Advertisement

ಕರಾವಳಿಯಲ್ಲಿ “ಜನತಾ ಕರ್ಫ್ಯೂ’ಯಶಸ್ಸು; ಸಂಚಾರ ಸ್ಥಗಿತ-ವ್ಯಾಪಾರ ವಹಿವಾಟು ಬಂದ್‌

02:41 AM Mar 23, 2020 | Sriram |

ಮಂಗಳೂರು: ಜಗತ್ತಿನಾದ್ಯಂತ ಕೋಲಾಹಲವನ್ನೇ ಸೃಷ್ಟಿರುವ ಕೋವಿಡ್‌ 19 ಮಹಾಪಿಡುಗಿನ ನಿಯಂತ್ರಣದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಪ್ರಕಾರ “ಜನತಾ ಕರ್ಫ್ಯೂ’ ರವಿವಾರ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

Advertisement

ಜಿಲ್ಲೆಯಾದ್ಯಂತ ಖಾಸಗಿ ಹಾಗೂ ಸರಕಾರಿ ಬಸ್‌ ಸಂಚಾರ ಬಂದ್‌ ಆಗಿ, ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಪ್ರಧಾನಿ ಕರೆಗೆ ಓಗೊಟ್ಟ ಜಿಲ್ಲೆಯ ಜನರು ಮನೆಯಿಂದ ಹೊರ ಬಾರದೆ ವಿನೂತನವಾಗಿ “ಜನತಾ ಕರ್ಫ್ಯೂ’ ಬೆಂಬಲಿಸಿದರು. ಸಂಜೆ 5ಕ್ಕೆ ಬಹುತೇಕ ಮನೆ ಮಂದಿ ಮನೆಯ ಹೊರಭಾಗಕ್ಕೆ ಬಂದು ಚಪ್ಪಾಳೆ ತಟ್ಟುವ ಮೂಲಕ ವೈದ್ಯಕೀಯ ಸೇವೆ ಸಲ್ಲಿಸಿದವರಿಗೆ ಧನ್ಯವಾದ ಸಲ್ಲಿಸಲಾಯಿತು.

ರೈಲಿನಲ್ಲಿ ಬಂದವರ ಪರದಾಟ
ದ.ಕ. ಜಿಲ್ಲೆಯಲ್ಲಿ ಮಂಗಳೂರು ನಗರದಲ್ಲಿ “ಜನತಾ ಕರ್ಫ್ಯೂ’ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಸ್ತೆಗಳಲ್ಲಿ ವಾಹನಗಳಿಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ಇತ್ತು. ರವಿವಾರ ಮುಂಜಾನೆ ಕೊಂಚ ಸಮಯ ಕೆಲವು ಅಂಗಡಿ-ಮುಂಗಟ್ಟುಗಳು ತೆರೆದಿದ್ದು ಹೊರತುಪಡಿಸಿ ಬಳಿಕ ರಾತ್ರಿಯ ವರೆಗೂ ನಗರದ ಎಲ್ಲ ಅಂಗಡಿ- ಮಳಿಗೆಗಳು ಬಂದ್‌ಆಗಿದ್ದವು. ಬೆರಳೆಣಿಕೆ ದ್ವಿಚಕ್ರ ಹಾಗೂ ಕಾರು ಅಲ್ಲೊಂದು- ಇಲ್ಲೊಂದು ಕಾಣುತ್ತಿದ್ದವು ರೈಲು ಸಂಚಾರ ಸಂಪೂರ್ಣ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿಯೂ ಜನ ಇರಲಿಲ್ಲ. ಆದರೆ ನಿನ್ನೆ ಹೊರಟ ರೈಲು ರವಿವಾರ ಬೆಳಗ್ಗೆ-ಮಧ್ಯಾಹ್ನ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಬಂದ ಕಾರಣದಿಂದ ಪ್ರಯಾಣಿಕರೆಲ್ಲರನ್ನು ಸ್ಕ್ರೀನಿಂಗ್‌ ನಡೆಸಲಾಯಿತು. ಅವರು ವಾಹನಗಳಿಲ್ಲದೆ ಪರದಾಡಿದರು.

