Advertisement

ರಾಜ್ಯದಲ್ಲಿ ಕೋವಿಡ್-19 ಸ್ಪೋಟ; ಮತ್ತೆ 299 ಜನರಿಗೆ ಸೋಂಕು ದೃಢ

06:24 PM May 31, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಇಂದು ಮತ್ತೆ299 ಜನರಲ್ಲಿ ಕೋವಿಡ್ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆ ಕಂಡಿದೆ.

Advertisement

ರಾಯಚೂರಿನಲ್ಲಿ ಹೆಚ್ಚಿನ ಪ್ರಮಾಣದ ಅಂದರೆ 83 ಸೋಂಕಿತರು ಪತ್ತೆಯಾಗಿದ್ದರೆ, ಯಾದಗಿರಿಯಲ್ಲಿ 44 ಹೊಸ ಸೋಂಕು ಪ್ರಕರಣಗಳು ಕಂಡು ಬಂದಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 14 ಹೊಸ ಪ್ರಕರಣಗಳು, ಉಡುಪಿಯಲ್ಲಿ 10 ಹೊಸ ಪ್ರಕರಣಗಳು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಹೊಸ ಕೋವಿಡ್ 19 ಪ್ರಕರಣಗಳು ದೃಢವಾಗಿದೆ.

ಬೆಂಗಳೂರು ನಗರದಲ್ಲಿ 21 ಪ್ರಕರಣಗಳು, ಕಲಬುರಗಿಯಲ್ಲಿ 28, ಮಂಡ್ಯ 13, ಬೀದರ್ ನಲ್ಲಿ 33 ಪ್ರಕರಣಗಳು, ಬೆಳಗಾವಿ 13 ಪ್ರಕರಣಗಳು, ವಿಜಯಪುರ 26, ಬಳ್ಳಾರಿ, ಶಿವಮೊಗ್ಗ ಮತ್ತು ಕೋಲಾರದಲ್ಲಿ ತಲಾ ಒಂದು ಸೋಂಕು ಪ್ರಕರಣ ದೃಢವಾಗಿದೆ.

ರಾಜ್ಯದಲ್ಲಿ ಕಂಡು ಬರುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಿನ ಪಾಲು ಮಹಾರಾಷ್ಟ್ರದಿಂದ ಬರುತ್ತಿರುವ ಪ್ರಯಾಣಿಕರದ್ದಿದೆ. ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿ ಇರುವವರಲ್ಲಿ ಕೋವಿಡ್ ಸೋಂಕು ದೃಢಪಡುತ್ತಿದೆ.

ರಾಜ್ಯದಲ್ಲಿ ಮತ್ತೆ ಇಬ್ಬರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ರಾಯಚೂರಿನ ಮುಂಬೈನಿಂದ ಬಂದಿದ್ದ 50 ವರ್ಷದ ವ್ಯಕ್ತಿ ಮೇ 29ರಂದು ಸಾವನ್ನಪ್ಪಿದ್ದರು. ಇಂದು ಅವರ ಕೋವಿಡ್ ಪರೀಕ್ಷೆ ಜಿಲ್ಲಾಡಳಿತದ ಕೈ ತಲುಪಿದ್ದು, ಸೋಂಕು ತಾಗಿರುವುದು ದೃಢವಾಗಿದೆ.

Advertisement

ಬೀದರ್ ನ 75 ವರ್ಷದ ವ್ಯಕ್ತಿ ಮೇ 29ರಂದು ನಿಧನ ಹೊಂದಿದ್ದು, ಅವರಿಗೂ ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 51ಕ್ಕೇರಿಕೆಯಾಗಿದೆ.

ರಾಜ್ಯದಲ್ಲಿ ಇಂದು 299 ಹೊಸ ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 3221 ಕ್ಕೆ ಏರಿಕೆಯಾಗಿದೆ. ಒಟ್ಟು 1218 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 51 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದು, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next