Advertisement

ಬಾಗಿಲು ತೆರೆದಿರಲಿ, ಮಾಸ್ಕ್ ಎರಡಿರಲಿ

12:09 AM May 21, 2021 | Team Udayavani |

ಹೊಸದಿಲ್ಲಿ:  “ಡಬಲ್‌ ಮಾಸ್ಕ್ ಧರಿಸಿ, ಮನೆ, ಕಚೇರಿಗಳಲ್ಲಿ ಗಾಳಿ-ಬೆಳಕಿರುವಂತೆ ನೋಡಿಕೊಳ್ಳಿ, ಕಿಟಕಿ ಬಾಗಿಲುಗಳನ್ನು ತೆರೆದಿಡಿ, ಶುಚಿತ್ವಕ್ಕೆ ಆದ್ಯತೆ ನೀಡಿ…’

Advertisement

ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಿದು. ದೇಶವಾಸಿಗಳಿಗೆ ಸುಲಭವಾಗಿ ಪಾಲಿಸಲು ಸಾಧ್ಯವಿರುವಂತಹ ಈ ಮಾರ್ಗಸೂಚಿಯನ್ನು ಗುರುವಾರ ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್‌ ಬಿಡುಗಡೆ ಮಾಡಿದ್ದಾರೆ. ನಾವು ಕೈಗೊಳ್ಳುವ ಸಣ್ಣ ಮುನ್ನೆಚ್ಚರಿಕೆಯ ಕ್ರಮ ಕೂಡ ಕೊರೊನಾ ವೈರಸ್‌ ಹರಡುವುದನ್ನು ತಗ್ಗಿಸಲು ನೆರವು ನೀಡಲಿದೆ ಎಂದಿದ್ದಾರೆ.

ಸೋಂಕಿತ ವ್ಯಕ್ತಿ ಉಸಿರಾಡುವಾಗ, ಮಾತನಾಡುವಾಗ, ಹಾಡುವಾಗ, ನಗುವಾಗ, ಕೆಮ್ಮು, ಸೀನುವ ಸಂದರ್ಭದಲ್ಲಿ ಲಾಲಾ ರಸ,  ಮೂಗಿನಿಂದ ಸಿಡಿಯುವ ಹನಿಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸೋಂಕು ದೃಢಪಡದೇ ಇರುವ ವ್ಯಕ್ತಿ ಕೂಡ ಸಮಸ್ಯೆ ಹರಡಲು ಕಾರಣನಾಗುವ ಸಾಧ್ಯತೆ ಇದೆ. ಬಾಯಿಂದ ಹೊರಬೀಳುವ ಹನಿಗಳು 10 ಮೀಟರ್‌ ವರೆಗೆ ಪಸರಿ ಸುವ ಸಾಮರ್ಥ್ಯ ಹೊಂದಿವೆ ಎಂದೂ ರಾಘವನ್‌ ಮಾಹಿತಿ ನೀಡಿದ್ದಾರೆ.

ಗುಣಮುಖರ ಸಂಖ್ಯೆ ಹೆಚ್ಚಳ: ಬುಧವಾರದಿಂದ ಗುರುವಾರದ ಅವಧಿಯಲ್ಲಿ ದೇಶದಲ್ಲಿ 2,76,110 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. 3,874 ಮಂದಿ ಅಸುನೀಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ 655 ಇಳಿಕೆಯಾಗಿದ್ದರೆ, ಸೋಂಕಿತರ ಸಂಖ್ಯೆಯಲ್ಲಿ 8,776 ಹೆಚ್ಚಾಗಿದೆ. ಸಮಾಧಾನಕರ ಅಂಶವೆಂದರೆ, ಇದೇ ಅವಧಿಯಲ್ಲಿ 3,69,077 ಮಂದಿ ಚೇತರಿಸಿಕೊಂಡಿದ್ದರೆ, ಸಕ್ರಿಯ ಸೋಂಕು ಸಂಖ್ಯೆ ಕೂಡ 31,29,878ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣವೂ ಶೇ.86.74ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 20,55,010 ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ. ಈ ನಡುವೆ, ಸತತ 10 ವಾರಗಳ ಕಾಲ ಏರುತ್ತಾ ಸಾಗಿದ್ದ ಕೊರೊನಾ ಪಾಸಿಟಿವಿಟಿ ದರ ಕಳೆದ 2 ವಾರಗಳಲ್ಲಿ ಇಳಿಮುಖವಾಗಿದೆ. ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವ ಜಿಲ್ಲೆಗಳ ಸಂಖ್ಯೆ 210ರಿಂದ (ಎ.20-ಮೇ 5ರ ವರೆಗೆ) ಈಗ 303ಕ್ಕೆ (ಮೇ 13-19) ಇಳಿದಿದೆ ಎಂದೂ ಆರೋಗ್ಯ ಇಲಾಖೆ ತಿಳಿಸಿದೆ.

