Advertisement

ಕೋವಿಡ್ 19: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

07:03 PM Apr 27, 2020 | Suhan S |

ಮುಂಬಯಿ,ಎ. 25:  ಕೋವಿಡ್ 19 ಸೋಂಕು ಜನರ ಆರೋಗ್ಯ ಹದಗೆಡುಸುವುದರ ಜತೆಗೆ, ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿದೆ. ದೇಶಾದ್ಯಂತದ 11ನೇ ತರಗತಿ ಮತ್ತು 12 ವಿದ್ಯಾರ್ಥಿಗಳಲ್ಲಿ ಸಮೀಕ್ಷೆ ನಡೆಸಿದ್ದು ಇದರಲ್ಲಿ ಶೇ. 42ರಷ್ಟು ವಿದ್ಯಾರ್ಥಿಗಳು ಕೋವಿಡ್ 19 ಹಿನ್ನೆಲೆಯಲ್ಲಿ ತಮ್ಮ ವೃತ್ತಿ ಯೋಜನೆಗಳನ್ನು ಮರುಪರಿಶೀಲಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

Advertisement

ವೃತ್ತಿಜೀವನದ ಸಮಾಲೋಚನೆ ಮತ್ತು ಮಾರ್ಗದರ್ಶನ ವೇದಿಕೆಯಾದ ಮೈಂಡ್ಲರ್‌ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಭಾಗವಾಗಿ ದೇಶಾದ್ಯಂತ ಒಟ್ಟು 47,560 ವಿದ್ಯಾರ್ಥಿಗಳನ್ನು ಪರೀಕ್ಷಿಸಿದೆ. ಪ್ರವೇಶ ಪರೀಕ್ಷೆಗಳನ್ನು ಮುಂದೂಡುವುದು ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ತಮ್ಮ ಪ್ರವೇಶವನ್ನು ಮುಂದೂಡಿದ್ದರಿಂದ, ಸಮೀಕ್ಷೆಯ ಫ‌ಲಿತಾಂಶದಲ್ಲಿ ವಿದ್ಯಾರ್ಥಿಗಳು ಈಗ ತಮ್ಮ ವೃತ್ತಿ ಯೋಜನೆಗಳನ್ನು ಪುನರ್‌ವಿಮರ್ಶಿಸುತ್ತಿದ್ದಾರೆ ಎನ್ನಲಾಗಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ. 19ರಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ಯೋಜನೆಯನ್ನು ಹೊಂದಿದ್ದರು, ಅವರಲ್ಲಿ ಶೇ. 78ರಷ್ಟು ವಿದ್ಯಾರ್ಥಿಗಳು ಈ ಯೋಜನೆಗಳಲ್ಲಿನ ಬದಲಾವಣೆಗಳನ್ನು ಪರಿಗಣಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗವು ವಿದೇಶ ಪ್ರವಾಸದ ಬಗ್ಗೆ ಸಂಶಯವನ್ನು ಹುಟ್ಟುಹಾಕಿದೆ. ಅಂತಹ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವಿದೇಶಿ ವಿಶ್ವವಿದ್ಯಾಲಯಕ್ಕೆ ಹೋಗುವ ಕುರಿತು ಚಿಂತಿತರಾಗಿದ್ದಾರೆ ಎಂದು ವರದಿ ಹೇಳಿದೆ. ಈ ಪೈಕಿ ಶೇ. 55ರಷ್ಟು ವಿದ್ಯಾರ್ಥಿಗಳು ತಮ್ಮ ಯೋಜನೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ವರದಿ ಹೇಳಿದರೆ ಶೇ. 35ರಷ್ಟು ವಿದ್ಯಾರ್ಥಿಗಳು ತಮ್ಮ ಯೋಜನೆಗಳನ್ನು ಒಂದು ವರ್ಷದವರೆಗೆ ಮುಂದೂಡಲು ಯೋಜಿಸುತ್ತಿದ್ದಾರೆಂದು ಹೇಳಿದೆ. ಇನ್ನು ಉಳಿದಂತೆ ಶೇ. 10ರಷ್ಟು ವಿದ್ಯಾರ್ಥಿಗಳು ಇತರ ಆಯ್ಕೆಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ಹೇಳಿದೆ. ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸಿದ್ದ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಯುಎಸ್‌ಎ ಮತ್ತು ಯುಕೆಗೆ ಹೋಗುವ ಉದ್ದೇಶ ಹೊಂದಿದ್ದರು ಎಂದು ಸಮೀಕ್ಷೆ ತಿಳಿಸಿದೆ.

ಕೋವಿಡ್ 19 ವೈರಸ್‌ ಹಿನ್ನೆಲೆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಮತ್ತು ಅನಿಶ್ಚಿತತೆಗೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಸಮೀಕ್ಷೆಯ ಅರ್ಧದಷ್ಟು ವಿದ್ಯಾರ್ಥಿಗಳು ತಾವು ಹೆಚ್ಚಿನ ಸಮಯವನ್ನು ಮುಂದೂಡಿಕೆ ಮತ್ತು ಆಲಸ್ಯದಲ್ಲಿ ಕಳೆದಿದ್ದೇವೆ ಎಂದು ಹೇಳಿದರು. ಶೇ 66ರಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಪ್ರವೇಶದ್ವಾರಗಳತ್ತ ಸಕಾರಾತ್ಮಕ ಒಲವನ್ನು ತೋರಿಸುವುದರಿಂದ, ಇದು ವಿಶ್ವವಿದ್ಯಾಲಯಗಳಿಗೆ ಪರಿಹಾರವಾಗಿ ಬರಬಹುದು. ಆನ್‌ಲೈನ್‌ ಮೌಲ್ಯಮಾಪನಗಳ ಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ಆರಾಮದಾಯಕವಾಗಿದ್ದಾರೆ. ಶೇ. 79ರಷ್ಟು ವಿದ್ಯಾರ್ಥಿಗಳು ಅಗತ್ಯವಿದ್ದಲ್ಲಿ ಆನ್‌ಲೈನ್‌ ಸಂದರ್ಶನಗಳೊಂದಿಗೆ ಆರಾಮವಾಗಿರುತ್ತಾರೆ ಎಂದು ವರದಿ ಹೇಳಿದೆ.

ಮೈಂಡ್ಲರ್‌ನ ಸ್ಥಾಪಕ ಮತ್ತು ಸಿಇಒ ಪ್ರತೀಕ್‌ ಭಾರ್ಗವ ಅವರು ಮಾತನಾಡಿ, ದೇಶಾದ್ಯಂತ ನಡೆಯುತ್ತಿರುವ ಬಿಕ್ಕಟ್ಟು ವಿದ್ಯಾರ್ಥಿಗಳಿಗೆ ಮತ್ತು ಆನ್‌ಲೈನ್‌ ಶಿಕ್ಷಣ ವೇದಿಕೆಗಳಿಗೆ ದೀರ್ಘ‌ಕಾಲೀನ ಪರಿಣಾಮ ಬೀರುತ್ತದೆಯಾದರೂ, ಸಮಯಕ್ಕೆ ಸರಿಯಾಗಿ ಅವರಿಗೆ ಅಗತ್ಯ ನಿರ್ದೇಶನವನ್ನುನೀಡುವುದರಿಂದ ಅವರ ವೃತ್ತಿಜೀವನ ಯೋಜನೆಗಳಿಗೆ ಮಾರ್ಗ ತೋರಿಸಬಹುದು. ಕಲಿಕೆಯ ಪ್ರಕ್ರಿಯೆಯು ಮುಂದುವರಿಯುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಎಲ್ಲರ ಅಂತಿಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next