Advertisement

ಔಷಧ, ಎಲೆಕ್ಟ್ರಾನಿಕ್ಸ್‌ಗೆ ಕೊರೊನಾ ಹೊಡೆತ

01:21 AM Feb 21, 2020 | mahesh |

ಮಂಗಳೂರು: ಚೀನದಲ್ಲಿ ವ್ಯಾಪಕವಾಗಿರುವ ಕೊರೊನಾ ರೋಗ ದಿಂದ ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವುದು ಖಚಿತ. ಅದರಲ್ಲಿಯೂ ಫಾರ್ಮಸ್ಯೂಟಿಕಲ್‌ (ಔಷಧಿ), ಸ್ಮಾರ್ಟ್‌ ಫೋನ್‌ ಮತ್ತು ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿರ್ದೇಶಕ ಸತೀಶ್‌ ಮರಾಠೆ ಹೇಳಿದ್ದಾರೆ. ಮಂಗಳೂರಿಗೆ ಆಗಮಿಸಿರುವ ಅವರು ಗುರುವಾರ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದು, ಕೊರೊನಾ ದಿಂದ ನಮ್ಮ ದೇಶದ ಆರ್ಥಿಕತೆ ಮೇಲಾಗುವ ಪ್ರತಿಕೂಲ ಪರಿಣಾಮ, ಆರ್ಥಿಕ ಹಿಂಜರಿತ ಸಹಿತ ಹಲವು ಪ್ರಸಕ್ತ ವಿದ್ಯಮಾನಗಳ ಕುರಿತಂತೆ ಮಾತನಾಡಿದರು.

Advertisement

ಕೊರೊನಾ ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರಬಹುದೇ ?
ಮುಖ್ಯವಾಗಿ ಫಾರ್ಮಸ್ಯೂಟಿಕಲ್‌ (ಔಷಧಿ), ಸ್ಮಾರ್ಟ್‌ ಫೋನ್‌ ಮತ್ತು ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳ ಮೇಲೆ ಪರಿಣಾಮ ಪರಿಣಾಮ ಬೀರುವುದು ಖಚಿತ. ಏಕೆಂದರೆ ಕೆಲವೊಂದು ಪ್ರಾಥಮಿಕ ಔಷಧಗಳಿಗಾಗಿ ನಾವು ಚೀನವನ್ನೇ ಅವಲಂಬಿಸಿದ್ದೇವೆ. ಹಾಗಾಗಿ ಜೀವ ರಕ್ಷಕ ಔಷಧಗಳು ಸಿಗದಿದ್ದರೆ ನಮಗೆ ಕಷ್ಟವಾಗಬಹುದು. ಅಲ್ಲದೆ, ಸ್ಮಾರ್ಟ್‌ ಫೋನ್‌ಗಳ ಕ್ರಿಟಿಕಲ್‌ ಬಿಡಿ ಭಾಗಗಳು ಚೀನದಿಂದ ಬರುತ್ತಿದ್ದವು. ಇದಕ್ಕೆಲ್ಲ ನಮ್ಮಲ್ಲಿ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಅದರಿಂದಲೂ ಕೊಂಚ ತೊಂದರೆ ಎದುರಾಗಬಹುದು. ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ಪ್ರಾಥಮಿಕ ಔಷಧ ಮತ್ತು ಸ್ಮಾರ್ಟ್‌ ಫೋನ್‌ಗಳ ಕ್ರಿಟಿಕಲ್‌ ಬಿಡಿ ಭಾಗಗಳನ್ನು ಪೂರೈಕೆ ಮಾಡುವ ಬದ್ಧತೆ ಚೀನಕ್ಕಿದೆ. 3 ತಿಂಗಳ ತನಕ ಏನೆಲ್ಲ ಪರಿಣಾಮ ಬೀರಬಹುದು ಎಂಬುದನ್ನು ಅವಲೋಕಿಸಲಾಗುತ್ತಿದೆ. ಆದರೆ, ಮಾರ್ಚ್‌ ಬಳಿಕವೂ ಕೊರೊನಾದಿಂದ ಚೀನ ಚೇತರಿಸಿ ಕೊಳ್ಳದೆ ಹೋದರೆ, ನಮಗೆ ಹೆಚ್ಚಿನ ಸಂಕಷ್ಟ ಎದುರಾಗಬಹುದು. ಪ್ರಧಾನಿ ಮೋದಿ ಕೂಡ ಫೆ.18ರಂದು ವಿವಿಧ ಉದ್ಯಮಿಗಳ ಸಭೆ ಕರೆದು ಕೊರೊನಾ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ.

