Advertisement
ಅಮೆರಿಕದಲ್ಲಿ ಒಂದೇ ದಿನ 1,100 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 6 ಸಾವಿರಕ್ಕೇರಿದೆ. ಈಗಾಗಲೇ ಅಮೆರಿಕದಲ್ಲಿ ಒಂದು ಕೋಟಿ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ನಿರುದ್ಯೋಗ ಪ್ರಮಾಣವು ಶೇ.16ರಷ್ಟು ಏರಿಕೆಯಾಗಿದೆ. ಒಂದರಿಂದ ಎರಡೂವರೆ ಲಕ್ಷ ಅಮೆರಿಕನ್ನರು ಈ ವೈರಸ್ ಗೆ ಬಲಿಯಾಗಲಿದ್ದಾರೆ ಎಂದು ಶ್ವೇತಭವನದ ತಜ್ಞರೇ ಅಂದಾಜಿಸಿದ್ದಾರೆ.
ಭಾರತದಲ್ಲಿ ಕೇವಲ 5 ದಿನಗಳ ಅವಧಿಯಲ್ಲಿ ಸೋಂಕಿತರ ಪ್ರಮಾಣ ಶೇ.102ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈವರೆಗೆ ಒಟ್ಟು 75 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 2895ಕ್ಕೇರಿದೆ. ಇದು ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯ ಭೀತಿಯನ್ನು ಉಂಟುಮಾಡಿದ್ದು, ಆರೋಗ್ಯಸೇವಾ ವ್ಯವಸ್ಥೆ ಮತ್ತು ಆರ್ಥಿಕತೆಯ ಮೇಲಿನ ಒತ್ತಡ ಹೆಚ್ಚಿಸಿದೆ.
Related Articles
Advertisement
ಸಚಿವರ ಸಮಿತಿಯಿಂದ ಪರಿಸ್ಥಿತಿ ಅವಲೋಕನ: ವೈರಸ್ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಲಾಕ್ಡೌನ್ ಪರಿಸ್ಥಿತಿಯಿಂದಾಗಿ ದೇಶದಲ್ಲಿ ಈಗಿರುವ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಸರಕಾರದ ಸಚಿವರ ಸಮಿತಿ ಹೊಸದಿಲ್ಲಿಯಲ್ಲಿ ಸಭೆ ಸೇರಿ ಅವಲೋಕನ ನಡೆಸಿತು.ದೇಶದೆಲ್ಲೆಡೆ ಜನರಿಗೆ ಬೇಕಾಗುವ ಅಗತ್ಯ ವಸ್ತುಗಳ ಪೂರೈಕೆಯ ಬಗ್ಗೆ ಗಮನ ನೀಡಲಾಯಿತು.
ಸ್ಪೇನ್-ಬ್ರಿಟನ್ ದಾಖಲೆಸ್ಪೇನ್ ಮತ್ತು ಬ್ರಿಟನ್ ಕೂಡ ಸಾವಿನ ಸಂಖ್ಯೆಯಲ್ಲಿ ದಾಖಲೆ ಬರೆದಿವೆ. 24 ಗಂಟೆಗಳ ಅವಧಿಯಲ್ಲಿ ಸ್ಪೇನ್ ನಲ್ಲಿ 950 ಮತ್ತು ಬ್ರಿಟನ್ ನಲ್ಲಿ 569 ಮಂದಿ ಮೃತಪಟ್ಟಿದ್ದಾರೆ. ಜಾಗತಿಕ ಸಾವಿನ ಸಂಖ್ಯೆಯ ಅರ್ಧದಷ್ಟು ಪ್ರಕರಣಗಳು ಈ ಎರಡು ದೇಶಗಳಲ್ಲೇ ಸಂಭವಿಸಿವೆ. ಸ್ಪೇನ್ ನಲ್ಲಿ ಒಟ್ಟಾರೆ ಈವರೆಗೆ 10,935 ಮಂದಿ ಬಲಿಯಾಗಿದ್ದು, 1.17 ಲಕ್ಷ ಮಂದಿಗೆ ಸೋಂಕು ತಗುಲಿದೆ. 60ಕ್ಕಿಂತ ಮೇಲ್ಪಟ್ಟವರ ಸಾವು
