Advertisement

ಸಹಾಯ ಹಸ್ತ ಚಾಚಿದವರು ಕಾಳಜಿ ತೋರಲು ಸಕಾಲ

02:31 AM Mar 21, 2021 | Team Udayavani |

ಕೋವಿಡ್ ಕಳೆದ ವರ್ಷ ನಮ್ಮನ್ನೆಲ್ಲ ಕಂಗೆಡಿಸಿದಾಗ ಪ್ರತಿಯೊಂದು ಊರು, ಗ್ರಾಮಗಳ ಸಂಘ-ಸಂಸ್ಥೆಗಳು ಚಾಚಿದ ಸಹಾಯಹಸ್ತ ಇನ್ನೂ ಹಸಿರಾಗಿದೆ. ಆಗ ನಿಜವಾದ ಮಾನವೀಯತೆಯ ದರ್ಶನವಾಗಿತ್ತು;  ಸಂಘ ಸಂಸ್ಥೆಗಳ ಅಗತ್ಯ ಮನವರಿಕೆಯಾಗಿತ್ತು.

Advertisement

ಈಗ ಅದೇ ಸಂಘಸಂಸ್ಥೆಗಳು ಇನ್ನಷ್ಟು ಹೆಚ್ಚು ಜವಾಬ್ದಾರಿ, ಕಾಳಜಿಯನ್ನು ತೋರಿಸಬೇಕಾಗಿದೆ. ಕೋವಿಡ್ ಆರಂಭದ ದಿನದಲ್ಲಿ ಧೈರ್ಯ, ಸಾಂತ್ವನ ಹೇಳಿದ್ದ ಇವುಗಳು ಈಗ ಲಸಿಕೆ  ಅಗತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ತಮ್ಮ ವ್ಯಾಪ್ತಿಯಿಂದ ಗರಿಷ್ಠ ಸಂಖ್ಯೆಯ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿ ತಮ್ಮ  ಸದಸ್ಯರ ಒಂದು ಗುಂಪು ಮಾಡಿಕೊಂಡು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಣೆ ಮಾಡುವುದು ಹಾಗೂ ಲಸಿಕೆ ಸಿಗುವ ಸ್ಥಳಗಳ ಬಗ್ಗೆ ಮಾಹಿತಿ ಮಾಡುವುದು ಅತಿ ಮುಖ್ಯವಾಗಿದೆ. ಅದರ ಪರಿಣಾಮವಾಗಿ ಮುಂದೆ ಕೊರೊನಾ ವಿರುದ್ಧ ದೊಡ್ಡ ಹೋರಾಟ ಮಾಡಿ ಗೆದ್ದ ಖುಷಿಯನ್ನು ಅನುಭವಿಸುವ ಅವಕಾಶ ನಮ್ಮ ಪಾಲಿಗೆ ಒದಗಿ ಬರಲಿದೆ.  ಆದ್ದರಿಂದ ಪ್ರತಿಯೊಂದು ಊರಿನ ಸಂಘ ಸಂಸ್ಥೆಗಳು, ಯುವಕ – ಯುವತಿ ಮಂಡಲಗಳು ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಬೇಕಿದೆ. ಇದಕ್ಕಾಗಿ ಈಗ ನೀಡುವ ಸಮಯವು ಮುಂದಿನ ದಿನಗಳಲ್ಲಿ ಸಮಾಜದ ಆರೋಗ್ಯದ ಮೂಲಕ ದೊಡ್ಡ ಪ್ರತಿಫ‌ಲ ನೀಡಲಿದೆ.  ಅಂದು ಸಹಾಯಹಸ್ತ – ಇಂದು ಕೊರೊನಾಮುಕ್ತ  ಸಮಾಜ ನಮ್ಮ ಧ್ಯೇಯವಾಗಲಿ.

ಲಸಿಕೆ ಹಾಕಿಸಿಕೊಳ್ಳೋಣ  ಕೋವಿಡ್ ಸೋಲಿಸೋಣ :

ನಾನು  ಮಾ. 10ರಂದು ಕೋವಿಡ್‌ ನಿರೋಧಕ ಲಸಿಕೆ ಪಡೆದಿದ್ದೇನೆ.  ಬಳಿಕ 30 ನಿಮಿಷ ವಿಶ್ರಾಂತಿ ಪಡೆದು ಯಾವುದೇ ಸಮಸ್ಯೆ ಇಲ್ಲದೆ  ನಿವಾಸಕ್ಕೆ ಹಿಂದಿರುಗಿದ್ದೇನೆ. ಧರ್ಮಾಧ್ಯಕ್ಷನಾಗಿ ನಾನು ಹೇಳುವುದೇನೆಂದರೆ, ಲಸಿಕೆ ಯನ್ನು ಹಿರಿಯರು ಸಹಿತ ಎಲ್ಲರೂ ಪಡೆದು ಕೋವಿಡ್‌ ಮುಕ್ತ ಸಮಾಜ ನಿರ್ಮಾಣಕ್ಕೆ  ಕೈಜೋಡಿಸಬೇಕು. -ರೈ| ರೆ| ಲಾರೆನ್ಸ್‌ ಮುಕ್ಕುಯಿ ಧರ್ಮಾಧ್ಯಕ್ಷರು, ಬೆಳ್ತಂಗಡಿ ಧರ್ಮಪ್ರಾಂತ

