ಅನ್ನುವ ಮಟ್ಟಕ್ಕೇರಲಿಲ್ಲ. 1996ರಲ್ಲಿ ಇಂಗ್ಲೆಂಡ್‌ ಪ್ರವಾಸದ ವೇಳೆ, ಭಾರತ ಕ್ರಿಕೆಟ್‌ ತಂಡದ ನಾಯಕ ಅಜರುದ್ದೀನ್‌ ಜೊತೆಗೆ ವಿವಾದ ಮಾಡಿಕೊಂಡು ಭಾರತಕ್ಕೆ ಮರಳಿದರು. ಪುಲ್ವಾಮ ದಾಳಿಯ ನಂತರ, ಇಡೀ ದೇಶದಲ್ಲಿ ಪಾಕಿಸ್ತಾನ ವಿರೋಧಿ ಭಾವನೆಯಿದ್ದರೂ, ಸಿಧು ಮಾತ್ರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪದೇ ಪದೇ ಹೇಳಿದ್ದು ಭಾರೀ ಟೀಕೆಗೆ ಕಾರಣವಾಗಿದೆ.

ಅಜರುದ್ದೀನ್‌ಗೆ ಸೋಲಿನ ಸ್ವಾಗತ
ಭಾರತ ಕ್ರಿಕೆಟ್‌ ಕಂಡ ಅತ್ಯಂತ ಸುಂದರ ಶೈಲಿಯ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಅಜರುದ್ದೀನ್‌, ಮ್ಯಾಚ್‌ಫಿಕ್ಸಿಂಗ್‌ನಿಂದ ಎಲ್ಲ ಗೌರವ ಹಾಳು ಮಾಡಿಕೊಂಡರು. ಅದೊಂದಾಗದಿದ್ದರೆ ಭಾರತೀಯ ಕ್ರಿಕೆಟಿನ ಧೃವತಾರೆಗಳಲ್ಲಿ ಅವರೂ ಒಬ್ಬರಾಗಿರುತ್ತಿದ್ದರು. ಕ್ರಿಕೆಟ್‌ನಲ್ಲಿ ಆಜೀವ ನಿಷೇಧಕ್ಕೊಳಗಾದ ನಂತರ 2009ರಲ್ಲಿ ಕಾಂಗ್ರೆಸ್‌ ಸೇರಿಕೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಿಂದ ಸ್ಪರ್ಧಿಸಿ ಭಾರೀ ಅಂತರದ ಸೋಲು ಕಂಡರು. 2018ರಲ್ಲಿ ಅವರು ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದರು. ರಾಜಕೀಯ ಬದುಕಿನಲ್ಲಿ ಅವರು ಸುಂದರ ದಿನಗಳನ್ನು ಇನ್ನೂ ಕಂಡಿಲ್ಲ.

ಚೇತನ್‌ ಚೌಹಾಣ್‌ ಉ.ಪ್ರ.ದ ಯೋಗಿ ಸಂಪುಟದಲ್ಲಿ ಸಚಿವ
ಉತ್ತರಪ್ರದೇಶದ ಚೇತನ್‌ ಚೌಹಾಣ್‌ ಭಾರತದ ಪರ 40 ಟೆಸ್ಟ್‌, 7 ಏಕದಿನ ಪಂದ್ಯವಾಡಿದ್ದಾರೆ. ಸದ್ಯ ಅವರಿಗೆ 71 ವರ್ಷ. 1991,98ರಲ್ಲಿ ಉತ್ತರಪ್ರದೇಶದ ಅನ್ರೋಹಾದಿಂದ ಲೋಕಸಭೆ ಸ್ಪರ್ಧಿಸಿ ಗೆದ್ದರು. ಮುಂದೆ ಸತತ 3 ಬಾರಿ ಸೋತರು. ಅದಾದ ನಂತರ ಲೋಕಸಭೆ ವ್ಯವಹಾರ ಬಿಟ್ಟು, ವಿಧಾನಸಭೆ ಪ್ರವೇಶಿಸಿದರು. ಸದ್ಯ ಉತ್ತರಪ್ರದೇಶದ ಯೋಗಿ ಆದಿತ್ಯ ನಾಥ್‌ ಸಂಪುಟದಲ್ಲಿ ಸಚಿವರಾಗಿದ್ದಾರೆ. ಜೀವನದ ಮುಸ್ಸಂಜೆಯಲ್ಲಿರುವ ಅವರು ರಾಜಕೀಯವಾಗಿ ಬಹಳ ಸಾಧನೆ ಮಾಡುವ ನಿರೀಕ್ಷೆಯೇನು ಇಲ್ಲ.

ಮೊಹಮ್ಮದ್‌ ಕೈಫ್ಗೂ ದಕ್ಕಲಿಲ್ಲ ಜಯ
ಭಾರತೀಯ ಕ್ರಿಕೆಟ್‌ ಕಂಡ ಸರ್ವಶ್ರೇಷ್ಠ ಕ್ಷೇತ್ರರಕ್ಷಕ ಮೊಹಮ್ಮದ್‌ ಕೈಫ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಬ್ಯಾಟಿಂಗ್‌ನಲ್ಲೂ ಅಸಾಮಾನ್ಯ ಪ್ರತಿಭಾವಂತ. 2000ದಲ್ಲಿ 19 ವಯೋಮಿತಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ. ಸೌರವ್‌ ಗಂಗೂಲಿ ನಾಯಕತ್ವದಲ್ಲಿ, ಇವರ ಕ್ರಿಕೆಟ್‌ ಜೀವನದ ಶ್ರೇಷ್ಠ ಕ್ಷಣಗಳು ದಾಖಲಾದವು. ಇಂಗ್ಲೆಂಡ್‌ನ‌ಲ್ಲಿ 2002ರಲ್ಲಿ ನಡೆದ ನ್ಯಾಟ್‌ವೆಸ್ಟ್‌ ಕ್ರಿಕೆಟ್‌ ಟ್ರೋಫಿಯನ್ನು ಐತಿಹಾಸಿಕವಾಗಿ ಗೆಲ್ಲಲು ಕೈಫ್ ಬ್ಯಾಟಿಂಗ್‌ ನಿರ್ಣಾಯಕವಾಗಿದೆ. ಅದಾದ ಮೇಲೆ ಕ್ರಿಕೆಟ್‌ ಮೈದಾನದಲ್ಲಿ ಬಹಳ ಸಾಧಿಸಲಿಲ್ಲ. ನಿವೃತ್ತಿಯ ನಂತರ ಕಾಂಗ್ರೆಸ್‌ ಸೇರಿಕೊಂಡರು. 2014ರಲ್ಲಿ ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತು ಹೋದರು.

Advertisement

Udayavani is now on Telegram. Click here to join our channel and stay updated with the latest news.

Next