ಉಳಿದಂತೆ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿಯೂ “ಜನತಾ ಕರ್ಫ್ಯೂ’ ಯಶಸ್ವಿಯಾಗಿದೆ. ಮನೆ ಮಂದಿಯೆಲ್ಲ ಮನೆಯಿಂದ ಹೊರಬಾರದೆ ಉಳಿದುಕೊಂಡರು. ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿಯೂ “ಜನತಾ ಕರ್ಫ್ಯೂ’ ಅಭೂತಪೂರ್ವ ಯಶಸ್ಸು ಕಂಡಿದೆ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದು, ವಾಹನ ಸಂಚಾರವೇ ಇರಲಿಲ್ಲ. ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ವಾಹನ ಸಂಚಾರವೇ ಇರಲಿಲ್ಲ. ಅಂಗಡಿ ಮುಂಗಟ್ಟುಗಳು ಕೂಡ ಬಾಗಿಲು ಹಾಕಿದ್ದವು.

ದೇಗುಲಗಳಲ್ಲಿ ಪೂಜೆ ಮಾತ್ರ
ಇದೇ ಮೊದಲ ಬಾರಿಗೆ ಎಂಬಂತೆ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ನಿತ್ಯ ಪೂಜೆ ಮಾತ್ರ ಇತ್ತು. ವಿಶೇಷ ಪೂಜೆ ಇರಲಿಲ್ಲ. ಕೆಲವು ದೇವಸ್ಥಾನಗಳಿಗೆ ಭಕ್ತಾದಿಗಳ ಸಂಖ್ಯೆ ಕಡಿಮೆಯಿದ್ದರೆ, ಇನ್ನೂ ಕೆಲವು ದೇವಸ್ಥಾನಗಳನ್ನು ನಿತ್ಯ ಪೂಜೆಯ ಬಳಿಕ ಬಂದ್‌ ಮಾಡಲಾಗಿತ್ತು.

Advertisement

ನಗರದ ಸ್ಟೇಟ್‌ ಬ್ಯಾಂಕ್‌ ಸಮೀಪದ ಮಸ್ಜಿದ್‌ ಇಬ್ರಾಹಿಂ ಖಲೀಲ್‌ ನಲ್ಲಿ ಸಾಮೂಹಿಕ ನಮಾಜ್‌ ನಿರ್ವಹಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ದ.ಕ.ಮತ್ತು ಸಂಯುಕ್ತ ಖಾಝಿಯ ಕರೆಯಂತೆ ಬಹುತೇಕ  ಮಂದಿ ರವಿವಾರ ಮಸೀದಿಗಳ ಬದಲು ಮನೆಯಲ್ಲೇ ನಮಾ ಜ್‌ ನಿರ್ವಹಿಸಿದರು.

ಅಗತ್ಯ ಸೇವೆಗಳಾದ ವೆನಾÉಕ್‌, ಲೇಡಿಗೋಷನ್‌ ಸೇರಿದಂತೆ ಸರಕಾರಿ-ಖಾಸಗಿ ಆಸ್ಪತ್ರೆಗಳು, ಔಷಧ ಮಳಿಗೆಗಳು, ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳು, ಆ್ಯಂಬುಲೆನ್ಸ್‌, ಪೆಟ್ರೋಲ್‌ ಬಂಕ್‌, ಹಾಲು, ಪತ್ರಿಕೆಗೆ ಅವಕಾಶ ನೀಡಲಾಗಿತ್ತು. ಎಟಿಎಂ ಹಾಗೂ ಸುದ್ದಿ ಮಾಧ್ಯಮ ಕಚೇರಿಗಳು ತೆರೆದಿದ್ದವು.

