Advertisement

ನೃತ್ಯಾಂತರಂಗದಲ್ಲಿ ರಂಜಿಸಿದ ಯುವ ದಂಪತಿಯ ಕೂಚಿಪುಡಿ‌

06:00 AM Jun 01, 2018 | |

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ವತಿಯಿಂದ ನಡೆಯುವ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 37ನೇ ಸರಣಿಯಲ್ಲಿ ಬೆಂಗಳೂರಿನ ಯುವ ನೃತ್ಯ ದಂಪತಿ ವಿದ್ವಾನ್‌ ಚೇತನ್‌ ಗಂಗಾತ್ಕರ್‌ ಮತ್ತು ವಿದುಷಿ ಚಂದ್ರಪ್ರಭಾ ಚೇತನ್‌ ಇವರ ಕೂಚಿಪುಡಿ ನೃತ್ಯ ಪ್ರದರ್ಶಿತವಾಯಿತು. ಶಿವನ ಸಂಧ್ಯಾ ತಾಂಡವವನ್ನು ವರ್ಣಿಸುವ ಕೃತಿಯೊಂದಿಗೆ ನೃತ್ಯವನ್ನು ಪ್ರಾರಂಭಿಸಿದರು. ಪ್ರದೋಷ ಕಾಲದಲ್ಲಿ ಶಿವನು ನರ್ತಿಸಿದ ಈ ತಾಂಡವ ನೃತ್ಯಕ್ಕೆ ಬ್ರಹ್ಮನು ತಾಳವನ್ನು, ವಿಷ್ಣುವು ಮೃದಂಗವನ್ನು ನುಡಿಸಿದರು. ಸಿ.ಎನ್‌.ಆಚಾರ್ಯುಲುರವರ ರಾಗಮಾಲಿಕೆ ಮತ್ತು ತಾಳಮಾಲಿಕೆಯ ಈ ರಚನೆಯಲ್ಲಿ ಕೊನೆಯ ಭಾಗದಲ್ಲಿ ಅಹಂ ಮತ್ತು ಅಜ್ಞಾನದ ಸಂಕೇತನಾದ ಮುಯ್ಯಲಗನ ಮೇಲೆ ನರ್ತಿಸುವ ಶಿವನ ವರ್ಣನೆಯಿದೆ. ವಿಶೇಷವಾಗಿ ಅಪೂರ್ವವಾದ ಕೆಲವು ಮಾರ್ಗಿ ಮತ್ತು ದೇಸೀ ಕರಣಗಳಾದ ರೇಚಿತ, ನಿಕುಟ್ಟ, ಭುಜಂಗಾಂಚಿತ, ಗರುಡಪುತ, ಗಂಡಸೂಚೀ, ವಿಷ್ಣುಕ್ರಾಂತ, ವೃಶ್ಚಿಕ ಮುಂತಾದವುಗಳನ್ನು ಅಳವಡಿಸಿದ ನೃತ್ಯ ಸಂಯೋಜನೆ ಭೂಷಣಪ್ರಾಯದಂತಿದ್ದವು.

