Advertisement

ಕೋವಿಡ್ ಎರಡನೇ ಅಲೆ ಆತಂಕ: ಅಸಡ್ಡೆ ಬೇಡ

02:05 AM Feb 22, 2021 | Team Udayavani |

ನೆರೆಯ ಕೇರಳ ಮತ್ತು ಮಹಾರಾಷ್ಟ್ರ ಸಹಿತ ದೇಶದ 5 ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚತೊಡಗಿದ್ದು ಈ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕೊರೊನಾ 2ನೇ ಅಲೆಯ ಆತಂಕ ಸೃಷ್ಟಿ ಯಾಗಿದೆ. ಕೆಲವು ತಿಂಗಳುಗಳಿಂದೀಚೆಗೆ ಸೋಂಕಿತರ ಪ್ರಮಾಣ ದಿನೇ ದಿನೆ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಯತ್ತ ಮರಳತೊಡಗಿತ್ತು. ಇದರಿಂದಾಗಿ ಎಲ್ಲ ವಲಯಗಳೂ ಮರಳಿ ಸಕ್ರಿಯವಾಗಿದ್ದವು.

Advertisement

ದೇಶದ ಹಲವೆಡೆ ದ್ವಿತೀಯ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಕ್ರಿಯೆಯೂ ಆರಂಭಗೊಂಡಿರುವುದರಿಂದ ಜನರೂ ನೆಮ್ಮದಿಯ ನಿಟ್ಟುಸಿರು ಬಿಡತೊಡಗಿದ್ದರು. ಆದರೆ ಇದೀಗ ಏಕಾಏಕಿ ಕೊರೊನಾ ಸೋಂಕು ಮತ್ತೆ ಉಲ್ಬಣವಾಗತೊಡಗಿದ್ದು ಜನತೆಯನ್ನು ಮತ್ತೆ ಗೊಂದಲದ ಮಡುವಿಗೆ ದೂಡಿದೆ.

ಕೋವಿಡ್‌ ಲಸಿಕೆ ಇನ್ನೂ ಜನಸಮಾನ್ಯರನ್ನು ತಲುಪಿಲ್ಲ. ಮಾತ್ರವಲ್ಲದೆ ಇದು ಕೊರೊನಾಗೆ ಲಸಿಕೆಯಲ್ಲ ಇದು ಕೊರೊನಾ ಸೋಂಕಿಗೆ ಪ್ರತಿಕಾಯಗಳನ್ನಷ್ಟೇ ಸೃಷ್ಟಿಸುತ್ತದೆ. ಅಲ್ಲದೆ ಈ ರೋಗನಿರೋಧಕ ಶಕ್ತಿಯ ಸಕ್ರಿಯ ಅವಧಿಯ ಬಗೆಗೂ ಇನ್ನೂ ಸ್ಪಷ್ಟತೆ ಇಲ್ಲ. ಈ ಸಂದರ್ಭದಲ್ಲಿಯೇ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ದಿಢೀರನೆ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿರುವುದು ಆ ರಾಜ್ಯಗಳನ್ನು ಮಾತ್ರವಲ್ಲದೆ ದೇಶಾದ್ಯಂತ ಭೀತಿ ಮೂಡಿಸಿದೆ.

ಐದು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ. ಸುರಕ್ಷ ಕ್ರಮಗಳನ್ನು ನಿರ್ಲಕ್ಷಿಸಿದರೆ ಮತ್ತೆ ಅಪಾಯ ಎದುರಾಗಲಿದೆ. ಈ ವಿಚಾದರ‌ಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ತನ್ನ ನಿರ್ದೇಶದಲ್ಲಿ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ರಾಜ್ಯ ಸರಕಾರವೂ ಹಾಲಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸಂಭಾವ್ಯ ಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಸದ್ಯ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿಲ್ಲವಾದರೂ ಈ ಸಾಧ್ಯತೆಗ ‌ಳನ್ನು ಮತ್ತು ಎರಡನೇ ಅಲೆಯ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಸ್ವತಃ ಆರೋಗ್ಯ ಸಚಿವರೇ ಹೇಳಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಲೇಬೇಕಿದೆ. ಕಳೆದ ವರ್ಷವಿಡೀ ಸೋಂಕಿನಿಂದಾಗಿ ಕಂಗಾಲಾಗಿದ್ದ ಜನತೆ ಇದರಿಂದ ಪಾಠ ಕಲಿಯದೆ ನಿರ್ಲಕ್ಷ್ಯ ವಹಿಸಿದರೆ ಮತ್ತೆ ಅಪಾಯವನ್ನು ತಾವೇ ಮೈಮೇಲೆ ಎಳೆದುಕೊಂಡಂತಾಗಲಿದೆ. ಈ ನಡುವೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು ಇದು ಸೋಂಕಿನ ಪ್ರಸರಣಕ್ಕೆ ಸಹಕಾರಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಜನರು ಸ್ವತ್ಛತೆ, ಸಾಮಾಜಿಕ ಅಂತರವನ್ನು ಮರೆತದ್ದೇ ಆದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳೂ ಆರಂಭಗೊಂಡಿದ್ದು ಸರಕಾರದ ಸುರಕ್ಷ ಮಾರ್ಗಸೂಚಿಯನ್ನು ಎಲ್ಲ ಮಕ್ಕಳು, ಅವರ ಹೆತ್ತವರು, ಶಿಕ್ಷಕರು ಮತ್ತು ಶಾಲಾಡಳಿತ ಮಂಡಳಿಗಳು ಕಡ್ಡಾಯವಾಗಿ ಪಾಲಿಸಬೇಕಿದೆ. ಅಷ್ಟು ಮಾತ್ರವಲ್ಲದೆ ಜನಜೀವನವೂ ಸಹಜಸ್ಥಿತಿಗೆ ಮರಳಿರುವುದರಿಂದ ಸಾರಿಗೆ ವಾಹನಗಳು, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆ ಮತ್ತು ಧಾರ್ಮಿಕ ಸಮಾರಂಭ, ಶುಭ ಕಾರ್ಯಕ್ರಮಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರತೊಡಗಿದ್ದಾರೆ. ಈ ಬಗ್ಗೆಯೂ ಜನರು ಎಚ್ಚರಿಕೆ ವಹಿಸುವುದು ಸೂಕ್ತ.

Advertisement
Advertisement

Udayavani is now on Telegram. Click here to join our channel and stay updated with the latest news.

Next