Advertisement

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಯತ್ನಕ್ಕೆ ಸಿಪಿಐಎಂ ಖಂಡನೆ

02:10 PM Jun 03, 2020 | Suhan S |

ಗಜೇಂದ್ರಗಡ: ಕೇಂದ್ರ ಸರ್ಕಾರ ಸಾರ್ವಜನಿಕ ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಿಸಲು, ವಿದ್ಯುತ್ಛಕ್ತಿ ತಿದ್ದುಪಡಿ ಮಸೂದೆ-2020ನ್ನು ದೇಶಾದ್ಯಾಂತ ಜಾರಿಗೆ ತರುವ ತೀವ್ರ ಪ್ರಯತ್ನದಲ್ಲಿರುವುದನ್ನು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್ವಾದಿ) ತೀವ್ರವಾಗಿ ಖಂಡಿಸುತ್ತದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್‌.ಹಡಪದತ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿದ್ಯುತ್‌ ಕ್ಷೇತ್ರ ಸಾಮಾಜಿಕ,ಆರ್ಥಿಕ, ಅಭಿವೃದ್ಧಿಯ ಮಹತ್ವದ ಒಂದು ಸೇವೆ ಎಂಬುದು ಇದುವರೆಗಿನ ನಿಲುವಾಗಿತ್ತು. ಅದರಿಂದ ದೂರ ಸರಿದು, ಅದನ್ನು ಮಾರುಕಟ್ಟೆ ಪ್ರೇರಿತ ಲಾಭದ ಸರಕನ್ನಾಗಿ ಪರಿವರ್ತಿಸುವ ಕ್ರಮ ಅಪಾಯಕಾರಿಯಾಗಿದೆ. ವಿದ್ಯುತ್‌ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದಲ್ಲಿ ರಾಜ್ಯದ ವಿದ್ಯುತ್‌ ಉತ್ಪಾದನೆ, ಸರಬರಾಜು ಹಾಗೂ ವಿತರಣೆಯ ಕಂಪನಿಗಳು ಹಾಗೂ ಅವುಗಳ ಲಕ್ಷಾಂತರ ಕೋಟಿ ಆಸ್ತಿಗಳು ಕಾರ್ಪೋರೇಟ್‌ ಕಂಪನಿಗಳ ಕೈ ವಶವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಗಳ ವ್ಯವಹಾರ ರಾಜ್ಯದ ಎಲ್ಲ ಗ್ರಾಹಕರ ಬಹುದೊಡ್ಡ ಲೂಟಿಗೆ ಕಾರಣವಾಗಲಿದೆ. ಹೀಗಾಗಿ, ಇದರಿಂದ ರಾಜ್ಯದ ಶೇ 90ಕ್ಕೂ ಅಧಿಕ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ ಗಹನವಾಗಿ ಕುಸಿಯಲಿದೆ. ಇದರಿಂದ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಮತ್ತಷ್ಟು ಪೆಟ್ಟು ಬೀಳಲಿದೆ. ರಾಜ್ಯದ ಅಭಿವೃದ್ಧಿಗೆ ಸಾರ್ವಜನಿಕ ರಂಗದ ಈ ವಿದ್ಯುತ್‌ ವಲಯದ ಕೊಡುಗೆ ಅಪಾರವಾಗಿದೆ.

ಆದ್ದರಿಂದ, ಕೃಷಿ ಹಾಗೂ ಕೈಗಾರಿಕಾ ರಂಗದ ಬೆಳವಣಿಗೆ ದೃಷ್ಟಿಯಿಂದ, ಜನವಿರೋಧಿ ಮಸೂದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬಾರದು. ಜೊತೆಗೆ ಕೇಂದ್ರ ಸರ್ಕಾರ ಕಾರ್ಪೋರೇಟ್‌ ಕಂಪನಿಗಳ ಪರವಾದ ಮಸೂದೆಯನ್ನು ಕೈ ಬಿಟ್ಟು ಬಡವ, ಕೃಷಿ ಕೂಲಿಕಾರರ ಪರವಾದ ನೀತಿಗಳನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next