ಬ್ಲ್ಯಾಕ್‌ಫ‌ಂಗಸ್‌ ಸಾಂಕ್ರಾಮಿಕ ರೋಗ :

Advertisement

ದೇಶದಲ್ಲಿ ಕೋವಿಡ್ ಸೋಂಕಿತರಲ್ಲಿ ಕಂಡು ಬರುತ್ತಿರುವ ಬ್ಲ್ಯಾಕ್‌ ಫ‌ಂಗಸ್‌ ಅನ್ನು ಸಾಂಕ್ರಾಮಿಕ ರೋಗ ಎಂದು ಪರಿಗಣಿಸಿ ಘೋಷಣೆ ಮಾಡುವಂತೆ ಕೇಂದ್ರ ರಾಜ್ಯಗಳಿಗೆ ಗುರುವಾರ ಸೂಚನೆ ನೀಡಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿನ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ. ಈ ಬಗ್ಗೆ ಅವರು ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ಇದರಿಂದಾಗಿ ಸೋಂಕಿತರಿಗೆ ಬ್ಲ್ಯಾಕ್‌ಫ‌ಂಗಸ್‌ ಕಂಡುಬಂದಲ್ಲಿ ಅದನ್ನು ಕೇಂದ್ರ ಸರಕಾರದ ಗಮನಕ್ಕೆ ತರುವುದು ಕಡ್ಡಾಯವಾಗಲಿದೆ. ಸರಕಾರಿ ಮತ್ತು ಖಾಸಗಿ ಕ್ಷೇತ್ರದ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು ಬ್ಲ್ಯಾಕ್‌ಫ‌ಂಗಸ್‌ ಅನ್ನು ದೃಢಪಡಿಸುವುದು, ಚಿಕಿತ್ಸೆ ಮತ್ತು ಅದಕ್ಕೆ ಸಂಬಂಧಿಸಿದ ನಿರ್ವಹಣ ಪ್ರಕ್ರಿಯೆಗಳನ್ನು ಇನ್ನು ಮುಂದೆ ಕೇಂದ್ರದ ನಿಯಮಾನುಸಾರವೇ ಕೈಗೊಳ್ಳಬೇಕು.  ಕೆಳಮಟ್ಟದ ಆರೋಗ್ಯ ವ್ಯವಸ್ಥೆಯಲ್ಲಿ ಕೂಡ ಇಂಥ ಸಮಸ್ಯೆ ಕಂಡು ಬಂದಲ್ಲಿ ಅದನ್ನು ಪರಿಶೀಲಿಸಿ, ಜಿಲ್ಲಾ ವೈದ್ಯಾಧಿಕಾರಿಗಳ ಮೂಲಕ ಏಕೀಕೃತ ರೋಗ ನಿಗಾ ವ್ಯವಸ್ಥೆ (ಐಡಿಎಸ್‌ಪಿ) ಮೂಲಕ ಸರಕಾರದ ಗಮನಕ್ಕೆ ತರಬೇಕು ಎಂದು ಲವ ಅಗರ್ವಾಲ್‌ ಪತ್ರದಲ್ಲಿ ಸೂಚಿಸಿದ್ದಾರೆ.

