Advertisement

ನಿರಂತರ ಶಿಕ್ಷಣ, ತರಬೇತಿ ಇಂದಿನ ಅನಿವಾರ್ಯ

01:31 AM Jan 09, 2021 | Team Udayavani |

ಪ್ರಪಂಚವೇ ಇಂದು ಸಂಕೀರ್ಣಗೊಳ್ಳುತ್ತಿದೆ. ಎಲ್ಲವೂ ಸೂಕ್ಷ್ಮವಾಗುತ್ತಿದೆ. ಅಂಗೈಯಲ್ಲೇ ಎಲ್ಲ ವನ್ನೂ ತುಂಬಿಸಿಕೊಳ್ಳುವ ಚಪಲ, ಹಟ, ವಿಜ್ಞಾನ ಇಂದು ಎಲ್ಲೆಂದರಲ್ಲಿ ಕಾಣತೊಡಗಿದೆ. ಇದರ ಪರಿಣಾಮವಾಗಿ ಭೂತ, ವರ್ತಮಾನ, ಭವಿಷ್ಯಗಳ ವ್ಯಾಖ್ಯೆಯೂ ಭಿನ್ನವಾಗತೊಡಗಿದೆ. ಹಾಗಾಗಿ ಬದಲಾವಣೆಯೆನ್ನುವುದೂ ಅಷ್ಟೇ ವೇಗವಾಗಿ ನಮ್ಮೆಲ್ಲರನ್ನೂ ಆಕ್ರಮಿಸಿದೆ. ಇದು ಬೇಕಿತ್ತೇ? ಬೇಡವೇ? ಎನ್ನುವ ಕಾಲ ಘಟ್ಟ ವನ್ನು ಮೀರಿ ನಾವು ಬಂದಿದ್ದೇವೆ, ಹಾಗಾಗಿ ಅನಿವಾರ್ಯವಾಗಿ ಸ್ವೀಕರಿಸಲೇಬೇಕು, ನಾವೂ ನಮ್ಮನ್ನು ಒಗ್ಗಿಸಿ ಕೊಳ್ಳಲೇಬೇಕು.

Advertisement

ಮೇಲೆ ಉಲ್ಲೇಖೀಸಿದ ಕಾರಣಗಳಿಂದ ನಾವು ಕಲಿತುಕೊಳ್ಳಬೇಕಾದ ವಿಷಯಗಳೂ ದಿನ ನಿತ್ಯ ವೆನ್ನುವಂತೆ ಬದಲಾಗುತ್ತಿರುತ್ತವೆ. ನಿನ್ನೆಯದು ಇಂದಿಗೆ ಅಪ್ರಸ್ತುತವೆನ್ನಿಸುವಂತಹ ಸ್ಥಿತಿ ನಿರ್ಮಾಣ ವಾಗತೊಡಗಿದೆ. ಹಾಗಾಗಿ ನಾವೆಲ್ಲ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರೂ ಹೊಸ ವಿಚಾರ, ಕಾನೂನು, ಶಿಕ್ಷಣ, ತರಬೇತಿ ನಿರಂತರ ಪಡೆಯಬೇಕಾದ ಅನಿವಾರ್ಯ ಯುಗದಲ್ಲಿದ್ದೇವೆ.

ಇತ್ತೀಚೆಗೆ ಸಹಕಾರಿ ಸಂಸ್ಥೆಗಳಿಗೆ, ಗ್ರಾಮ ಪಂಚಾಯತ್‌ಗಳಿಗೆ ಆಯ್ಕೆಯಾಗಿರುವ ಮತ್ತು  ರಾಜ್ಯದ ಸಹಸ್ರಾರು ಧಾರ್ಮಿಕ ಸಂಸ್ಥೆಗಳಿಗೆ ನಿಯು ಕ್ತರಾಗಿರುವಂತಹ ಮಹನೀಯರು/ಮಹಿಳೆ ಯರಿಗೂ ಇಂತಹ ತರಬೇತಿ ಅನುಭವ ಪಡೆಯ ಬೇಕಿರುವುದು ಅನಿವಾರ್ಯವಾಗಿದೆ. ಅನ್ಯಥಾ ಭವಿಷ್ಯ ಇವರಿಗೆ ತ್ರಾಸದಾಯಕ ವಾಗಬಹುದು.