Advertisement

ಎರಡನೆಯ ನೃತ್ಯವಾಗಿ ಪ್ರಸ್ತುತಪಡಿಸಿದ್ದು ಕೂಚಿಪುಡಿ ಪರಂಪರೆಯ ಜನಪ್ರಿಯ ನೃತ್ಯ ಬಂಧ ಮಂಡೋದರಿ ಶಪಥಂ. ಈ ನೃತ್ಯವು ಕೃಷ್ಣದೇವರಾಯನ ಆಸ್ಥಾನದ ಸನ್ನಿವೇಶದಲ್ಲಿ ನಡೆಯುವಂತದ್ದು. ಆಸ್ಥಾನ ನರ್ತಕಿಯಾದ ಲಕುಮ ದೇವಿ ತನ್ನೊಡೆಯ ಕೃಷ್ಣದೇವರಾಯನನ್ನು ಹಾಡಿ ಹೊಗಳುವ ವೀರ ರಸ ಪ್ರಧಾನ ಪರಾಕ್‌ನೊಂದಿಗೆ ಮೋಹನರಾಗದಲ್ಲಿ ಪ್ರಾರಂಭಗೊಳ್ಳುತ್ತದೆ. ನಂತರ ಲಕುಮಿದೇವಿಯು ಮಂಡೋದರಿಯ ಕಥಾವೃತ್ತಾಂತವನ್ನು ವಿವರಿಸುತ್ತಾ ರಾವಣನ ಆರ್ಭಟವುಳ್ಳ ರಾಜಸಿಕ ಪಾತ್ರವನ್ನು ವರ್ಣಿಸಿದರೆ ಮಂಡೋದರಿಯ ಸುಕುಮಾರವಾದ, ನವಿರಾದ ಲಾಸ್ಯಭರಿತ ಪಾತ್ರವನ್ನು ಏಕಕಾಲದಲ್ಲಿ ರೂಪಿಸಲಾಯಿತು. ಕೊನೆಯ 2 ನೃತ್ಯ ಬಂಧಗಳಾದ ಸಿಂಹನಂದಿನಿ ಮತ್ತು ಮಯೂರ ಕೌತುವಂ ಪ್ರೇಕ್ಷರಿಗೆ ಕೂಚಿಪುಡಿ ನೃತ್ಯ ಪ್ರಕಾರದ ಅದ್ಭುತ ಪ್ರಪಂಚವನ್ನು ಅನಾವರಣಗೊಳಿಸಿತು. ಸಿಂಹನಂದನ ಎಂಬ ಪುರಾತನ ಸಂಗೀತಪ್ರಕಾರದ ಕ್ಲಿಷ್ಟ ತಾಳದಲ್ಲಿ ಸಿಂಹವಾಹಿನಿಯಾದ ದೇವಿಯನ್ನು ಸ್ತುತಿಸುತ್ತಾ ಪಾದವಿನ್ಯಾಸಗಳಿಂದಲೇ ರಂಗದಲ್ಲಿ ಹರಡಿದ ರಂಗವಲ್ಲಿ ಹುಡಿ ಅಥವಾ ಅಕ್ಕಿ ಹುಡಿಯಲ್ಲಿ ಸಿಂಹದ ಚಿತ್ರ ಬಿಡಿಸುವುದು ಇದರ ಸಂಪ್ರದಾಯ. ಇತಿಹಾಸದಲ್ಲಿ ದಕ್ಷಿಣ ಭಾರತದ, ಅದರಲ್ಲೂ ಮುಖ್ಯವಾಗಿ ಆಂಧ್ರಪ್ರದೇಶದ ಕೆಲವು ದೇವಾಲಯಗಳಲ್ಲಿ ದೇವಿಯ ಆರಾಧನೆಯ ರೂಪದಲ್ಲಿ ಈ ನೃತ್ಯ ಮಾಡಲಾಗುತ್ತಿತ್ತು. ಅದೇ ರೀತಿಯಲ್ಲಿ ಇನ್ನೊಂದು ನೃತ್ಯ ಮಯೂರ ಕೌತುವಂ ಇದನ್ನು ಪ್ರಸ್ತುತಿಗೊಳಿಸಿದವರು ವಿದುಷಿ ಚಂದ್ರಪ್ರಭಾ ಚೇತನ್‌. ಈ ನೃತ್ಯದಲ್ಲಿ ಮಯೂರ ವಾಹನನಾದ ಸುಬ್ರಹ್ಮಣ್ಯನ್ನು ಸ್ತುತಿಸುತ್ತಾ ಹೆಜ್ಜೆ ವಿನ್ಯಾಸದೊಂದಿಗೆ ರಂಗದ ನೆಲದಲ್ಲಿ ನವಿಲಿನ ಚಿತ್ರವನ್ನು ಬಿಡಿಸುವುದು ಇದರ ಕ್ರಮ. ಈ ಎರಡೂ ನೃತ್ಯ ಪ್ರಕಾರಗಳಿಗೆ ಬಿಗಿಯಾದ ತಾಳಜ್ಞಾನ, ಶಾರೀರಿಕ ಕ್ಷಮತೆ, ಏಕಾಗ್ರತೆ, ಚಿತ್ರ ಬಿಡಿಸುವುದರಲ್ಲಿ ಪರಿಣತಿ ಮುಂತಾದ ಅವಶ್ಯಕತೆಗಳು ಇವೆ.

 ಗಂಗಾತ್ಕರ್‌ ಇವರ ನಿರೂಪಣೆ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಪ್ರತಿಯೊಂದು ನೃತ್ಯಬಂಧದ ಐತಿಹಾಸಿಕ ಮಾಹಿತಿಯೊಂದಿಗೆ ಆ ನೃತ್ಯ ಯಾವ ರೀತಿಯಾಗಿ ಪರಂಪರೆಯಲ್ಲಿ ಬೆಳೆದುಬಂದಿದೆ ಎಂಬುದಾಗಿ ಮಾಹಿತಿಯಲ್ಲದೆ ಕೂಚಿಪುಡಿ ನೃತ್ಯ ಪದ್ಧತಿ ಬಗ್ಗೆ ಮಾಹಿತಿ ನೀಡಿದರು. ಇದು ಮನೋರಂಜನೆಯೊಂದಿಗೆ ಮಾಹಿತಿಪೂರ್ಣ ಕಾರ್ಯಕ್ರಮವಾಗಿ ಮೂಡಿ ಬಂತು. 

 ಕಲಾಪ್ರಿಯ

Advertisement

Udayavani is now on Telegram. Click here to join our channel and stay updated with the latest news.

Next