ರಾಜಸ್ಥಾನ, ತೆಲಂಗಾಣ ಸರಕಾರಗಳು ಈಗಾಗಲೇ ಹೊಸ ಸಮಸ್ಯೆಯನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿವೆ.  ಮಹಾರಾಷ್ಟ್ರದಲ್ಲಿ ಇದುವರೆಗೆ 1,500 ಇಂಥ ಕೇಸುಗಳು ದೃಢಪಟ್ಟಿದ್ದು, 90 ಮಂದಿ ಅಸುನೀಗಿದ್ದಾರೆ. ತಮಿಳುನಾಡಿನಲ್ಲಿ 9 ಕೇಸುಗಳು ದೃಢಪಟ್ಟಿವೆ. ಅದು ಕೂಡ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.

ಸುದೀರ್ಘ‌ ಸವಾಲಿಗೆ ಸಜ್ಜಾಗಿ: ಮೋದಿ :

ಕೋವಿಡ್ ಸೋಂಕು ಅಗೋಚರ ಮತ್ತು ಬಹುರೂಪಿಯಾಗಿದ್ದು, ಅದು ಅಸ್ತಿತ್ವದಲ್ಲಿ ಇರುವವರೆಗೂ ಸವಾಲು ಕೂಡ ಇದ್ದೇ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಸುತ್ತಿನಲ್ಲಿ 10 ಮಂದಿ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಸಂವಾದ ನಡೆಸಿದ ಮೋದಿ, “ಯುವಜನತೆ ಮತ್ತು ಮಕ್ಕಳಲ್ಲಿ ಸೋಂಕು ಹೇಗೆ ಹಬ್ಬುತ್ತಿದೆ ಎಂಬ ಬಗ್ಗೆ ವಿಶ್ಲೇಷಿಸಿ, ನಿಮ್ಮ ನಿಮ್ಮ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ. ಆಗ ಭವಿಷ್ಯದ ಅಪಾಯವನ್ನು ಎದುರಿಸಲು ಸುಲಭವಾಗುತ್ತದೆ’ ಎಂದು ಸಲಹೆ ನೀಡಿದ್ದಾರೆ.  ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಹೊಸ ಕಾರ್ಯತಂತ್ರಗಳು ಹಾಗೂ ಪರಿಹಾರಗಳ ಅಗತ್ಯವಿದೆ ಎಂದ ಅವರು, ಸೋಂಕು ಕಡಿಮೆಯಾದರೂ ಮಾರ್ಗಸೂಚಿ ಪಾಲನೆ ಮುಂದುವರಿಯಲಿ, ಲಸಿಕೆ ಪೋಲಾಗದಂತೆ ನೋಡಿಕೊಳ್ಳಿ, ಗ್ರಾಮಗಳನ್ನು ಕೊರೊನಾಮುಕ್ತಗೊಳಿಸುವತ್ತ ಕಾರ್ಯಪ್ರವೃತ್ತರಾಗಿ, ಬಡವರಿಗೆ ಉಚಿತ ಪಡಿತರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಪೂರೈಸಿ ಎಂದೂ ಸಲಹೆ ನೀಡಿದ್ದಾರೆ.

ಹೊಸ ಮಾರ್ಗಸೂಚಿಯಲ್ಲೇನಿದೆ? :

