Advertisement

ಸರಕಾರಿ ನೌಕರಿಗೂ ಕವಿದ ಕೋವಿಡ್ 19 ಕಾರ್ಮೋಡ

08:59 AM Apr 04, 2020 | Sriram |

ಬೆಂಗಳೂರು: ಕೋವಿಡ್ 19 ನಿಯಂತ್ರಿಸಲು ರಾಜ್ಯ ಸರಕಾರ ತನ್ನೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತಿದೆ. ಇದರಿಂದ ಸರಕಾರಕ್ಕೆ ಎಲ್ಲ ರೀತಿಯ ಆದಾಯ ಸ್ಥಗಿತವಾಗಿದೆ. ಇದರ ಪಶ್ಚಾತ್‌ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸರಕಾರ ತಾತ್ಕಾಲಿಕವಾಗಿ ನೇಮಕಾತಿಗಳನ್ನು ಮುಂದೂಡುವ ಸಾಧ್ಯತೆ ಇದೆ.

Advertisement

ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಸುಮಾರು 2 ಲಕ್ಷಕ್ಕೂ ಅಧಿಕ. ಒಟ್ಟು 7 ಲಕ್ಷ ಸರಕಾರಿ ಹುದ್ದೆಗಳಲ್ಲಿ ಸುಮಾರು 5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆಯಾ ಇಲಾಖೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡಿಕೊಳ್ಳುತ್ತದೆ. ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಇಲಾಖಾವಾರು ನೇಮಕ ಮಾಡಿಕೊಳ್ಳಲಾಗುತ್ತದೆ.

ಈಗ ಕೋವಿಡ್ 19 ಭೀತಿಯಿಂದ ಕೆಪಿಎಸ್‌ಸಿ ಮೂಲಕ ಲೋಕೋಪಯೋಗಿ ಇಲಾಖೆಯಲ್ಲಿ ಎಂಜನಿಯರ್‌ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಆದೇಶವನ್ನು ತಡೆ ಹಿಡಿಯಲಾಗಿದೆ. ಅಲ್ಲದೆ ಶಿಕ್ಷಕರ ನೇಮಕಾತಿಗಾಗಿ ಎ. 11ರಂದು ನಡೆಯಬೇಕಿದ್ದ ಟಿಇಟಿ ಪರೀಕ್ಷೆಗಳನ್ನು ಮುಂದೂಡಿದೆ.

ಹಣಕಾಸಿನ ಕೊರತೆ
ಯಾವುದೇ ಹೊಸ ನೇಮಕಾತಿ ಮಾಡಿಕೊಳ್ಳಬೇಕಿ ದ್ದರೂ ಹಣಕಾಸು ಇಲಾಖೆ ಒಪ್ಪಿಗೆ ಪಡೆಯುವುದು ಕಡ್ಡಾಯ. ಆದರೆ ಈ ಬಾರಿ ರಾಜ್ಯದ ಆದಾಯದ ಮೇಲೆ ಭಾರೀ ಪೆಟ್ಟು ಬೀಳುತ್ತಿದೆ. ಹೀಗಾಗಿ ಹಣಕಾಸು ಇಲಾಖೆ ಹೊಸ ಯೋಜನೆಗಳಿಗೆ ಅನುಮೋದನೆ ನೀಡದಂತೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಹೊಸ ನೇಮಕಾತಿಗಳ ಸಂಬಂಧವಾಗಿಯೂ ಇದೇ ಸೂಚನೆ ಮುಂದುವರಿಯುವ ಸಾಧ್ಯತೆ ಇದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಸಹಿತ ಅನೇಕ ಇಲಾಖೆಗಳು ಈ ವರ್ಷ ಅಗತ್ಯ ಸಿಬಂದಿ ನೇಮಕ ಮಾಡಿಕೊಳ್ಳಲಿವೆ ಎನ್ನಲಾಗುತ್ತಿತ್ತು. ಆದರೆ ಸರಕಾರದ ಸದ್ಯದ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಹಣಕಾಸು ಇಲಾಖೆ ನೇಮಕಾತಿಗಳಿಗೆ ಗ್ರೀನ್‌ ಸಿಗ್ನಲ್‌ ನೀಡುವುದು ಅನುಮಾನ.

Advertisement

ಕೋವಿಡ್ 19 ನಿಯಂತ್ರಿಸುವ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಘೋಷಣೆಯಾಗಿರುವುದರಿಂದ ಸರಕಾರ ನೇಮಕಾತಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿದೆ. ಮುಂದೆ ನೇಮಕಾತಿ ವಿಚಾರ ಸರಕಾರದ ಆರ್ಥಿಕ ಪರಿಸ್ಥಿತಿ ಆಧರಿಸಿ ತೀರ್ಮಾನ ಆಗುತ್ತದೆ. ಅದು ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡಬೇಕು.
 -ಷಡಕ್ಷರಿ ಸ್ವಾಮಿ,
ಕೆಪಿಎಸ್‌ಸಿ ಅಧ್ಯಕ್ಷ

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next