ದೇಶದ ಆರ್ಥಿಕ ಹಿಂಜರಿತ ಸರಿದಾರಿಗೆ ಬರಲು ಇನ್ನೆಷ್ಟು ಸಮಯ ಬೇಕಿದೆ?
ಈ ವರ್ಷ ಸಮಯಕ್ಕೆ ಸರಿಯಾಗಿ ವಾಡಿಕೆ ಮಳೆ ಬಂದರೆ ಕೃಷಿ, ತೋಟಗಾರಿಕೆ ಚಟು ವಟಿಕೆಗೆ ಉತ್ತೇಜನ ಲಭಿಸಿ ಮುಂದಿನ ಅಕ್ಟೋಬರ್‌-ನವೆಂಬರ್‌ ವೇಳೆಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗಿದೆ.

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆಯಲ್ಲವೇ?
ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಸರಕಾರದ ಕ್ರಮ. ಸದುದ್ದೇಶದಿಂದ ಅದನ್ನು ಮಾಡಲಾಗಿದೆ. ವಿಲೀನ ಪ್ರಕ್ರಿಯೆ ಖಂಡಿತಾ ಆಗಲಿದೆ. ಕಳೆದ ಸಾಲಿನಲ್ಲಿ ವರ್ಷದ ಮಧ್ಯ ಭಾಗದಲ್ಲಿ ವಿಲೀನ ಪ್ರಕ್ರಿಯೆಯನ್ನು ಘೋಷಿಸಿದ್ದರಿಂದ ಬ್ಯಾಂಕ್‌ಗಳ ಬ್ಯಾಲೆನ್ಸ್‌ ಶೀಟ್‌ ತಯಾರಾಗಲು ಕಾಯಲಾಗುತ್ತಿದೆ. ಕರಾವಳಿಯ ಬ್ಯಾಂಕ್‌ಗಳ ವಿಲೀನವೂ ಸೇರಿದಂತೆ ಘೋಷಿಸಿದ ಎಲ್ಲ ವಿಲೀನ ಪ್ರಕ್ರಿಯೆಗಳು ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯಗೊಂಡು ಎಪ್ರಿಲ್‌ನಿಂದ ಅನ್ವಯ ವಾಗುವಂತೆ ಜಾರಿಗೆ ಬರುವ ನಿರೀಕ್ಷೆಯಿದೆ.

ಸಹಕಾರಿ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ವಿಧಿಸಿರುವುದು ಸರಿಯೇ?
ಸಹಕಾರಿ ಬ್ಯಾಂಕ್‌ಗಳಿಗೆ ಆದಾಯ ತೆರಿಗೆಯನ್ನು ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕಡಿತ ಮಾಡಲಾಗಿದೆ. ಸಹಕಾರಿ ರಂಗದಲ್ಲಿ ಬ್ಯಾಂಕ್‌ಗಳು ಹೆಚ್ಚು ಬರಬೇಕಾಗಿದೆ. ಈ ದಿಶೆಯಲ್ಲಿ ಸರಕಾರ ಉತ್ತೇಜನ ನೀಡುತ್ತಿದೆಯೇ ಹೊರತು ಹೊರೆಯಾಗುವ ಕ್ರಮ ಕೈಗೊಂಡಿಲ್ಲ. ಕ್ರೆಡಿಟ್‌ ಸಹಕಾರಿ ಸಂಘಗಳನ್ನು ಬ್ಯಾಂಕ್‌ಗಳಾಗಿ ಪರಿವರ್ತಿಸಬೇಕು. ಸಹಕಾರಿ ಸಂಘಗಳು ಬ್ಯಾಂಕ್‌ಗಳ ಸ್ಥಾನಕ್ಕೇರಿದಾಗ ಠೇವಣಿಗೆ ವಿಮಾ ಸೌಲಭ್ಯ ಸಿಗುತ್ತದೆ. ವಿಮೆಯ ಮೊತ್ತವನ್ನು ಈ ಹಿಂದೆ ಇದ್ದ 2 ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ.

