ಬಾಗೇಪಲ್ಲಿ: ವಿಶ್ವದಲ್ಲಿಯೇ ಶ್ರೀಮಂತ ಸಂಸ್ಕೃತಿ ಭಾರತದ್ದು, ಆದರೆ ಅದಕ್ಕೆ ವಿರುದ್ಧವೆಂಬಂತೆ ಈಗಿನ ಪೀಳಿಗೆ ವರ್ತಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಷಕರನ್ನು ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಿಗೆ ತಳ್ಳುವಂತಹ ಅನಾಗರಿಕ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಟಾರೆಡ್ಡಿಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಗೂಳೂರು ಹೋಬಳಿ ಸ್ವಗ್ರಾಮ ಚಿನ್ನಕಾಯಿಪಲ್ಲಿ ಗ್ರಾಮದಲ್ಲಿ ತಂದೆ ದಿ.ಎಸ್ .ನಂಜುಂಡರೆಡ್ಡಿ ಮತ್ತು ತಾಯಿ ಆದಿಲಕ್ಷ್ಮಮ್ಮ ಹೆಸರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪೋಷಕರು ಇದ್ದಾಗ ಚೆನ್ನಾಗಿ ನೋಡಿಕೊಳ್ಳದೇ ಮರಣ ನಂತರ ಲಕ್ಷ, ಲಕ್ಷ ರೂ. ಖರ್ಚು ಮಾಡಿ ಸಮಾಧಿ ಕಟ್ಟಿಸುತ್ತಿರುವುದು ಕಂಡುಬರುತ್ತಿದೆ ಎಂದರು.
ಇಳಿ ವಯಸ್ಸಿನಲ್ಲಿ ಮಕ್ಕಳ ಪ್ರೀತಿ ಆರೈಕೆ ತಂದೆ ತಾಯಿಗೆ ಅಗತ್ಯವಾಗಿರುತ್ತದೆ ಹೊರತು ಮರಣದ ನಂತರ ವೈಭವ ಅಲ್ಲ. ಪೋಷಕರ ಹೆಸರಿನಲ್ಲಿ ವೃದ್ಧಾಶ್ರಮ ನಿರ್ಮಿಸಲಾಗುತ್ತಿದ್ದು, ಒಳ್ಳೆಯ ಪರಿಸರದಲ್ಲಿ 100 ಜನ ವೃದ್ಧರು ತಮ್ಮ ಜೀವನವನ್ನು ನೆಮ್ಮದಿಯಿಂದ ಸಾಗಿಸಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ವೃದ್ಧಾಶ್ರಮದ ಆವರಣದಲ್ಲಿ ಪಾರ್ಕ್ ಸಹ ನಿರ್ಮಾಣ ಮಾಡಲಾಗುತ್ತಿದೆ. ಮೂರು ತಿಂಗಳಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಸುವ ಯೋಜನೆ ಇದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ಜಿಪಂ ಸದಸ್ಯಬೂರಮಡುಗು ನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ಬಾಬು, ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ, ಪುರಸಭೆ ಸದಸ್ಯಶ್ರೀನಿವಾಸ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ತಾಲೂಕು ಸರ್ಕಾರಿ ನೌಕರರ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ ಹಾಗೂ ಮುಖಂಡ ಎಸ್.ಎನ್. ಸೂರ್ಯನಾರಾಯಣ ರೆಡ್ಡಿ ಇದ್ದರು.