Advertisement

ತಹಬಂದಿಗೆ ಕೋವಿಡ್ ? ; 2 ವಾರದಲ್ಲಿ 10 ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವಿಲ್ಲ

12:32 AM Dec 17, 2020 | mahesh |

ಬೆಂಗಳೂರು: ತಿಂಗಳಿಂದ ಕೊರೊನಾ ಮಹಾಮಾರಿಯ ಮರಣ ಮೃದಂಗ ಬಹುತೇಕ ತಗ್ಗಿದ್ದು, ಡಿಸೆಂಬರ್‌ ಮೊದಲೆರಡು ವಾರಗಳಲ್ಲಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಒಂದೇ ಒಂದು ಮರಣ ಪ್ರಕರಣ ದಾಖಲಾಗಿಲ್ಲ. ಸದ್ಯ ದೇಶದಲ್ಲಿಯೇ ಸೋಂಕಿತರ ಸಾವಿನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ನಿಧಾನವಾಗಿ ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ.

Advertisement

ಸೋಂಕಿನ ಹೊಸ ಪ್ರಕರಣಗಳು ಕೂಡ ಗಣನೀಯವಾಗಿ ಇಳಿದಿದ್ದು, 10 ಜಿಲ್ಲೆಗಳಲ್ಲಿ ನಿತ್ಯ ಸರಾಸರಿ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಹಾಗೆಂದು ಪರೀಕ್ಷೆಯ ಪ್ರಮಾಣವನ್ನು ತಗ್ಗಿಸಿಲ್ಲ. ಈ ಅವಧಿಯಲ್ಲಿ ನಿತ್ಯ ಸರಾಸರಿ ಒಂದು ಲಕ್ಷ ಪರೀಕ್ಷೆಗಳು ನಡೆದಿವೆ.

ರಾಜ್ಯದಲ್ಲಿ ಸೋಂಕಿತರ ಸಾವು ಜುಲೈಯಿಂದ ಅಕ್ಟೋಬರ್‌ ನಡುವೆ 100 ದಿನ ನಿರಂತರವಾಗಿ ಸರಾಸರಿ 100ರ ಗಡಿ ದಾಟಿತ್ತು. ಆದರೆ ನವೆಂಬರ್‌ನಲ್ಲಿ 25ಕ್ಕೆ ಇಳಿದಿತ್ತು. ಡಿಸೆಂಬರ್‌ನ ಮೊದಲೆರಡು ವಾರಗಳಲ್ಲಿ ನಿತ್ಯ ಸರಾಸರಿ 12ಕ್ಕೆ ಇಳಿದಿದೆ. ಅಲ್ಲದೆ ಡಿ. 1ರಿಂದ 14ರ ನಡುವೆ ರಾಜ್ಯದ 10 ಜಿಲ್ಲೆಗಳಲ್ಲಿ ಶೂನ್ಯ ಸಾವು, 6 ಜಿಲ್ಲೆಗಳಲ್ಲಿ ತಲಾ 1 ಸಾವು, 4 ಜಿಲ್ಲೆಗಳಲ್ಲಿ ತಲಾ 2 ಸಾವು ವರದಿಯಾಗಿವೆ. ಇನ್ನು ನಿತ್ಯ ವರದಿಯಾಗುತ್ತಿರುವ ಸಾವಿನಲ್ಲಿ ಬೆಂಗಳೂರಿನ ಪಾಲು ಶೇ. 50 ರಷ್ಟು ಇದೆ.

ಹೊಸ ಪ್ರಕರಣಗಳು ಇಳಿಕೆ
ಕೊರೊನಾ ಹೊಸ ಪ್ರಕರಣಗಳು ಕೂಡ ಡಿಸೆಂಬರ್‌ನಲ್ಲಿ 1,000ದ‌ ಆಸುಪಾಸಿಗೆ ಇಳಿದಿವೆ. ನವೆಂಬರ್‌ ಮೊದಲ ವಾರಕ್ಕೆ ಹೋಲಿಸಿದರೆ ನಿತ್ಯ ಸರಾಸರಿ ಹೊಸ ಪ್ರಕರಣಗಳು ಅರ್ಧಕ್ಕರ್ಧ (2,200ರಿಂದ 1,100), ಅಕ್ಟೋಬರ್‌, ಸೆಪ್ಟಂಬರ್‌ಗೆ ಹೋಲಿ ಸಿದರೆ ಹತ್ತು ಪಟ್ಟು (10,000ದಿಂದ 1,000ಕ್ಕೆ) ಇಳಿಕೆಯಾಗಿವೆ. ಕಳೆದ ಎರಡು ವಾರಗಳಿಂದ ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಗದಗ, ಕೊಡಗು, ಕೊಪ್ಪಳ, ಯಾದಗಿರಿ ಸಹಿತ ಹತ್ತು ಜಿಲ್ಲೆಗಳಲ್ಲಿ ನಿತ್ಯ 10ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ನಿತ್ಯ ಸರಾಸರಿ ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು, ಮೈಸೂರು, ತುಮಕೂರು, ಮಂಡ್ಯ ಹಾಗೂ ಹಾಸನದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹತೋಟಿಯಲ್ಲಿದೆ.