Advertisement

ಗ್ರಾಮೀಣ ಆರ್ಥಿಕತೆ ಪ್ರಗತಿಗೆ ಆರ್‌ಬಿಐ ಹೊಸ ಚಿಂತನೆ ಏನಿದೆ?
ರೈತರ ಆದಾಯ ಹೆಚ್ಚಿಸಲು ಸಹಕಾರಿ ರಂಗದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಬೇಕಾಗಿದೆ. ಪ್ರಸ್ತುತ ದೇಶದ ಪಶ್ಚಿಮ ಭಾಗದಲ್ಲಿ ಮಾತ್ರ ಹೈನುಗಾರಿಕೆ ಇದೆ. ದೇಶದ ಪೂರ್ವ, ಉತ್ತರ, ಮಧ್ಯ ಭಾಗ ದಲ್ಲಿಯೂ ಸಹಕಾರಿ ರಂಗದಲ್ಲಿ ಹಾಲು ಉತ್ಪಾದನೆ, ಸಂಸ್ಕರಣ ಘಟಕಗಳು ಸ್ಥಾಪನೆಯಾಬೇಕು. ಸಹಕಾರ ರಂಗದ ಹೈನೋದ್ಯಮದಲ್ಲಿ ರೈತರಿಗೆ ಶೇ.70ರಷ್ಟು ಆದಾಯ ಬರುತ್ತದೆ; ಅದೇ ಖಾಸಗಿ ರಂಗದಲ್ಲಿ ರೈತರಿಗೆ ಸಿಗುವುದು ಶೇ.40ರಷ್ಟು ಮಾತ್ರ. ಹಾಗಾಗಿ ರೈತರ ಹಿತದೃಷ್ಟಿಯಿಂದ ಸಹಕಾರಿ ರಂಗದಲ್ಲಿ ಹೈನುಗಾರಿಕೆಗೆ ಸಹಕಾರ ನೀಡಬೇಕು.

2000 ರೂ. ನೋಟು ಹಿಂಪಡೆಯುವುದಿಲ್ಲ
ಪ್ರಸ್ತುತ ದೇಶದ 650 ಜಿಲ್ಲೆಗಳ ಪೈಕಿ 220 ಜಿಲ್ಲೆಗಳಲ್ಲಿ ಮಾತ್ರ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಕೃಷಿ ಸಂಸ್ಕರಣ ಘಟಕಗಳ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಸಂಸ್ಕರಣ ಘಟಕಗಳು ಸ್ಥಾಪನೆ ಆಗಬೇಕು. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ 3 ಲಕ್ಷ ಪ್ರಾಥಮಿಕ ಹಾಲು ಉತ್ಪಾದಕರ ಸಂಸ್ಕರಣ ಘಟಕಗಳ ಆವಶ್ಯಕತೆಯಿದೆ. ಈಗಿರುವ ಹಾಲು ಸಂಸ್ಕರಣ ಘಟಕಗಳ ಸಂಖ್ಯೆ 1,40,000 ಮಾತ್ರ. ಇದನ್ನು ದುಪ್ಪಟ್ಟು ಮಾಡಬಹುದಾಗಿದೆ. ಈ ನಡುವೆ 2000 ರೂಪಾಯಿ ನೋಟು ಹಿಂಪಡೆಯಲಾಗುತ್ತಿದೆ ಎನ್ನುವುದು ವದಂತಿ ಮಾತ್ರ; ಇದರಲ್ಲಿ ಸತ್ಯಾಂಶ ಇಲ್ಲ.

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next