Advertisement

ನ. 14 ರಿಂದ 20 ರವರೆಗೆ ಸಹಕಾರ ಸಪ್ತಾಹ: ಸಚಿವ ಎಸ್.ಟಿ. ಸೋಮಶೇಖರ್

05:14 PM Oct 19, 2022 | Team Udayavani |

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷ ಕೂಡ ನವೆಂಬರ್ 14 ರಿಂದ 20 ರವರೆಗೆ ಏಳು ದಿನಗಳ ಕಾಲ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗುವುದು. ನವೆಂಬರ್ 14ರಂದು ಹಿರಿಯ ಸಹಕಾರಿಗಳಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

Advertisement

ವಿಧಾನಸೌಧದ ಮೂರನೇ ಮಹಡಿಯ ಸಭಾಂಗಣ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಕಾರ ಸಪ್ತಾಹದ ಪೂರ್ವಭಾವಿ ಸಿದ್ಧತಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಸಚಿವರು ಮಾತನಾಡಿದರು.

ನವೆಂಬರ್ 14 ರಂದು ಕಲಬುರಗಿಯಲ್ಲಿಸಹಕಾರ ಸಪ್ತಾಹದ ಉದ್ಘಾಟನೆ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನವೆಂಬರ್ 20 ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

7 ದಿನಗಳ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ. ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಆಯಾ ಜಿಲ್ಲೆಗಳ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯ ಜನಪ್ರತಿನಿಧಿಗಳು ಸಹಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರನ್ನು ಪಕ್ಷಾತೀತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪವುಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಬಾರಿ ಸಹಕಾರ ರತ್ನ ಪ್ರಶಸ್ತಿಯನ್ನು ಆಯಾ ಜಿಲ್ಲೆಗಳಲ್ಲಿ ಪ್ರದಾನ ಮಾಡಲಾಗುವುದು. ದೂರದ ಸ್ಥಳಗಳಿಂದ ಬರಲು ತೊಂದರೆ ಆಗುವುದರಿಂದ ಆಯಾ ಭಾಗದ ಸಹಕಾರಿಗಳ ಮಧ್ಯೆ ಗೌರವಿಸಲಾಗುವುದು ಎಂದರು.

Advertisement

ಸಹಕಾರ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಕ್ರಮವಹಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಸಪ್ತಾಹ ಯಶಸ್ವಿಗೆ ಸಹಕರಿಸುವಂತೆ ಸಚಿವರು ಮನವಿ ಮಾಡಿದರು.

ಹಾಲಿನ ದರ ಹೆಚ್ಚಳ ಸಿಎಂ ತೀರ್ಮಾನಕ್ಕೆ

ಹಾಲಿನ ದರ ಹೆಚ್ಚಳದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದರ ಹೆಚ್ಚಳದ ಲಾಭಾಂಶದ ಹಣವನ್ನು ರೈತರಿಗೆ ನೀಡಬೇಕೆಂಬ ಒಲವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಆದರೆ ದರ ಹೆಚ್ಚಳ ಮಾಡದಂತೆ ಗ್ರಾಹಕರು ಒತ್ತಡ ಹಾಕುತ್ತಿದ್ದಾರೆ. ದರ ಹೆಚ್ಚಳದ ಸಂಬಂಧ ಮುಖ್ಯಮಂತ್ರಿಗಳ ಗಮನದಲ್ಲಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ದರ ಹೆಚ್ಚಳದ ಬಗ್ಗೆ 15 ಹಾಲು ಒಕ್ಕೂಟಗಳಿಂದ ಮಾಹಿತಿ ನೀಡಲಾಗಿದ್ದು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ನಂದಿನಿ ಕ್ಷೀರಸಮೃದ್ಧಿ ಬ್ಯಾಂಕ್

ನಂದಿನಿ ಕ್ಷೀರಸಮೃದ್ಧಿ ಬ್ಯಾಂಕ್ ಸ್ಥಾಪನೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್ ಅವರ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಆರ್ ಬಿಐಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆರ್ ಬಿಐ ಅನುಮತಿಗೆ ಕೆಲವು ತಿದ್ದುಪಡಿ ಅವಶ್ಯಕವಾಗಿದ್ದು ತಿದ್ದುಪಡಿ ಆದ ಬಳಿಕ ಜಾರಿಯಾಗಲಿದೆ. ಯಶಸ್ವಿನಿ ಜಾರಿಗೆ ಎಲ್ಲಾ ಕಾರ್ಯ ಮುಕ್ತಾಯವಾಗಿದ್ದು ನ.1ಕ್ಕೆ ಮುಖ್ಯಮಂತ್ರಿಗಳು ಜಾರಿ ಮಾಡಲಿದ್ದಾರೆ ಎಂದು ಹೇಳಿದರು.

ಸಹಕಾರಿ ಹಬ್ಬ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು ಇದು ಸಹಕಾರಿ ಹಬ್ಬ. ಈ ಕುರಿತು ಮಾಧ್ಯಮದವರು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಶಾಸಕರು ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಮನವಿ ಮಾಡಿದರು.

ಸಭೆಯಲ್ಲಿ ಶಾಸಕ ಶಿವಾನಂದ ಪಾಟೀಲ್, ಸಹಕಾರ ಮಾರಾಟ ಮಂಡಳ ಅಧ್ಯಕ್ಷ ಡಾ.ಎಮ್.ಎನ್. ರಾಜೇಂದ್ರ ಕುಮಾರ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಶಂಕರ್, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಕೆ. ರಾಜೇಂದ್ರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಹಕಾರ ಸಂಘಗಳ ನಿರ್ದೇಶಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next