ದೇಶದಲ್ಲೂ ಗಣನೀಯ ಇಳಿಕೆ
ಕರ್ನಾಟಕವಷ್ಟೇ ಅಲ್ಲ, ದೇಶದ ಮಟ್ಟದಲ್ಲೂ ಕೊರೊನಾ ಕೇಸುಗಳ ಸಂಖ್ಯೆಯಲ್ಲಿ ಬಹಳಷ್ಟು ಇಳಿಕೆಯಾಗಿದೆ. ಬುಧವಾರ 26,382 ಪ್ರಕರಣಗಳು ದೃಢಪಟ್ಟಿದ್ದು, 387 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರವೂ ಪ್ರಕರಣಗಳ ಸಂಖ್ಯೆ 22 ಸಾವಿರಕ್ಕೆ ಇಳಿಕೆಯಾಗಿತ್ತು. ಈ ಪ್ರಮಾಣ ಅತ್ಯಂತ ಹೆಚ್ಚಾಗಿದ್ದ ಅವಧಿಗೂ ಈಗಿನದ್ದಕ್ಕೂ ಶೇ. 69ರಷ್ಟು ಕಡಿಮೆಯಾಗಿದೆ. ರಾಜ್ಯಗಳೂ ಕೊರೊನಾ ನಿಯಂತ್ರಣದಲ್ಲಿ ಗಣನೀಯ ಪಾತ್ರ ವಹಿಸಿವೆ. ಮಹಾರಾಷ್ಟ್ರದಲ್ಲಿ ಶೇ. 82, ಆಂಧ್ರಪ್ರದೇಶ ಶೇ. 95, ತಮಿಳುನಾಡು ಶೇ. 82, ಕೇರಳ ಶೇ. 47, ದಿಲ್ಲಿ ಶೇ. 71, ಉತ್ತರ ಪ್ರದೇಶ ಶೇ. 78, ಪಶ್ಚಿಮ ಬಂಗಾಲ ಶೇ. 35, ಒಡಿಶಾ ಶೇ. 92, ರಾಜಸ್ಥಾನ ಶೇ. 55ರಷ್ಟು ಇಳಿದಿದೆ. ಹಾಗೆಯೇ ಪರೀಕ್ಷೆಗಳ ಪ್ರಮಾಣವೂ ಹೆಚ್ಚಾಗಿದೆ. ಆದರೆ ಪಾಸಿಟಿವಿಟಿ ದರ ತೀರಾ ಕಡಿಮೆಯಾಗಿದೆ.

Advertisement

ಜಿಲ್ಲಾವಾರು ಸಾವು (ಡಿ. 1ರಿಂದ 14) 
ಶೂನ್ಯ ಸಾವಿನ ಜಿಲ್ಲೆಗಳು: ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಗದಗ, ಹಾವೇರಿ, ಕೊಡಗು, ಕೊಪ್ಪಳ, ಶಿವಮೊಗ್ಗ, ಉಡುಪಿ, ಯಾದಗಿರಿ.
ಒಂದು ಸಾವು: ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ರಾಯಚೂರು, ರಾಮನಗರ.
ಎರಡು ಸಾವು: ಬೀದರ್‌, ಕಲಬುರಗಿ, ಉ.ಕ., ವಿಜಯಪುರ.

ಯುಪಿಯಲ್ಲಿ ಸದ್ಯದಲ್ಲೇ ಲಸಿಕೆ ವಿತರಣೆ
ಈಗಾಗಲೇ ಬ್ರಿಟನ್‌ನಲ್ಲಿ ಲಸಿಕೆ ವಿತರಣೆ ಆರಂಭವಾಗಿದ್ದು ಅಮೆರಿಕವೂ ತುರ್ತು ಲಸಿಕೆ ವಿತರಣೆಗೆ ಒಪ್ಪಿದೆ. ಇದರ ಮಧ್ಯೆಯೇ ಉತ್ತರಪ್ರದೇಶದಲ್ಲೂ ಲಸಿಕೆ ವಿತರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್‌ ಮತ್ತು ಜನವರಿಯಲ್ಲಿ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಅಲ್ಲಿನ ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸಿಬಂದಿಯ ರಜೆಗಳನ್ನು ರದ್ದು ಮಾಡಿದೆ.

ಜಿಲ್ಲಾ ಮಟ್ಟದಲ್ಲಿ ನಿರ್ದಿಷ್ಟ ಗುರಿ ನೀಡಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದ್ದು, ಸೋಂಕಿತರು ಶೀಘ್ರ ಪತ್ತೆಯಾಗುತ್ತಿದ್ದಾರೆ. ಹೀಗಾಗಿ ತೀವ್ರ ನಿಗಾ ಘಟಕ (ಐಸಿಯು)ಕ್ಕೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಬೆಂಗಳೂರು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಐಸಿಯುನಲ್ಲಿದ್ದಾರೆ. ಇದರಿಂದ ಸಾವು ಕೂಡ ಕಡಿಮೆಯಾಗಿದೆ. 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಂಕು ಬಹುತೇಕ ನಿಯಂತ್ರಣದಲ್ಲಿದೆ.
– ಡಾ| ಓಂಪ್ರಕಾಶ್‌ ಪಾಟೀಲ್‌, ನಿರ್ದೇಶಕರು, ಆರೋಗ್ಯ ಇಲಾಖೆ


Advertisement

Udayavani is now on Telegram. Click here to join our channel and stay updated with the latest news.

Next