Advertisement

ವಿಟ್ಲ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ಗೆ ಕೋವಿಡ್ ಪಾಸಿಟಿವ್‌: 20 ಮಂದಿಗೆ ಕ್ವಾರಂಟೈನ್‌

06:58 AM May 25, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕೋವಿಡ್ ವಾರಿಯರ್ಗೂ ಸೋಂಕು ತಗಲಿದೆ. ವಿಟ್ಲ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ಗೆ ರವಿವಾರದಂದು ಕೋವಿಡ್ ಪಾಸಿಟಿವ್‌ ದೃಢವಾಗಿದ್ದು, ಅವರಿಗೆ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಮೇ 14ರಂದು ಮಹಾರಾಷ್ಟ್ರದ ರಾಯಗಢದಿಂದ ಬಂದಿದ್ದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ವ್ಯಕ್ತಿ ಸಂಪರ್ಕದಿಂದ 42 ವರ್ಷದ ಹೆಡ್‌ ಕಾನ್‌ಸ್ಟೆಬಲ್‌ಗೆ ಸೋಂಕು ತಗಲಿದೆ. ಸೋಂಕಿತ ಕ್ವಾರಂಟೈನ್‌ಗೆ ಒಳಗಾಗುವ ಮುನ್ನ ದಾಖಲೆ ಪತ್ರವೊಂದನ್ನು ನೀಡಲು ಇತ್ತೀಚೆಗೆ ವಿಟ್ಲ ಪೊಲೀಸ್‌ ಠಾಣೆಗೆ ತೆರಳಿದ್ದರು. ಇವರ ಸಂಪರ್ಕದಿಂದ ಹೆಡ್‌ ಕಾನ್‌ಸ್ಟೆಬಲ್‌ಗೆ ಸೋಂಕು ಹರಡಿದೆ ಎನ್ನಲಾಗಿದೆ.

Advertisement

ಸೀಲ್‌ಡೌನ್‌ ಮುಕ್ತ
ಮಂಗಳೂರು ತಾಲೂಕಿನ ಪದವು ಗ್ರಾಮದ ಕಕ್ಕಬೆಟ್ಟು ಮತ್ತು ಬಂಟ್ವಾಳ ತಾಲೂಕಿನ ನರಿಕೊಂಬ ಗ್ರಾಮದ ಪ್ರದೇಶವನ್ನು ನಿರ್ಬಂಧ ರಹಿತ ವಲಯವನ್ನಾಗಿ ದ.ಕ. ಜಿಲ್ಲಾಡಳಿತ ಘೋಷಣೆ ಮಾಡಿದೆ.

639 ವರದಿ ನಿರೀಕ್ಷೆ
ರವಿವಾರದಂದು ಒಟ್ಟು 329 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬಂದಿದ್ದು, ಒಂದು ಪಾಸಿಟಿವ್‌ ಪ್ರಕರಣ ಕಂಡುಬಂದಿದೆ. ರವಿವಾರದಂದು 384 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 639 ವರದಿ ಬರಲು ಬಾಕಿ ಇದೆ. ಎನ್‌ಐಟಿಕೆಯಲ್ಲಿ ಒಟ್ಟು 48 ಮಂದಿ, ಇಎಸ್‌ಐ ಆಸ್ಪತ್ರೆಯಲ್ಲಿ 18 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

48 ಗಂಟೆ ಪೊಲೀಸ್‌ ಠಾಣೆ ಸ್ಥಗಿತ: ಲಕ್ಷ್ಮೀಪ್ರಸಾದ್‌
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ಅವರು ಪ್ರತಿಕ್ರಿಯಿಸಿ “ವಿಟ್ಲ ಪೊಲೀಸ್‌ ಠಾಣೆಯನ್ನು ವಿಟ್ಲ ಪಟ್ಟಣ ಪಂಚಾಯತ್‌ ವತಿಯಿಂದ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗಿದೆ ಹಾಗೂ ರವಿವಾರದಿಂದ ಎರಡು ದಿನಗಳ ಕಾಲ ಪೊಲೀಸ್‌ ಠಾಣೆಯನ್ನು ಮುಚ್ಚಲಾಗಿದೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ ಒಟ್ಟು 40 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿತ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ  ಒಳಪಡಿಸಲಾಗುತ್ತದೆ. ಉಳಿದವರನ್ನು ಗೃಹ ನಿಗಾವಣೆಗೆ ಸೂಚನೆ ನೀಡಲಾಗಿದೆ. ಎಷ್ಟು ಮಂದಿ ಸಂಪರ್ಕಿತರು ಎಂಬ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಲಿದೆ. ಎಲ್ಲ ಪೊಲೀಸರಿಗೆ ಈಗಾಗಲೇ ಟ್ರಿಪಲ್‌ ಲೇಯರ್‌ ಮಾಸ್ಕ್ ನೀಡಲಾಗಿದೆ. ಆರೋಪಿ ಹಿಡಿಯುವ ಸಂದರ್ಭದಲ್ಲಿ ವಿಶೇಷ ಗ್ಲೌಸ್‌ ಮತ್ತು ಪಿಪಿಇ ಕಿಟ್‌ ಧರಿಸಲು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಠಾಣಾಧಿಕಾರಿ ಸೇರಿ 20 ಮಂದಿಗೆ ಕ್ವಾರಂಟೈನ್‌
ವಿಟ್ಲ: ವಿಟ್ಲ ಪೊಲೀಸ್‌ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗೆ ರವಿವಾರ ಕೋವಿಡ್ ದೃಢಪಟ್ಟಿದೆ. ಠಾಣೆಯ ಸುಮಾರು 13 ಸಿಬಂದಿ ಸೇರಿ 20 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ಸಿಬಂದಿ ವಿಟ್ಲ ಠಾಣೆಯನ್ನು ಸ್ಯಾನಿಟೈಸ್‌ ಮಾಡಲಾಯಿತು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ವೇದಾವತಿ ಬಲ್ಲಾಳ್‌ ಅವರ ತಂಡ ಪ್ರಾಥಮಿಕ ಸಂಪರ್ಕಕ್ಕೆ ಬಂದ ವಿಟ್ಲ ಠಾಣಾಧಿಕಾರಿ ಸೇರಿ 13 ಸಿಬಂದಿಯನ್ನು ಹಾಗೂ ನೇರ ಸಂಪರ್ಕಕ್ಕೆ ಬಂದ 7 ಮಂದಿ ಹೊರಗಿನವರನ್ನು ಕ್ವಾರಂಟೈನ್‌ ಮಾಡಿದರು.