ಐರೋಪ್ಯ ಒಕ್ಕೂಟದಲ್ಲಿ ಸೋಂಕಿನಿಂದ ಅಸುನೀಗಿದವರಲ್ಲಿ ಶೇ.95ರಷ್ಟು ಮಂದಿ 60 ವರ್ಷಕ್ಕೆ ಮೇಲ್ಪಟ್ಟವರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸೋಂಕಿತರಲ್ಲಿ ಶೇ.10ರಿಂದ 15ರಷ್ಟು ಜನರ ವಯಸ್ಸು 50ಕ್ಕಿಂತ ಕಡಿಮೆ ಆಗಿದೆ. ಅವರಿಗೆ ತೀವ್ರವಾಗಿ ಕಾಯಿಲೆ ಭಾದಿಸಿಲ್ಲ. ಇದರಲ್ಲಿ ಅರ್ಧದಷ್ಟು ಮಂದಿ 80 ರ ವಯೋಮಾನದವರು ಎಂದು ವಿಶ್ವ ರೋಗ್ಯ ಸಂಸ್ಥೆಯ ವೈದ್ಯ ಹ್ಯಾನ್ಸ್ ಕ್ಲುಗೇ ಹೇಳಿದ್ದಾರೆ. 100 ಮತ್ತು ಅದಕ್ಕಿಂತ ಹೆಚ್ಚು ವಯೋಮಾನದವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಲ್ಯಾಬ್ಗಳಿಗೆ ಅನುಮತಿ
ದೇಶದಲ್ಲಿರುವ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಕೋವಿಡ್ 19 ವೈರಸ್ ಸೋಂಕಿನ ಪರೀಕ್ಷೆ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಷರತ್ತುಬದ್ಧ ಅನುಮತಿ ನೀಡಿದೆ. ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಹಾಗೂ ಪರಮಾಣು ಶಕ್ತಿ ಇಲಾಖೆ (ಟಿಎಇ) ಅಡಿಯಲ್ಲಿ ಬರುವ ಪ್ರಯೋಗಾಲಯ ಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದು, ಪರೀಕ್ಷೆ ಆರಂಭಕ್ಕೂ ಮೊದಲು ಐಸಿಎಂಆರ್ನ ಮಾರ್ಗ ಸೂಚಿಗಳನ್ನು ಪಾಲಿಸಬೇಕು. ರಾಜ್ಯ ಆರೋಗ್ಯಾಧಿಕಾರಿಗಳು ಅಥವಾ ಐಡಿಎಸ್ಪಿ ಶಿಫಾರಸು ಮಾಡಿದ ಬಳಿಕವೇ ಸ್ಯಾಂಪಲ್ಗಳ ಪರೀಕ್ಷೆ ನಡೆಸಬೇಕು. ಹಲ್ಲೆ ವಿರುದ್ಧ ವೈದ್ಯರ ಪ್ರತಿಭಟನೆ
ಸೋಂಕಿತರನ್ನು ಪರೀಕ್ಷೆ ಅಥವಾ ಶುಶ್ರೂಷೆಗೊಳಪಡಿಸುತ್ತಿರುವ ಲಕ್ಷಾಂತರ ವೈದ್ಯರಿಗೆ ಬೇಕಾದ ಸೋಂಕು ನಿರೋಧಕ ಉಡುಪುಗಳು ಅಗತ್ಯ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ವೈದ್ಯರೂ ಸೋಂಕಿಗೆ ಒಳಗಾಗುತ್ತಿದ್ದಾರೆ. ದೆಹಲಿಯಲ್ಲಿ ಏಳು ವೈದ್ಯರು, ಒಬ್ಬ ಶುಶ್ರೂಷಕರು, ಮುಂಬಯಿನಲ್ಲಿ ಐವರು ವೈದ್ಯರು, ಎಂಟು ಶುಶ್ರೂಷಕರು, ತಮಿಳುನಾಡು, ಜಮ್ಮು, ಚಂಡೀಗಡ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ತಲಾ ಒಬ್ಬೊಬ್ಬ ವೈದ್ಯರು, ಪಂಚಕುಲದಲ್ಲಿ ಶುಶ್ರೂಷಕಿ, ಬಿಹಾರದ ಆಸ್ಪತ್ರೆಯೊಂದರಲ್ಲಿ ಒಬ್ಬ ವೈದ್ಯರು ಸೋಂಕಿಗೆ ಒಳಗಾಗಿದ್ದಾರೆ. ಇದೇ ವೇಳೆ ದೇಶದ ಹಲವು ಭಾಗಗಳಲ್ಲಿ ವೈದ್ಯರು, ಸಿಬ್ಬಂದಿ ವಿರುದ್ಧ ಹಲ್ಲೆ ನಡೆದ ಪ್ರಕರಣಗಳು ನಡೆದಿವೆ. ಅದರ ವಿರುದ್ಧ ಶುಕ್ರವಾರ ಪ್ರತಿಭಟನೆಯನ್ನೂ ನಡೆಸಲಾಗಿದೆ. ಮತ್ತೆ 2 ಸಹಾಯವಾಣಿ;
ದೇಶವ್ಯಾಪಿ ಟೋಲ್ ಫ್ರೀ ಸಂಖ್ಯೆ: 1930
ಈಶಾನ್ಯ ಭಾರತಕ್ಕೆ ಮಾತ್ರ: 1944