Advertisement

ಧಾರವಾಡ: SDM ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಉದ್ಘಾಟನೆ

11:06 PM Jul 17, 2020 | Hari Prasad |

ಧಾರವಾಡ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ.

Advertisement

ಲಾಕ್ ಡೌನ್ ಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿಯಾದುದು, ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡುತ್ತಿರುವ ಎಸ್.ಡಿ.ಎಂ. ಆಸ್ಪತ್ರೆ ಉಳಿದ ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ಸತ್ತೂರಿನ ಎಸ್.ಡಿ.ಎಂ. ಆಸ್ಪತ್ರೆಯಲಗಲಿ ಇಂದು ಸಂಜೆ ಕೋವಿಡ್ ತಪಾಸಣೆ ವೈರಾಲಜಿ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೋವಿಡ್ ಸೋಂಕಿತರ ತ್ವರಿತ ಪತ್ತೆಗೆ ಮತ್ತೊಂದು ಪ್ರಯೋಗಾಲಯ ಪ್ರಾರಂಭವಾಗುತ್ತಿರುವುದು ನೆರವಾಗಲಿದೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಎಸ್.ಡಿ.ಎಂ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡುತ್ತಾ ಇತರ ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ‌.

ಕೋವಿಡ್ ವಾರಿಯರ್ ಗಳಾಗಿರುವ ವೈದ್ಯರು, ನರ್ಸ್ ಗಳ ಸೇವೆ ಅನನ್ಯವಾದುದು. ಕೋವಿಡ್ ಬಗ್ಗೆ ಮಾಧ್ಯಮಗಳು ಭಯ ಸೃಷ್ಟಿಸದೇ, ಜಾಗೃತಿ ಮೂಡಿಸಬೇಕು. ಶೇ.64 ರಷ್ಟು ಜನ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಕೋವಿಡ್ ತಡೆಗೆ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ತ್ವರಿತವಾಗಿ ಕಾರ್ಯೋನ್ಮುಖರಾದ ಪರಿಣಾಮ ಇಂದು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿದೆ. ಜನರ ಅಭಿಪ್ರಾಯ ಆಧರಿಸಿ ಜಿಲ್ಲೆಯಲ್ಲಿ ಹತ್ತು ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಪ್ರತಿಯೊಬ್ಬರೂ ಸ್ವಯಂ ನಿರ್ಬಂಧ ಹಾಕಿಕೊಂಡು ಕೋವಿಡ್ 19 ಸೋಂಕು ತಡೆಗಟಗಟ್ಟುವಲ್ಲಿ ಕೈಜೋಡಿಸಬೇಕು ಎಂದರು.

ಆನ್ ಲೈನ್ ಗೂಗಲ್ ಮೀಟ್ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಷಿ ಅವರು, ಈ ವಿಷಮ ಪರಿಸ್ಥಿತಿ ಎದುರಿಸಿ ಜಯಿಸಬೇಕಾಗಿದೆ.

ಸೋಂಕಿನ ಸರಪಳಿ ತುಂಡರಿಸಲು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಜೊತೆಗೆ ಹೆಚ್ಚು ಪರೀಕ್ಷೆಗಳೂ ಆಗಬೇಕು. ನಮ್ಮ ದೇಶದ ಜನಸಂಖ್ಯೆ, ಜನಸಾಂದ್ರತೆಗೆ ಹೋಲಿಸಿದಾಗ ಕೋವಿಡ್ ನಿಯಂತ್ರಣದಲ್ಲಿ ಪ್ರಧಾನ ಮಂತ್ರಿಗಳ ದೂರದೃಷ್ಟಿಯುಳ್ಳ ಕ್ರಮಗಳು ಉತ್ತಮ ಪರಿಣಾಮ ನೀಡುತ್ತಿವೆ.

ದೇಶದಲ್ಲಿ ಕಳೆದ ಜನವರಿ 1ರ ಹೊತ್ತಿಗೆ ಪಿಪಿಇ ಕಿಟ್, ಎನ್ 95 ಮಾಸ್ಕ್ ಗಳ ಲಭ್ಯತೆ ವಿರಳವಾಗಿತ್ತು. ಈಗ ಪ್ರತಿನಿತ್ಯ ಭಾರತದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹೊರದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ.

ಕೋವಿಡ್ ಭಯಾನಕ ಖಾಯಿಲೆಯಲ್ಲ, ಕಳೆದ ಹತ್ತು ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ಆತ್ಮವಿಶ್ವಾಸದಿಂದ ಕೋವಿಡ್ ನಿಂದಲೂ ಗುಣಮುಖರಾಗಿರುವುದನ್ನು ಗಮನಿಸಿದಾಗ ಸಾರ್ವಜನಿಕರ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.

ಗೂಗಲ್ ಮೀಟ್ ಮೂಲಕ ಮಾತನಾಡಿದ,ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರ ಒತ್ತಾಸೆಯಿಂದ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಕೋವಿಡ್ ತಪಾಸಣೆ ಪ್ರಯೋಗಾಲಯ ಸ್ಥಾಪಿಸಲು, ಐಸಿಎಂಆರ್ ಹಾಗೂ ಎನ್.ಎ.ಬಿ.ಎಲ್ ಮಾನ್ಯತೆ ಶೀಘ್ರ ದೊರಕಲು ಸಾಧ್ಯವಾಗಿದೆ. ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು,ಅರೆವೈದ್ಯಕೀಯ ಸಿಬ್ಬಂದಿ ಪರಿಶ್ರಮ ಶ್ಲಾಘನೀಯ ಎಂದರು.

ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿ, ಕಾಲೇಜು ನಿರ್ದೇಶಕ ಡಾ. ನಿರಂಜನ ಕುಮಾರ, ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗಡೆ, ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಆರ್. ಡಿ. ಕುಲಕರ್ಣಿ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ ಕಲ್ಲಾಪುರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next