ಶರೀರದ ಶಕ್ತಿಯನ್ನು ಹೆಚ್ಚಿಸುವ ಕೊರೊನಾ ಲಸಿಕೆ ಸ್ವೀಕಾರ ಎಲ್ಲ ರೀತಿಯಿಂದಲೂ ಉತ್ತಮ.  ದೇಶಕ್ಕೆ ಚೀನದವರು ನುಗ್ಗಿದರೆ ನಮ್ಮ ಸೈನಿಕರು ಹೇಗೆ ಅವರ ವಿರುದ್ಧ ಹೋರಾಡು ತ್ತಾರೋ ಅದೇ ರೀತಿ ದೇಹಕ್ಕೆ  ವೈರಾಣು ಪ್ರವೇಶಿಸಿದರೆ ಲಸಿಕೆ  ವಿರುದ್ಧ ಹೋರಾ ಡುತ್ತದೆ. ನಾನು ಲಸಿಕೆ ಹಾಕಿಕೊಂಡಿದ್ದು, ಎಲ್ಲರೂ ಲಸಿಕೆ ಸ್ವೀಕರಿಸಬೇಕು. ಇದರಿಂದ ಯಾವುದೇ ತೊಂದರೆಗಳಿಲ್ಲ. -ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಆರ್‌ಎಸ್‌ಎಸ್‌ ಮುಂದಾಳು

Advertisement

“ಲಸಿಕೆಯೇ ಶ್ರೀ ರಕ್ಷೆ’ ಅಭಿಯಾನಕ್ಕೆ ಓದುಗರಿಂದ ಉತ್ತಮ ಸ್ಪಂದನೆ ಮುಂದುವರಿದಿದ್ದು, ಹೊಸ ಹೊಸ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅವುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಆರ್‌ಸಿಎಚ್‌ ಅಧಿಕಾರಿ ಡಾ| ರಾಜೇಶ್‌ ಅವರು ಉತ್ತರಿಸಿದ್ದಾರೆ.

ಲಸಿಕೆ ಪಡೆದ ಬಳಿಕ ಗರ್ಭಧಾರಣೆಗೆ ಸಮಸ್ಯೆ ಇದೆಯೇ?  -ಶ್ಯಾಮಲಾ, ಊರು ಬೇಡ

ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಅನ್ನು  ಪಡೆದು ಮೂರು ತಿಂಗಳು ಗರ್ಭಧಾರಣೆ ಮಾಡುವಂತಿಲ್ಲ.

28 ವರ್ಷದ ನನ್ನ ತಂಗಿಗೆ ಅಲರ್ಜಿ ಸಮಸ್ಯೆಯಿದೆ.  ಲಸಿಕೆ ಪಡೆಯಬಹುದೇ?  -ಕವಿತಾ, ಮಂಗಳೂರು

ಅಲರ್ಜಿ ಸಮಸ್ಯೆ ಇರುವವರು ಲಸಿಕೆ ಪಡೆಯಬಹುದು. ಆದರೆ, ನಿಯಮಾವಳಿಯಂತೆ 28 ವರ್ಷದವರಿಗೆ ಸದ್ಯ ಲಸಿಕೆ ಪಡೆಯಲು ಅವಕಾಶ ಇಲ್ಲ. .

ಧೂಳಿನ  ಅಲರ್ಜಿ ಇರುವವರು ಲಸಿಕೆ ತೆಗೆದು ಕೊಳ್ಳಬಹುದೇ? – ಶಕುಂತಳಾ, ಹೆರಾಡಿ

ಲಸಿಕೆ ಪಡೆಯಲು ಅರ್ಹತೆ ಇರುವರು ಅಲರ್ಜಿ ಇದ್ದರೂ ಲಸಿಕೆ ಪಡೆಯಬಹುದು. ಆದರೆ, ಧೂಳಿನ ಕೆಲಸದ ವೇಳೆ ಅಗತ್ಯವಾಗಿ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಿ.

ನನ್ನ ಗಂಡ ಪ್ರತೀ ದಿನ ಮದ್ಯ ಸೇವಿಸುತ್ತಾರೆ. ಲಸಿಕೆ ಪಡೆದ ಬಳಿಕ ಮದ್ಯ ಸೇವಿಸಬಹುದೇ?-ಅನಾಮಿಕ

ಲಸಿಕೆ ಪಡೆಯುವುದಕ್ಕೂ, ಮದ್ಯಪಾನ ಸೇವನೆಗೂ ಯಾವುದೇ ಸಂಬಂಧವಿಲ್ಲ. ಆದರೆ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ.

ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ವಯೋಮಾನದ ನಿರ್ಬಂಧ ಇದೆಯೇ? -ರಾಮಕೃಷ್ಣ, ಮೂಲ್ಕಿ

ಸದ್ಯ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯ ಕರ್ತರು, 45ರಿಂದ 60 ವರ್ಷದೊಳಗಿನ ರೋಗಿಗಳು ಮತ್ತು 60 ವರ್ಷ ಮೇಲ್ಪಟ್ಟವರು ಮಾತ್ರ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಪಡೆಯಬಹುದು..

ಜ್ವರ ಇದ್ದಾಗ ಲಸಿಕೆ ಪಡೆಯಬಹುದೇ?-ರಾಮ,  ಕಾರ್ಕಳ

ಜ್ವರ ಇದ್ದಾಗ ಲಸಿಕೆ  ಬೇಡ. ಆ ಜ್ವರ ಕೋವಿಡ್ ಆಗಿರಬಹುದು. ಜ್ವರದಿಂದ ಗುಣಮುಖರಾದ ಬಳಿಕ ಲಸಿಕೆ ಪಡೆಯುವುದು ಸೂಕ್ತ.

ಸಹಾಯವಾಣಿ  ಉಡುಪಿ ಜಿಲ್ಲೆ -9663957222/9663950222

ಟೋಲ್‌ಫ್ರೀ ಸಹಾಯವಾಣಿ  ಸಂಖ್ಯೆ-1077

ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ನಿಮಗೇನಾದರೂ ಸಂದೇಹ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸ್‌ಆ್ಯಪ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next