Advertisement

ಲಸಿಕೆ ಕುರಿತ ಗಾಳಿಸುದ್ದಿಗಳಿಗೆ ಕೇಂದ್ರ ಗುದ್ದು

01:46 AM Jan 16, 2021 | Team Udayavani |

ಹೊಸದಿಲ್ಲಿ: ಶತಕೋಟಿ ಭಾರತೀಯರು ನಿರೀಕ್ಷಿಸುತ್ತಿದ್ದ ಶುಭದಿನ ಕೊನೆಗೂ ಎದುರು ನಿಂತಿದೆ. ಕೋವಿಡ್ ಸಂಹಾರಕ್ಕೆ “ಸಂಜೀವಿನಿ’ ವಿತರಣೆಗೆ ಕ್ಷಣಗಣನೆ ಶುರುವಾಗಿದೆ. ಏತನ್ಮಧ್ಯೆ, ಲಸಿಕೆಯಿಂದ ಯಾವುದೇ ದೈಹಿಕ ಅಪಾಯಗಳಿಲ್ಲ ಎನ್ನುವ ಮೂಲಕ ಆರೋಗ್ಯ ಸಚಿವ ಹರ್ಷವರ್ಧನ್‌, ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

Advertisement

“ಕೋವಿಡ್ ಲಸಿಕೆಯಿಂದ ಬಂಜೆತನ ಕಾಡುತ್ತದೆ’ - ಮುಂತಾದ ಗಾಳಿಸುದ್ದಿಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಸಚಿವರು ಟ್ವಿಟರಿನಲ್ಲಿ ಮಾಡಿದ್ದಾರೆ. ” ಕೋವಿಡ್ ಲಸಿಕೆಯಿಂದ ಮಹಿಳೆಗಾಗಲೀ, ಪುರುಷನಿಗಾಗಲಿ ಬಂಜೆತನ ಬರುತ್ತದೆ ಎನ್ನುವುದರಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇಂಥ ಗಾಳಿಸುದ್ದಿಗಳಿಗೆ ಯಾರೂ ಕಿವಿಗೊಡಬಾರದು’ ಎಂದು ತಿಳಿ ಹೇಳಿದ್ದಾರೆ.

ಗಂಭೀರ ಸೈಡ್‌ಎಫೆಕ್ಟ್ಗಳಿಲ್ಲ: “ಇಂಜೆಕ್ಷನ್‌ ಪಡೆದಾಗ ಕೆಲವೇ ಕೆಲವರಿಗೆ ಸಣ್ಣಜ್ವರ, ಭುಜದಲ್ಲಿ ನೋವು, ತಲೆನೋವು, ಆಯಾಸ, ಸಣ್ಣಪುಟ್ಟ ಅಸ್ವಸ್ಥತೆ, ವಾಕರಿಕೆ ಕಾಣಿಸಿಕೊಳ್ಳಬಹುದಷ್ಟೇ. ಈ ಅಡ್ಡಪರಿಣಾಮಗಳು ಕೇವಲ ತಾತ್ಕಾಲಿಕ. ಕೆಲವೇ ಸಮಯದಲ್ಲಿ ಇವು ದೂರವಾಗುತ್ತವೆ. ಕೊರೊನಾದ ಮುಂದೆ ಈ ಪುಟ್ಟ ಸಮಸ್ಯೆಗಳು ಏನೂ ಅಲ್ಲ’ ಎಂದು ಧೈರ್ಯ ತುಂಬಿದ್ದಾರೆ.

ಲಸಿಕೆಗೆ “ಸೂಪರ್‌’ ಶಕ್ತಿ!: ಇದರ ಬೆನ್ನಲ್ಲೇ, ವಿಜ್ಞಾನಿಗಳು ಶೋಧಿಸಿರುವ ಲಸಿಕೆ ಕೊರೊನಾವಲ್ಲದೆ, ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವಂಥ ವೈರಾಣುಗಳನ್ನೂ ನಿಯಂತ್ರಿಸುವಷ್ಟು ಶಕ್ತಿಶಾಲಿ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾ ತಜ್ಞರ ಈ ಸಂಶೋಧನೆ “ಜರ್ನಲ್‌ ಸೈನ್ಸ್‌’ನಲ್ಲಿ ಪ್ರಕಟವಾಗಿದೆ. “ಲಸಿಕೆಯನ್ನು 60 ತದ್ರೂಪಿ ಪ್ರೊಟೀನ್‌ಗಳಿಂದ ತಯಾರಿಸಲಾಗಿದ್ದು, ಪ್ರತಿಯೊಂದು ಸಣ್ಣ ಪ್ರೊಟೀನ್‌ಗಳೂ ಪ್ರತಿರೋಧಕ ರಕ್ಷಣೆ ಒದಗಿಸುತ್ತವೆ’ ಎಂದಿದೆ.

ಸಕ್ರಿಯ ಪ್ರಕರಣ ಇಳಿಕೆ : ಏತನ್ಮಧೆ  ದೇಶದಲ್ಲಿ ಲಸಿಕೆ ನೀಡಿಕೆ ಶುರುವಾಗುತ್ತಿರುವಂತೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ 2.13 ಲಕ್ಷಕ್ಕೆ ಇಳಿಕೆಯಾಗಿದೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ  15,590 ಮಂದಿಗೆ ಸೋಂಕು ದೃಢಪಟ್ಟಿದೆ.  191 ಮಂದಿ ಸಾವನ್ನಪ್ಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next