Advertisement

ಮಾಸಾಂತ್ಯಕ್ಕೆ 10 ಲಕ್ಷ ಕೇಸ್‌? ಸೋಂಕು ವ್ಯಾಪಿಸುವಿಕೆಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯ

12:40 PM Jun 14, 2020 | sudhir |

ಹೊಸದಿಲ್ಲಿ: ಕಳೆದೊಂದು ವಾರದಲ್ಲಿ ಪ್ರತಿದಿನವೂ ಸುಮಾರು 10 ಸಾವಿರದಷ್ಟು ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ಭಾರತವು ಅಪಾಯಕಾರಿ ಹಂತಕ್ಕೆ ತಲುಪಿದೆ. ಸೋಂಕು ವ್ಯಾಪಿಸುವಿಕೆಗೆ ಕಡಿವಾಣ ಹಾಕದೇ ಇದ್ದರೆ, ಪ್ರಸಕ್ತ ಮಾಸಾಂತ್ಯದ ವೇಳೆಗೆ ದೇಶಾದ್ಯಂತ ಸೋಂಕಿತರ ಸಂಖ್ಯೆ 10 ಲಕ್ಷ ದಾಟುವುದರಲ್ಲಿ ಅನುಮಾನವಿಲ್ಲ ಎಂದು ಅಧ್ಯಯನ ವೊಂದು ಎಚ್ಚರಿಸಿದೆ.

Advertisement

ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಕವಾಗಿ ಹಬ್ಬುತ್ತಿದ್ದು, ಪ್ರಸಕ್ತ ತಿಂಗಳಲ್ಲಂತೂ ಸೋಂಕಿನ ವ್ಯಾಪಿಸುವಿಕೆ ಕಂಡು ಕೇಳರಿಯದಷ್ಟು ವೇಗ ಪಡೆದಿದೆ. ಜೂ.1ರಂದು ದೇಶಾದ್ಯಂತ ಸೋಂಕಿತರ ಸಂಖ್ಯೆ 1,90,535 ಆಗಿತ್ತು. ಜೂ.13ರ ವೇಳೆಗೆ ಇದು 3 ಲಕ್ಷ ದಾಟಿದೆ. ಅಂದರೆ, ಕೇವಲ 13 ದಿನಗಳಲ್ಲಿ 1.25 ಲಕ್ಷದಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ಸೋಂಕಿತರು ಮಾತ್ರವಲ್ಲದೆ ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೂ.1ರಿಂದ 13ರ ವರೆಗಿನ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಕೊರೊನಾಕ್ಕೆೆ ಬಲಿಯಾಗಿದ್ದಾರೆ. ಇದು ಹೀಗೇ ಮುಂದು ವರಿದರೆ ಜೂನ್‌ ಅಂತ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಲಿದ್ದಾರೆ.

ಮುಂದುವರಿದಿದೆ ಪ್ರಯತ್ನ: ಇದೇ ವೇಳೆ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದ್ದು, ಕೇಂದ್ರ ಸರಕಾರವು ಕೋವಿಡ್ ಪರೀಕ್ಷೆ ನಡೆಸುವ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಶುಕ್ರವಾರ 24 ಗಂಟೆಗಳ ಅವಧಿಯಲ್ಲಿ 1,43,737 ಸ್ಯಾಂಪಲ್‌ಗಳನ್ನು ಪರೀಕ್ಷಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ. ಈವರೆಗೆ ದೇಶಾದ್ಯಂತ 5.57 ಲಕ್ಷ ಸ್ಯಾಂಪಲ್‌ಗ‌ಳ ಪರೀಕ್ಷೆ ನಡೆದಿದೆ ಎಂದೂ ಐಸಿಎಂಆರ್‌ ತಿಳಿಸಿದೆ.