“ಚಪ್ಪಾಳೆ’ಯ ಅಭಿನಂದನೆ
ಪ್ರಧಾನಿ ಮೋದಿ ಆಶಯದಂತೆ ರವಿವಾರ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ “ಜನತಾ ಕರ್ಫ್ಯೂ’ ಆಚರಿಸಿದ ಜಿಲ್ಲೆಯ ಜನರು ಸಂಜೆ 5ಕ್ಕೆ ಮನೆಯಿಂದ ಹೊರಗೆ ಬಂದು ಮನೆಮಂದಿಯೆಲ್ಲ ಚಪ್ಪಾಳೆ ತಟ್ಟಿ ಕೊರೊನಾ ವಿರುದ್ಧ ಹೋರಾಡುವವರಿಗೆ ಅಭಿನಂದನೆ ಸಲ್ಲಿಸಿದರು. ನಗರದ ವಿವಿಧ ಫ್ಲ್ಯಾಟ್‌, ಮನೆ, ಮಾಲ್‌, ಕಚೇರಿಗಳ ಮುಂಭಾಗದಲ್ಲಿ, ದೇವಸ್ಥಾನಗಳಲ್ಲಿ ಸಂಜೆ 5ಕ್ಕೆ 5 ನಿಮಿಷ ಕಾಲ ಚಪ್ಪಾಳೆಯ ಅಭಿನಂದನೆ ಸಲ್ಲಿಸಿದರು. ಹಲವರು ಘಂಟೆ, ಶಂಖ, ಜಾಗಟೆ, ತಾಳ, ಚೆಂಡೆ, ಡೋಲು ಬಾರಿಸಿ ಅಭಿನಂದನೆ ಸಲ್ಲಿಸಿದರು.

ಧರ್ಮಪ್ರಾಂತದ ಎಲ್ಲ 124 ಚರ್ಚ್‌ಗಳಲ್ಲಿಯೂ ಸಂಜೆ 5 ಘಂಟೆಗೆ ಗಂಟೆಯನ್ನು ಮೊಳಗಿಸಿ ಗೌರವ ಸಲ್ಲಿಸಲಾಯಿತು. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಉರ್ವ ಸಮೀಪದ ತನ್ನ ಮನೆಯಲ್ಲಿ, ಶಾಸಕ ವೇದವ್ಯಾಸ ಕಾಮತ್‌ ಅವರು ಮಣ್ಣಗುಡ್ಡದಲ್ಲಿರುವ ಮನೆಯಲ್ಲಿ, ಡಾ| ವೈ. ಭರತ್‌ ಶೆಟ್ಟಿ ಅವರು ಕೊಂಚಾಡಿಯ ಮನೆಯಲ್ಲಿ, ಶಾಸಕ ಯು.ಟಿ. ಖಾದರ್‌ ಬೆಂಗಳೂರಿನ ಮನೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಕೊರೊನಾ ಹುಟ್ಟಡಗಿಸಲು ಉಡುಪಿ ಜಿಲ್ಲೆಯ ಸಮಗ್ರ ಜನತೆ ಸ್ವಯಂಸ್ಫೂರ್ತಿಯಿಂದ ಜನತಾ ಕರ್ಫ್ಯೂನಲ್ಲಿ ಪಾಲ್ಗೊಂಡಿತು. ಕೊರೊನಾ ರೋಗದ ವ್ಯಾಪಕ ಹಬ್ಬುವಿಕೆಗೆ ಜನತೆ ಭಯ
ಭೀತರಾಗಿರುವುದೂ ಕಂಡು ಬರುತ್ತಿದೆ.

ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ತಾಲೂಕುಗಳಲ್ಲಿ ಯಾರೊಬ್ಬರೂ ಬಂದ್‌ ಮಾಡಲು ರಸ್ತೆಗೆ ಇಳಿಯದೆ ಇದ್ದರೂ ಶೇ. 100 ಎಂಬಂತೆ ಅಂಗಡಿ, ಹೊಟೇಲು, ಮಾಲ್‌, ಸಣ್ಣ ಪುಟ್ಟ ವ್ಯಾಪಾರಸ್ಥರು ಬಂದ್‌ ಮಾಡಿ ಜನತಾ ಕರ್ಫ್ಯೂಗೆ ಸಹಮತ ವ್ಯಕ್ತಪಡಿಸಿದರು.