Advertisement

ಘಟನೆಯ ವಿವರ
ಮೇ 15ರಂದು ಬೆಳಗ್ಗೆ ಮಹಾರಾಷ್ಟ್ರದ ರಾಯಗಢದಿಂದ ವಿಟ್ಲಕ್ಕೆ ಆಗಮಿಸಿದ ವ್ಯಕ್ತಿಯನ್ನು ಕ್ವಾರಂಟೈನ್‌ ಮಾಡಬೇಕಾಗಿತ್ತು. ಕೇಂದ್ರದ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸದೆ, ಕೇಂದ್ರಕ್ಕೆ ಬೀಗ ಹಾಕಿದ್ದುದರಿಂದ ಆ ವ್ಯಕ್ತಿ ಠಾಣೆಗೆ ತೆರಳಿದ್ದರು. ಬಳಿಕ ಸಮುದಾಯ ಆಸ್ಪತ್ರೆಯಲ್ಲಿ ಅವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿತ್ತು. ಮೇ 18ರಂದು ವ್ಯಕ್ತಿಗೆ ಕೋವಿಡ್ ಇರುವುದು ದೃಢ ಪಟ್ಟಿತ್ತು. ಆ ಬಳಿಕ ವಿಟ್ಲ ಠಾಣೆಯ ಇಬ್ಬರು ಪೊಲೀಸರನ್ನು ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಅವರ ಸೂಚನೆ ಮೇರೆಗೆ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಗ್ರಾಮ ಕರಣಿಕ ಪ್ರಕಾಶ್‌, ಸಿಬಂದಿ ಚಂದ್ರಶೇಖರ ವರ್ಮ ಅವರ ತಂಡ ಕಾರ್ಯಾಚರಣೆ ನಡೆಸಿದೆ.

ಪ್ರಥಮ ಸಂಪರ್ಕಿತರಿಗೆ ಕೋವಿಡ್ ಇಲ್ಲ
ವಿಶೇಷ ಎಂದರೆ ವಿಟ್ಲ ಠಾಣೆಗೆ ಆಗಮಿಸಿದ ಮುಂಬಯಿ ಮೂಲದ ವ್ಯಕ್ತಿಯ ಆಧಾರ್‌ ಕಾರ್ಡ್‌ ಸಹಿತ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಕೋವಿಡ್ ಬಂದಿಲ್ಲ. ಆದರೆ ತನ್ನ ಸಹೋದ್ಯೋಗಿ ನೀಡಿದ ಫೋನ್‌ ಬಳಸಿ ಆರೋಗ್ಯ ಕೇಂದ್ರಕ್ಕೆ ಮಹಾರಾಷ್ಟ್ರದ ವ್ಯಕ್ತಿ ಬರುವ ಕುರಿತು ಮಾಹಿತಿ ನೀಡಿದ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್ ‌ಅವರಿಗೆ ಕೋವಿಡ್ ದೃಢ ಪಟ್ಟಿದೆ. ಆದುದರಿಂದ ಅವರಿಗೆ ಮೊಬೈಲ್‌ ಮೂಲಕ ಕೋವಿಡ್ ಸೋಂಕು ತಗಲಿತೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ನಡುವೆ ಕೆಲವು ದಿನಗಳ ಹಿಂದೆ ಸಾಲೆತ್ತೂರಿನ ಅಕ್ರಮ ಕಸಾಯಿಖಾನೆಗೆ ಪೊಲೀಸ್‌ ದಾಳಿ ನಡೆದಿದ್ದು, ಇದರ ವಿಚಾರಣೆ ಸಂದರ್ಭ ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ಈ ಠಾಣೆಗೆ ಭೇಟಿ ನೀಡಿದ್ದರು. ಅನಂತರವೂ ಕೆಲವರು ಭೇಟಿ ನೀಡಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿದೆ.

ಎರಡು ದಿನ ಠಾಣೆ ಬಂದ್‌
ಕೋವಿಡ್ ಪತ್ತೆ ಹಿನ್ನೆಲೆಯಲ್ಲಿ ಈಗ ಠಾಣೆಯನ್ನು ಬಂದ್‌ ಮಾಡಲಾಗಿದೆ. ಎರಡು ದಿನ ಬಂದ್‌ ಇರಲಿದ್ದು, ಅನಂತರ ಸ್ಯಾನಿಟೈಸ್‌ ಮಾಡಿ ಠಾಣೆಯನ್ನು ತೆರೆಯಲಾಗುವುದು. ಅದುವರೆಗೆ ಇಲ್ಲಿನ ಉಸ್ತುವಾರಿ ಯನ್ನು ಬಂಟ್ವಾಳ ಸಂಚಾರಿ ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಜೇಶ್‌ ಅವರಿಗೆ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next