Advertisement

ಸಾಹಿತ್ಯ ಜೀವನದ ನಿರಂತರ ಪ್ರಕ್ರಿಯೆ : ಕುಳಮರ್ವ

11:23 PM Apr 30, 2019 | Team Udayavani |

ಕಾಸರಗೋಡು: ಸಾಹಿತ್ಯದಿಂದ ಮಾನವನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮಾನವನ ಮನಸ್ಸನ್ನು ಸೋಸಿ, ಶುದ್ಧೀಕರಿಸಲು ಸಾಹಿತ್ಯದ ಸಹಕಾರ ಬೇಕು. ಸಾಹಿತ್ಯದಿಂದ ಸಾತ್ವಿಕ ಮನೋಭಾವ ಮೂಡುತ್ತದೆ. ಆದ್ದರಿಂದ ಎಳವೆಯಲ್ಲೇ ಮಕ್ಕಳಿಗೆ ಸಾಹಿತ್ಯದ ದೀಕ್ಷೆಯನ್ನು ನೀಡಬೇಕು. ಸಾಹಿತ್ಯವು ಜೀವನದ ನಿರಂತರ ಪ್ರಕ್ರಿಯೆ ಎಂದು ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಹೇಳಿದರು.

Advertisement

ಅವರು ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯಲ್ಲಿ ಸಿರಿಗನ್ನಡ ಸಾಹಿತ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಏಕದಿನ ಸಾಹಿತ್ಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾಲೆಯ ವ್ಯವಸ್ಥಾಪಕ ರಾಧಾ ಯು.ಜಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಮಾಹಿತಿ ನೀಡಿದ ವ್ಯಂಗ್ಯಚಿತ್ರಕಾರ ವಿರಾಜ್‌ ಅಡೂರು ಮಾತನಾಡಿ ವ್ಯಂಗ್ಯಚಿತ್ರಗಳು ಗಂಭೀರವಾದ ಸಾಮಾಜಿಕ ಅವ್ಯವಸ್ಥೆಗಳನ್ನು ಸುಲಭವಾಗಿ ಮುಂಚಿತವಾಗಿ ಗ್ರಹಿಸಿಕೊಂಡು ಅದರ ತೊಂದರೆಯನ್ನು ಹಾಸ್ಯದ ರೂಪದಲ್ಲಿ ಹೇಳುತ್ತವೆ. ಆದ್ದರಿಂದಾಗಿ ವ್ಯಂಗ್ಯಚಿತ್ರಗಳು ಜನಪ್ರಿಯವಾಗಿವೆ. ವ್ಯಂಗ್ಯಚಿತ್ರಕಾರನಿಗೆ ಚಿತ್ರರಚನೆಯ ಜತೆಗೆ ಹಾಸ್ಯಪ್ರಜ್ಞೆ, ದೂರಾಲೋಚನೆ, ಚಿತ್ರಗಳಲ್ಲಿ ಶಕ್ತವಾಗಿ ಭಾವನೆಗಳನ್ನು ಅರಳಿಸುವ ಜಾಣ್ಮೆ ಇರಬೇಕು. ಅಡಿಬರಹಗಳಿಲ್ಲದ, ನೋಟದಿಂದಲೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ವ್ಯಂಗ್ಯಚಿತ್ರಗಳನ್ನು ರಚಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಹಾಸ್ಯಗೋಷ್ಠಿಯಲ್ಲಿ ಹಿರಿಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಮಾತ ನಾಡಿ ಮಾನವನ ಎಲ್ಲಾ ಜಂಜಾಟಗಳನ್ನೂ ಮರೆಯುವಂತೆ ಮಾಡುವಲ್ಲಿ ಹಾಸ್ಯ ಮನೋಭಾವ ಸಹಕರಿಸುತ್ತದೆ. ಹಾಸ್ಯವು ನಗುವನ್ನು ಸೃಷ್ಟಿಸುವ ಮೂಲಕ ಮಕ್ಕಳಲ್ಲಿ ಮಾನಸಿಕ ಶಕ್ತಿಯ ವೃದ್ಧಿ ಹಾಗೂ ಹಿರಿಯರಲ್ಲಿ ಆತ್ಮಸ್ಥೈರ್ಯದ ವೃದ್ಧಿ ಮಾಡುತ್ತದೆ. ಹಾಸ್ಯದಿಂದ ಸೃಷ್ಟಿಯಾಗುವ ನಗುವಿನಲ್ಲಿ ಆರೋಗ್ಯ ಅಡಗಿದೆ ಎಂದು ಹೇಳಿದರು. ಶಿಬಿರದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬಂದಿ ಸಹಕರಿಸಿದ್ದರು. ಚುಟುಕು ರಚನೆ ಹಾಗೂ ವ್ಯಂಗ್ಯಚಿತ್ರ ರಚನೆ ವಿಭಾಗದಲ್ಲಿ ಒಟ್ಟು ಸುಮಾರು 100ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next