ಜನತಾ ಕರ್ಫ್ಯೂಗೆ ಪಕ್ಷಾತೀತ ಬೆಂಬಲ ವ್ಯಕ್ತ ವಾಯಿತು. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನಾಯಕರು ದೇಶದ ಹಿತದೃಷ್ಟಿಯಿಂದ ಬಂದ್‌ಗೆ ಕರೆ ನೀಡಿರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಆದರೆ ಬಿಜೆಪಿ ಕಾರ್ಯ ಕರ್ತರು ಸಹ ಅಂಗಡಿಗಳನ್ನು ಮುಚ್ಚಲು ಯಾವುದೇ ಪರಿಶ್ರಮ ವಹಿಸಲಿಲ್ಲ.

ಮಣಿಪಾಲದಲ್ಲೂ ಯಶಸ್ವಿ
ಸುಮಾರು 60 ದೇಶಗಳ ವಿದ್ಯಾರ್ಥಿಗಳ ಬೀಡಾದ ಮಣಿಪಾಲ ನಗರದಲ್ಲಿಯೂ ಜನರು ಮನೆಯಿಂದ ಹೊರಗೆ ಬರಲಿಲ್ಲ. ಇದರಿಂದಾಗಿ ಸಾಕಷ್ಟು ಜನರು ಮನೆಯಲ್ಲಿ ಸ್ವತ್ಛತೆಯ ಕೆಲಸಗಳನ್ನೂ ಮಾಡಿದರು. ಜನಸ್ಪಂದನ ಎಷ್ಟಿತ್ತೆಂದರೆ ದನ ಸಾಕುವವರೂ ದನಗಳನ್ನು ಹೊರಗೆ ಬಿಡಲಿಲ್ಲ. “ಇಂದು ಜನತಾ ಕರ್ಫ್ಯೂ ಅಲ್ಲವೆ? ಆದ್ದರಿಂದ ನಾನು ದನಗಳನ್ನು ಹೊರಗೆ ಕಟ್ಟಲಿಲ್ಲ’ ಎಂಬ ಉದ್ಗಾರ ಮಟ್ಟುವಿನ ಸಾವಿತ್ರಿ ಅವರದು.

ಖಾಸಗಿ ಎಕ್ಸ್‌ಪ್ರೆಸ್‌, ಶಟಲ್‌ ಬಸ್‌, ಸಿಟಿ ಬಸ್‌, ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌, ಆಟೋ ರಿಕ್ಷಾಗಳೂ ರಸ್ತೆಗೆ ಇಳಿಯಲಿಲ್ಲ. ವಾಹನ ಸಂಚಾರ ವಿಲ್ಲದ ಕಾರಣ ಬೆರಳೆಣಿಕೆ ಜನರಿಗೆ ತೊಂದರೆ ಯಾಯಿತು. ಇಂಥವರು ಸಿಟಿ ಬಸ್‌ ನಿಲ್ದಾಣ, ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣಗಳಲ್ಲಿ ಕಾಯುತ್ತಿದ್ದರು. ತೀರಾ ವಿರಳವೆಂಬಂತೆ ಖಾಸಗಿ ಕಾರುಗಳು ಸಂಚರಿಸುತ್ತಿದ್ದವು. ಸಹಜ ಬಂದ್‌ ಕರೆಗಳ ಹೊತ್ತಿಗೆ ಸಂಜೆ ವೇಳೆ ಆರಂಭವಾಗುತ್ತಿದ್ದ ಖಾಸಗಿ ಬಸ್‌ಗಳು ರವಿವಾರ ಸಂಜೆ ಆರಂಭವಾಗಲಿಲ್ಲ. ಬೆಂಗಳೂರು ಮೊದಲಾದೆಡೆಗಳಿಂದ ಬಂದ ಅಪರೂಪದ ಪ್ರಯಾಣಿಕರು ಮನೆಯವರಿಗೆ ದೂರವಾಣಿ ಕರೆ ನೀಡಿ ಮನೆಗೆ ತೆರಳಿದರು.

