ಬೀಳಗಿ: ತಾಲೂಕಿನಲ್ಲಿರುವ ಪ್ರತಿಯೊಂದು ಮನೆ-ಮನೆಗೂ ತೆರಳಿ ಅವರನ್ನು ಸಂಪರ್ಕ ಮಾಡಿ ಮನೆಯಲ್ಲಿ ಕೊರೊನಾದಿಂದ ಆಗಿರುವ ಹಾನಿ, ಸಾವು ಮತ್ತು ಉದ್ಯೋಗ ಕಳೆದುಕೊಂಡಿರುವ ಮಾಹಿತಿಯನ್ನು ಜಾತಿ, ಪಕ್ಷ ಪಂಗಡ ಎನ್ನದೆ ಯಾವುದೆ ರಾಜಕಾರಣವಿಲ್ಲದೆ ಅಭಿಯಾನ ನಡೆಯಬೇಕು ಎಂದು ಮಾಜಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಗಲಗಲಿ ಗ್ರಾಮದ ಈದ್ಗಾ ಆವರಣದಲ್ಲಿ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕೊರೊನಾ ಪೀಡಿತರ ಸಂಪರ್ಕ ಅಭಿಯಾನದ ಪ್ರತಿಗಳನ್ನು ಬೂತ್ಮಟ್ಟದ ಕಾರ್ಯಕರ್ತರಿಗೆ ವಿತರಿಸಿ ಅವರು ಮಾತನಾಡಿದರು. ಗ್ರಾಮಗಳಲಿ ಕೊರೊನಾ ಎರಡು ಅಲೆಯಲ್ಲಿ ಆಗಿರುವ ಸಮಗ್ರ ಚಿತ್ರಣ ಕಂಡು ಹಿಡಿದು ಸರ್ಕಾರಗಳಿಂದ ನಿಜವಾದ ಫಲಾನುಭವಿಗಳಿಗೆ ಸಿಗಬೇಕಾದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಬರುವ 15 ದಿನಗಳಲ್ಲಿ ತಾಲೂಕಿನ ಎಲ್ಲ ಹಳ್ಳಿಗಳಿಗೂ ಸಂಪರ್ಕ ಸಾಧಿಸಿ ಕೊರೊನಾ ಸಾವು ಮತ್ತು ಹಾನಿಗಳ ಕುರಿತಾಗಿ ಮಾಹಿತಿ ಕ್ರೋಢಿಕರಣ ಮಾಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜತೆಗೆ ರಾಜ್ಯ ಕಾಂಗ್ರೆಸ್ ವತಿಯಿಂದ ನಿಜವಾದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ನಲ್ಲಿ ದೂರು ದಾಖಲಿಸಲು ಚಿಂತನೆ ನಡೆದಿದೆ ಎಂದರು.
ಕೊರೊನಾ ನಿಯಂತ್ರಣ ಮತ್ತು ರಾಜ್ಯದ ಅಭಿವೃದ್ಧಿ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇಂತಹ ಸರ್ಕಾರದಿಂದ ಇಂದು ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜನರಿಗಾಗಿ ಏನು ಮಾಡಿದೆ ಎನ್ನುವುದು ಜನರಿಗೆ ಅರ್ಥವಾಗಬೇಕು. ಕೊರೊನಾ ಕಾಲದಲ್ಲಿ 20 ಲಕ್ಷ ಕೋಟಿ ರೂ ಪ್ಯಾಕೇಜ್ ನೀಡಿದ್ದ ಕೇಂದ್ರದ ಹಣ ಯಾರಿಗೆ ಬಂದಿದೆ ಎನ್ನುವುದು ತಿಳಿಯುತ್ತಿಲ್ಲ. ರಾಜ್ಯ ಸರ್ಕಾರ ನೀಡಿದ ಪ್ಯಾಕೇಜ್ ಕೂಡಾ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆ ಇಲ್ಲವೋ ಎನ್ನುವುದು ಅರ್ಥವಾಗದೆ ಜನರು ರೋಷಿ ಹೋಗಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಾತನಾಡಿ, ಚುನಾವಣೆ ಬಂದಾಗ ಸುಳ್ಳು ಭರವಸೆ ನೀಡಿ ಗೆಲ್ಲುವ ವರಸೆ ಜನರಿಗೆ ಅರ್ಥವಾಗಿದೆ. 2014 ರಲ್ಲಿ ಪೆಟ್ರೋಲ್ ಬೆಲೆ ಇಳಿಸುವುದಾಗಿ, ಬಡವರ ಖಾತೆಗೆ ಹಣ ನೀಡುವುದಾಗಿ, ಭಾರತ ಸುಂದರ ದೇಶ ಮಾಡುವ ಬಗ್ಗೆ ತಿಳಿಸಿ ಯಾವುದನ್ನು ಮಾಡದೆ ಅಧಿಕಾರ ಪೂರ್ಣ ಮಾಡಿದ್ದೀರಿ. 2019ರಲ್ಲಿ ಫುಲ್ವಾಮಾ ದಾಳಿ ಮುಂದಿಟ್ಟು ಜನರಿಗೆ ಸುಳ್ಳು ಹೇಳಿ ಗೆದ್ದು, ಮೋಸ ಮಾಡಲಾಗಿದೆ ಎಂದರು.
ದೇಶವನ್ನು ಮಾರಾಟ ಮಾಡುವ ಕೆಲಸ, ಕೆಲ ಬಲಾಡ್ಯ ಶಕ್ತಿಗಳಿಗೆ ದೇಶವನ್ನು ಮಾರಾಟ ಮಾಡಿ ದೇಶದ ಜನರಲ್ಲಿ ಜಾತಿ ವಿಷ ಬೀಜ ಬಿತ್ತಿ ಅಧಿಕಾರ ಮಾಡುವ ನೀವು ಜನರಿಂದಲೇ ಮನೆಗೆ ಹೋಗುವ ಕಾಲ ಬಂದಿದೆ,ಅದಕ್ಕಾಗಿ ಕಾಂಗ್ರೆಸ ಪಕ್ಷದ ಕಾರ್ಯಕರ್ತರು ಇಂದಿನಿಂದಲೇ ಕಾರ್ಯೋನ್ಮುಖರಾಗಿ ಕೆಲಸ ಮಾಡಿ, ನಾವು ದೇಶ ದೇಶದ ಜನರಿಗಾಗಿ ಕೆಲಸ ಮಾಡಿ ಜನರ ಮನಸ್ಸು ಗೆಲ್ಲುವ ಕೆಲಸ ಮಾಡೋನಾ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಬಸವರಾಜ ಖೋತ, ಮಗಿಯಪ್ಪ ದೇವನಾಳ, ಎಂ.ಎಲ್. ಕೆಂಪಲಿಂಗಣ್ಣವರ, ಶ್ರೀಶೈಲ ಅಂಟೀನ, ಮಂಜು ಕಣಬೂರಮಠ, ಸಂತೋಷ ಬಗಲಿ, ರಾಜು ಹಿರೇಮಠ, ವೆಂಕಟೇಶ ಜಂಬಗಿ, ರವಿ ನಾಗನಗೌಡರ, ಮನೋಜ ಹಾದಿಮನಿ, ಮಲ್ಲಪ್ಪ ಕಾಳಗಿ ಉಪಸ್ಥಿತರಿದ್ದರು.