“ನೆಗೆಟಿವ್‌’ ಪ್ರಮಾಣಪತ್ರ ಕಡ್ಡಾಯ: ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ರಾಜ್ಯಕ್ಕೆ ಮರಳುವ ವಲಸಿಗರು ಕಡ್ಡಾಯವಾಗಿ ಕೊರೊನಾ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಲೇಬೇಕು ಎಂದು ಕೇರಳ ಸರಕಾರ ಸ್ಪಷ್ಟ ಪಡಿಸಿದೆ. ಶನಿವಾರ ಈ ವಿಷಯ ತಿಳಿಸಿದ ರಾಜ್ಯ ಸರಕಾ ರದ ಪ್ರಧಾನ ಕಾರ್ಯದರ್ಶಿ ಡಾ| ಕೆ.ಇಳಂಗೋವನ್‌, ಜೂ. 20ರಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಖಾಸಗಿ ವಿಮಾನದ ಮೂಲಕ ಕೇರಳಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಲೇಬೇಕು. ವಲಸಿಗರಿಂದ ಸೋಂಕು ಹೆಚ್ಚಳ ವಾಗುತ್ತಿರುವುದನ್ನು ತಡೆಯಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. ಆದರೆ ವಂದೇ ಭಾರತ್‌ ಮಿಷನ್‌ ವಿಮಾನಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಒಂದೇ ದಿನ ದೇಶಾದ್ಯಂತ 11,458 ಮಂದಿಗೆ ಸೋಂಕು
ದೇಶವಾಸಿಗಳ ಭೀತಿ ಇನ್ನಷ್ಟು ಹೆಚ್ಚಿಸುವಂತೆ ಒಂದೇ ದಿನ ದೇಶಾದ್ಯಂತ 11,458 ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ ಅಂದರೆ 24 ಗಂಟೆಗಳ ಅವಧಿಯಲ್ಲಿ 386 ಮಂದಿ ಮೃತಪಟ್ಟು, 11,458 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 3,493 ಮಂದಿಗೆ ಸೋಂಕು ದೃಢಪಡುವ ಮೂಲಕ, ರಾಜ್ಯದ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ದೇಶದಲ್ಲಿ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿರುವ ಮೊದಲ ರಾಜ್ಯ ಎಂಬ ಕುಖ್ಯಾತಿಗೆ ಮಹಾ ರಾಷ್ಟ್ರ ಪಾತ್ರವಾಗಿದೆ. ಇನ್ನು, ಈ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು , ದೆಹಲಿ ಮೂರನೇ ಸ್ಥಾನದಲ್ಲಿದೆ. ಈ ನಡುವೆ, ದೇಶದಲ್ಲಿ ಗುಣಮುಖ ಪ್ರಮಾಣ ಶೇ.49.94ಕ್ಕೇರಿದ್ದು, ಈವರೆಗೆ 1,54,330 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisement

ಭಾರತದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತ
ಕೋವಿಡ್ ಸೋಂಕಿನಿಂದ ಜಾಗತಿಕವಾಗಿ ಮಹಿಳೆಯರಿಗಿಂತ ಪುರುಷರು ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ದೃಢಪಟ್ಟಿದೆ. ಆದರೆ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಜರ್ನಲ್‌ ಆಫ್ ಗ್ಲೋಬಲ್‌ ಹೆಲ್ತ್‌ ಸೈನ್ಸ್‌ ಪ್ರಕಟಿಸಿರುವ ಅಧ್ಯಯನದ ಪ್ರಕಾರ, ಭಾರತದಲ್ಲಿ ಮೇ 20ರವರೆಗೆ ಕೊರೊನಾ ಮರಣ ಪ್ರಮಾಣವು ಪುರುಷರಲ್ಲಿ ಶೇ.2.9ರಷ್ಟು ಇದ್ದರೆ, ಮಹಿಳೆಯರಲ್ಲಿ ಶೇ.3.3ರಷ್ಟು ಇದೆ. 5ರಿಂದ 19 ವರ್ಷದ ವರೆಗಿನ ಪುರುಷರಲ್ಲಿ ಮರಣ ಪ್ರಮಾಣ ಅತಿ ಕಡಿಮೆ ಇರುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next