Advertisement

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

08:59 AM Apr 07, 2020 | Hari Prasad |

ಬಾಗಲಕೋಟೆ : ಮಹಾಮಾರಿ ಕೋವಿಡ್ 19 ವೈರಸ್ ಸೋಂಕಿಗೆ ದಿನಸಿ ಅಂಗಡಿ ಮಾಲಿಕ ವೃದ್ಧ (ರೋಗಿ ಸಂಖ್ಯೆ-125) ಕಳೆದ ಶುಕ್ರವಾರ ಬಲಿಯಾಗಿದ್ದು, ಆತನ ಪತ್ನಿ ಹಾಗೂ ಸಹೋದರನಿಗೂ ಈ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ.

Advertisement

ನಗರದ ತರಕಾರಿ ಮಾರುಕಟ್ಟೆಯಲ್ಲಿ ಕಿರಾಣಿ ಅಂಗಡಿ ಹಾಗೂ ಅಡತ ಬಜಾರ್ ಬಳಿಯ ಹಳಪೇಟ ಮಡುವಿನಲ್ಲಿ ಮನೆ ಹೊಂದಿದ್ದ ವೃದ್ಧ, ವಿದೇಶ, ಹೊರ ರಾಜ್ಯ ಅಥವಾ ಹೊರ ಜಿಲ್ಲೆಗೂ ಪ್ರವಾಸ ಮಾಡದಿದ್ದರೂ ಇವರಿಗೆ ಕೋವಿಡ್ 19 ಸೋಂಕು ತಗುಲಿತ್ತು. ವೃದ್ಧನಿಗೆ ಸೋಂಕು ಇರುವುದು ದೃಢಪಟ್ಟ ಬಳಿಕ ಆತನ ಮನೆಯವರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಪುತ್ರ, ಪುತ್ರಿ, ತಮ್ಮನ ಪತ್ನಿಗೆ ಕೋವಿಡ್ 19 ವೈರಸ್ ನೆಗೆಟಿವ್ ಬಂದಿತ್ತು.

ಆದರೆ, ವೃದ್ಧ ಮೃತಪಟ್ಟ ಬೆನ್ನೆಲ್ಲೆ ಆತನ ಇಡೀ ಮನೆಯವರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದ ಒಟ್ಟು 10 ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿತ್ತು. ಗುರುವಾರ ವೃದ್ಧನ ಪತ್ನಿ ಮತ್ತು ಸಹೋದರನ ಗಂಟಲು ದ್ರವ ಮತ್ತು ರಕ್ತದ ಮಾದರಿ ಕಳುಹಿಸಲಾಗಿತ್ತು.

ಇವುಗಳ ವರದಿ ಮೂರು ದಿನಗಳಿಂದ ಬಂದಿರಲಿಲ್ಲ. ಸೋಮವಾರ ಮಧ್ಯಾಹ್ನ ಅವರ ವರದಿಯೂ ಬಂದಿದ್ದು, ಈ ವರದಿಯಲ್ಲಿ ಮೂವರಿಗೂ ಸೋಂಕು ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಇದು ರೋಗಿ ಸಂಖ್ಯೆ 125ರ ವೃದ್ಧನೊಂದಿಗೆ ಸಂಪರ್ಕ ಹೊಂದಿದ್ದರಿಂದಲೇ ಬಂದಿದೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

12 ಸಾವಿರ ಜನರ ಸಮೀಕ್ಷೆ:
ರೋಗಿ ಸಂಖ್ಯೆ 125ರ ವೃದ್ಧ ಎಲ್ಲಿಯೂ ಪ್ರವಾಸ ಮಾಡದಿದ್ದರೂ ಆತನಿಗೆ ಈ ಕೋವಿಡ್ ಸೋಂಕು ತಗುಲಿರುವುದು ಹೇಗೆ ಎಂಬುದು ಈವರೆಗೆ ಪತ್ತೆಯಾಗಿಲ್ಲ. ಸಧ್ಯ ಆತನ ಪತ್ನಿ, ತಮ್ಮನಿಗೂ ಸೋಂಕು ಬಂದಿದೆ. ಈ ಕುರಿತು ಪತ್ತೆ ಮಾಡಲು ಜಿಲ್ಲಾಡಳಿತ ಹರಸಾಹಸಪಡುತ್ತಿದೆ.

Advertisement

ಸೋಮವಾರ ಹಳಪೇಟ ಮಡುವಿನಲ್ಲಿನ ವೃದ್ಧನ ಮನೆ, ತರಕಾರಿ ಮಾರುಕಟ್ಟೆಯಲ್ಲಿನ ಅಂಗಡಿ ಸುತ್ತಲಿನ ಸುಮಾರು 12ಸಾವಿರ ಜನರ ಸರ್ವೆ ನಡೆಸಲಾಗಿದೆ. ಪ್ರತಿಯೊಬ್ಬರಿಗೂ ಜ್ವರ, ನೆಗಡಿ – ಕೆಮ್ಮು ಇರುವ ಕುರಿತು ಸ್ಕ್ರೀನಿಂಗ್ ಮಾಡಲಾಗಿದ್ದು, 60 ವರ್ಷ ಮೇಲ್ಪಟ್ಟವರಲ್ಲಿ ಇಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು ನಿಗಾ ಘಟಕಕ್ಕೆ ಸಾಗಿಸಲಾಗುತ್ತಿದೆ. ಸೋಮವಾರ ಒಂದೇ ದಿನ ಒಟ್ಟು 23 ಜನರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ನಿಗಾ ಘಟಕದಲ್ಲಿಡಲಾಗಿದೆ.

ಮತ್ತೆ ಏಳು ಜನರ ಮಾದರಿ ಪರೀಕ್ಷೆಗೆ :
ಕೋವಿಡ್ ಸೋಂಕಿನಿಂದ ಮೃತಪಟ್ಟ ವೃದ್ಧನೊಂದಿಗೆ ಸಂಪರ್ಕ ಹೊಂದಿದ್ದ ಇನ್ನೂ ಏಳು ಜನರನ್ನು ಪತ್ತೆ ಮಾಡಲಾಗಿದ್ದು, ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ರಾಜೇಂದ್ರ ತಿಳಿಸಿದ್ದಾರೆ. ವೃದ್ಧನಿಗೆ ಕೋವಿಡ್ ಸೋಂಕು ಹೇಗೆ ಬಂತು ಎಂಬುದು ಇನ್ನೂ ದೃಢಪಟ್ಟಿಲ್ಲ. ಆತನ ಮಗ, ಪುತ್ರಿಗೆ ಸೋಂಕು ಇಲ್ಲವಾದರೂ ಅವರ ಪ್ರವಾಸದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕೋವಿಡ್ 19 ವೈರಸ್ ಸೋಂಕಿನ ಕಾರಣದಿಂದ  ಮೂರು ದಿನಗಳ ಹಿಂದೆ ವೃದ್ಧ (ರೋಗಿ ಸಂಖ್ಯೆ-125) ಮೃತಪಟ್ಟಿದ್ದ. ಈಗ ಆತನ ತಮ್ಮ ಮತ್ತು ಪತ್ನಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 73 ಜನರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 23 ನೆಗೆಟಿವ್ ಬಂದಿದ್ದು, ಮೂವರಿಗೆ ಪಾಜಿಟಿವ್ ಬಂದಿದೆ. 46 ಜನರ ವರದಿ ಬರಬೇಕಿದೆ. ಈ 46 ಜನರಲ್ಲಿ 25 ಜನರು, ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next