ಪಂಚಾಯತ್‌ ಚುನಾವಣೆ ಮುಗಿದಿದೆ. ಮೀಸ ಲಾತಿಯಿಂದಾಗಿ ಹೊಸಬರೂ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರವೆಂದು ಮೀಸಲಾತಿ ಇದ್ದರೂ ಅದು ಮೀಸಲಾತಿ ಇಲ್ಲದ ಎಲ್ಲರ ಕ್ಷೇತ್ರವೆನ್ನುವಂತೆ ಉಪಯೋಗಿಸಲ್ಪಟ್ಟಿದೆ. ಇರಲಿ, ಮುಂದೆ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳ ಸ್ಪರ್ಧೆ ಇಲ್ಲಿಯೂ ಮೀಸಲಾತಿಯ ಆಟ ಬಲಿಷ್ಠವಾಗಿರುತ್ತದೆ; ಅನುಭವಿಸೋಣ. ಆದರೆ ಆಯ್ಕೆಯಾಗಿರುವ/ ಆಯ್ಕೆಯಾಗುವವರೆಲ್ಲ ಸ್ವತಂತ್ರವಾಗಿ ಮತ್ತು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾದರೆ ತರಬೇತಿ ಅನುಭವ ಅವಶ್ಯ. ತಮಗೆಲ್ಲ ಸರಕಾರವೇ ಮುಂದಿನ ದಿನಗಳಲ್ಲಿ ತರಬೇತಿ ನೀಡಲಿದೆ. ದಯಮಾಡಿ ಯಾರೂ ತಪ್ಪಿಸಿಕೊಳ್ಳಬೇಡಿ, ಎಲ್ಲವನ್ನೂ ತಿಳಿದ ಸರ್ವಜ್ಞ / ಭೀಷ್ಮರೆಂದು ತಮ್ಮನ್ನು ತಿಳಿಯದೆ ಅತೀ ಅವಶ್ಯವಾಗಿ ಈ ತರಬೇತಿಗಳಲ್ಲಿ ಭಾಗವಹಿಸಿ, ಯಾರ್ಯಾರ ಪ್ರಭಾವ, ನಾಮ ಬಲದಿಂದ ತಾವು ಗೆದ್ದಿದ್ದೀರೋ ಅವರಿಗೆ ಕೊಂಚವಾದರೂ ನ್ಯಾಯ ನೀಡಲು ಇದರಿಂದ ಅನುಕೂಲವಾಗಬಹುದು.

ಸಹಕಾರಿ ಸಂಸ್ಥೆಗಳಲ್ಲೂ ಇದೇ ವಾಸ್ತವ. ನಿರ್ದೇಶಕ ನಾಗುವ ಹಠ, ಮತ್ತೆ ಪದಾಧಿಕಾರಿ ಯಾಗುವ ಚಟ, ಸರ್ವವ್ಯಾಪಿಯಾಗಿದೆ. ಇರಲಿ, ಆದರೆ ಅನುಭವ ತರಬೇತಿ, ಕಾನೂನುಗಳ ಅರಿವು ಮಾತ್ರ ಖಂಡಿತ ಪಡೆಯಿರಿ. ಇಂತಹ ತರಬೇತಿ ನೀಡುವ ವ್ಯವಸ್ಥೆ ಇದ್ದರೂ ಆ ತರಬೇತಿ ಎಲ್ಲರಿಗೂ ತಲಪುವಾಗ ಅವರ ಅಧಿಕಾರದ ಅವಧಿಯೇ ಮುಗಿಯಬಹುದು. ಯಾಕೆಂದರೆ ತರಬೇತಿ ನೀಡುವ ವ್ಯವಸ್ಥೆ ವ್ಯಾಪಕವಾಗಿ ಬೆಳೆದಿಲ್ಲ. ನಮ್ಮಲ್ಲಿಯ ಸಹಕಾರಿ ಸಂಸ್ಥೆಗಳು ಸಧೃಢವಾಗಿರುವುದರಿಂದ ಸ್ವತಹ ಸಹಕಾರಿ ಸಂಸ್ಥೆಗಳೇ ತಮ್ಮ ಆಡಳಿತ ಮಂಡಳಿ-ಸಿಬಂದಿಗೆ ಕಾಲಕಾಲಕ್ಕೆ ತರಬೇತಿ, ಅನುಭವ ನೀಡುವ ವ್ಯವಸ್ಥೆ ಮಾಡಿಕೊಳ್ಳಬಹುದು.

Advertisement

ಒಂದು ಪ್ರಯತ್ನ ಆರಂಭಿಸಬಹುದೇ? : 