  • ಕಿಟಕಿ, ಬಾಗಿಲುಗಳನ್ನು ಮುಚ್ಚಿ ಪೂರ್ಣ ಪ್ರಮಾಣದಲ್ಲಿ ಹವಾನಿಯಂತ್ರಣ ವ್ಯವಸ್ಥೆ(ಎಸಿ) ಹೊಂದಿರುವುದು ಅಪಾಯಕಾರಿ. ಎಸಿ ಹಾಕಿದ್ದರೂ ಕಿಟಕಿ, ಬಾಗಿಲು ತೆರೆದಿಡುವುದು ಉತ್ತಮ.
  • ಕಚೇರಿಗಳಲ್ಲಿ, ಸಭಾಂಗಣ, ಶಾಪಿಂಗ್‌ ಮಾಲ್‌ ಮತ್ತು ಅದಕ್ಕೆ ಸಮಾನವಾಗಿರುವ ಇತರ ಸ್ಥಳಗಳಲ್ಲಿ ಗೇಬಲ್‌ ಫ್ಯಾನ್‌ ಅಳವಡಿಸಿ, ಉಸಿರಾಡಿದ ಗಾಳಿ ಹೊರ ಹೋಗಿ, ತಾಜಾ ಗಾಳಿ ಒಳಬರುವ ವ್ಯವಸ್ಥೆ ಕಲ್ಪಿಸಿ.
  • ಕಿಟಕಿ, ಬಾಗಿಲು ಮುಚ್ಚಲೇಬೇಕೆಂದಿದ್ದರೆ ಎಕ್ಸ್‌ಹಾಸ್ಟ್‌ ಫ್ಯಾನ್‌ ಬಳಸುವ ಮೂಲಕ ಒಳಗಿನ ಗಾಳಿ ಹೊರಹೋಗುವಂತೆ ನೋಡಿಕೊಳ್ಳಿ.
  • ಫ್ಯಾನ್‌ ಅಳವಡಿಸುವಾಗ ಕಲ್ಮಶ ಗಾಳಿಯು ನೇರ ವಾಗಿ ಒಬ್ಬ ವ್ಯಕ್ತಿಗೆ ಬಡಿಯದಂತೆ ನೋಡಿಕೊಳ್ಳಿ.
  • ಯಾರ ಮನೆಯಲ್ಲಿ ಗಾಳಿ ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲವೋ, ಅಂಥ ಮನೆಗಳಿಗೆ ಆಯಾ ಗ್ರಾಮ ಪಂಚಾಯತ್‌ಗಳು ಜಾಲಿ ಅಥವಾ ಎಕ್ಸ್‌ಹಾಸ್ಟ್‌ ಫ್ಯಾನ್‌ ಅಳವಡಿಸಬೇಕು.
  • ಕಿಟಕಿ, ಬಾಗಿಲು, ಹ್ಯಾಂಡಲ್‌ಗ‌ಳನ್ನು ಪದೇ ಪದೆ ಶುಚಿಗೊಳಿಸಿ, ಅಗತ್ಯ ಬಿದ್ದಲ್ಲಿ ಬದಲಿಸಿ
  • ಎಲ್ಲರೂ ಎರಡೆರಡು ಮಾಸ್ಕ್ ಅಥವಾ ಎನ್‌ 95 ಮಾಸ್ಕ್ ಧರಿಸುವುದು ಅತ್ಯುತ್ತಮ.
  • ಬಸ್ಸು, ರೈಲುಗಳು ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲೂ ಬಾಗಿಲು, ಕಿಟಕಿಗಳನ್ನು ತೆರೆದಿಡಬೇಕು.
  • ಸಾರ್ವಜನಿಕರು, ಸಮುದಾಯ, ಸ್ಥಳೀಯ ಸಂಸ್ಥೆಗಳು ಮತ್ತು ಇತರ ವ್ಯವಸ್ಥೆಗಳು ಒಟ್ಟಾಗಿ ಶ್ರಮಿಸಿದಾಗ ಸೋಂಕು ನಿಯಂತ್ರಣ ಸಾಧ್ಯ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಮುಂದುವರಿಸಿ
  • ಜನರು ಯಾವುದೇ ಸ್ಥಳಕ್ಕೆ ಹೋಗುವ ಮುನ್ನ ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಿಸಬೇಕು. ಅಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಬಗ್ಗೆ ತರಬೇತಿ ನೀಡಬೇಕು. ಅವರಿಗೆ ಕೂಡ ಎನ್‌95 ಮಾಸ್ಕ್ ನೀಡಬೇಕು.
Advertisement

Udayavani is now on Telegram. Click here to join our channel and stay updated with the latest news.

Next