ಪ್ರತಿ ರವಿವಾರ ಗ್ರಾಹಕರು, ತರಕಾರಿ ವ್ಯಾಪಾ ರಸ್ಥರಿಂದ ತುಂಬಿತುಳುಕುತ್ತಿದ್ದ ಕಲ್ಯಾಣಪುರ ಸಂತೆಕಟ್ಟೆಯ ಸಂತೆ ರದ್ದಾದ ಕಾರಣ ರಾಷ್ಟ್ರೀಯ ಹೆದ್ದಾರಿ ಇದೇ ಮೊದಲ ಬಾರಿಗೆ ನಿರಾಳವಾಗಿರುವಂತೆ ಕಂಡುಬಂತು.

ದೇವಸ್ಥಾನಗಳು, ಬೀಚ್‌ಗಳಲ್ಲಿ ಇದೇ ಮೊದಲ ಬಾರಿ ಜನರಿರಲಿಲ್ಲ. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ಜನರು ಇದ್ದಿರಲಿಲ್ಲ. ಮೆಡಿಕಲ್‌ ಶಾಪ್‌ಗ್ಳು ತೆರೆದಿದ್ದರೂ ಮಾಸ್ಕ್ಗಳಿಗೆ ಮಾತ್ರ ಅಪರೂಪದಲ್ಲಿ ಬೇಡಿಕೆ ಇರುತ್ತಿತ್ತು. ಬಹುತೇಕ ಹೊಟೇಲು, ಲಾಡ್ಜ್ಗಳು ಮುಚ್ಚಿದ್ದವು. ಕೆಲವು ದಿನಗಳಿಂದ ಅತಿಥಿಗೃಹಗಳು, ಲಾಡ್ಜ್ಗಳು ಗ್ರಾಹಕರಿಲ್ಲದೆ ಖಾಲಿ ಖಾಲಿ ಆಗುತ್ತಿವೆ.

ಕೊಂಕಣ ರೈಲ್ವೇ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳನ್ನು ಮಾ. 31ರ ವರೆಗೆ ರದ್ದುಪಡಿಸಿದ ಕಾರಣ ಸದ್ಯ ರೈಲುಗಳಲ್ಲಿ ಪ್ರಯಾಣಿಸುವುದೂ ದುಸ್ತರವಾಗಿದೆ.

ಮಣಿಪಾಲ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳು ಸಂಪೂರ್ಣ ಸುಸಜ್ಜಿತಗೊಂಡು ಕಾರ್ಯಾಚರಿಸುತ್ತಿದ್ದರೂ ಜನತಾ ಕರ್ಫ್ಯೂನಿಂದಾಗಿ ರೋಗಿಗಳು ಬರಲಿಲ್ಲ. ಜಿಲ್ಲಾಸ್ಪತ್ರೆ, ಮಣಿಪಾಲ ಆಸ್ಪತ್ರೆ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಅಧಿಕಾರಿಗಳು, ಸಿಬಂದಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಅಧಿಕಾರಿಗಳೂ ಮನೆಯಲ್ಲೇ
ಎಂಜಿಎಂ ಕಾಲೇಜಿನ ಮೈದಾನದಲ್ಲಿ ಯುವಕರು ಪಂದ್ಯಾಟದಲ್ಲಿ ನಿರತರಾಗಿದ್ದರು. ಹೆಚ್ಚಿನ ಮನೆಯವರು ರವಿವಾರ ಮಲ್ಪೆ ಬೀಚ್‌, ದೇವಸ್ಥಾನಗಳಿಗೆ ಹೋಗುತ್ತಿದ್ದರು. ಅಂತಹವರು ಈ ರವಿವಾರ ಮನೆಯಲ್ಲಿಯೇ ಕುಳಿತು ಕುಟುಂಬದೊಂದಿಗೆ ಕಲೆತರು. ಜಿಲ್ಲಾಧಿಕಾರಿಗಳು, ಎಸ್‌ಪಿಯಂತಹ ಹಿರಿಯ ಅಧಿಕಾರಿಗಳೂ ಅಪರೂಪದಲ್ಲಿ ಮನೆಯಲ್ಲಿ ಉಳಿದು ಕುಟುಂಬದ ಸದಸ್ಯರೊಂದಿಗೆ ಆಟ, ಊಟ ಇತ್ಯಾದಿಗಳಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next