ಇನ್ನು ಧಾರ್ಮಿಕ ಸಂಸ್ಥೆಗಳಿಗೆ ನೇಮಕವಾಗಿರುವ / ನೇಮಕವಾಗುತ್ತಿರುವ ವ್ಯವಸ್ಥಾಪನ ಸಮಿತಿ ಸದಸ್ಯರ ಬಗ್ಗೆಯೂ ಅತ್ಯಂತ ಗೌರವದಿಂದ ಒಂದು ಮಾತು ಹೇಳಲೇಬೇಕು. ಸರಕಾರದ ಇಚ್ಛೆಯಂತೆ ಈ ನೇಮಕಗಳು. ಯಾರ್ಯಾರದೋ ಕೈ-ಕಾಲು ಹಿಡಿದು ಈ ಸ್ಥಾನ ಪಡೆದಿರುವ ಧರ್ಮದರ್ಶಿಗಳಿಗೆ ಪಂಚಾಯತ್‌/ಸಹಕಾರಿ ಸಂಸ್ಥೆಗಳಿಗಿಂತ ಹೆಚ್ಚಿನ ಹೊಣೆಗಾರಿಕೆ, ಮೇಲಿನವರಿಬ್ಬರು ಸರಕಾರದ, ಸಾರ್ವಜನಿಕ ಹಣದೊಂದಿಗೆ ವ್ಯವಹರಿಸುವವ ರಾದರೆ, ನೀವು ದೇವರ ಹಣ (ಸದ್ಭಾವನೆಗಳನ್ನು ಹೊತ್ತ, ಆಸ್ತಿಕ ಭಜಕರ ಪುಣ್ಯವೆತ್ತ ಸಂಪತ್ತು ಹಾಗೂ ಹರಕೆ ಸಂದಾಯದ ಪ್ರಾಯಶ್ಚಿತ್ತಗಳ ಮೊತ್ತ)ದೊಂದಿಗೆ. ಈ ಎಚ್ಚರಿಕೆ ನಿಮ್ಮಲ್ಲಿ ಸದಾ ಇರಬೇಕು. ಅಗತ್ಯದ ತರಬೇತಿಗಾಗಿ ಈವರೆಗೂ ವ್ಯವಸ್ಥೆ ಇದ್ದಂತಿಲ್ಲ. ಧಾರ್ಮಿಕ ದತ್ತಿ ಇಲಾಖೆಯು ಈ ಬಗ್ಗೆ ಗಮನ ಹರಿಸಬೇಕು. ಇತರ ಧರ್ಮೀಯರ ಶ್ರದ್ಧಾಕೇಂದ್ರಗಳಿಗೆ ಕಡಿಮೆಯಿಲ್ಲದಂತೆ, ನಮ್ಮನಮ್ಮ ಆರಾಧನಾ ಕೇಂದ್ರಗಳೂ ಕರ್ತವ್ಯ ನಿರ್ವಹಿಸುವಲ್ಲಿ ಹಿಂದೆ ಬೀಳದಂತೆ ಜಾಗ್ರತೆ ಬೇಕಲ್ಲವೇ? ಪ್ರಾಮಾ ಣಿಕತೆಯ ಬುನಾದಿ ಮೇಲೆ ಸ್ವಯಂ ಸ್ವೀಕರಿಸಿ ಕೊಂಡಿರುವ ಈ ಜವಾಬ್ದಾರಿ/ಹೊಣೆಗಾರಿಕೆ ಪಾರ ದರ್ಶಕವಾಗಿ ನಿರ್ವಹಿಸಲ್ಪಟ್ಟು ಸರ್ವರಿಗೂ ಶುಭ ವಾಗುವಂತೆ ದುಡಿಯುವ ಶಕ್ತಿ ತಾವು ಸಂಪಾದಿಸಿ ಕೊಳ್ಳಬೇಕಲ್ಲವೇ? ಅದಕ್ಕಾಗಿ ತರಬೇತಿ, ಅನುಭವ, ಗುರುಹಿರಿಯರ ಮಾರ್ಗದರ್ಶನ ತಮಗೂ ಅವಶ್ಯ.  ಹುಟ್ಟುತ್ತಲೇ ನಾವು ಪರಿಪೂರ್ಣರಾಗಿರು ವುದಿಲ್ಲ. ಹಂತಹಂತವಾಗಿ ಒಂದೊಂದೇ ಮೆಟ್ಟಿಲು ಗಳನ್ನೇರುತ್ತಾ ಮುಂದೆ ಸಾಗಿ ಬಂದಿದ್ದೇವೆ. ಹೊಸ ಆಸೆ-ಆಕಾಂಕ್ಷೆಗಳೊಡನೆ ನೀವು ಈ ಸ್ಥಾನಕ್ಕೆ ಬಂದಿ ದ್ದೀರಿ. ನೂತನ ಹೊಣೆಗಾರಿಕೆ ನಿಮ್ಮ ಹೆಗಲ ಮೇಲೇರಿದೆ. ಇದನ್ನು ಸಮರ್ಥವಾಗಿ ನಿಭಾಯಿ ಸಲು ತರಬೇತಿ, ಶಿಕ್ಷಣ, ಮಾರ್ಗದರ್ಶನ, ಅನುಭವ ಕ್ಕಾಗಿ ಪ್ರಯತ್ನಿಸಿದಾಗಲೇ ಸಮರ್ಥ ನಾಯಕತ್ವ ಸಹಜವಾಗಿ ಮೂಡಿ ಬರಲು ಸಾಧ್ಯ.

 

– ಎನ್‌.ಎಸ್‌. ಗೋಖಲೆ ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next