Advertisement

ಸ್ಮಶಾನದ ಗುಂಡಿಗೆ ಇಳಿದು ಶವದ ಗಂಟಲಿನಿಂದಲೇ ಮಾದರಿ ಸಂಗ್ರಹಿಸಿದ ಗಟ್ಟಿಗಿತ್ತಿ

09:37 AM May 13, 2020 | Hari Prasad |

ಹಾವೇರಿ: ಹೌದು, ಇದು ನಂಬಲು ಕಷ್ಟವಾದರೂ ನಂಬಲೇ ಬೇಕಾದ ಸುದ್ದಿ! ಕೋವಿಡ್ ಯೋಧೆ, ಲ್ಯಾಬ್ ಟೆಕ್ನಿಷಿಯನ್ ಒಬ್ಬರು ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯನ್ನು ಹೂಳಲು ಸಿದ್ಧಗೊಳಿಸಿದ್ದ ಸ್ಮಶಾನದ ಗುಂಡಿಗೇ ಇಳಿದು ಆ ಹೆಣದ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ತಾನೆಂಥಹ ಗಟ್ಟಿಗಿತ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

Advertisement

ಈ ರೀತಿಯ ಅಪರೂಪದ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹಿಋಮುಗದೂರ ಗ್ರಾಮದಲ್ಲಿ. ಮತ್ತು ಶೋಭಾ ಎಂಬ ಹೆಣ್ಣುಮಗಳೇ, ಈ ರೀತಿಯಾಗಿ ಶವದ ಗಂಟಲಿನಿಂದ ಮಾದರಿ ಸಂಗ್ರಹಿಸಿದ ಗಟ್ಟಿಗಿತ್ತಿ ಮಹಿಳಾ ಲ್ಯಾಬ್ ಟೆಕ್ನೀಶಿಯನ್ ಆಗಿದ್ದಾರೆ.

ಅಷ್ಟಕ್ಕೂ ಶೋಭಾ ಅವರು ಶೂಶ್ರೂಷಕಿಯೂ ಅಲ್ಲ. ಆರೋಗ್ಯ ಕಾರ್ಯಕರ್ತೆಯೂ ಅಲ್ಲ. ಸವಣೂರು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಶಿಯನ್.

ಹಿರೇಮುಗದೂರು ಗ್ರಾಮದಲ್ಲಿ ಸೋಮವಾರ 70ವರ್ಷದ ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಕುಟುಂಬದವರು ಮಂಗಳವಾರ ಶವವನ್ನು ಸ್ಮಶಾನಕ್ಕೆ ಒಯ್ದು, ಹೊಂಡ ತೆಗೆದು ಹೆಣವನ್ನು ಮಣ್ಣು ಮಾಡುವುದೊಂದೇ ಬಾಕಿ ಇತ್ತು.

ಈ ನಡುವೆ ವೃದ್ಧ ಮೃತಪಟ್ಟಿರುವ ಮಾಹಿತಿ ಸ್ಥಳೀಯ ಆಡಳಿತಕ್ಕೆ ಹಾಗೂ ಕೋವಿಡ್ ವೈದ್ಯರ ತಂಡಕ್ಕೆ ತಡವಾಗಿ ತಿಳಿದುಬಂತು. ಹಾಗಾಗಿ ಕೋವಿಡ್ ಯೋಧೆಯಾಗಿರುವ ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರು ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಲು ನೇರವಾಗಿ ಸ್ಮಶಾನಕ್ಕೇ ಬಂದರು.

Advertisement

ಪಿಪಿಇ ಕಿಟ್ ಹಾಕಿಕೊಂಡು ಹಾಗೂ ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಬಂದಿದ್ದ ಶೋಭಾ ಅವರು ಯಾವುದೇ ಅಳುಕಿಲ್ಲದೆ ಧೈರ್ಯದಿಂದಲೇ ಶವವನ್ನು ಇರಿಸಲಾಗಿದ್ದ ಹೊಂಡದಲ್ಲಿ ಇಳಿದು ಶವದ ಗಂಟಲು ದ್ರವ ಸಂಗ್ರಹಿಸಿಕೊಂಡು ಹೋದರು.

ಇತ್ತೀಚೆಗೆ ಸವಣೂರಿನಲ್ಲಿ ಎರಡು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆ ಸೋಂಕಿತರಿಗೆ ತಪಾಸಣೆ ಮಾಡಿದ್ದ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿ ಇದೀಗ ಕ್ವಾರೆಂಟೈನ್ ನಲ್ಲಿದ್ದಾರೆ.

ಕೋವಿಡ್ ಪಾಸಿಟಿವ್ ಕಂಡು ಬಂದ ಪ್ರದೇಶದಲ್ಲಿ ಯಾರೇ ಮೃತಪಟ್ಟರೂ ಅವರ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲೇ ಬೇಕು. ಹೀಗಾಗಿ ಶೋಭಾ ಅವರೇ ಈ ಸಾಹಸಕ್ಕಿಳಿದು ಗಂಟಲು ಮಾದರಿ ಸಂಗ್ರಹಿಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next